Total Pageviews

Tuesday, March 24, 2015

ಚಂದಿರನೇತಕೆ ಓಡುವನಮ್ಮ…ಪುಷ್ಪಾ ನಾಗತಿಹಳ್ಳಿ

ಈ ವಾರಾಂತ್ಯದಂದು, ಶ್ರೀಮತಿ ಪುಷ್ಪಾ ನಾಗತಿಹಳ್ಳಿಯವರು ಬರೆದ ಚಂದಿರನೇತಕೆ ಓಡುವನಮ್ಮ ಎಂಬ ಬಾಲ್ಯಕಾಲದ ಕಥನವನ್ನು ಓದಲೆಂದು ಕೈಗೆತ್ತಿಕೊಂಡಿದ್ದೆ. ಈಗ ಒಂದು ಬಾರಿ ಓದಿ ಮುಗಿಸಿದೆ. ಈ ಪುಸ್ತಕವು  ಓದಿಸಿಕೊಂಡು ಹೋಯಿತು  ಎನ್ನುವ ಬದಲು ನಾನೂ ಪುಸ್ತಕದೊಂದಿಗೆ ‘ಓಡಿಕೊಂಡು ಹೋದೆ’ ಎಂದರೆ ಹೆಚ್ಚು ಸೂಕ್ತ ಎನಿಸುತ್ತದೆ.
ನಾಗತಿಹಳ್ಳಿಯ ಹಳೆಮನೆ, ಹೊಸಮನೆ, ತೊಟ್ಟಿಮನೆ, ದಬಾನು ಗುಡಿ, ಮಾರಮ್ಮನ ಗುಡಿ, ತುಳಸಮ್ಮ ಗುಡಿ ಸುತ್ತಿ, ತೋಟ-ಹೊಲ-ಶಾಲೆಗೆ ಹೋಗಿ, ಹಳ್ಳಿ-ಕೇರಿ ಸುತ್ತಿ, ಟೆಂಟ್ ಸಿನೆಮಾ ನೋಡಿ, ತಮ್ಮಂದಿರ ಬಗ್ಗೆ ಆಕ್ಕರೆ ತೋರಿಸಿ, ಚಾಡಿ ಹೇಳಿ, ಬಾಲ್ಯದ ತುಂಟಾಟಗಳಲ್ಲಿ ಭಾಗಿಯಾಗಿ, ಕೂಡು ಕುಟುಂಬದ ಸಿಹಿ-ಕಹಿಗಳನ್ನುಂಡು…ಬಡತನದಲ್ಲೂ ಸಂತೋಷದಿಂದಿದ್ದ ಪುಷ್ಪಾ ಅವರ ಬಾಲ್ಯ ಕಾಲದ ನಿರೂಪಣೆ ಬಹಳ ಸೊಗಸಾಗಿದೆ.
ಅವರನ್ನೂ ಸೇರಿಸಿ  ಒಟ್ಟು ಆರು ಜನ ಸಹೋದರ-ಸಹೋದರಿಯರಿದ್ದರೂ ಅವರಲ್ಲಿ ಹೆಚ್ಚು ನಿಕಟವರ್ತಿಯಾಗಿದ್ದ ತಮ್ಮ ‘ಚಂದ್ರು’ (ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರು) . ಪುಸ್ತಕದುದ್ದಕ್ಕೂ ಈ ತಮ್ಮನ ಬಾಲ್ಯಲೀಲೆಗಳು ರಾರಾಜಿಸಿವೆ.  ಮುಂದಿನ ವೈವಾಹಿಕ ಜೀವನ, ಆಮೇಲೆ ಎದುರಾದ ಸಿಹಿ-ಕಹಿ ಘಟನೆಗಳು, ಪ್ರತಿ ಹಂತದಲ್ಲೂ ತನಗೆ ಬೆಂಬಲ ನೀಡಿದ/ನೀಡುತ್ತಿರುವ ತಮ್ಮನೊಂದಿಗೆ ಒಡನಾಟ.. ಹೀಗೆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ.  ತನ್ನ  ಜೀವನ ಪಯಣದಲ್ಲಿ ಒದಗಿಬಂದ ಆಸ್ಟ್ರೇಲಿಯಾ ಮತ್ತು ಲಂಡನ್ ಪ್ರಯಾಣಗಳು ಮತ್ತು ಅಲ್ಲಿನ ವಿಶೇಷತೆಗಳ ಬಗ್ಗೆಯೂ ಲೇಖಕಿ ಸೊಗಸಾದ ವಿವರಣೆ ಕೊಟ್ಟಿದ್ದಾರೆ.
Chandiranetake Oduvanamma- Pushpa Nagatihalli
ಅತ್ಯಂತ ಸರಳವಾಗಿ ಮತ್ತು ಬಹಳ ಆಪ್ತವಾಗಿರುವ ಶೈಲಿಯಲ್ಲಿ ಬರೆದ ಈ ಬಾಲ್ಯಕಥನವನ್ನು  ಓದುವಾಗ ಇಲ್ಲಿ ಬರುವ ಕೆಲವು ಪಾತ್ರಗಳು ‘ನಮಗೂ ಚಿರಪರಿಚಿತ…ಆದರೆ ನಮ್ಮೂರಲ್ಲಿ ಅವರ ಹೆಸರು ಮಾತ್ರಬೇರೆಯಾಗಿತ್ತು‘ ಎನಿಸುತ್ತವೆ!  ಪುಷ್ಪಾ ಅವರು ಬರೆದಂತೆ ‘ಕಾಲದೊಳಗೆ ಬದುಕೂ, ಬದುಕಿನೊಳಗೆ ಕಾಲವೂ ನುಸುಳುತ್ತಾ‘ ಸಾಗುವುದು ಎಷ್ಟು ನಿಜ! (ಪುಟ 86)
ಕನಸುಗಳಿಗೆ ಅದೆಷ್ಟು ಶಕ್ತಿ ಇದೆ! ಬಾಲ್ಯದಲ್ಲಿ ಕಂಡ ಕನಸುಗಳನ್ನೆಲ್ಲಾ ನನಸು ಮಾಡಿದ ಖ್ಯಾತಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರದು. ಜತೆಗೆ  ತಮ್ಮೂರಿನ ಬೇರನ್ನು ಮರೆಯದೆ ಅದನ್ನು ವಿವಿಧ ರೂಪದಲ್ಲಿ ಪೋಷಿಸುತ್ತಿದ್ದಾರೆ. ಸಹಜವಾಗಿಯೇ ಅಕ್ಕರೆಯ ಅಕ್ಕನಿಗೆ  “ಕುಟ್ನುದಯ್ಯನ ಹಿಂದೆ ಸುತ್ತುತ್ತಾ  ‘ನನಗೊಂದು ಪುಸ್ತಕ ಕೊಡಯ್ಯಾ’ ಎಂದು ಹಲುಬುತ್ತಿದ್ದ್ದ ಹುಡುಗ ಇಂದು ಅವನೇ ಕಟ್ಟಿಸಿದ ಲೈಬ್ರೆರಿಯ ಕೋಣೆಯಲ್ಲಿದ್ದ ಸಾವಿರಾರು ಪುಸ್ತಕಗಳ ಮಧ್ಯದಲ್ಲಿ  ಕುಳಿತು ಸಾಹಿತ್ಯ, ಕಥೆ , ನಾಟಕ, ಪ್ರವಾಸಗಳ ಬಗ್ಗೆ ಮಾತನಾಡುವಾಗ ಹೆಮ್ಮೆಯಾಗುತ್ತದೆ. (ಪುಟ 134)
ಪುಷ್ಪಾ ನಾಗತಿಹಳ್ಳಿ ಅವರು ತಮ್ಮ ಕುಟುಂಬದ  ಕೆಲವು ಚಿತ್ರಗಳನ್ನು  ಹಾಗೂ  ಮನೆಯ ಇತರ  ಸದಸ್ಯರ ಬಗ್ಗೆಯೂ ಸ್ವಲ್ಪ ವಿವರಣೆ ಕೊಟ್ಟಿದ್ದರೆ ಓದುಗರಿಗೆ  ಇನ್ನೂ ಸ್ಪಷ್ಟಚಿತ್ರಣ ಸಿಗುತಿತ್ತು ಎಂದು ನನ್ನ ಭಾವನೆ.  ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಮೂಡಿಬರಲಿ ಎಂದು ನಮ್ಮ ಆಶಯ.

ಎಲ್ಲಿ ಹೋದಿರಿ ತಳ್ಳು ಗಾಡಿಗಳೆ.. ?

ಎರಡು ದಶಕಗಳ ಹಿಂದೆ,  ಮೈಸೂರಿಗೆ ಬಂದ ಹೊಸದರಲ್ಲಿ ವಾಸವಿದ್ದ ಗೋಕುಲಂ ಬಡಾವಣೆಯಲ್ಲಿ ವಾಸವಾಗಿದ್ದೆವು. ಅದುವರೆಗೆ ದೂರದೂರದಲ್ಲಿ ಅಡಿಕೆ ತೋಟಗಳ ಮಧ್ಯೆ ಇರುತ್ತಿದ್ದ ಹೆಂಚಿನ ಒಂಟಿ ಮನೆಗಳನ್ನು ಮಾತ್ರ ನೋಡಿ ಗೊತ್ತಿದ್ದ ನನಗೆ ಬಡಾವಣೆ ಬದುಕು ಹೊಸ ಅನುಭವಗಳನ್ನು ಮೊಗೆಮೊಗೆದು ಕೊಟ್ಟಿತ್ತು.
ಶಾಂತವಾಗಿದ್ದು ಲವಲವಿಕೆಯಿಂದಿದ್ದ ಬಡಾವಣೆಯಲ್ಲಿ ಸಹೃದಯ  ನೆರೆಹೊರೆಯವರೂ ಇದ್ದು ಆರಾಮವಾಗಿದ್ದೆವು. ಬೆಳಗಾಗುತ್ತಿದ್ದಂತೆ ಹಿಂದಿನ ಮನೆ ಬೀದಿಯಲ್ಲಿ ಸೈಕಲ್ ಟ್ರಿಣ್ ಗುಟ್ಟಿದರೆ ಹಾಲಿನವನು ಬಂದ ಎಂದು ಅರ್ಥ. ಪಾತ್ರೆ ರೆಡಿ ಮಾಡಿಕೊಳ್ಳುವಷ್ಟರಲ್ಲಿ ಮನೆ ಮುಂದೆ ಆತ ಬರುತ್ತಿದ್ದ. ಇನ್ನು ಸ್ವಲ್ಪ ಹೊತ್ತಿನಲ್ಲಿ ‘ಮೊಲ್ಲೆ …ಮರ್ಲೇ…ಜಾಜಿ ಹೂವೇ…‘ ಎಂದು ಕೂಗುತ್ತಾ ತನ್ನ ತಲೆಯಲ್ಲಿ ಬಿದಿರಿನ ದೊಡ್ಡ ತಟ್ಟೆಯನ್ನು ಇರಿಸಿಕೊಂಡು ಹೂ ಮಾರುವ ಅಜ್ಜಿಯ ಸರದಿ. ಸೈಕಲ್ ನಲ್ಲಿ ಬರುವ ಪೇಪರ್ ಹಾಕುವ ಹುಡುಗನು  ಪೇಪರ್ ಅನ್ನು ಸುರುಟಿ ಕೊಳವೆಯಂತೆ ಮಾಡಿ, ಕೆಳಗಡೆಯಿಂದಲೇ ನಮ್ಮ ಬಾಲ್ಕನಿಗೆ ಎಸೆಯುತ್ತಿದ್ದ.
Green veg soppu cartಇನ್ನೂ7 ಗಂಟೆ ಆಗುವಷ್ಟರಲ್ಲಿ ‘ ದಂಟೀನ್ ಸೊಪ್ಪ್….ಪಾಲಾಕ್ ಸೊಪ್ಪ್…ಮೆಂತ್ಯ ಸೊಪ್ಪ್ … ” ಎಂದು ರಾಗವಾಗಿ ಹಾಡುತ್ತ ತರಕಾರಿ ಗಾಡಿಯನ್ನು ತಳ್ಳುತ್ತಾ ಬರುವ ಹೆಂಗಸೊಬ್ಬರು. ಹಿಂದಿನ ಬೀದಿಯಲ್ಲಿ ಅವರ ದನಿ ಕೇಳಿಸಿದೊಡನೆ, ನಮ್ಮ ಎರಡು ವರ್ಷದ ಮಗ ಅದನ್ನು ಅನುಕರಿಸಿ ತಾನೂ ‘ಸೊಪ್ಪಿನ  ಹಾಡು’ ಹಾಡುತ್ತಿದ್ದ. ಇದಾದ ಮೇಲೆ ‘ಹಳೆ ಪಾತ್ರೇ….ಹಳೇ ಪೇಪರ್….’ ಎನ್ನುವ ವ್ಯಾಪಾರಿ, ರಂಗೋಲಿ ಪುಡಿ ಮಾರುವವಳು,, ಆಯಾ ಸೀಸನ್ ನಲ್ಲಿ ಕರಬೂಜ, ಸೀಬೆ ಹಣ್ಣು, ಮಾವಿನಹಣ್ಣು, ಕಡಲೇಕಾಯಿ ಮಾರುವವರು  …. ಇವರೂ ತಮ್ಮ ತಳ್ಳು ಗಾಡಿಗಳ ಸಮೇತ  ಪ್ರತ್ಯಕ್ಷವಾಗುತ್ತಿದ್ದರು.  ..
ಆಮೇಲೆ ಬರುವ ತರಕಾರಿಯಣ್ಣ (ಅವರ  ಹೆಸರು ನೆನಪಿಲ್ಲ) ವಿವಿಧ  ತರಕಾರಿಗಳನ್ನು ಹೇರಿದ ತಳ್ಳುಗಾಡಿಯನ್ನು  ರಸ್ತೆಯ ಇಳಿಜಾರಿನಲ್ಲಿ ಜಾರದಂತೆ, ಚಕ್ರಕ್ಕೆ ಕಲ್ಲು ಕೊಟ್ಟು ನಿಲ್ಲಿಸಿ  ‘ ಬದನೇಕಾಯ್ . ..ಬೆಂಡೇಕಾಯ್  ..  ಹೀರೇಕಾಯ್ .. ಅವರೇಕಾಯ್… ಸೌತೆಕಾಯ್…”  ಎನ್ನುವಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಚಿಕ್ಕ ಬುಟ್ಟಿಯನ್ನೋ, ಚೀಲವನ್ನೋ  ಕುಕ್ಕರ್ ಪಾತ್ರೆಯನ್ನೋ ಹಿಡಿದು ಗಾಡಿಯ ಸುತ್ತ ಮುತ್ತ ಜಮಾಯಿಸುತ್ತಿದ್ದರು.
“ಏನಣ್ಣ ನಿನ್ನೆ ಬಂದಿಲ್ಲ… ಮೊನ್ನೆ ಕೊಟ್ಟಿದ್ದ ಅವರೇಕಾಯಿ ಬರೀ ಹುಳ…ಮೂಲಂಗಿ ಚೆನ್ನಾಗಿದೆ…ಸೌತೆಕಾಯಿ ಕಹಿ ಇತ್ತಪ್ಪಾ…ಮಗಳ ಸೀಮಂತ ಆಯ್ತಾ… “ಇತ್ಯಾದಿ ಪ್ರಶಂಸೆ, ನಿಂದನೆ, ಕುಶಲೋಪರಿಗಳ ಜತೆಗೆ ವ್ಯಾಪಾರ ನಡೆಯುತ್ತಿತ್ತು. ಬಾಲ್ಕನಿ  ಮೇಲೆ ಬಟ್ಟೆ ಹರವುತ್ತಿದ್ದ ನನ್ನನ್ನು ನೋಡಿ ‘ಆಂಟಿ ತರಕಾರಿ ಬೇಡ್ವಾ… ಕಾಫಿ ಆಯ್ತಾ….ಪಾಪು ಉಷಾರಾ…..’ಎಂದು ಮಾತಿಗೆಳೆಯುತಿದ್ದ. ನನಗಿಂತ ವಯಸ್ಸಿನಲ್ಲಿ ಬಹಳಷ್ಟು ದೊಡ್ಡವರಾದರಾದ ಆತನಿಗೆ ನಾನು ಹೇಗೆ ‘ಆಂಟಿ’ ಆಗಬಲ್ಲೆ ಅನಿಸುತಿತ್ತು.
VEgetable vendorಈತನಿಗೆ ಊರ ಸಮಾಚಾರ ಎಲ್ಲಾ ಬೇಕು. ಯೋಗಕ್ಷೇಮ ವಿಚಾರಿಸುತ್ತಾ, ನಗುತ್ತಾ ತರಕಾರಿ ವ್ಯಾಪಾರ ನಡೆಯುತಿತ್ತು. “ಬೀನ್ಸ್ ತುಂಬಾ  ಬೆಲೆ……ಟೊಮಾಟೊ ಚೆನ್ನಾಗಿಲ್ಲ… ”  ಅಂತ ಯಾರಾದರೂ ಅಕ್ಷೇಪಿಸಿದರೆ  ಇದು ನಾಟಿ ಬೀನ್ಸ್ ಚೆನಾಗಿರುತ್ತೆ ಅಕ್ಕಾ… ಇದು ನಮ್ ತ್ವಾಟದ್ದೇಯಾ ….ನಾ  ಊಟಿ ಬೀನ್ಸ್ ತರಲ್ಲಾ ಬೇರೆಯವರ ತರಾ…… ಹುಳಿ ಟೊಮಾಟೊ ಬೇರೆ ಇದೆ, ಇದು ಜಾಮೂನ್ ಟೊಮೆಟೊ ..ನಿಮಗ್ಯಾವುದು ಬೇಕು ….ಈರೆಂಗೆರೆ ಬದನೆಕಾಯ್ ನೋಡಿ..ಭಾತ್ ಮಾಡಿದ್ರೆ ಏನು ಚೆನ್ನಾಗಿರ್ತೆ ಅಂತೀರಾ… “ ಎಂದು  ಮಾರುತ್ತರಿಸುತ್ತಿದ್ದ. ತಮಾಷೆ ಏನೆಂದರೆ , ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ವ್ಯಾಪಾರಕ್ಕೆ  ವಿಪರೀತ ಚೌಕಾಶಿ ಮಾಡಿ ನಾಲ್ಕಾಣೆ ಉಳಿಸಿದ ಅಜ್ಜಿಯೊಬ್ಬರು, ಒಳಗಿನಿಂದ ಲೋಟದಲ್ಲಿ ಕಾಫಿ ತಂದು ತರಕಾರಿಯಣ್ಣನಿಗೆ ಕೊಟ್ಟು ‘ಕಾಫಿ ಕುಡಿಯಪ್ಪ…ಬಿಸಿ ಆರೋಗುತ್ತೆ’  ಅಂದು ಧಾರಾಳತನ ಪ್ರದರ್ಶಿಸುತ್ತಾರೆ!
‘ಗಡ್ಡೆ ಕೋಸು ಇದ್ಯಾ’ ಎಂದು ವಿಚಾರಿಸುತ್ತಾರೆ ಇನ್ನೊಬ್ಬರು. ‘ನಿನ್ನೆ ಇತ್ತು ಅಕ್ಕ…….ಈವತ್ತಿಲ್ಲ, ನಾಳೆ ತರ್ತೇನೆ……ಈ ನಡುವೆ ನೀವು ತರಕಾರಿಗೆ ಬರೋದೇ ಇಲ್ಲ್ಲಾ……ಬೀಟ್ ರೂಟ್ ತೊಗೊತೀರಾ…..ಈವತ್ತೇ ಕಿತ್ತಿದ್ದು……ತ್ವಾಟದಿಂದ್ಲೇ ಬಂದೆ……ಹೂಕೋಸು ಹಾಕಿವ್ನಿ…….ಮುಂದಿನ್ವಾರ ತರ್ತೀನಿ..” ಇತ್ಯಾದಿ ಮಾತು ಸಾಗುತ್ತದೆ. ಗಡ್ಡೆ ಕೋಸು  ಕೇಳಿದವರು, ಬೀಟ್ ರೂಟ್ ಕೊಂಡು ವಾಪಸ್ಸಾಗುತ್ತಾರೆ. ಅವರು ತಂದಿರೋ ದುಡ್ಡು  ಸ್ವಲ್ಪ  ಕಡಿಮೆಯಿರುತ್ತದೆ. ‘ಅಯ್ಯೊ ನಾಳೆ ಕೊಡುವಿರಂತೆ……’ ಎಂದು ಇವನೇ ಸಮಜಾಯಿಶಿ ಹೇಳುತ್ತಾನೆ.
ನಮ್ಮ ಮಗ ಚಿಕ್ಕವನಿದ್ದಾಗ ಅವನಿಗೆ ಬೇಯಿಸಿದ ನೇಂದ್ರಬಾಳೆ ಹಣ್ಣನ್ನು ಹೆಚ್ಚಿ ಕೊಟ್ಟರೆ ಇಷ್ಟಪಟ್ಟು ತಿನ್ನುತಿದ್ದ. ಮೈಸೂರಿನಲ್ಲಿ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ ಕೇರಳದ ‘ನೇಂದ್ರ ಬಾಳೆ’ ಹಣ್ಣು ಸಿಗುತ್ತಿರಲಿಲ್ಲವಾದುದರಿಂದ  ಬೀದಿಯಲ್ಲಿ  ಬಾಳೆ ಹಣ್ಣು ಮಾರುತ್ತಿದ್ದ ಅಜ್ಜ ಒಬ್ಬರನ್ನು ಪರಿಚಯಿಸಿಕೊಂಡು ನಮಗೆ ವಾರಕ್ಕೆ ಒಂದು ಚಿಪ್ಪು ‘ನೇಂದ್ರ ಬಾಳೆ’ ಹಣ್ಣು ತಂದುಕೊಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದೆವು. ಆ ಅಜ್ಜ ತಪ್ಪದೇ ಹಣ್ಣು ತರುತಿದ್ದರು. ಇವನೂ ತನಗೆ ಅ ತಾತ ಬಹಳ ಪರಿಚಯದವರೇನೋ ಎಂಬಂತೆ ಅವರ ಬಳಿ  ನಗುನಗುತ್ತಾ  ತೊದಲು ಮಾತನಾಡುತ್ತಿದ್ದ. ಅಷ್ಟರಲ್ಲಿ ನಾನು ಚಹಾ ಕೊಡುತ್ತಿದ್ದೆ. ಅದನ್ನು ಕುಡಿದು  ‘ಟೀ ಚನ್ನಾಗೈತೆ…ಮೊಗಾ..’ ಎಂದು ಹೇಳಿ ಅಜ್ಜ ಹೊರಡುತ್ತಿದ್ದರು.
veg cart
ಮೈಸೂರಿನ ಕೆಲವು ಬಡಾವಣೆಗಳಲ್ಲಿ ಈ ರೀತಿಯ ವ್ಯಾಪಾರ-ಸಂಸ್ಕೃತಿ ಈಗಲೂ ಇದೆ. ಆದರೆ ಮಾಲ್ ಗಳಲ್ಲಿ, ಗ್ರಾಹಕರಾದ ನಾವೇ ‘ಗಾಡಿ’ಯನ್ನು ತಳ್ಳುತ್ತಾ ನಮಗೆ ಬೇಕಾದುದನ್ನು ಗಾಡಿಗೆ ಹಾಕಿಕೊಳ್ಳುತ್ತೇವೆ.  ಗೃಹಿಣಿಯರ ಶ್ರಮ ಕಡಿಮೆ ಮಾಡಲು ಕತ್ತರಿಸಿದ ಬೀನ್ಸ್, ಸುಲಿದ ಬೆಳ್ಳುಳ್ಳಿ, ಹೆಚ್ಚಿದ ಕ್ಯಾಬೇಜ್ …ಕೂಡಾ ಸಿಗುತ್ತವೆ. ಬೇಕಿದ್ದನ್ನು ಕೊಂಡು ಮಾತಿಲ್ಲದೆ ನಿಗದಿತ ದುಡ್ಡನ್ನು  ಕಾರ್ಡ್ ಸ್ವೈಪ್ ಮಾಡಿ ಅಥವಾ ಕ್ಯಾಷ್ ಕೊಟ್ಟು  ಬಂದರೆ ಕೌಂಟರ್ ನಲ್ಲಿ ಕುಳಿತವನು/ಳು ನಿರ್ಭಾವುಕತೆಯಿಂದ ಥ್ಯಾಂಕ್ಸ್ ಅನ್ನುತ್ತಾರೆ. ಅಲ್ಲಿಗೆ ಮುಗಿಯಿತು ಶಾಪಿಂಗ್.
ಹೊಸ ಪದ್ಧತಿಗಳಿಗೆ ಕೆಲವು ಅನುಕೂಲತೆಗಳು ಇವೆ.   ಆದರೂ ಮನುಷ್ಯ ಮನುಷ್ಯನೇ, ಯಂತ್ರ ಯಂತ್ರವೇ ಅಲ್ಲವೇ? ಎಲ್ಲಿ ಹೋದುವು ತಳ್ಳು ಗಾಡಿಗಳು , ಅವುಗಳ ಒಡೆಯರು, ಅವರ ಮಾತುಗಳು ಮತ್ತು ಗಾರ್ಡನ್ ಫ್ರೆಷ್ ತರಕಾರಿಗಳು ??

Tuesday, January 27, 2015

ಸಾಹಿತ್ಯ-ಸಂಭ್ರಮ-ಸಂಗೀತಗಳ ಸಂಗಮ


ಇತ್ತೀಚೆಗೆ ನನಗೆ ಅಂಟಿಕೊಂಡ ಗೀಳು ಕನ್ನಡದಲ್ಲಿ ತೋಚಿದಂತೆ ಗೀಚುವುದು. ಇದರ ಅಭಿವ್ಯಕ್ತಿಗೆ ವೇದಿಕೆಯಾಗಿ 'ಸುರಹೊನ್ನೆ' ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದ್ದಾಯಿತು. ಸಮಾನಾಸಕ್ತರೂ,  ಫೇಸ್ ಬುಕ್ ಗೆಳೆಯ/ಗೆಳತಿಯರೂ  ಈ ಹವ್ಯಾಸಕ್ಕೆ ತಾವೂ  ಕೈಜೋಡಿಸಿ, ನೀರೆರೆದು ಪೋಷಿಸಿದರು ಎಂದು ಹೇಳಿಕೊಳ್ಳಲು ಸಡಗರವಾಗುತ್ತಿದೆ. ಇದರ ಮುಂದುವರಿದ ಭಾಗವೋ ಎಂಬಂತೆ, ಹುಬ್ಬಳ್ಳಿಯಲ್ಲಿರುವ ಶ್ರೀ ರಂಗಣ್ಣ  ನಾಡಗೀರ ಅವರು, "ನೀವು ಧಾರವಾಡದಲ್ಲಿ  2015 ಜನವರಿ 16-18 ರ ವರೆಗೆ ಜರಗಲಿರುವ ಸಾಹಿತ್ಯ-ಸಂಭ್ರಮಕ್ಕೆ ಬನ್ನಿ, ಕಾರ್ಯಕ್ರಮಗಳು ಬಹಳ ಸೊಗಸಾಗಿರುತ್ತವೆ" ಎಂದಾಗ,  ಶ್ರುತಿಶರ್ಮಾ ಮತ್ತು ನಾನು ಖುಷಿಯಿಂದ ಹೊರಟೆವು.  ಮೈಸೂರಿನವರಾದ ಶ್ರೀ ಕೆ.ನಂಜುಂಡಸ್ವಾಮಿ ಮತ್ತು ಬೆಂಗಳೂರಿನ ಶ್ರೀ ಎಚ್.ಎಮ್.ಚಂದ್ರಶೇಖರಯ್ಯನವರನ್ನು ಅಲ್ಲಿ ಪರಿಚಯವಾಗಿ ನಾವೆಲ್ಲರೂ ಒಂದು ತಂಡವಾಗಿ ಇದ್ದೆವು. 


ಜನವರಿ 15 ರಂದು ಮೈಸೂರಿನಿಂದ ಹೊರಟ ನಾವು ಮರುದಿನ ಧಾರವಾಡ ತಲಪಿ, ಅಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣ ಸೇರಿ, ನೋಂದಣಿ ಪ್ರಕ್ರಿಯೆ ಮುಗಿಸಿದೆವು.  ಕಾರ್ಯಕ್ರಮಗಳ ವೇಳಾಪಟ್ಟಿ, ಊಟ-ತಿಂಡಿಯ ಕೂಪನ್ ಗಳು ಮತ್ತು ಕೆಲವು ಪುಸ್ತಕಗಳನ್ನೊಳಗೊಂಡ ಕಿಟ್ ಒಂದನ್ನು ಎಲ್ಲಾ ಪ್ರತಿನಿಧಿಗಳಿಗೂ ಕೊಟ್ಟಿದ್ದರು.  ಅಲ್ಲಿದ್ದ ಮೂರು ದಿನಗಳಲ್ಲೂ ನಮಗೆ ಸಭಾಭವನದಲ್ಲಿ ಸಾಹಿತ್ಯ, ಸಂಗೀತ, ಸಂಭ್ರಮಗಳ ರಸದೌತಣವಾದರೆ, ಊಟದ ಹಾಲ್ ನಲ್ಲಿ ಉತ್ತರ ಕರ್ನಾಟಕ ಶೈಲಿಯ ರಸಗವಳ ಲಭಿಸಿತ್ತು. ಧಾರವಾಡದ  ಜೋಳದ ರೊಟ್ಟಿ, ಬದನೆಕಾಯಿಯ ಎಣ್ಣೆಗಾಯಿ,  ಗೋಧಿಯ  ಹುಗ್ಗಿ, ಮಾದಲಿ, ..... ಇತ್ಯಾದಿಗಳೊಡನೆ   ಬಿಸಿಬೇಳೆ ಬಾತ್, ಮೊಸರನ್ನಗಳೂ ಇದ್ದ ಊಟ ಬಹಳ ಚೆನ್ನಾಗಿತ್ತು.   ಕಾರ್ಯಕ್ರಮಗಳಲ್ಲಿ ವೈವಿಧ್ಯತೆ ಇದ್ದು, ನಮಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ.  ಗೌಜು ಗದ್ದಲಗಳಿಲ್ಲದೆ ಪ್ರಶಾಂತವಾಗಿದ್ದ ಮತ್ತು ಸುಂದರವಾಗಿದ್ದ  ಯೂನಿವರ್ಸಿಟಿಯ ಆವರಣದಲ್ಲಿ, ಹಿತವಾದ ಹವಾಮಾನದಲ್ಲಿ ಸುಮ್ಮನೆ ನಡೆದಾಡುವುದು  ಕೂಡಾ ಬಹಳ ಸಂತೋಷ ಕೊಟ್ಟಿತು.



16 ಜನವರಿ 2015 ರಂದು ಸಚಿವೆ ಶ್ರೀಮತಿ ಉಮಾಶ್ರೀ ಅವರಿಂದ ಉದ್ಘಾಟನೆಗೊಂಡ ಸಾಹಿತ್ಯ-ಸಂಭ್ರಮವು  " ಈಗ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ" ಎಂದು ಪತ್ತೆ ಮಾಡುವ ಜಾಡಿನಲ್ಲಿ ಸಾಗಿತು. ಪ್ರತಿ ಗೋಷ್ಠಿಯಲ್ಲೂ ಸಂಪನ್ಮೂಲ ವ್ಯಕ್ತಿಗಳೊಡನೆ ಒಬ್ಬರು ನಿರ್ದೇಶಕರಿದ್ದರು. ಇಲ್ಲಿ ಏಕಮುಖವಾದ ಉದ್ದುದ್ದ ಭಾಷಣಗಳಿರಲಿಲ್ಲ. ಬದಲಾಗಿ ಅರ್ಥಪೂರ್ಣ ಸಂವಾದಗಳಿದ್ದುವು. ಸಭಿಕರಿಗೂ ಸಮಯದ ಪರಿಮಿತಿಯೊಳಗೆ ಪ್ರಶ್ನೆಗಳನ್ನು ಕೇಳುವ ಅವಕಾಶವಿತ್ತು. ಗೋಷ್ಠಿಯ ವಿಷಯಾಂತರವಾಗದಂತೆ  ನಿಗಾ ಇಟ್ಟಿದ್ದರು ಹಾಗೂ ಸಮಯಪಾಲನೆಯನ್ನು ಕಾಯ್ದುಕೊಂಡಿದ್ದರು.  ಇಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರಸ್ತುತ ವಿದ್ಯಮಾನಗಳನ್ನು ಚರ್ಚಿಸಲಾಯಿತು.  ಮುಂದಿನ ಭಾಗದಲ್ಲಿ  ಲಲಿತ ಪ್ರಬಂಧಗಳ ಓದು ಸುಲಲಿತವಾಗಿ ರಸಮಯವಾಗಿತ್ತು. ಮಲೆಮಹದೇಶ್ವರ, ಮಂಟೇಸ್ವಾಮಿ ಮತ್ತು ಬಿಳಿಗಿರಿರಂಗ ದೇವರ ಬಗ್ಗೆ ಜಾನಪದ ಶೈಲಿಯಲ್ಲಿ ರಚಿತವಾದ ಕಂಸಾಳೆ ಪದಗಳನ್ನು ಮೈಸೂರಿನ ಗುರುರಾಜ್ ಮತ್ತು ತಂಡ ಬಹಳ ಸೊಗಸಾಗಿ ಪ್ರಸ್ತುತ ಪಡಿಸಿದರು. ಕನ್ನಡದಲ್ಲಿ ಅನುವಾದಗಳ ಸಮಸ್ಯೆಗಳು, ಇತಿಹಾಸಕಾರರೊಂದಿಗೆ ಇತಿಹಾಸಕಾರ....ಹೀಗೆ ಗೋಷ್ಠಿಗಳು ಸಾಗಿದುವು. ಸಂಜೆ ಪಂ.ಎಂ. ವೆಂಕಟೇಶಕುಮಾರ ಅವರ ಶಾಸ್ತ್ರೀಯ ಸಂಗೀತವು  ಕೇಳುಗರನ್ನು ತನ್ಮಯಗೊಳಿಸಿತು.  



ಎರಡನೆಯ ದಿನವಾದ 17  ಜನವರಿಯಂದು, 'ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣಪತ್ರಿಕೆಗಳ ಪಾತ್ರ'ದ ಬಗ್ಗೆ ಬೆಳಕು ಚೆಲ್ಲಲಾಯಿತು. ಗೋಷ್ಠಿ ಮುಂದುವರಿದು 'ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ' ಎಂದು ಚರ್ಚಿಸಲಾಯಿತು.   ಲೇ.ಜ.ಎಸ್.ಸಿ.ದೇಶಪಾಂಡೆ ಅವರು ಬರೆದ ' ರಾಷ್ಟ್ರೀಯ ಸುರಕ್ಷೆಯ ಜಗ್ಗಾಟ' ಮತ್ತು  ಶ್ರೀ ಕೆದಂಬಾಡಿ ಜತ್ತಪ್ಪ ರೈ ಅವರ ' ಬೇಟೆಯ ಉರುಳು' ಪುಸ್ತಕಗಳ ಬಿಡುಗಡೆಯಾಯಿತು.  ಕನ್ನಡದ ದಿಗ್ಗಜರಾದ ಪು.ತಿ.ನರಸಿಂಹಾಚಾರ್ ಮತ್ತು ವಿ.ಕೃ.ಗೋಕಾಕ್ ಅವರ ಕವಿತೆಗಳನ್ನು ಓದಲಾಯಿತು. ಊಟದ ವಿರಾಮದ ನಂತರ  ಕನ್ನಡ ಮಾಧ್ಯಮ ಮುಂದೇನು? ಎಂದು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದುಹೋಗುತ್ತಿರುವ ಕನ್ನಡದ ಬಗ್ಗೆ ಚರ್ಚಿಸಿದರು.  ಆಮೇಲೆ, ಮಹಾಭಾರತ ಪರಂಪರೆಯ ಓದಿಗೆ ವಿದ್ವಾಂಸರು ದನಿಯಾದರು. ವೈದೇಹಿ ಕಥಾ ಪ್ರಸ್ತುತಿ, ನಾಟಕಕಾರರೊಂದಿಗೆ ನಾಟಕಕಾರ ಇತ್ಯಾದಿ ವಿಷಯಗಳ  ಗೋಷ್ಠಿಯಿಂದ ಸಂಪನ್ನಗೊಂಡ ಎರಡನೆಯ ದಿನವು  ಆನಂದಕಂದರ ಕಾವ್ಯಗಾಯನದಿಂದ ಮುಕ್ತಾಯಗೊಂಡಿತು.

18 ಜನವರಿ ಯಂದು,  ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದ ಸ್ಥಾನ, ಕನ್ನಡ ಪುಸ್ತಕಗಳ ಓದುಗರ ಒಲವುಗಳು ಮಾತು ಈಗಿನ ಮಾಹಿತಿ ತಂತ್ರ ಜ್ಞಾನದಿಂದ ಆಗಿರುವ ಒಳಿತು-ಕೆಡುಕುಗಳ ಬಗ್ಗೆಯೂ ವಿಚಾರ ವಿನಿಮಯವಾಯಿತು.  ಶ್ರೀ ಟಿ.ಪಿ. ಅಶೋಕ ಅವರ 'ಕಥನ ಕಾರಣ' ಮತ್ತು  ಶ್ರೀ ಸಿ.ಎನ್. ರಾಮಚಂದ್ರನ್ ಅವರ ' ಸೈದ್ಧಾಂತಿಕ ಹಾಗೂ ಅನ್ವಯಿಕ ನೆಲೆಗಳು' ಪುಸ್ತಕಗಳು ಬಿಡುಗಡೆಗೊಂಡುವು. 'ಸಾಹಿತಿಗಳೊಂದಿಗೆ ನಾವು - ಪ್ರಸಂಗಗಳು'  ಕಾರ್ಯಕ್ರಮದಲ್ಲಿ ಕೆಲವು ಖ್ಯಾತ ಸಾಹಿತಿಗಳೊಡನೆ ತಮಗಾದ ಅನುಭವಗಳನ್ನು ರಸವತ್ತಾಗಿ ಚಿತ್ರಿಸಿ ಸಭೆಯಲ್ಲಿ ನಗೆಗಡಲು ಸೃಷ್ಟಿಸಿದರು.  ಊಟದ ವಿರಾಮದ ನಂತರ 'ರಂಗಪ್ರದರ್ಶನ'ವನ್ನು ನೋಡಿ, 'ಭಾಷೆ ಮತ್ತು ಅಭಿನಯದ' ಒಳಹೊಕ್ಕು ಈ ಮೌಲ್ಯಯುತವಾದ ಸಾಹಿತ್ಯ-ಸಂಭ್ರಮಕ್ಕೆ ತೆರೆ ಬಿದ್ದಿತು. ಕೊನೆಯದಾಗಿ ಶ್ರೀ ಪ್ರಕಾಶ್ ರೈ ಅವರ 'ಒಗ್ಗರಣೆ' ಚಲನಚಿತ್ರ ಪ್ರದರ್ಶನವಿತ್ತು.

ಅಲ್ಲಿದ್ದ ಪುಸ್ತಕ ಮಳಿಗೆಗಳಲ್ಲಿ  ರಿಯಾಯಿತಿ ದರದಲ್ಲಿ  ಹಳೆಯ-ಹೊಸ , ಹಿರಿಯ-ಕಿರಿಯ ಬರಹಗಾರರ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದ್ದುವು. ಇದೇ ಸ್ಥಳದಲ್ಲಿ ದೊಡ್ಡದಾದ ಟಿ.ವಿ ಪರದೆಯನ್ನು ಅಳವಡಿಸಿದ್ದರು. ಸಭಾಂಗಣದಲ್ಲಿ ಸ್ಥಳಾವಕಾಶ ಸಿಗದಿದ್ದವರಿಗೆ ಇಲ್ಲಿ ಕುಳಿತು ಕಾರ್ಯಕ್ರಮಗಳನ್ನು ನೋಡುವ ವ್ಯವಸ್ಥೆ ಇದಾಗಿತ್ತು.



ಒಟ್ಟಿನಲ್ಲಿ ನಮಗೆ ಇದೊಂದು ಸಾಹಿತ್ಯ, ಸಂಗೀತ ಮತ್ತು ಸಂಭ್ರಮಗಳ ಸಂಗಮ. ಇದಕ್ಕೆ ಮೂಲ ಕಾರಣ  ಫೇಸ್ ಬುಕ್ ಗೆಳೆಯರಾದ ಹುಬ್ಬಳ್ಳಿಯ  ಶ್ರೀ ರಂಗಣ್ಣ ನಾಡಗೀರ ಅವರು. ಅವರ ಸಂದೇಶವು ನಮ್ಮನ್ನು ಮೈಸೂರಿನಿಂದ ಹೊರಡಿಸಿ ಧಾರವಾಡ ತಲಪಿಸಿತು. ಸಾಹಿತ್ಯ-ಸಂಭ್ರಮದಲ್ಲಿ ನಾವಿಬ್ಬರು  ಭಾಗವಹಿಸಲು ಬೇಕಾದ ವ್ಯವಸ್ಥೆ ಮಾಡುವುದರ ಜೊತೆಗೆ, ತಮ್ಮ ಸಮಯವನ್ನು ಹೊಂದಿಸಿಕೊಂಡು, ನಮಗೆ  ಸಾಧನಕೇರಿಯಲ್ಲಿರುವ  ದ.ರಾ.ಬೇಂದ್ರೆಯವರ  ನಿವಾಸ, ಮಲಪ್ರಭಾ ಅಣೆಕಟ್ಟು, ಸವದತ್ತಿಯಲ್ಲಿರುವ ಎಲ್ಲಮ್ಮ ದೇವಾಲಯ, ಮರುಘಾ ಮಠ ಮತ್ತು ಸಿದ್ಧಾರೂಢ ಮಠಗಳನ್ನೂ ತೋರಿಸಿ, ತಮ್ಮ ನಿವಾಸಕ್ಕೂ ಕರೆದೊಯ್ದಿದ್ದರು. ಹಿತೈಷಿಯಾದ ಅವರನ್ನೂ, ಅವರ  ಮನೆಯವರೆಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ.

ದ.ರಾ.ಬೇಂದ್ರೆಯವರ ನಿವಾಸ 'ಶ್ರೀಮಾತಾ'

ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ 'ಶ್ರೀಮಾತಾ'ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು.



ಮಲಪ್ರಭಾ ಅಣೆಕಟ್ಟು

ಇದು ನವಿಲುತೀರ್ಥ ಅಣೆಕಟ್ಟು. ಮಲಪ್ರಭಾ ನದಿಗೆ ಕಟ್ಟಲಾದ ಈ ಅಣೆಕಟ್ಟು ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ಮುನವಳ್ಳಿಯ ಮಧ್ಯೆ ಇದೆ. ಈ ಅಣೆಕಟ್ಟಿನಿಂದಾಗಿ 'ರೇಣುಕಾಸಾಗರ' ಎಂಬ ಜಲಾಶಯ ನಿರ್ಮಾಣವಾಗಿದ್ದು, ಇದು ಸುಮಾರು 2000 ಚದರ ಕಿ.ಮೀ ಯಷ್ಟು ಕೃಷಿಭೂಮಿಗೆ ನೀರಾವರಿ ಒದಗಿಸುತ್ತದೆ.
ನಿನ್ನೆ ನವಿಲುತೀರ್ಥ ಅಣೆಕಟ್ಟಿಗೆ ನಮ್ಮನ್ನು ಕರೆದುಕೊಂಡು ಹೋಗಿದ್ದ ಶ್ರೀ ರಂಗಣ್ಣ ನಾಡಗೀರ ಅವರು ಈ ಅಣೆಕಟ್ಟಿನ ನಿರ್ಮಾಣದ ಆರಂಭದ ಹಂತದಲ್ಲಿ ಅಲ್ಲಿ ಸೇವೆಯಲ್ಲಿದ್ದರು.(ಚಿತ್ರದಲ್ಲಿ ಬಲದಿಂದ ಎರಡನೆಯವರು). ಧಾರವಾಡದ ಸಾಹಿತ್ಯ-ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ನಮ್ಮನ್ನು ಬಹಳ ಅತ್ಮೀಯತೆಯಿಂದ ತಮ್ಮೂರಿಗೆ ಸ್ವಾಗತಿಸಿ, ಕಾಳಜಿಯಿಂದ ಆದರಿಸುವ ಅವರಿಗೆ ಅನಂತ ನಮನಗಳು.
 — with Ranganna Nadgir and Shruthi Sharma.
Like ·  · 

Sunday, January 4, 2015

ಚಂದ್ರಮಾನ – ನಾಗತಿಹಳ್ಳಿ ಚಂದ್ರಶೇಖರ



ನವೆಂಬರ್ ತಿಂಗಳಲ್ಲಿ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ನುಡಿಸಿರಿ’ ಕಾರ್ಯಕ್ರಮದ ಅಂಗವಾಗಿ, ಕಾಲೇಜಿನ ಕಟ್ಟಡವೊಂದರ ನಾಲ್ಕೂ ಮಹಡಿಗಳಲ್ಲಿ ವಿವಿಧ ಮಳಿಗೆಗಳಿದ್ದುವು.


ನಿರ್ಧಿಷ್ಟ ಉದ್ದೇಶ-ಗುರಿ ಇಲ್ಲದೆ, ಯಾವುದನ್ನು ಕೊಳ್ಳಬೇಕೆಂಬ ಇರಾದೆಯೂ ಇಲ್ಲದೆ, ಎಲ್ಲಾ ಮಳಿಗೆಗಳಿಗೂ ಎಡತಾಕುತ್ತಾ ಬಂದಾಗ  ಒಂದು ಕಡೆ “ನಾಗತಿಹಳ್ಳಿ ಚಂದ್ರಶೇಖರ” ಅವರ ಪುಸ್ತಕಗಳ ಪ್ರದರ್ಶನ ಎಂಬ ಗುರುತು ಕಾಣಿಸಿತು.ಒಳ ಹೊಕ್ಕಾಗ ಅಲ್ಲಿ ಖುದ್ದಾಗಿ  ಶ್ರೀ ನಾಗತಿಹಳ್ಳಿ ಚಂದ್ರಶೇಖರವರೇ ಇದ್ದರು! ಆಸಕ್ತರಲ್ಲಿ   ಕುಶಲೋಪರಿ ಮಾತನಾಡುವುದರ ಜತೆಗೆ ಪುಸ್ತಕಕ್ಕೆ  ಹಸ್ತಾಕ್ಷರವನ್ನೂ ಹಾಕುತ್ತಿದ್ದರು.  
Chandramaana Nagatihalliಕೆಲವು ವರ್ಷಗಳ ಹಿಂದೆ ನನಗೆ ಉದ್ಯೋಗ ನಿಮಿತ್ತ, ಪರದೇಶಗಳಿಗೆ ಹೋಗಬೇಕಾದ ಸಂದರ್ಭಗಳು ಬಂದಿದ್ದುವು. ಯಾವುದೇ ಪರದೇಶಗಳಿಗೆ ಹೊರಡುವ ಮೊದಲು ಆ ದೇಶಗಳ ರೀತಿ-ರಿವಾಜು, ಶಿಷ್ಟಾಚಾರಗಳ ಬಗ್ಗೆ ಸ್ವಲ್ಪವಾದರೂ ಮುಂಚಿತವಾಗಿ ತಿಳಿದಿದ್ದರೆ ಅನುಕೂಲ ಮತ್ತು ನಾವು ಅಲ್ಲಿ ಬೆಪ್ಪುತಕ್ಕಡಿಯಂತಾಗುವ ಸನ್ನಿವೇಶಗಳನ್ನು ತಡೆಯಬಹುದು. ಈ ಉದ್ದೇಶದಿಂದ ಮೈಸೂರಿನ ಪುಸ್ತಕ ಮಳಿಗೆಗಳಲ್ಲಿ ಪ್ರವಾಸ ಕಥನಗಳಿಗಾಗಿ ಹುಡುಕಿದಾಗ  ನಾಗತಿಹಳ್ಳಿಯವರ ಪ್ರವಾಸ ಕಥನವಾದ ‘ಅಯನ’  ಲಭಿಸಿತ್ತು, ಅದನ್ನು ಕೊಂಡು ಓದಿದ್ದೆ. ಅವರ ಹಾಸ್ಯಭರಿತ ಶೈಲಿಯ ನಿರೂಪಣೆ ಬಹಳ ಇಷ್ಟವಾಯಿತು. ಆಮೇಲೆ, ಅವರ ಅಮೇರಿಕಾ! ಅಮೇರಿಕಾ!’ ಮತ್ತು ‘ನನ್ನ ಗ್ರಹಿಕೆಯ ನೇಪಾಳ′ ಪುಸ್ತಕಗಳನ್ನೂ ಓದಿದ್ದೇನೆ.  ಒಟ್ಟಾರೆಯಾಗಿ ನನಗೆ ಪ್ರವಾಸಕಥನಗಳ ಬಗ್ಗೆ ಆಸಕ್ತಿ ಬರಲು ಈ ಓದು ಪ್ರೇರೇಪಿಸಿತು ಅನಿಸುತ್ತದೆ.
ವಿಭಿನ್ನ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆಗೈದ ಇವರ ಬದುಕು-ಬರಹ-ಆಸಕ್ತಿ-ಸಾಧನೆಗಳ ಕುರಿತ ವಿಮರ್ಶಾ ಬರಹಗಳ ಸಂಕಲನವಾದ  ‘ಚಂದ್ರಮಾನ’ ಪುಸ್ತಕವು ತನ್ನ  ವಿಶಿಷ್ಟವಾದ, ಕಿತ್ತು ಹೋದ ಛಾಯಾಚಿತ್ರದ ಚೌಕಟ್ಟಿನ ಮುಖಪುಟದಿಂದಲೇ ಆಕರ್ಷಿಸಿತು. ಅದನ್ನು ಕೊಂಡು, ನಾಗತಿಹಳ್ಳಿಯವರ ಹಸ್ತಾಕ್ಷರವನ್ನೂ ಪಡೆದು ಬಂದಿದ್ದಾಯಿತು. ತೀರಾ ಸರಳವಾಗಿ, ಅತ್ಮೀಯವಾಗಿ ಮಾತನಾಡಿಸಿದರು.
ಈ ಪುಸ್ತಕದಲ್ಲಿ ನಾಗತಿಹಳ್ಳಿಯವರನ್ನು ಹತ್ತಿರದಿಂದ ಬಲ್ಲ ಹಲವಾರು ಹಿತೈಷಿಗಳು  ಅವರ ವ್ಯಕ್ತಿತ್ವ-ಸಾಧನೆಗಳನ್ನು ಪರಿಚಯಿಸಿದ್ದಾರೆ. ಅವುಗಳಲ್ಲಿ ಕೆಲವು ವಾಕ್ಯಗಳು ಬಹಳ ಆಪ್ತವೆನಿಸಿದುದುವು. ಉದಾ:
  • ಒಟ್ಟಾರೆಯಾಗಿ ಹೇಳಬೇಕಾದರೆ ನಾಗತಿಹಳ್ಳಿಯವರಿಗೆ ಬೇರುಗಳೂ ಬೇಕು, ರೆಕ್ಕೆಗಳೂ ಬೇಕು” ಪುಟ 78  -ಡಾ.ಸಿ.ಎನ್. ರಾಮಚಂದ್ರನ್ 
  • “ಚಂದ್ರು ಬಡತನವನ್ನು ಬಹಳ ಸೃಷ್ಟಿಶೀಲ ಗುಣವೆಂದು ಭಾವಿಸಿಕೊಂಡವರು. ಹಣ ಬಂದಾಗ ತಾನು ಬಡವನಾಗಿದ್ದೆ ಎಂದುಬನ್ನು ಮರೆತಿಲ್ಲ. ಬಡವನಾದಾಗ ತಾನು ಶ್ರೀಮಂತನಾಗುತ್ತೀನಿ ಅನ್ನುವ ಕನಸು ಬಿಟ್ಟಿಲ್ಲ″  ಪುಟ 82 –  ಪ್ರೊ.ಎಂ.ಕೃಷ್ಣೇಗೌಡ 
  • ಬಹಳ ಜನ ಅವರನ್ನು ಮೇಷ್ಟ್ರು ಎಂದು ಕರೆಯುತ್ತಾರೆ. ನನಗೆ ಅವರೇ ವಿಶ್ವವಿದ್ಯಾಲಯ”  ಪುಟ 85 – ಶ್ರೀ ವಿಶ್ವೇಶ್ವರ ಭಟ್.  

Hema- Nagatihalli - Copy
ನನಗೆ ಅನಿಸಿದುದೇನೆಂದರೆ ಸಾಮಾನ್ಯರೂ ಅಸಾಮಾನ್ಯ ಕೆಲಸವನ್ನು  ಮಾಡಲು ಸಾಧ್ಯ ಎಂದು ತಮ್ಮ ಕೃತಿ ಮತ್ತು ಕೆಲಸಗಳ ಮೂಲಕ ನಾಗತಿಹಳ್ಳಿ ಚಂದ್ರಶೇಖರ ಅವರು ನಿರೂಪಿಸಿದ್ದಾರೆ. ಅವರಿಂದ ಕಾರ್ಯವೈಖರಿಯಿಂದ ನಾವು  ಕಲಿತುಕೊಳ್ಳಬೇಕಾದ ವಿಚಾರಗಳು ಸಾಕಷ್ಟಿವೆ.

– ಹೇಮಮಾಲಾ.ಬಿ

ರೈಲುಹಳಿಗಳ ಮೇಲೆ ಲಾರಿಗಳು….RORO.!

ಡಿಸೆಂಬರ್ 13, 2014  ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ  ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ   ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ  ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು  ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ  ಹಿನ್ನೆಲೆ  ಎಂದು ತಿಳಿಯಲು ಅಂತರ್ಜಾಲದ ಮೊರೆ ಹೊಕ್ಕೆ.  
ವಿಕಿಪಿಡಿಯಾದ ಪ್ರಕಾರ ಇದು  ಕೊಂಕಣ ರೈಲ್ವೇ ವಿಭಾಗವು ಕಲ್ಪಿಸಿರುವ ವಿಶಿಷ್ಟ ಸಾರಿಗೆ ವ್ಯವಸ್ಥೆ   ರೊರೊ ( RORO: Roll On Roll Off) 

konkan-roll-on-roll-off
ಈ  ವ್ಯವಸ್ಥೆಯಲ್ಲಿ, ಸರಕು ತುಂಬಿದ ಲಾರಿಗಳನ್ನು ರೈಲ್ವೇ  ವ್ಯಾಗನ್ ಗಳ ಮೇಲೇರಿಸಿ, ನಿಗದಿತ ಸ್ಥಳಕ್ಕೆ ಒಯ್ಯಲಾಗುತ್ತದೆ. ಕೊಂಕಣ ರೈಲ್ವೇಮಾರ್ಗಕ್ಕೆ ಸಮಾನಾಂತರವಾಗಿ  ರಾಷ್ಟ್ರೀಯ ಹೆದ್ದಾ ರಿ 17 ಕೂಡ ಸಾಗುತ್ತದೆ.   ಪಶ್ಛಿಮ ಘಟ್ಟಗಳ ಮಧ್ಯೆ ಹಾದುಹೋಗುವ ಈ ರಸ್ತೆಯು ಸದಾ ವಾಹನಗಳಿಂದ ಕೂಡಿರುತ್ತವೆ. ಕೆಲವೆಡೆ ಕಿರಿದಾದ ಮಾರ್ಗ, ಹವಾಮಾನ ವೈಪರೀತ್ಯಗಳು ಮತ್ತು ದೂರದ ಪ್ರಯಾಣದಿಂದಾಗಿ ಲಾರಿ ಚಾಲಕರಿಗೆ ಉಂಟಾಗುವ ದೇಹಾಲಸ್ಯ- ಎಲ್ಲವೂ ಸೇರಿ ರಸ್ತೆ ಅಫಘಾತಗಳು ಆಗುವ ಸಾಧ್ಯತ ಹೆಚ್ಚಿರುತ್ತವೆ.
ಆದರೆ, ಕೊಂಕಣ ರೈಲ್ವೇಯು ಸೃಷ್ಟಿಸಿದ ರೋರೋ ವ್ಯವಸ್ಥೆಯಿಂದಾಗಿ ಈ ಮಾರ್ಗದಲ್ಲಿ ಲಾರಿಗಳನ್ನು ರೈಲ್ವೇವ್ಯಾಗನ್ ನಲ್ಲಿ  ನಿಗದಿತ ದರ ಕೊಟ್ಟು ಸಾಗಿಸಬಹುದು. ಇದರಿಂದಾಗಿ  ಲಾರಿಯವರಿಗೆ ಹಣ ಮತ್ತು ಇಂಧನದ ಉಳಿಕೆ ಆಗುತ್ತದೆ. ಲಾರಿ ಚಾಲಕರಿಗೆ ಮೈಯೆಲ್ಲಾ ಕಣ್ಣಾಗಿ ನಿದ್ದೆಗೆಟ್ಟು ರಸ್ತೆಯಲ್ಲಿ ಲಾರಿ ಓಡಿಸಬೇಕಾದ ಶ್ರಮವಿಲ್ಲ. ರಸ್ತೆಯಲ್ಲಿ ಲಾರಿಗಳ ಸಂಖ್ಯೆ ಕಡಿಮೆಯಾದಾಗ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ರಸ್ತೆಯ ಸ್ವಾಸ್ತ್ಯವೂ ಚೆನ್ನಗಿರುತ್ತದೆ. ಒಟ್ಟಿನ ಮೇಲೆ ಲಾರಿ ಮಾಲಿಕರಿಗೆ, ಚಾಲಕರಿಗೆ ಅನುಕೂಲ ಮತ್ತು ಕೊಂಕಣ ರೈಲ್ವೇಗೂ ಆದಾಯ ತರುವ  ವ್ಯವಸ್ಥೆ ಈ ರೋರೋ. 
(ಚಿತ್ರ ಮತ್ತು ಮಾಹಿತಿ :ಅಂತರ್ಜಾಲ)

– ಹೇಮಮಾಲಾ.ಬಿ,ಮೈಸೂರು