Total Pageviews

Thursday, June 21, 2012

ಹೊನ್ನೇ ಮರದ ಸಾಹಸಗಾಥೆ .. ..

ಮಾವಿನಕೆರೆ ಯಲ್ಲಿರುವ  ಲಕ್ಶ್ಮಿ ವೆಂಕಟರಮಣ   ಸ್ವಾಮಿಯ ದೇವಸ್ಥಾನದ ಆವರಣದಲ್ಲಿ , ಗೋಡೆಯ ಮೂಲಕ ಹಾದು ಬೆಳೆ ದು   ನಿಂತ ಹೊನ್ನೇ ಮರದ ಸಾಹಸಗಾಥೆ ನೋಡಿ....


       

 

Tuesday, June 19, 2012

ಪಯಣ -ಮಾವಿನಕೆರೆ ಬೆಟ್ಟ


ಜೂನ್ ೧೦ ರಂದು, ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಆಯೊಜಿಸಲಾದ ಸಣ್ಣ  ಟ್ರೆಕ್ಕಿಂಗ್  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಸುಮಾರು ೩೦ ಜನರಿದ್ದ ನಮ್ಮ ತಂಡ, ಮೈಸೂರಿನ ರೈಲ್ವೇಸ್ಟೇಶನ್ ನಲ್ಲಿ ಸೇರಿ, ಹಾಸನದ ಕಡೆಗೆ ಹೋಗುವ ರೈಲ್ ನಲ್ಲಿ ಹೊರಟೆವು.  ಕಟ್ಟಿಸಿ ತಂದಿದ್ದ ಇಡ್ಲಿ-ಚಟ್ನಿ ತಿಂದು, ದಾರಿಯಲ್ಲಿ ಯಾವುದೋ ಒಂದು ಸ್ಟೇಶನ್ ನಲ್ಲಿ ಮಾರುತ್ತಿದ್ದ ಹಲಸಿನ ಹಣ್ಣನ್ನೂ ತಿಂದು, ಅದೂ-ಇದೂ ಹರಟುತ್ತ, ಸುಮಾರು ೨ ಗಂಟೆ ಪ್ರಯಾಣಿಸುವಷ್ಟರಲ್ಲಿ ಮಾವಿನಕೆರೆ ಬಂದೇ ಬಿಟ್ಟಿತು.

ಶ್ರೀ ಎಮ್. ವಿ. ಸುಬ್ಬಣ್ಣ ಹಾಗೂ ಅವರ ಮನೆಯವರು ಅಲ್ಲಿ ನಮ್ಮನ್ನು ಬರಮಾಡಿಕೊಂಡರು. ಪರಸ್ಪರ ಪರಿಚಯ-ಯೋಗಕ್ಷೇಮ ಮಾತನಾಡಿ, ಮಾವಿನಕೆರೆ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆವು. ಸುಬ್ಬಣ್ಣನವರು ನಮಗಾಗಿ ಮಾವಿನಕೆರೆ ಕ್ಷೇತ್ರದ ಬಗ್ಗೆ ನಮಗಾಗಿ ಒಂದು ಪುಟ್ಟ ಮಾಹಿತಿ ಪುಸ್ತಕವನ್ನು ಬರೆದು ಮುದ್ರಿಸಿದ್ದರು. ಇದರ ಸರಳ ನಿರೂಪಣೆಯಿಂದ ಶ್ರೀಕ್ಷೇತ್ರದ ಸ್ಥಳಪುರಾಣ  ತಿಳಿಯಲು ಅನುಕೂಲವಾಯಿತು.








ಮಾವಿನಕೆರೆ ಬೆಟ್ಟ ಚಿಕ್ಕದಾದುದು. ಸುಮಾರು ೫೦೦ ಮೆಟ್ಟಿಲುಗಳಿದ್ದುವು. ಅಲ್ಲಲ್ಲಿ ದೊಡ್ಡದಾದ ಬಂಡೆಗಳಿದ್ದುವು.

















ಬಂಡೆಯನ್ನೇರಲು ನಮ್ಮ ತಂಡದಲ್ಲಿದ್ದ
’ತಾತ ಯೂಥ್’ಗಳೇ ಲೀಡರ್ಸ್!












ಬೆಟ್ಟದ ಮೇಲೆ, ಪುಟ್ಟದಾದ  ಗುಹೆಯಲ್ಲಿ ಪುರಾತನವಾದ ಉದ್ಭವ ರಂಗನಾಥ ಸ್ವಾಮಿಯ ಶಿರೋಭಾಗ ಮಾತ್ರ ಕಾಣಿಸುತ್ತದೆ. ದೇವಸ್ಥಾನದ ಮುಂಭಾಗವನ್ನು  ಇತ್ತೀಚೆಗೆ ನವೀಕರಿಸಿದ್ದಾರೆ. ಚಿಕ್ಕದಾದರೂ ಚೊಕ್ಕವಾದ ದೇವಸ್ಥಾನವಿದು. ಬೆಟ್ಟದ ಮೇಲೆ ಬೀಸುವ ತಂಗಾಳಿ ಮೆಟ್ಟಿಲು ಹತ್ತಿ ಬಂದ ಆಯಾಸವನ್ನು ಮರೆಸುತ್ತದೆ. ಬಹುಶ: ಅಲ್ಲಿನ ಗಾಳಿ ಬೀಸುವಿಕೆ ಜಾಸ್ತಿಯಿರಬೇಕು, ಇದಕ್ಕೆ ಪೂರಕವೆಂಬಂತೆ ಸ್ವಲ್ಪ ದೂರದಲ್ಲಿ , ಗಾಳಿಯಿಂದ ವಿದ್ಯುತ್ ತಯಾರಿಸುವ ’ವಿಂಡ್ ಮಿಲ್’ಗಳು ಕಾಣಿಸುತ್ತವೆ. 


ತೀರ್ಥ-ಪ್ರಸಾದ ಸ್ವೀಕರಿಸಿ, ನಿಧಾನವಾಗಿ ಹರಟುತ್ತಾ. ಪ್ರಕೃತಿ ಸಿರಿಯನ್ನು ಮೆಚ್ಚುತ್ತಾ ಬೆಟ್ಟದ ಕೆಳಗಿಳಿಯುವಾಗ ೧.೩೦ ಗಂಟೆಯಾಗಿತ್ತು. ನಮ್ಮ ಮುಂದಿನ ಪಯಣ  ಅಲ್ಲಿಂದ ಸುಮಾರು ೩. ಕಿ.ಮೀ ದೊರದಲ್ಲಿರುವ ಹೇಮಾವತಿ ನದಿ ದಂಡೆಯಲ್ಲಿ ಸ್ಥಾಪಿಸಲಾದ ’ಶ್ರೀಲಕ್ಶ್ಮಿ ವೆಂಕಟರಮಣ ಸ್ವಾಮಿ’ಯ  ಮಂದಿರಕ್ಕೆ. 


ಈ ದಾರಿಯಲ್ಲಿ, ಎರಡು ದೊಡ್ಡದಾದ ’ಅಕ್ವಾ ಡೆಟ್’ ಅಥವಾ ನೀರು ಹರಿಯುವ ಮೇಲುಸೇತುವೆಗಳಿವೆ. ಗೊರೂರು ಅಣೆಕಟ್ಟಿನಿಂದ ಹೇಮಾವತಿ ನದಿಯ ನೀರನ್ನು ಸಮರ್ಪಕವಾಗಿ ಬಳಸಲು ಈ ವ್ಯವಸ್ಥೆ.






ಸುಮಾರು ೨ ಗಂಟೆಗೆ ’ಶ್ರೀಲಕ್ಶ್ಮಿ ವೆಂಕಟರಮಣ ಸ್ವಾಮಿ’ ದೇವಸ್ಥಾನಕ್ಕೆ ತಲಪಿದೆವು. ಅಲ್ಲಿನ ಅರ್ಚಕರು ಬಹಳ ಶ್ರದ್ಧಾ-ಭಕ್ತಿಯಿಂದ ಪೂಜೆ-ಅರ್ಚನೆ ಕಾರ್ಯಕ್ರಮಗಳನ್ನು ನೆರವೇರಿಸಿದರು. ಅವರು ಸ್ಥಳಪುರಾಣ ಹಾಗೂ ತಮ್ಮ  ಕುಟುಂಬದವರಿಗೆ ತಲೆಮಾರಿನಿಂದ ಒದಗಿ ಬಂದ ಪೂಜಾ-ಕೈಂಕರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ಆಸ್ಠೆಯಿಂದ ವಿವರಿಸಿದರು. 

ಈ ನಡುವೆ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳಲ್ಲಿ ಕಾಟಾಚಾರಕ್ಕೆ ಅರ್ಚನೆ ಮಾಡುತ್ತಾರೆ. ಹಾಗಾಗಿ ಇಲ್ಲಿನ ಅರ್ಚಕರ ಸೌಜನ್ಯ ಹಾಗೂ   ಪ್ರತಿಯೊಬ್ಬರನ್ನು "ಸ್ವಾಮಿಯನ್ನು ನೋಡಿಯಾಯಿತೆ, ಅಮ್ಮನವರಿಗೆ ಈ ದಿನ ವಿಶೇಷ ಅಲಂಕಾರವಿದೆ, ತೀರ್ಥ ಸಿಕ್ಕಿತೆ, ಪ್ರಸಾದ ಸ್ವೀಕರಿಸಿ" ಇತ್ಯಾದಿ   ಪ್ರೀತಿಯಿಂದ ಆದರಿಸುವ ಪರಿ ಇಷ್ಟವಾಯಿತು.

ಮುತ್ತುಗದ ಎಲೆ ಮೇಲೆ ಧಾರಾಳವಾಗಿ ಬಡಿಸಿದ ಬಿಸಿಬೆಳೆ ಭಾತ್, ಸಿಹಿ ಪೊಂಗಲ್ ಹಾಗೂ ಮೊಸರನ್ನ ಸವಿದೆವು. ಪಕ್ಕದಲ್ಲಿ ಹರಿಯುತ್ತಿರುವ ಹೇಮಾವತಿ ನದಿದಂಡೆಯಲ್ಲಿ ಸ್ವಲ್ಪ ಹೊತ್ತು ಕುಳಿತು, ಮೈಸೂರಿಗೆ ಹಿಂತಿರುಗಿದೆವು.

ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅಯೋಜಿಸಿದ್ದ ಶ್ರೀ ಸ್ವಾಮಿ ಹಾಗೂ ಶ್ರೀ ಸೋಮಶೇಖರ್ ಅವರಿಗೆ ಹೃತ್ಪೂರ್ವಕ ಥಾಂಕ್ಸ್!



Friday, June 15, 2012

ನಮ್ಮ ಮನೆಯ ಅಂಗಳದಿ ಬೆಳೆದ ಹೂವನ್ನು...

ಮೈಸೂರಿನ ಹೊರವಲಯದಲ್ಲಿರುವ ನಮ್ಮ ಪುಟ್ಟ ಮನೆಗೆ  ಚಿಕ್ಕದಾದ  ಕೈತೋಟವೂ  ಇದೆ. ಸ್ವಲ್ಪ ಹುಲ್ಲು ಹಾಸು, ಕೆಲವು ಹೂವು- ಹಣ್ಣಿನ  ಗಿಡಗಳು ಬೆಳೆದು ನಿಂತು ನಮ್ಮ ಕಣ್ಣಿಗೆ  ಮುದ ಕೊಡುತ್ತವೆ . ಹೂಗಳು ಗಿಡದಲ್ಲಿಯೇ ಇದ್ದರೆ ಚೆನ್ನ ಎಂದು ನನ್ನ ನಂಬಿಕೆ.

ಬೆಳಗ್ಗೆ ವಾಕಿಂಗ್ ಹೋಗುವ ನೆಪದಲ್ಲಿ ಕೆಲವರು, ಬೇರೊಬ್ಬರ ಮನೆಯ ಅಂಗಳದಲ್ಲಿ ಅರಳಿದ ಹೂವನ್ನು ಕದ್ದು ತಂದು ತಮ್ಮ ಮನೆಯ ದೇವರಿಗೆ ಅರ್ಪಿಸಿ  ಧನ್ಯರಾಗುತ್ತಾರೆ. ನಾನು ಗಮನಿಸಿದಂತೆ  ಮಲ್ಲಿಗೆ, ದಾಸವಾಳ ಇತ್ಯಾದಿ  ಪೂಜೆಗೆ ಬಳಸುವ ಹೂಗಳಿಗೆ  'ಕಳ್ಳ' ರು ಹೆಚ್ಚ್ಚು.














                                                               


ಆದರೆ ಸಾಮಾನ್ಯವಾಗಿ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುರ್ಗಾ ಪೂಜೆಗೆ  ಅತಿ ಶ್ರೇಷ್ಥವೆಂದು ಪರಿಗಣಿಸುವ 'ಕೇಪುಳ' ಹೂವನ್ನು ಇಲ್ಲಿ ಯಾರು ಕೀಳುವುದಿಲ್ಲ. ಅದಕ್ಕೆ ಕೇವಲ ಅಲಂಕಾರಿಕ  ಹೂವಿನ ಸ್ಥಾನ. ಹಾಗಾಗಿ ನಮ್ಮ ಮನೆಯ ಮುಂದೆ ರಸ್ತೆ ಬದಿಯಲ್ಲಿ ಹಾಕಿರುವ  ಕೇಪುಳ  ಹೂವಿನ ಗಿಡವು, ಹಲವಾರು ವರ್ಷಗಳಿಂದ ನಿರಾತಂಕವಾಗಿ  ಕಂಗೊಳಿಸುತ್ತಿದೆ .

ಪ್ರತಿದಿನವೂ ಮನೆ ಕೆಲಸದ ಗಡಿಬಿಡಿ, ಕೆಲಸಕ್ಕೆ ಹೊರಡುವ ತರಾತುರಿಯಲ್ಲಿ, ತಕ್ಕ ಮಟ್ಟಿಗೆ ನಾಸ್ತಿಕತೆಯು ಜತೆಗೂಡಿ ಯಾವುದೇ ಪೂಜೆ -ಪುನಸ್ಕಾರ ಮಾಡದೆ ಇರುವವಳು ನಾನು. ಹಾಗಾಗಿ,  ನಮ್ಮ  ಮನೆಯ ಅಂಗಳದಿ ಬೆಳೆದ ಹೂವನ್ನು, ತಮ್ಮ ಮನೆಯ ದೇವರಿಗೆ ಅರ್ಪಿಸಿ, ತಾವು ಪೂಜೆ ಮಾಡಿ,  ನನ್ನ ಅರಿವಿಗೇ  ಬಾರದಷ್ಟು ಸೌಜನ್ಯದಿಂದ, ನನ್ನ ಪುಣ್ಯದ ಅಕೌಂಟ್ ಗೆ ಜಮೆ ಮಾಡುವ ನಾಗರಿಕರಿಗೆ ನಮೋ ನಮ:!