Total Pageviews

Sunday, October 14, 2012

ಹದಿನಾರು ಮುಖದ ಚಾವಡಿ


ಕಾಲಚಕ್ರವನ್ನು ಸುಮಾರು ೩೫೦ ವರ್ಷ ಹಿಂತಿರುಗಿಸಿ ...

ಹೆಡತಲೆ ಎಂಬೊಂದು ಊರು....ಊರಿಗೊಬ್ಬ ರಾಜ ಭೀಮಣ್ಣ ನಾಯಕ...ಆತನಿಗೊಬ್ಬಳು ರಾಣಿ...ಅವರಿಗೆ ೧೬ ಹೆಣ್ಣು ಮಕ್ಕಳು. ಎಲ್ಲಾ ಹೆಣ್ಣು ಮಕ್ಕಳನ್ನು ಯುಕ್ತ ವಯಸ್ಸಿಗೆ ಮದುವೆ ಮಾಡಿಕೊಟ್ಟು, ಮಗಳಂದಿರು ಹಾಗೂ ಅಳಿಯಂದಿರೊಂದಿಗೆ ಆಗಾಗ್ಗೆ ಕುಶಲೋಪರಿ ನಡೆಸುತ್ತಾ  ಮನೆಮಂದಿಯೆಲ್ಲ ಒಟ್ಟಾಗಿ ಸಂಭ್ರಮಿಸುವ ಆಸೆ ರಾಜನಿಗೆ. ಆಗ ಎದುರಾದದ್ದು ಒಂದು ಸಮಸ್ಯೆ. ರಾಜನಿಗೆ ತನ್ನ ಯಾವ ಮಗಳ ಗಂಡ ಯಾರು ಎಂಬ ಗೊಂದಲವಾಗುತ್ತಿತ್ತಂತೆ. ಮೇಲಾಗಿ, ಆಗಿನ ಕಾಲದ ಪದ್ಧತಿಯಂತೆ, ಅತ್ತೆಯಾದವಳು ತನ್ನ ಅಳಿಯಂದಿರನ್ನು ಮುಖವನ್ನು ನೋಡುವಂತಿಲ್ಲ.

ರಾಜ-ರಾಣಿ, ಎಲ್ಲಾ ಮಗಳಂದಿರು ಮತ್ತು ಅಳಿಯಂದಿರು  ಅಂದರೆ ಒಟ್ಟು ೧+೧+೧೬+೧೬ = ೩೪ ಜನ  ಏಕ ಕಾಲದಲ್ಲಿ ಕೂರುವ ಆಸನ ವ್ಯವಸ್ಥೆಯಿರಬೇಕು,ರಾಜನಿಗೆ ಎಲ್ಲರೂ ಕಾಣಿಸಬೇಕು, ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸಬೇಕು. ಪ್ರತೀ ಹೆಣ್ಣುಮಗಳೂ ತನ್ನ  ಗಂಡನ ಜತೆ ಅನುಕ್ರಮವಾಗಿ ಕೂರಬೇಕು. ಇಂತಹ ಚಾವಡಿಯನ್ನು ವಿನ್ಯಾಸಗೊಳಿಸಬೇಕೆಂದು ರಾಜನು ಸೂಚಿಸಿದಾಗ, ಅಂದಿನ ಹೊಯ್ಸಳ ವಾಸ್ತುಶಿಲ್ಪಿಗಳು ರಚಿಸಿದ  ಅದ್ಭುತ ಸಭಾಂಗಣವೇ 'ಹದಿನಾರು ಮುಖದ ಚಾವಡಿ'. ಈ ಚಾವಡಿಗೆ, ನಾಲ್ಕೂ ಮೂಲೆಗಳಿದ್ದು, ೧೬ ಕಂಭಗಳಿವೆ. ಪ್ರತಿ ಕಂಭಕ್ಕೆ ತಾಗಿಕೊಂಡಂತೆ ಇಬ್ಬರು ಕೂರುವಂತ ಕಲ್ಲಿನ ಸೋಫಾ  ಇದೆ. ಚಾವಡಿಯ ಮಧ್ಯ ಭಾಗದಲ್ಲಿಯೂ ವಿಶೇಷ ಕೆತ್ತನೆಯುಳ್ಳ ಕಂಭಗಳಿವೆ.

ಅಲ್ಲಿನ ಅರ್ಚಕರು ನಮಗೆ ವಿವರಿಸಿದಂತೆ, ರಾಜ ಕೂರುತ್ತಿದ್ದ ಜಾಗದಿಂದ ನೋಡಿದರೆ  ಇಡೀ ಸಭಾಂಗಣ ಕಾಣಿಸುತ್ತದೆ. ರಾಣಿ ಕೂರುತ್ತಿದ್ದ ಜಾಗದಿಂದ ನೋಡಿದರೆ, ಪ್ರತೀ ಸೋಫಾದ   ಅರ್ಧ ಭಾಗ ಕಾಣಿಸುತ್ತದೆ. ಅಂದರೆ ರಾಣಿಗೆ ತನ್ನ ಮಗಳಂದಿರು ಮಾತ್ರ ಕಾಣಿಸುತ್ತಿದ್ದರು ಎಂದಾಯಿತು. ಎಂಥಹಾ ಸೃಜನಶೀಲ ವಾಸ್ತು ವಿನ್ಯಾಸ!

'





ಹದಿನಾರು ಮುಖದ ಚಾವಡಿ' ಇರುವುದು ಹೆಡತಲೆ ಲಕ್ಷ್ಮೀಕಾಂತ ದೇವಾಲಯದಲ್ಲಿ. ಹಿಂದೆ ಇದು ಕೌಂಡಿನ್ಯ ಋಷಿಗಳು ತಪಸ್ಸನ್ನಾಚರಿಸುತ್ತಿದ್ದರಂತೆ. ಅಸುರನೊಬ್ಬ ಅವರಿಗೆ ಕಿರುಕುಳ ಕೊಡುತ್ತಿದ್ದ ಕಾರಣ ಅವರು ಲಕ್ಷ್ಮೀಕಾಂತ ಸ್ವಾಮಿಯ ಮೊರೆ ಹೊಕ್ಕರಂತೆ. ಅಸುರ ನಿಗ್ರಹವಾಗಿ ಆತನ ತಲೆ ಎಡಭಾಗಕ್ಕೆ ಬಿತ್ತಂತೆ. ಹೀಗಾಗಿ ಊರಿಗೆ ಎಡತಲೆ ಎಂಬ ಹೆಸರಾಯಿತು, ಕಾಲಾಂತರದಲ್ಲಿ ಅದು  'ಹೆಡತಲೆ' ಆಯಿತು. ಅಸುರನ ಹೆಮ್ಮರದಂತಹ ಕಾಲು ಬಿದ್ದ ಜಾಗ 'ಹೆಮ್ಮರಗಾಲ'ವಾಯಿತು. ಹೆಮ್ಮರಗಾಲ ಎಂಬ ಊರು ಹೆಡತಲೆಯಿಂದ ೧-೨ ಕಿ.ಮಿ ದೂರದಲ್ಲಿದೆ. ಅಲ್ಲಿಯೂ ಕೌಂಡಿನ್ಯರಿಂದ ಸ್ಥಾಪಿತವಾದ ಸಂತಾನ ಗೋಪಾಲಸ್ವಾಮಿಯ ದೇವಾಲಯವಿದೆ. ಹೀಗಿದೆ ಸ್ಥಳಪುರಾಣ ಅಥವಾ ದಂತಕಥೆ.

ಇಲ್ಲಿ ಅಚ್ಚುಕಟ್ಟಾದ, ೩ ಗರ್ಭಗುಡಿಯನ್ನು ಹೊಂದಿದ ದೇವಾಲಯವಿದೆ. ಹಾಗಾಗಿ ಇದಕ್ಕೆ ತ್ರಿಕುಟಾಚಲವೆಂಬ ಹೆಸರೂ ಇದೆ. ಇಲ್ಲಿನ  ಆಂಡಾಳ್ ಅಮ್ಮನವರ ವಿಗ್ರಹದ ಶಿಲ್ಪ ತುಂಬಾ ಸೊಗಸಾಗಿದೆ. ಅರ್ಚಕರು ವಿವರಿಸುವಂತೆ,ದೀಪ ಆರತಿಯ ತಟ್ಟೆಯನ್ನು ಅಮ್ಮನವರ ಹಣೆಯಿಂದ ಕೆಳಗೆ ನಿಧಾನವಾಗಿ ಸರಿಸಿದಾಗ, ಮೂರ್ತಿಯ ಕಣ್ಣುಗಳು ತುಂಬಾ ಕಾಂತಿಯುತವಾಗಿ, ನೈಜವಾಗಿ   ಕಾಣಿಸುತ್ತವೆ.  

ಹೊಯ್ಸಳರ ಕಾಲದಲ್ಲಿ ಅದೆಷ್ಟು ಚಿಕ್ಕ-ದೊಡ್ಡ ದೇವಾಲಯಗಳನ್ನು ಕಟ್ಟಿದ್ದರೋ? ಪ್ರಖ್ಯಾತವಾದ ಕೆಲವು ದೇವಸ್ಥಾನಗಳನ್ನು  ಬಿಟ್ಟರೆ, ಇಂಥಹ ವಿಶಿಷ್ಟ ದೇವಾಲಯಗಳ ಬಗ್ಗೆ ಲಭ್ಯವಿರುವ  ಮಾಹಿತಿ ಕಡಿಮೆ.

ಹೆಡತಲೆಗೆ ಹೋಗುವ ದಾರಿ:


ಮೈಸೂರಿನಿಂದ ಹೊರಟು ನಂಜನಗೂಡು ದಾರಿಯಾಗಿ, ಚಾಮರಾಜನಗರದ ಕಡೆಗೆ ಬಸ್ ಅಥವಾ ರೈಲ್ ನಲ್ಲಿ ಪ್ರಯಾಣಿಸಿ, ಬದನವಾಳು ಎಂಬಲ್ಲಿ ಇಳಿಯಬೇಕು.  ಅಲ್ಲಿಂದ ಸುಮಾರು ೫ ಕಿ.ಮಿ. ದೂರದ ಹಳ್ಳಿ ರಸ್ತೆಯಲ್ಲಿ ಸಾಗಬೇಕು.  ಕಾರಿನಲ್ಲೂ ಹೋಗಬಹುದು.

Saturday, October 6, 2012

ದಂಡ ದರ್ಶನಂ ಪಾಪ ನಾಶನಂ,ದಂಡ ಸ್ಪರ್ಶನಂ ಪುಣ್ಯ ವರ್ಧನಂ



ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಇಲ್ಲಿ ಹಿಂದೆ ಕೌಂಡಿನ್ಯ ಮಹರ್ಷಿಯು ತಪಸ್ಸು ಮಾಡುತ್ತಿದ್ದರಂತೆ.

ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ  ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ  ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ ಚಕ್ರ ಮುರಿದು ಬೀಳುವುದೆಂದೂ, ಆ ಸ್ಥಳದಲ್ಲಿ  ಅಗೆಸಿದರೆ ವೇಣುಗೋಪಾಲಸ್ವಾಮಿಯ ವಿಗ್ರಹ ಲಭಿಸುವುದೆಂದೂ, ಅದನ್ನು ಒಯ್ದು ಕೌಂಡಿನ್ಯ ಋಷಿಗಳಿಂದ  ಸ್ಥಾಪಿಸಿ ಪೂಜಿಸೆಂದೂ ಅನುಗ್ರಹವಾಯಿತಂತೆ.  ಕನಸಿನಂತೆಯೇ ಘಟನೆಗಳು ನಡೆದು, ಈಗಿನ ಹೆಮ್ಮರಗಾಲದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯ ರೂಪುಗೊಂಡಿತು. ಕಾಲಾನಂತರದಲ್ಲಿ ಹೊಯ್ಸಳರ ಪಾಳೆಯಗಾರರ ಆಳ್ವಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡಿತು. ಈಗಿನ  ದೇವಸ್ಥಾನವನ್ನು ೧೩ ನೆಯ ಶತಮಾನದಲ್ಲಿ ಕಟ್ಟಲಾಯಿತಂತೆ.

ಕೊಳಲನ್ನೂದುವ ವೇಣುಗೋಪಾಲನ ವಿಗ್ರಹ ತುಂಬಾ ಸುಂದರವಾಗಿದೆ. ಇವನ ಕುರಿತು ಹಬ್ಬಿರುವ ದಂತಕತೆ ಇನ್ನೂ ಸೊಗಸಾಗಿದೆ. ಬಾಲಗೋಪಾಲನಾಗಿ ಕಂಗೊಳಿಸುವ ವೇಣುಗೋಪಾಲನಿಗೆ ಸಂತಾನಗೋಪಾಲ ಎಂಬ ಹೆಸರೂ ಇದೆ.  ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತಾರೆಂಬ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ದೇವರಿಗೆ ಅರ್ಪಿಸಿದ ಪುಟ್ಟ ಬೆಳ್ಳಿಯ ತೊಟ್ಟಿಲುಗಳು ಅಲ್ಲಿ ತೂಗಾಡುತ್ತಿದ್ದುವು.

ಇದಲ್ಲದೆ ಈ ಸ್ವಾಮಿಗೆ 'ಹುಚ್ಚು ಗೋಪಾಲ' ಎಂಬ ಹೆಸರೂ ಇದೆ! ಇನ್ನೊಂದು ಕಥೆಯ ಪ್ರಕಾರ ಅಲ್ಲಿ ಆಳಿದ ಚೋಳ ರಾಜನೊಬ್ಬನಿಗೆ ೧೨ ಜನ ಹೆಣ್ಣು ಮಕ್ಕಳಿದ್ದರಂತೆ. ಪುತ್ರ್ರಾಕಾಂಕ್ಷಿಯಾಗಿ  ವೇಣುಗೋಪಾಲನನ್ನು  ಭಕ್ತಿಯಿಂದ ಪೂಜಿಸಿದರೂ ಆತನ ೧೩ನೆಯ ಮಗು ಹೆಣ್ಣಾಗಿ ಹುಟ್ಟಿತಂತೆ. ನಿರಾಶೆಯಿಂದ ರಾಜ-ರಾಣಿ ಇಬ್ಬರೂ ದೇವಾಲಯದಲ್ಲಿಯೇ  ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿ, ಕೊನೆಯ ಬಾರಿಗೆ ನವಜಾತ ಶಿಶುವನ್ನು ನೋಡಿ ಸಾಯೋಣ ಎಂದು ಮಗುವನ್ನು ನೋಡಿದಾಗ ಅದು ಗಂಡು ಮಗುವಾಗಿತ್ತಂತೆ. ಭಕ್ತಿ-ಆಶ್ಚರ್ಯ- ಸಂತೋಷಾತಿರೇಕದಿಂದ ಆತ ದೇವರನ್ನು 'ಹುಚ್ಚು ಗೋಪಾಲ'ನೆಂದು ಕರೆದು ಪೂಜಿಸಿದಂತೆ. ಹೀಗೆ ಬಹು ನಾಮಾಂಕಿತ ಈ ಗೋಪಾಲ.


ಈ ದೇವಾಲಯದ ಇನ್ನೊಂದು ವಿಶೇಷವೇನೆಂದರೆ 'ಕೌಂಡಿನ್ಯ ಮಹರ್ಷಿಯ  ದಂಡ'    . ನಂಬಿಕೆಯ ಪ್ರಕಾರ ಕೌಡಿನ್ಯರು ಸದ್ಗತಿ ಹೊಂದುವ ಸಮಯದಲ್ಲಿ ತನ್ನ ತಪಶ್ಶಕ್ತಿಯನ್ನು  ದಂಡಕ್ಕೆ ವರ್ಗಾಯಿಸಿ, ಭಕ್ತರ ಸಕಲ ಕಷ್ಟಗಳನ್ನೂ ಪರಿಹರಿಸಿದರಂತೆ. ಹಾಗಾಗಿ ಈ ದೇವಸ್ಥಾನದಲ್ಲಿ 'ದಂಡ ದರ್ಶನಂ ಪಾಪ ನಾಶನಂ, ದಂಡ ಸ್ಪರ್ಶನಂ ಪುಣ್ಯ ವರ್ಧನಂ'. ಹೂವಿನಿಂದ ಅಲಂಕೃತವಾದ ದಂಡವನ್ನು ಹಿಡಿದ ಅರ್ಚಕರು ಹಿಡಿದಿರುತಾರೆ. ಸಾಲಾಗಿ ಬರುವ ಭಕ್ತರು ಶಿರವೊಡ್ಡಿ ದಂಡವನ್ನು ಮೆತ್ತಗೆ ಸ್ಪರ್ಶಿಸುತ್ತಾರೆ. ಶನಿವಾರ ಹಾಗೂ ಭಾನುವಾರ  ಮಾತ್ರ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯ ವರೆಗೆ 'ದಂಡ ಸ್ಪರ್ಶನ' ಮಾಡಲು ಅವಕಾಶವಿರುತ್ತದೆ. ಉಳಿದ ದಿನಗಳಲ್ಲಿ ಈ ಕಾರ್ಯಕ್ರಮವಿರುವುದಿಲ್ಲ.





ಅಲ್ಲಿಗೆ ಹೋಗುವ ವರೆಗೆ  ಈ ವಿಚಾರಗಳಾವುವೂ ನಮಗೆ ಗೊತ್ತಿರಲಿಲ್ಲ. ಆದರೂ  ಭಾನುವಾರವಾಗಿದ್ದರಿಂದ ದಂಡಸ್ಪರ್ಶನ ಸಾಧ್ಯವಾಯಿತು.  ಹುಣ್ಣಿಮೆಯ ದಿನವಾಗಿದ್ದರಿಂದ ವಿಶೇಷ ಕಾರ್ಯಕ್ರಮವಾಗಿ ಸುದರ್ಶನ ಯಾಗ ನಡೆಯುತ್ತಿತ್ತು. ಪ್ರಸಾದ ಅನ್ನ ಸಂತರ್ಪಣೆಯಲ್ಲೂ ಪಾಲ್ಗೊಂಡೆವು. ರುಚಿಯಾದ ಸಿಹಿ ಪೊಂಗಲ್, ಖಾರ ಪೊಂಗಲ್ ಸವಿದು ಮರಳಿದೆವು.

ಹೆಮ್ಮರಗಾಲಕ್ಕೆ ಹೋಗುವ ದಾರಿ : ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ   ಹೊರಟು ಬದನವಾಳು ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಹೆಮ್ಮರಗಾಲಕ್ಕೆ  ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಆದರೆ ದೇವಸ್ಥಾನದ ವರೆಗೆ ಹೋಗಬಹುದು. ಹಳ್ಳಿ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಪ್ರಯಾಣಿಸಬೇಕು. ಬೇಕಾದಷ್ಟು ಸಮಯವಿದ್ದರೆ, ಗುಂಪಲ್ಲಿ ಹರಟುತ್ತಾ, ದಾರಿಯಲ್ಲಿ ಸಿಗುವ ಎಳನೀರು ಕುಡಿಯುತ್ತಾ, ಕಬ್ಬು ತಿನ್ನುತ್ತಾ, ನಡೆಯುವುದನ್ನೇ ಕೆಲಸವನ್ನಾಗಿಸಬಹುದು.

Friday, October 5, 2012

ಕತ್ತಾಳೆ


ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ. ಈ ವರ್ಗಕ್ಕೆ ಸೇರಬಹುದಾದ 'ಕತ್ತಾಳೆ' ಎಂಬ  ಗಿಡದ ಎಲೆಯಿಂದ ಹಗ್ಗ ತಯಾರಿಸುತ್ತಾರ್‍ಎಂದು ಮೊನ್ನೆ ತಾನೇ ತಿಳಿಯಿತು. ನಂಜನಗೂಡಿನ ಬದನವಾಳು ಸಮೀಪ ಹಳ್ಳೀ ದಾರಿಯಲ್ಲಿ ನಡೆಯುತ್ತಿದ್ದಾಗ ಕ್ಲಿಕ್ಕಿಸಿದ ಚಿತ್ರಗಳಿವು.



ಹಿಂದೆ ಈ ಎಲೆಗಳನ್ನು ನೀರಲ್ಲಿ ದಿನಗಟ್ಟಲೆ ನೆನೆಸಿ ನಾರು ತೆಗೆಯುತ್ತಿದ್ದರಂತೆ. ಈಗ ಈ ಕೆಲಸವನ್ನು ಯಂತ್ರ ಕ್ಷಣಾರ್ಧದಲ್ಲಿ  ಮಾಡುತ್ತದೆ. ನಾರನ್ನು ಬಿಸಿಲಿನಲ್ಲಿ ಒಣಗಿಸಿ ಹಗ್ಗ ತಯಾರಿಸುತ್ತಾರಂತೆ.