Total Pageviews

Wednesday, December 18, 2013

ದೂದ್ ಸಾಗರ್....

ದೂದ್ ಸಾಗರ್ ಎಂಬ ಹೆಸರು ಕಿವಿಗೆ ಬಿದ್ದಾಗ ಇದು ಯಾವುದೋ ಸಿನೆಮಾ ಕತೆ ಅಥವಾ ಹೋಟೆಲ್ ಇರಬಹುದು ಎಂಬು ಅರ್ಥೈಸಿದರೆ ತಪ್ಪು. ಇದು ಪ್ರಕೃತಿಪ್ರೇಮಿಗಳಿಗೆ ಹಾಗೂ ವಿಭಿನ್ನ ರೀತಿಯ  ಚಾರಣವನ್ನು ಬಯಸುವವರಿಗೆ ಇಷ್ಟವಾಗುವ ತಾಣ. ನಮ್ಮ ನೆರೆಯ ಗೋವಾದಲ್ಲಿ ಹರಿಯುವ ಮಾಂಡೋವಿ ನದಿಯು ಸೃಷ್ಟಿಸಿರುವ ದೂದ್ ಸಾಗರ ಜಲಪಾತವು  ನಾಲ್ಕು ಹಂತಗಳಲ್ಲಿ ನೀರನ್ನು ಚಿಮ್ಮಿಸುತ್ತದೆ. ಹೀಗೆ ಧುಮುಕುವ ಜಲಪಾತವು  ಹಾಲಿನಂತೆ ಕಾಣಿಸುವುದರಿಂದ ದೂದ್ ಸಾಗರ್ ಎಂಬ ಅನ್ವರ್ಥ ನಾಮ ಪಡೆದುಕೊಂಡಿದೆ. ಇದು ಗೋವಾದ ಪಣಜಿಯಿಂದ 60 ಕಿ.ಮೀ ದೂರದಲ್ಲಿದೆ.    

ದೂದ್ ಸಾಗರವನ್ನು ತಲಪಲು ರೈಲ್ ಅಥವಾ ಬಸ್ ಮಾರ್ಗದಲ್ಲಿ ಪ್ರಯಾಣಿಸಬೇಕು.  ಗೋವಾದ ಪಣಜಿಯಿಂದ ಬರುವುದಾದರೆ, 'ಕೊಲ್ಲೆಮ್' ಎಂಬ ಸ್ಟೇಷನ್ ಮೂಲಕ ಬರಬೇಕು. ಕರ್ನಾಟಕದ ಕಡೆಯಿಂದ ಹೋಗುವುದಾದರೆ 'ಕಾಸಲ್ ರೋಕ್' ಸ್ಟೇಶನ್ ಮೂಲಕ್ ಹಾದು ಹೋಗಬೇಕು. ದೂದ್ ಸಾಗರ್ ನಲ್ಲಿಯೂ  ರೈಲು ಒಂದು ನಿಮಿಷ ನಿಲ್ಲುವುದಾದರೂ ಇಲ್ಲಿ ಟಿಕೆಟ್ ಕೊಡುವ ವ್ಯವಸ್ಥೆ  ಇಲ್ಲದಿರುವುದರಿಂದ ಪ್ರಯಾಣಿಕರು ಮುಂಚಿತವಾಗಿ ಟಿಕೆಟ್ ಖರೀದಿಸಬೇಕು.

ಒಕ್ಟೋಬರ್ ತಿಂಗಳಿನಲ್ಲಿ ಕೂಡ ಬಹಳಷ್ಟು ನೀರನ್ನು ಹೊಂದಿದ್ದು ಸುಂದರವಾಗಿದ್ದ ದೂದ್ ಸಾಗರವು, ಮಳೆಗಾಲದಲ್ಲಿ ಇನ್ನಷ್ಟು ನೀರು ತುಂಬಿ ರಮಣೀಯವಾಗುತ್ತದೆ. ಜಲಪಾತದ ಕೆಳಭಾಗಲ್ಲಿ ನೀರಿಗೆ ಇಳಿದು ಸಂಭ್ರಮಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ನೀರಿನ ಆಳ, ರಭಸ  ಗಮನಿಸಿಕೊಂಡು ನೀರಿಗೆ ಇಳಿಯುವುದು ಒಳ್ಳೆಯದು. ನಾಲ್ಕು ಹಂತಗಳಿರುವ ಈ ಜಲಪಾತದ ಒಟ್ಟೂ ಎತ್ತರ  310 ಮೀಟರ್   ಹಾಗೂ ಸರಾಸರಿ 30 ಮೀಟರ್   ಅಗಲವಿದ್ದು, ಇದು ಭಾರತಸಲ್ಲಿ ಐದನೆಯ ದೊಡ್ಡ ಜಲಪಾತವಾಗಿದೆ.

ಚಾರಣಕ್ಕೆ ಹಲವಾರು ದಾರಿಗಳಿವೆಯಾದರೂ 'ಕಾಸಲ್ ರೋಕ್' ನಿಂದ  ರೈಲ್ವೇ  ಟ್ರ್ಯಾಕ್ ಮೇಲೆ  14 ಕಿ.ಮೀ  ನಡೆದು ದೂದ್ ಸಾಗರ್ ತಲಪವುದು ಹೆಚ್ಚಿನವರ ಆಯ್ಕೆ. ಇದಕ್ಕೆ ಕಾರಣ, ಈ ದಾರಿಯಲ್ಲಿ ಉತ್ತಮ ನಿಸರ್ಗ ಸಿರಿಯಿದೆ ಹಾಗೂ ಕೊಂಕಣ ರೈಲ್ವೇಯ  ಸುರಂಗ  ಮಾರ್ಗದಲ್ಲಿ ನಡೆಯುವ ಅವಕಾಶ ಸಿಗುತ್ತದೆ.  ರೈಲ್ ಹಳಿ ಮೇಲೆ ನಡೆಯುಯುದು  ಅಪರಾಧ ಕೂಡ ಹೌದು. ಆದರೆ ಕೆಲವು ನಿಗದಿತ ಟ್ರ್ಯಾಕ್ ಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಪೂರ್ವಾನುಮತಿಯೊಂದಿಗೆ ನಡೆಯುವುದುದಕ್ಕೆ ಅವಕಾಶವಿದೆ.

ದೂದ್ ಸಾಗರ್ ಬಗ್ಗೆ ಪ್ರಚಲಿತವಿರುವ ದಂತಕತೆಯ ಪ್ರಕಾರ, ಹಿಂದೆ, ಇಲ್ಲಿಗೆ ಪಕ್ಕದ  ಅರಮನೆಯಲ್ಲಿ ರಾಜಕುಮಾರಿಯೊಬ್ಬಳು ವಾಸವಿದ್ದಳು. ಇಲ್ಲೊಂದು ಸುಂದರ ಸರೋವರವಿತ್ತು. ರಾಜಕುಮಾರಿಯು ಪ್ರತಿದಿನ ಸರೋವರಕ್ಕೆ ಬಂದು ಸ್ನಾನ  ಮಾಡಿದ ನಂತರ, ಚಿನ್ನದ ಹೂಜಿಯಲ್ಲಿ ತಾನು ತಂದಿದ್ದ ಸಿಹಿಹಾಲನ್ನು ಕುಡಿಯುತ್ತಿದ್ದಳಂತೆ. ಹೀಗೆ ಒಂಸು ದಿನ ಸ್ನಾನ ಮಾಡಿ ಹಾಲು ಕುಡಿಯುತ್ತಿರುವಾಗ, ಪಕ್ಕದ ಕಾಡಿನ ಮರೆಯಲ್ಲಿ, ರಾಜಕುಮಾರನೊಬ್ಬ  ತನ್ನನ್ನು ನೋಡುತ್ತಿರುವುದನ್ನು ಗಮನಿಸಿದಳಂತೆ. ಮುಜುಗರಗೊಂಡ ಆಕೆ ಹೂಜಿಯ ಹಾಲನ್ನು ಚೆಲ್ಲಿ, ಅಪಾರದರ್ಶಕತೆಯನ್ನು ಸೃಷ್ಟಿಸಿ ತನ್ನ ಗೌರವವನ್ನು ಕಾಪಾಡಿಕೊಂಡಳಂತೆ. ಹೀಗೆ ಹರಿದ ಹೂಜಿಯ ಹಾಲು 'ದೂದ್ ಸಾಗರ್' ಎಂದ ಹೆಸರು ಪಡೆಯಿತಂತೆ.























ಮೈಸೂರಿನ  ಯೂತ್ ಹಾಸ್ಟೆಲ್ ಅಸೋಸಿಯೇಶನ್, ಗಂಗೋತ್ರಿ ಘಟಕವು , ಒಕ್ಟೊಬರ್ 18 -19 ರಂದು ಆಯೊಜಿಸಿದ್ದ ಈ ಕಾರ್ಯಕ್ರಮದಲ್ಲಿ 102 ಜನ ಭಾಗವಹಿಸಿದ್ದೆವು. 2  ಬಸ್ ತುಂಬಾ ಜನ ಮೈಸೂರಿನಿಂದ  ಸುಮಾರು ಸಂಜೆ  ಘಂಟೆಗೆ ಹೊರಟೆವು. ಆಗ ತಾನೇ ದಸರಾ ಮುಗಿದಿದ್ದ ನೆನಪೋ ಎಂಬಂತೆ, ನಮ್ಮ ತಂಡದ ಕೆಲವರು, ಬಸ್ ಪ್ರಯಾಣದುದ್ದಕ್ಕು ಹಾಡು -ನೃತ್ಯ ಸಂಯೋಜನೆಯಿಂದ ಬಸ್ ನಲ್ಲಿ 'ಯುವ ದಸರಾ' ವನ್ನು  ಸೃಷ್ಟಿಸಿದ್ದರು.ನಾವೇನು ಕಡಿಮೆ ಎಂಬಂತೆ ಹಿರಿಯ ಯೂಥ್ ಗಳು ಸಾಥ್ ಕೊಟ್ಟಿದ್ದರು.

ನಮ್ಮ ಆಯೋಜಕರ ಆಯ್ಕೆ ಕಾಸಲ್ ರೋಕ್ ಮೂಲಕ ಆಅಗಿತ್ತು. ಅಲ್ಲಿನ ಅತಿಥಿ ಗೃಹವನ್ನು ಮುಂಚಿತವಾಗಿ ಕಾದಿರಿಸಿದ್ದುದು ನಮಗೆ  ಫ್ರೆಶ್ ಅಪ್ ಆಗಲು ಅನುಕೂಲವಾಯಿತು. ಊಟ-ತೀಂಡಿಯ ಜವಾಬ್ದಾರಿ ಹೊತ್ತಿದ್ದ ಶ್ರೀ ಜಿ.ಡಿ. ಸುರೇಶ್ ಅವರ ನೇತೃತ್ವದಲ್ಲಿ, ಬಹಳ ಅಚ್ಚುಕಟ್ಟಾಗಿ, ರುಚಿ-ರುಚಿ, ಬಿಸಿ-ಬಿಸಿ ಊಟ ತಿಂಡಿ ನಮ್ಮೆದುರೇ ತಯಾರಾಗುತ್ತಿತ್ತು. ತಮ್ಮ ವಾಹನದಲ್ಲಿ ಅಡುಗೆಯ ಪರಿಕರಗಳನ್ನೂ ಜೋಡಿಸಿಕೊಂಡು, ಆಯಾಯ ಸ್ಥಳದಲ್ಲಿ ಇರುವ ಅನುಕೂಲತೆಗಳನ್ನು ಬಳಸಿಕೊಂಡು ನಳಪಾಕ ಸಿದ್ಧಪಡಿಸುತ್ತಿದ್ದರು.

ಹಸಿರು ಕಾಡಿನ  ಮಧ್ಯೆ ಹಾದು ಹೋಗಿರುವ ಈ ರೈಲ್ ಮಾರ್ಗದಲ್ಲಿ ಹಳಿಯುದ್ದಕ್ಕೂ ಹಲವಾರು ಸುರಂಗಗಳು ಎದುರಾಗುತ್ತವೆ. ರೈಲ್ ಹಳಿ ಮೇಲೆ ನಡೆಯುವುದು ಎಷ್ಟು ಕಷ್ಟ ಎಂದು ಕಿ.ಮಿ. ನಡೆದಾಗ ಅರ್ಥವಾಯಿತು. ಜಲ್ಲಿ ಕಲ್ಲುಗಳ ಮೇಲೆ   ಕಾಲು ಉಳುಕದಂತೆ ಜಾಗರೂಕತೆ ವಹಿಸಬೇಕು. ಸಮಾನ ಅಂತರದಲ್ಲಿರುವ ರೈಲ್ ಪಟ್ಟಿಯ ಮೇಲೆ ನಡೆಯುವಾಗ ಒಂದು ಲಯ/ಗತಿ  ಬೇಕು. ಜತೆಗೆ ರೈಲ್ ಪಟ್ಟಿಯಲ್ಲಿ ಇರುವ ಕೊಳಕು ಪಾದಕ್ಕೆ ಹತ್ತದಂತೆ ಗಮನ ಹರಿಸುತ್ತಲೇ ಇರಬೇಕು!



ತಂಡದ ಕೆಲವರು ಉತ್ಸಾಹದಿಂದ ನಡೆದರು, ಇನ್ನು ಕೆಲವರು ಆರಂಭ ಶೂರತ್ವ ಪ್ರದರ್ಶಿಸಿ ಆಮೇಲೆ ನಿಧಾನ ಗತಿಗೆ ಶರಣಾದರು. ಟ್ರೈನ್ ಬರುವ ಸಂಕೇತ ಸಿಕ್ಕಿದಾಗ ಸುರಂಗ ಮಾರ್ಗದಲ್ಲಿ ನಡೆಯಬೇಡಿರೆಂದು ನಮಗೆ ಆಯೋಜಕರು ಮುನ್ನೆಚ್ಚರಿಕೆ ಕೊಟ್ಟಿದ್ದರು. ಯಾಕೆಂದರೆ, ಬೋಗಿಗಳು ಸುರಂಗ ಮಾರ್ಗದಲ್ಲಿ ಭಡಭಡನೆ ಹಾದುಹೋಗುವಾಗ  ಉಂಟಾಗುವ ಶಬ್ದಕ್ಕೆ ನಮ್ಮ ಕಿವಿತಮ್ಮಟೆ ಕಿತ್ತು ಹೋಗುವಂತಾಗುತ್ತದೆ! 



ದಾರಿಯಲ್ಲಿ ಅಲ್ಲಲ್ಲಿ ಸಣ್ಣ-ಪುಟ್ಟ ನೀರಿನ ಝರಿಗಳು ಕಾಣ ಸಿಕ್ಕಿದುವು. ಅದೆಷ್ಟು ಬಾರಿ ನಮ್ಮ ಬಾಟಲಿಗೆ ನೀರು ತುಂಬಿಸಿಕೊಂಡೆವೋ ಗೊತ್ತಿಲ್ಲ, ಸಿಹಿನೀರು ಕುಡಿದಷ್ಟು ಸಾಲದು ಎನಿಸಿತ್ತು. ದಾರಿಯುದ್ದಕ್ಕೂ  ಸೌತೆಕಾಯಿ ತಿಂದೆವು, ಫೊಟೊ ಕ್ಲಿಕ್ಕಿಸಿದೆವು, ಬಂದು-ಹೋಗುತ್ತಿದ್ದ ಟ್ರೈನ್ ಗಳ ಬೋಗಿಗಳನ್ನು ಎಣಿಸಿದೆವು,    ಕೀಟಲೆ ಮಾತುಗಳು, ಅಣಕು ಹಾಡುಗಳು.....ಇತ್ಯಾದಿಗಳಿಂದ ಸಂಪನ್ನಗೊಂಡ ನಮ್ಮ ತಂಡ ದೂದ್ ಸಾಗರ್ ತಲಪಿದಾಗ ಸುಮಾರು 3 ಘಂಟೆ ಆಗಿತ್ತು. ಮಧ್ಯಾಹ್ನದ ಊಟಕ್ಕೆಂದು ಕೊಟ್ಟಿದ್ದ ಚಿತ್ರಾನ್ನ, ಸಿಹಿ ಸವಿದೆವು. ಊಟದ ನಂತರ ಕೆಲವರು ಜಲಪಾತದ ನೀರಿಗೆ  ಇಳಿದರು. ಹಿಂತಿರುಗಿ  ಬರಲು ಟ್ರೈನ್ ನಿಗದಿತ ಅವಧಿಗೆ ಬಾರದೆ ಇದ್ದುದರಿಂದ ನಾವು ದೂದ್ ಸಾಗರ್ ರೈಲ್ವೇ ಸ್ಟೇಶನ್ ನಲ್ಲಿ ಒಂದು ತಾಸು ಕಾದೆವು. ಕೊನೆಗೂ  ಘಂಟೆಗೆ ಟ್ರೈನ್ ಬಂತು. ಎಲ್ಲರೂ ಅದರಲ್ಲಿ ಪ್ರಯಾಣಿಸಿ  ಕಾಸಲ್ ರೋಕ್ ತಲಪಿದೆವು. ರಾತ್ರಿಯ ಊಟಕ್ಕೆ ಅನ್ನ, ಸಾಂಬಾರ್, ತಿಳಿಸಾರು, ಸಿಹಿ ಇತ್ತು. ಈಗ  ಎಲ್ಲರಿಗೂ ಸುಸ್ತಾಗಿತ್ತು, ಆದರೆ ಚಾರಣ ಪೂರೈಸಿದ ತೃಪ್ತಿ ಇತ್ತು. ಹೀಗೆ ನಮ್ಮ ದೂದ್ ಸಾಗರ್ ಚಾರಣ ಕೊನೆಗೊಂಡು ನಮ್ಮ ಮುಂದಿನ  ಗಮ್ಯ ಸ್ಥಾನವಾಗಿದ್ದ  ಜೋಗ  ಜಲಪಾತದೆಡೆಗೆ ಪ್ರಯಾಣ ಮುಂದುವರಿಯಿತು.


ವಿಭಿನ್ನ ಹಿನ್ನೆಲೆಯ ಆದರೆ ಸಮಾನಾಸಕ್ತಿಯುಳ್ಳ ಗುಂಪನ್ನು ಒಟ್ಟುಗೂಡಿಸಿ, ಇನ್ನೊಂದು ರಾಜ್ಯದಲ್ಲಿ ಚಾರಣ ಕಾರ್ಯಕ್ರಮಕ್ಕೆ ಕರೆದೊಯ್ದು, ಎಲ್ಲರ ಊಟ-ತಿಂಡಿ-ಯೊಗಕ್ಷೇಮದ  ಹೊಣೆ ಹೊರುವುದು ಸುಲಭದ ಕೆಲಸವಲ್ಲ. ಈ ಹೊಣೆಗಾರಿಕೆಯನ್ನು ಯಶಸ್ವಿಯಾಗಿ  ನಿಭಾಯಿಸಿದ ಶ್ರೀ. ಜಿ.ಡಿ ಸುರೇಶ್ ಹಾಗು ಶ್ರೀಮತಿ ಗೋಪಿ ಅವರಿಗೆ ಅನಂತ ವಂದನೆಗಳು. 

Sunday, December 8, 2013

ಇದು ಕಪಿಚೇಷ್ಟೆ ಅಲ್ಲ..





.










ಇದು ಕಪಿಚೇಷ್ಟೆ ಖಂಡಿತಾ ಅಲ್ಲ... ಬಹಳ ಗಂಭೀರ ವಿಚಾರ. 
ವನ್ಯಜೀವಿಗಳಿಗೆ ಆಶ್ರಯತಾಣವಾಗಿರುವ ಬಂಡೀಪುರ ಅರಣ್ಯವ್ಯಾಪ್ತಿಯಲ್ಲಿ, ನಗರ ಪ್ರದೇಶದಿಂದ ಬಂದು,ಅಲ್ಲಿನ ಕಸ, ಪ್ಲಾಸ್ಟಿಕ್ ಇತ್ಯಾದಿ ತಂದು ಹಾಕಿ ಪರಿಸರವನ್ನೂ, ತಮ್ಮ ಅರೋಗ್ಯವನ್ನೂ ಹಾಳುಗೆಡವಬೇಡಿರೆಂದು ಕಳಕಳಿಯ ವಿನಂತಿ..




Friday, December 6, 2013

ಸವಿರುಚಿ : ಇಡ್ಲಿ ಹಿಟ್ಟಿನ ಪಕೋಡ

ದಕ್ಷಿಣ ಭಾರತದಲ್ಲಿ ಬೆಳಗ್ಗಿನ  ಉಪಾಹಾರವಾದ  'ಇಡ್ಲಿ'ಯನ್ನು  ಬಹುಜನರ ಮೆಚ್ಚಿನ ತಿಂಡಿ. ಇಡ್ಲಿ ತಯಾರಿಸಿ ಮಿಕ್ಕ ಹಿಟ್ಟಿನಿಂದ ರುಚಿಕಟ್ಟಾದ  ಸ್ನ್ಕಾಕ್ಸ್ ತಯಾರಿಸಿದರೆ, ಸಾಯಂಕಾಲದ ತಿಂಡಿಯೂ ಆಗುತ್ತದೆ, ರುಚಿಯ ಏಕತಾನತೆಯೂ ತಪ್ಪುತ್ತದೆ.

ಇಡ್ಲಿ ಹಿಟ್ಟನ್ನು ಗರಿಗರಿ ಪಕೋಡವನ್ನಾಗಿಸುವ ಬಗೆಯನ್ನು, ಶ್ರೀಮತಿ ಸಾವಿತ್ರಿ ಎಸ ಭಟ್ , ಹೇಳಿ ಕೊಟ್ಟಿದ್ದು ಹೀಗೆ:

ತಿನಿಸು  : ಇಡ್ಲಿ ಹಿಟ್ಟಿನ ಪಕೋಡ     


ಇವೆಲ್ಲಾ  ಬೇಕು: 

  • ಇಡ್ಲಿ ಹಿಟ್ಟು - ಕಪ್
  • ಮೈದಾ ಹಿಟ್ಟು - ½  ಕಪ್
  • ಸಣ್ಣ ರವೆ -  ¼ ಕಪ್
  • ಹೆಚ್ಚಿದ ಈರುಳ್ಳಿ - ½  ಕಪ್
  • ಹೆಚ್ಚಿದ ಕರಿಬೇವಿನ ಸೊಪ್ಪು  - ಸ್ವಲ್ಪ
  • ಹಸಿರು ಮೆಣಸಿನಕಾಯಿ ಅಥವಾ ಖಾರದ ಪುಡಿ - ಸ್ವಲ್ಪ
  • ಅರಸಿನ  ಹುಡಿ -  ಚಿಟಿಕೆ 
  • ಅಡುಗೆ ಸೋಡಾ - ಚಿಟಿಕೆ
  • ರುಚಿಗೆ ತಕ್ಕಷ್ಟು  ಉಪ್ಪು 
  • ಕರಿಯಲು ಎಣ್ಣೆ

ಹೀಗೆ ಮಾಡಿ ನೋಡಿ :


1. ಎಣ್ಣೆಯನ್ನು ಬಿಟ್ಟು, ಮಿಕ್ಕ ಎಲ್ಲಾ  ಸಾಮಾನುಗಳನ್ನು ಒಟ್ಟಾಗಿ  ಕಲಸಿ ಇಟ್ಟುಕೊಳ್ಳಿ.
2. ಒಂದು ಬಾಣಲಿಯಲ್ಲಿ  ಎಣ್ಣೆಯನ್ನು ಕಾಯಲು ಇಡಿ.
3. ಎಣ್ಣೆ ಕಾದ ಮೇಲೆ,  ಕಲಸಿಟ್ಟ ಹಿಟ್ಟನ್ನು ಚಿಕ್ಕ ಚಿಕ್ಕ  ಉಂಡೆಯಂತೆ ಹಾಕಿ ಕರಿಯಿರಿ.
4. ಪಕೋಡ ಗರಿಗರಿಯಾಗಿ ಹೊಂಬಣ್ಣಕ್ಕೆ ತಿರುಗಿದಾಗ ಎಣ್ಣೆಯಿಂದ ತೆಗೆಯಿರಿ.

ಇಡ್ಲಿ ಹಿಟ್ಟಿನ ಪಕೋಡ ಸಿದ್ಧ .  ಟೊಮ್ಯಾಟೋ ಸಾಸ್ ನೊಂದಿಗೆ  ಬಲು ರುಚಿ.



Sunday, December 1, 2013

ಸವಿರುಚಿ : ವೆಜ್ ಫೋಲ್ಡರ್

ಬಹುಶ: ಅಡಿಗೆಮನೆಯಲ್ಲಿ ನಡೆಯುವಷ್ಟು  ಸಂಶೋಧನಾ ಕಾರ್ಯ ಬೇರೆಲ್ಲೂ ನಡೆಯುವುದಿಲ್ಲ ಎಂದು ನನ್ನ ಭಾವನೆ. ಹಾಗಾಗಿ ವಿಭಿನ್ನ ರುಚಿಯ ತಿನಿಸುಗಳು ಪ್ರಾದೇಶಿಕತೆಯನ್ನು ಮೈಗೂಡಿಸಿಕೊಂಡು ಉಣ್ಣುವವರ ಜಿಹ್ವಾಚಾಪಲ್ಯ ತಣಿಸುತ್ತವೆ ಹಾಗೂ ಆರೋಗ್ಯವನ್ನು ವರ್ಧಿಸುತ್ತವೆ.

ಪುತ್ತೂರಿನ ಶ್ರೀಮತಿ ಸಾವಿತ್ರಿ ಎಸ್ ಭಟ್, ಅವರು ಕಳುಹಿಸಿದ ಒಂದು ಸವಿರುಚಿಯ ವಿವರ ಹೀಗಿದೆ:

ತಿನಿಸು         :  ವೆಜ್ ಫೋಲ್ಡರ್

ಇವೆಲ್ಲಾ ಬೇಕು :
                  ಗೋಧಿ ಹಿಟ್ಟು - 2 ಕಪ್
                  ಸಣ್ಣ ರವೆ - 1 ಕಪ್
                  ಸಣ್ಣಗೆ ಹೆಚ್ಚಿದ ತರಕಾರಿಗಳು - 2 ಕಪ್(ಬೀನ್ಸ್,ಕ್ಯಾರೆಟ್, ಬೀಟ್ ರೂಟ್, ಕ್ಯಾಬೇಜ್)
                  ಕೊತ್ತಂಬರಿ ಸೊಪ್ಪು - 1 ಕಪ್
                  ಬೆಳ್ಳುಳ್ಳಿ ಎಸಳು - 2
                  ಹಸಿರುಮೆಣಸಿನ ಕಾಯಿ - 2
                  ಅಡುಗೆ ಎಣ್ಣೆ  - 4ಚಮಚ
                  ತುಪ್ಪ- 8 ಚಮಚ
                  ಉಪ್ಪು - ರುಚಿಗೆ ತಕ್ಕಷ್ಟು

ಹೀಗೆ ಮಾಡಿ ನೋಡಿ :

1. ಗೋಧಿಹಿಟ್ಟು ಮತ್ತು ಸಣ್ಣ ರವೆಯನ್ನು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.




2. ಹೆಚ್ಚಿದ ತರಕಾರಿಗಳನ್ನು, ಉಪ್ಪು ಹಾಕಿ, ಸ್ವಲ್ಪ ಎಣ್ಣೆಯೊಂದಿಗೆ ಹುರಿಯಿರಿ.
3. ಕೊತ್ತಂಬರಿ ಸೊಪ್ಪು, ಹಸಿರುಮೆಣಸಿನಕಾಯಿ  ಮತ್ತು ಬೆಳ್ಳುಳ್ಳಿ ಯನ್ನು, ಮಿಕ್ಸಿಗೆ  ಹಾಕಿ ರುಬ್ಬಿ.
4. ರುಬ್ಬಿದ ಮಿಶ್ರಣವನ್ನು ತರಕಾರಿ ಪಲ್ಯಕ್ಕೆ ಹಾಕಿ ಚೆನ್ನಾಗಿ ಬೆರೆಸಿ.
5. ಕಲಸಿಟ್ಟ ಹಿಟ್ಟಿನಿಂದ ಸಣ್ಣ ಚಪಾತಿಗಳನ್ನು ಲಟ್ಟಿಸಿ.



6. ತಯಾರಿಸಿದ ಪಲ್ಯವನ್ನು ಚಪಾತಿ ಮಧ್ಯೆ  ಇಟ್ಟು,  ಚಿತ್ರದಲ್ಲಿ ತೋರಿಸಿದಂತೆ ೪ ಮೂಲೆಯಲ್ಲೂ ಮಡಚಿ.





7. ಮಡಚಿದ ಚಪಾತಿಯನ್ನು, ತವಾದಲ್ಲಿ, ತುಪ್ಪ ಹಾಕಿ  ಬೇಯಿಸಿ.


ರುಚಿಯಾದ ವೆಜ್ ಫೋಲ್ಡರ್. ತಿನ್ನಲು ಸಿದ್ಧ. ಇದನ್ನು ಚಟ್ನಿಯೊಂದಿಗೆ ಅಥವಾ ಗಟ್ಟಿ ಮೊಸರಿನೊಂದಿಗೆ ಸವಿಯಬಹುದು. ಬೆಳಗಿನ  ತಿಂಡಿಗೂ ಸೈ, ಮಕ್ಕಳ ಲಂಚ್ ಬಾಕ್ಸ್ ಗೂ ಚೆನ್ನಾಗಿರುತ್ತದೆ.




Sunday, November 10, 2013

ಕುಕ್ಕರಹಳ್ಳಿ ಕೆರೆಗೆ ಒಂದು ಸುತ್ತು....

ಮೈಸೂರಿನ ಮಾನಸಗಂಗೋತ್ರಿಯ ಆಂಚಿನಲ್ಲಿರುವ ಕುಕ್ಕರಹಳ್ಳಿ ಕೆರೆಯು ಬೆಳಗ್ಗಿನ ವಾಯುವಿಹಾರಕ್ಕೆ ಬಹಳ ತಕ್ಕುದಾದ ತಾಣ. ಸುಮಾರು ೬೨ ಎಕ್ರೆಯಷ್ಟು ವಿಸ್ತಾರದಲ್ಲಿ ಹರಡಿರುವ ಈ ಕೆರೆಯ ಏರಿ ಮೇಲೆ ನಿಧಾನವಾಗಿ ನಡೆಯುತ್ತಾ  ಒಂದು ಸುತ್ತು ಹಾಕಲು ೪೫ ನಿಮಿಷ ಬೇಕು. ಕೆರೆಗೆ ಒಂದು ಸುತ್ತು ಹಾಕುವಷ್ಟರಲ್ಲಿ ೩.೨ ಕಿ.ಮಿ. ದೂರ ಕ್ರಮಿಸಿರುತ್ತೇವೆ.

ಮರಗಳ ನೆರಳಿನಲ್ಲಿ, ಅಲ್ಲಲ್ಲಿ ಕಾಣಸಿಗುವ ವಿವಿಧ ಪಕ್ಷಿಗಳನ್ನು ವೀಕ್ಷಿಸುತ್ತಾ ನಡೆಯುವ ಅನುಭವ ಬಹಳ ಚೇತೋಹಾರಿ.














ಕೆರೆಯ ಮಧ್ಯದಲಿರುವ ಪುಟ್ಟ ದ್ವೀಪದಲ್ಲಿ ಕೊಕ್ಕರೆಗಳು ಸ್ವಛ್ಚಂದವಾಗಿ ಹಾರಾಡುತ್ತಿರುತ್ತವೆ. 


Friday, November 1, 2013

ಥ್ಯಾಂಕ್ಯೂ ಗ್ಯಾಂಗ್ ಮೆನ್!

ಇದುವರೆಗೆ ಹಲವು ಬಾರಿ ರೈಲ್ ನಲ್ಲಿ ಪ್ರಯಾಣಿಸಿದ್ದೇನೆ. ಆದರೆ ಎಂದೂ ರೈಲ್ ಹಳಿ ಮೇಲೆ ನಡೆದಿದ್ದಿಲ್ಲ. ರೈಲ್ ಹಳಿ ಮೇಲೆ ನಡೆಯುವುದು  ಅಪರಾಧ ಕೂಡ ಹೌದು. ಆದರೆ ಕೆಲವು ನಿಗದಿತ ಟ್ರ್ಯಾಕ್ ಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಪೂರ್ವಾನುಮತಿಯೊಂದಿಗೆ ನಡೆಯುವುದಕ್ಕೆ ಅವಕಾಶವಿದೆ. ಗೋವಾದ 'ಕಾಸಲ್ ರೋಕ್' ನಿಂದ 'ದೂಧ್ ಸಾಗರ್'  ವರೆಗಿನ ೧೪ ಕಿ. ಮಿ ದೂರದ ರೈಲ್ ವೇ ಟ್ರ್ಯಾಕ್ ಇಂತಹ ಚಾರಣಕ್ಕೆ ಅವಕಾಶ ಒದಗಿಸುವ ತಾಣ.

ದೂಧ್ ಸಾಗರ್ ನಲ್ಲಿ ಮಾಂಡೋವಿ ನದಿಯು ಸೃಷ್ಟಿಸಿರುವ ಸೊಗಸಾದ ಜಲಪಾತವಿದೆ. ಇದನ್ನು ವೀಕ್ಷಿಸಲು ಹಲವಾರು ಪ್ರವಾಸಿಗರು ಈ ರೈಲ್ ಮಾರ್ಗದಲ್ಲಿ ಬರುತ್ತಾರೆ.

ಹಸಿರು ಕಾಡಿನ  ಮಧ್ಯೆ ಹಾದು ಹೋಗಿರುವ ಈ ರೈಲ್ ಮಾರ್ಗದಲ್ಲಿ ಹಳಿಯುದ್ದಕ್ಕೂ ಹಲವಾರು ಸುರಂಗಗಳು ಎದುರಾಗುತ್ತವೆ. ರೈಲ್ ಹಳಿ ಮೇಲೆ ನಡೆಯುವುದು ಎಷ್ಟು ಕಷ್ಟ ಎಂದು ೧-೨ ಕಿ.ಮಿ. ನಡೆದಾಗ ಅರ್ಥವಾಯಿತು. ಜಲ್ಲಿ ಕಲ್ಲುಗಳ ಮೇಲೆ   ಕಾಲು ಉಳುಕದಂತೆ ಜಾಗರೂಕತೆ ವಹಿಸಬೇಕು. ಸಮಾನ ಅಂತರದಲ್ಲಿರುವ ರೈಲ್ ಪಟ್ಟಿಯ ಮೇಲೆ ನಡೆಯುವಾಗ ಒಂದು ಲಯ/ಗತಿ  ಬೇಕು. ಜತೆಗೆ ರೈಲ್ ಪಟ್ಟಿಯಲ್ಲಿ ಇರುವ ಕೊಳಕು ಪಾದಕ್ಕೆ ಹತ್ತದಂತೆ ಗಮನ ಹರಿಸುತ್ತಲೇ ಇರಬೇಕು!

ಹೀಗೆ ನಡೆಯುತ್ತಾ ಮುಂದೆ ಹೋದಂತೆ ಕೆಲವು  ಟ್ರೈನ್ ಗಳು ಎದುರಾದುವು.  ಹಳಿಯಲ್ಲಿ ಅಲ್ಲಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ಯಾಂಗ್ ಮೆನ್ ಕಾಣಸಿಕ್ಕಿದರು. ಕೆಲವರನ್ನು ಮಾತಿಗೆಳೆದಾಗ, ಅವರ ಕೆಲಸ ತುಂಬಾ ತ್ರಾಸದಾಯಕವಾದದ್ದು ಎಂದು ಅನಿಸಿತು. ಅವರು ಬಿಸಿಲಿರಲಿ, ಮಳೆಯಿರಲಿ, ಸಾಮಾನ್ಯವಾಗಿ ನಿರ್ಜನವಾದ ರೈಲ್ ಹಳಿಯ ಮೇಲೆ, ಭಾರವಾದ ಸುತ್ತಿಗೆಯಂತಹ ಉಪಕರಣ ಹೊತ್ತುಕೊಂಡು, ೮ ಕಿ. ಮೀ ದೂರ ಹಳಿಯನ್ನು ಪರಿಶೀಲಿಸುತ್ತಾ ನಡೆಯಬೇಕು. ಏನಾದರೂ ಲೋಪ-ದೋಷ ವಿದ್ದರೆ ತತ್ಕ್ಷಣ ಸರಿಪಡಿಸಬೇಕು.



ಚುಕ್-ಪುಕ್ ರೈಲ್ ನಲ್ಲಿ ಆರಾಮವಾಗಿ ಪ್ರಯಾಣಿಸುವ ನಮ್ಮ ಸುರಕ್ಷತೆಯ ಹಿಂದೆ  ಈ ಬಡ ಗ್ಯಾಂಗ್ ಮೆನ್ ಗಳ ಕಠಿಣ ಶ್ರಮವಿರುತ್ತದೆಯೆಂದು ಈಗ ತಾನೇ ಅರಿವಾಯಿತು. ಅವರಿಗೆಲ್ಲಾ ತುಂಬಾ ಥ್ಯಾಂಕ್ಸ್!







Friday, October 25, 2013

ಪ್ರಕೃತಿ ನಡಿಗೆ...ಸಾತ್ವಿಕ ಅಡುಗೆ....

೨೯ ಸೆಪ್ಟೆಂಬರ್ ಭಾನುವಾರದಂದು, ಮೈಸೂರಿನ ಸರಸ್ವತಿಪುರಂ ನಲ್ಲಿರುವ, ಪುಣ್ಯಕೋಟಿ ಮನೆ ಮುಂದೆ, ಯೈ.ಎಹ್.ಎ.ಐ ಘಟಕದ ಸುಮಾರು ೩೦ ಮಂದಿ, ಪ್ರಕೃತಿ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಜಮಾಯಿಸಿದ್ದೆವು. ಅವರಲ್ಲಿ ಎಂಟು ವರುಷದ ಪೋರನಿಂದ ಹಿಡಿದು ೭೦ ದಾಟಿದ ಹಿರಿಯ ಸದಸ್ಯರೂ ಇದ್ದರು. ಸುಮಾರು ೭ ಗಂಟೆಗೆ ನಮ್ಮ ತಂಡ ಹೊರಟಿತು. ದಾರಿಯಲ್ಲಿ ಇನ್ನೂ ಕೆಲವರು ಜತೆಯಾದರು. ಹೋಟೆಲ್ ಅಪೂರ್ವದಲ್ಲಿ ಬೆಳಗಿನ ಉಪಾಹಾರ ಸೇವನೆಯಾಯಿತು.

ಅಲ್ಲಿಂದ ಮುಂದುವರಿದು ಅವಧೂತ ದತ್ತ ಪೀಠ ಬಸ್ ಸ್ಟಾಪ್ ವರೆಗೆ ನಡೆದು, ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿ 'ಕೂಡನಹಳ್ಳಿ' ತಲಪಿದೆವು. ಅಲ್ಲಿ ಬಸ್ ಇಳಿದು ಪುನ: ಸುಮಾರು ೨ ಕಿ.ಮೀ ನಡೆದು, ೧೧ ಗಂಟೆಗೆ  ಶ್ರೀ ಲಕ್ಶ್ಮೀಶ ಅವರ ತೋಟ ತಲಪಿದೆವು.  ಸುತ್ತುಮುತ್ತಲೂ ತೆಂಗು, ಕಂಗು, ಪಪ್ಪಾಯ, ತಾಳೆ - ಫಲಭರಿತ ತೋಟಗಳ ಮಧ್ಯದ ಈ ದಾರಿಯಲ್ಲಿ ನಡಿಗೆ ತುಂಬಾ ಮುದ ಕೊಟ್ಟಿತು. ಅಡಿಕೆ, ತೆಂಗು ಹಾಗೂ ಹಣ್ಣಿನ ಮರಗಳನ್ನು ಹೊಂದಿರುವ ಅಚ್ಚುಕಟ್ಟಾದ ತೋಟ. ಅಲ್ಲಿ ಒಂದು ಅಚ್ಚುಕಟ್ಟಾದ ತೋಟದ ಮನೆ ಇದೆ.

                                                                


ಅಲ್ಲಿಗೆ ತಲಪಿದೊಡನೆ, ಶ್ರೀ ಸೋಮಶೇಖರ್ ಅವರ ನೇತೃತ್ವದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆದುವು. ವಯೋಭೇದ ಮರೆತು, ಎಲ್ಲರೂ ಸ್ಕಿಪ್ಪಿಂಗ್, ಬಕೆಟ್ ನೀರಿನಲ್ಲಿ ಮುಳುಗಿರುವ ಬಳೆಯ ಒಳಗೆ ಬೀಳುವಂತೆ ನಾಣ್ಯ ಹಾಕುವುದು, ಬಕೆಟ್ ಗೆ ಚೆಂಡು ಎಸೆಯುವುದು, ಬಾಯಿಯಲ್ಲಿ ಚಮಚ-ನಿಂಬೆಹಣ್ಣು ಇಟ್ಟು ಗುರಿ ತಲಪುವುದು ಇತ್ಯಾದಿ ಆಡಿದರು. ಒಳಗೆ ಅಡುಗೆಮನೆಯಲ್ಲಿ, ಮಹಿಳೆಯರ ಸಹಕಾರದಿಂದ ಎಲ್ಲರಿಗೂ  ಕಡ್ಲೆಪುರಿ, ಸೌತೆಕಾಯಿ ಹಂಚಲಾಯಿತು. ತೋಟದಿಂದ ಆಗ ತಾನೇ ಕಿತ್ತು ತಂದ ಹೇರಳೆಕಾಯಿಯ ಪಾನಕವನ್ನೂ ಸವಿದೆವು. ತೋಟದಲ್ಲಿ ಒಂದು ಸುತ್ತು ಹಾಕಿದೆವು. ಆಸಕ್ತರು ಮರವೇರಿದರು. ನಮ್ಮ ಅನುಕೂಲಕ್ಕಾಗಿ ತಮ್ಮ ಫಾರಂ ಹೌಸ್ ಅನ್ನು ನಮಗೆ ಬಿಟ್ಟುಕೊಟ್ಟು ಸರ್ವಸ್ವಾತಂತ್ಯ್ರ ಒದಗಿಸಿದ ತೋಟದ ಮಾಲೀಕರಾದ ಶ್ರೀ ಲಕ್ಷ್ಮೀಶ ಅವರಿಗೆ ಲಕ್ಷ ವಂದನೆಗಳು! 

 ಅಲ್ಲಿಂದ  ಸುಮಾರು ೧೨ ಗಂಟೆಗೆ ಹೊರಟೆವು. ಬಿಸಿಲು-ನೆರಳು, ಒಣರಸ್ತೆ-ಹಸಿರು ತೋಟಗಳ ನಡುವೆ,  ಪುಟ್ಟ ಹಳ್ಳಿಗಳನ್ನೂ ಹಾದು  ೪-೫ ಕಿ.ಮೀ  ದೂರ ನಡೆದು ಅಳಕನಹಳ್ಳಿಹುಂಡಿಯ ಸಮೀಪದ 'ಅಕ್ಷಯ ಫಾರಂ' ತಲಪಿದೆವು. ಅಷ್ಟರಲ್ಲಿ ಮಧ್ಯಾಹ್ನ  ೩ ಗಂಟೆ ಆಗಿತ್ತು. ಅಚ್ಚುಕಟ್ಟಾದ ತೆಂಗಿನ ತೋಟವದು. ಕೆಲವು ಹೂವಿನ, ಹಣ್ಣಿನ ಗಿಡಗಳನ್ನೂ  ನೆಟ್ಟಿದ್ದರು. ಅಕ್ಷಯ ಫಾರಂ ನ  ಮಾಲೀಕರಾದ ಶ್ರೀ ಸತ್ಯನಾರಾಯಣ ಹಾಗೂ  ಅವರ ಕುಟುಂಬದವರು ಅಲ್ಲಿ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಪರಸ್ಪರ ಪರಿಚಯ ಕಾರ್ಯಕ್ರಮ ದ ಬಳಿಕ ಭೂರಿ ಭೋಜನ! ನಮ್ಮ ಊಟದ ವ್ಯವಸ್ಥೆ ಮಾಡಿದ್ದ ಅತಿಥೇಯರು ಮೈಸೂರಿನಿಂದಲೇ ಅನ್ನ, ಹುಳಿ, ಸಾರು, ಸಲಾಡ್, ಸಿಹಿ ಹಾಗೂ  ಮಜ್ಜಿಗೆಯನ್ನು ಒಳಗೊಂಡಿದ್ದ ಅಡಿಗೆಯನ್ನು ತಮ್ಮ ವಾಹನದಲ್ಲಿ ತಂದಿದ್ದರು. ಅವರು ಮತ್ತು ಕುಟುಂಬದ ಸದಸ್ಯರು ಸೇರಿ ನಮಗೆಲ್ಲಾ  ಆದರದಿಂದ ಬಡಿಸಿದರು. ನಾವೆಲ್ಲ ಆಗಲೇ ಬಿಸಿಲಿನಲ್ಲಿ ನಡೆದು ಸಾಕಷ್ಟು ಬಸವಳಿದಿದ್ದೆವು.  ತೋಟದಲ್ಲಿ, ರುಚಿಕಟ್ಟಾದ ಊಟ..ವಾವ್ ವಂಡೆರ್ ಫು ಲ್!

ಊಟದ ನಂತರ ತೋಟದಲ್ಲಿ ಆರಾಮವಾಗಿ ತಿರುಗಾಡಿದವರು  ಕೆಲವರು, ಪ್ರಕೃತಿಯ ಮಡಿಲಲ್ಲಿ ನಿದ್ದೆಗೆ ಶರಣಾದವರು ಇನ್ನು ಕೆಲವರು, ಗಮಕ ಹಾಡಿ ಸಾಹಿತ್ಯ ಸವಿದವರು ಮತ್ತೂ ಕೆಲವರು, ತಮ್ಮ ಎಂದಿನ ಶೈಲಿಯ ಹರಟೆ ಹಾಸ್ಯಗಳಲ್ಲಿ ತೊಡಗಿಸಿದವರು ಇನ್ನಿತರರು.....ಹೀಗಿತ್ತು ನಮ್ಮ ನಡಾವಳಿ. ಬೆಳಗಿನ ಆಟೋಟ ಸ್ಪರ್ಧೆಗಳಲ್ಲಿ ವಿಜೀತರಾದವರಿಗೆ ಶ್ರೀ ಸೋಮಶೇಖರ್  ಅವರು ಬಹುಮಾನ ವಿತರಿಸಿದರು.

ಇದ್ದಕ್ಕಿದ್ದಂತೆ ನಮ್ಮ ಮುಂದೆ 'ಗಾರ್ಡನ್  ಫ್ರೆಶ್ ' ಎಳನೀರಿನ ರಾಶಿ ಕಂಗೊಳಿಸಿದುವು. ಪ್ರತಿಯೊಬ್ಬರಿಗೂ ಧಾರಾಳವಾಗಿ ಸಿಹಿಯಾದ ಎಳನೀರನ್ನು ಕೆತ್ತಿ ಕೊಟ್ಟರು.  ಅನ್ನದಾತ ಸುಖೀಭವ, ಅಕ್ಷಯ ಫಾರಂನ ಸಿರಿ ಅಕ್ಷಯವಾಗಲಿ ಎಂದು ನಮ್ಮೆಲ್ಲರ ಹಾರೈಕೆ!





ಆಗ ಸಂಜೆಯಾಗುತ್ತಲಿದ್ದುದರಿಂದ, ಒಲ್ಲದ ಮನಸ್ಸಿನಿಂದ ಮೈಸೂರಿನ ಕಡೆಗೆ ಹೋಗುವ ಬಸ್ ಏರಿದೆವು. ಹೀಗೆ ಪ್ರಕೃತಿ ನಡಿಗೆಯೂ ಸಾತ್ವಿಕ ಅಡುಗೆಯೂ ಮೇಳೈಸಿ  ನಮ್ಮ ಭಾನುವಾರದ  ಈ ಸರಳ ಸುಂದರ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಕಾರ್ಯಕ್ರಮವನ್ನು ಬಹಳ ಮುತುವರ್ಜಿಯಿಂದ ಆಯೋಜಿಸಿದ ಶ್ರೀ ಸೋಮಶೇಖರ್ ಹಾಗೂ ಶ್ರೀಮತಿ ಗೋಪಿ ಅವರಿಗೆ ವಂದನೆಗಳು.





Sunday, October 6, 2013

ಬಾಲ್ಯದ ಆಟವೂ...ಜಟ್ರೋಪ ಗುಳ್ಳೆಗಳೂ....

ಮೊನ್ನೆ ಭಾನುವಾರ ಒಂದು ನಿಸರ್ಗ ನಡಿಗೆಯಲ್ಲಿ ಪಾಲ್ಗೊಂಡಿದ್ದೆ. ಸುಮಾರು ೩೦ ಜನರಿದ್ದ ನಾವು  ಮೈಸೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು , ನಂಜನಗೂಡಿನ ಸಮೀಪದ ತೋಟಕ್ಕೆ ಭೇಟಿ ನೀಡಿದೆವು. ಅಲ್ಲಿ ವಿನೋದ-ವಿಹಾರ-ಊಟ  ನಡೆಸಿ ವಾಪಾಸ್ಸಾದೆವು.

ಹಸಿರು ಸಿರಿ ಹೊತ್ತಿದ್ದ ಗಿಡ-ಮರ-ತೋಟಗಳ ದಾರಿಯಲ್ಲಿ ನಡಿಗೆ ಬಹಳ ಹಿತವಾಗಿತ್ತು. ಅಲ್ಲಿನ  ತೋಟಗಳ ಬೇಲಿಗಳಲ್ಲಿ ಜಟ್ರೋಪ ( ಕಾಡಹರಳು) ಗಿಡಗಳು ಧಾರಾಳವಾಗಿ ರಾರಾಜಿಸುತಿದ್ದುವು. ಜಟ್ರೋಪ ಗಿಡದ ಬೀಜಗಳಿಂದ ಜೈವಿಕ ಡೀಸೆಲ್  ತಯಾರಿಸಬಹುದೆಂಬು ಇತ್ತೀಚೆಗೆ ಕಂಡುಕೊಂಡ ವಿಚಾರ. ಹಾಗಾಗಿ ಇದು ವಾಣಿಜ್ಯ ಬೆಳೆಯ ಸ್ವರೂಪವನ್ನೂ ಹೊಂದಿದೆ.




ನನ್ನ ಬಾಲ್ಯದ ದಿನಗಳಲ್ಲಿ ನಾವು ಶಾಲೆ ಬಿಟ್ಟು ಬರುವಾಗ, ದಾರಿಯಲ್ಲಿ ಸಿಗುತ್ತಿದ್ದ  ಜಟ್ರೋಪ ಗಿಡದ ಎಲೆಯನ್ನು ತೊಟ್ಟಿನ ಪಕ್ಕ ಮುರಿದು, ಅದರ ಮೇಣವನ್ನು ಊದಿ ಗುಳ್ಳೆಗಳನ್ನು ಸೃಷ್ಟಿಸುತ್ತಿದ್ದೆವು. ನಮ್ಮಲ್ಲಿ ಯಾರು ದೊಡ್ಡ ಗುಳ್ಳೆ ಸೃಷ್ಟಿಸುತ್ತಾರೆಂದು  ಪೈಪೋಟಿಯೂ  ನಡೆಯುತ್ತಿತ್ತು .  ಈ ಆಟಕ್ಕೆ ಸಾಬೂನು ನೀರಿನ ಅವಶ್ಯಕತೆಯಿಲ್ಲ...ಗುಳ್ಳೆಗಳನ್ನು ಸೃಷ್ಟಿಸುವ ಉಪಕರಣ ಬೇಕಿಲ್ಲ.... ಪರಿಸರ ಮಾಲಿನ್ಯವಿಲ್ಲ..... ಖರ್ಚಂತೂ ಇಲ್ಲವೇ ಇಲ್ಲ.... ಜೈ ಜಟ್ರೋಪ!




Thursday, August 29, 2013

ಕೊಳ್ಳೇಗಾಲಕ್ಕೆ ಲಗ್ಗೆ...

ಭಾನುವಾರದಂದು, ಮೈಸೂರು ನಗರ ಇನ್ನೂ ಸಕ್ಕರೆ ನಿದ್ದೆಯಲ್ಲಿರುವ ಮುಂಜಾನೆಯ ಸಮಯದಲ್ಲಿ, ಸುಮಾರು ಮಂದಿ ಸಮಾನಾಸಕ್ತರು , ಬೆನ್ನಿಗೊಂದು ಬ್ಯಾಗ್ ತಗಲಿಸಿಕೊಂದು ಬಸ್ ನಿಲ್ದಾಣದಲ್ಲಿಯೋ ರೈಲ್ವೇ ನಿಲ್ದಾಣದಲ್ಲಿಯೋ ಹಾಜರಾಗಿದ್ದರೆಂದರೆ, ಅವರು ಮೈಸೂರಿನ  ಯೈ.ಎಚ್.ಎ.ಐ. ಘಟಕದವರು ಎಂದು ಸಾಬೀತಾಗುತ್ತದೆ. ಹೀಗೆ ಜುಲೈ ೨೧ರಂದು ಬೆಳಗ್ಗೆ ೦೫೩೦ ಗಂಟೆಗೆ ಮೈಸೂರಿನ ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿ  ಸುಮಾರು ೩೦ ಮಂದಿ ಜಮಾಯಿಸಿದ್ದೆವು. ತಂಡದ ನಾಯಕರ ಸಲಹೆಯಂತೆ, ಕೊಳ್ಳೇಗಾಲಕ್ಕೆ ಹೋಗುವ ಬಸ್ ಏರಿದೆವು. ಅಂದು ಕೊಳ್ಳೇಗಾಲ ಸಮೀಪದಲ್ಲಿರುವ ಸಿದ್ದೇಶ್ವರ ಬೆಟ್ಟ, ರಂಗಪ್ಪನ ಪಾದ ಮತ್ತು ವೀರಭದ್ರ ಸ್ವಾಮಿಯ ಬೆಟ್ಟಕ್ಕೆ ಚಾರಣಗೈಯುವ ಕಾರ್ಯಕ್ರಮವಿತ್ತು.    

ಸುಮಾರು ೭.೩೦ ಗಂಟೆಗೆ ಕೊಳ್ಳೇಗಾಲ ತಲಪಿದೆವು. ಅಲ್ಲಿ ಹೋಟೆಲ್ ನಲ್ಲಿ ಬೆಳಗಿನ ಉಪಾಹಾರ ಸೇವಿಸಿದೆವು. ಚಿಕ್ಕ ವ್ಯಾನ್ ನಂತಿದ್ದ  ಮೂರು ಆಟೋ ರಿಕ್ಷಾ ಗಳಲ್ಲಿ ಕುಳಿತು ೩-೪ ಕಿ.ಮೀ ಗಳಷ್ಟು ಪ್ರಯಾಣಿಸಿ, ಹೊಂಡರಬಾಳು ಎಂಬಲ್ಲಿಗೆ ತಲಪಿದೆವು. ಅಲ್ಲಿಂದ ತುಸು ಮುಂದೆ ಸಿದ್ಧೇಶ್ವರ ಬೆಟ್ಟ ಸಿಗುತ್ತದೆ. ಈ ಬೆಟ್ಟಕ್ಕೆ ಕಾಡಾನೆಗಳು ಬರುತ್ತವೆಯೆಂದು ಸುತ್ತಲೂ ವಿದ್ಯುತ್ ಬೇಲಿ ಹಾಕಿದ್ದಾರೆ. ಆ ತಂತಿ ತಲೆಗೆ ಸೋಕದಂತೆ ಜಾಗರೂಕತೆಯಿಂದ ಬೆಟ್ಟದ ಪಾದದ ತಲಪಿದೆವು. ಇಲ್ಲಿ ಒಂದು ಪುಟ್ಟ ಕೊಳವಿದೆ. ಸುಮಾರು ೨೦೦ ಮೆಟ್ಟಿಲುಗಳು ಇದ್ದಿರಬಹುದು. ಆಮೇಲೆ ಸ್ವಲ್ಪ ಕಾಲುದಾರಿಯಲ್ಲಿ ಹೋದಾಗ ಸಿದ್ಧೇಶ್ವರ ಸ್ವಾಮಿಯ ಗುಡಿ ಸಿಗುತ್ತದೆ.





ಅಲ್ಲಿನ ಸ್ಥಳಪುರಾಣದ ಪ್ರಕಾರ ಬಿಳಿಗಿರಿ ರಂಗಸ್ವಾಮಿ ಮತ್ತು ಸಿದ್ದೇಶ್ವರ ಸ್ವಾಮಿ ಈ ಬೆಟ್ಟದಲ್ಲಿ ವಾಸವಿದ್ದರು. ರಂಗಸ್ವಾಮಿಯು ಪೂಜೆಗೆ ಬಳಸುತ್ತಿದ್ದ ಶಂಖ-ಜಾಗಟೆಗಳ ಸದ್ದಿನಿಂದ ಸಿದ್ದೇಶ್ವರ ಸ್ವಾಮಿಯ ತಪಸ್ಸಿಗೆ ತೊಂದರೆಯಾಗುತ್ತಿತ್ತು ಎಂಬ ಹಿನ್ನೆಲೆಯಲ್ಲಿ ಅವರು ಒಂದು ಒಪ್ಪಂದಕ್ಕೆ ಬಂದು, ಇಬ್ಬರೂ ಬೆಟ್ಟ ತೊರೆದು ಹೋಗುವುದೆಂದು ನಿರ್ಧರಿಸಿದರು. ಅದರಂತೆಯೇ , ರಂಗಸ್ವಾಮಿಯು ಬೆಟ್ಟವನ್ನು ತೊರೆದು ಬಿಳಿಗಿರಿ ರಂಗನ ಬೆಟ್ಟದಲ್ಲಿ ನೆಲೆಯಾದನು. ಆತನು ಹೋಗುವ ಮೊದಲು ಕಾಲೂರಿದ ಜಾಗವೇ 'ರಂಗಪ್ಪನ ಪಾದ' ಎಂಬ ಸ್ಥಳ. ಆದರೆ ಮಾತಿಗೆ ತಪ್ಪಿದ ಸಿದ್ದೇಶ್ವರನು ಪುನ: ಬೆಟ್ಟಕ್ಕೆ ಬಂದು ತಪಸ್ಸನ್ನಾಚರಿಸಿದನು. ಅಲ್ಲಿನ ಒಂದು ನಂಬಿಕೆಯ ಪ್ರಕಾರ 'ದೆವ್ವ ಹಿಡಿದವರು' ಪೂಜೆ ಸಲ್ಲಿಸಿ ಒಂದು ವಿಶಿಷ್ಟ ಕಲ್ಲಿನ ಮೂಲಕ ನುಸುಳಿದರೆ ಮುಂದೆ ದೆವ್ವ ಕಾಡುವುದಿಲ್ಲವಂತೆ.




ಸಿದ್ದೇಶ್ವರ ಬೆಟ್ಟ ಮತ್ತು  ರಂಗಪ್ಪನ ಪಾದ ನೋಡಿ ಕೆಳಗಿದೆವು.

ಊಟದ ನಂತರ ಸನಿಹದ ವೀರಭದ್ರೇಶ್ವರ ಬೆಟ್ಟ ಹತ್ತಿದೆವು. ಸ್ವಲ್ಪ ಕಾಲುದಾರಿ. ಕೆಲವು ಮೆಟ್ಟಿಲುಗಳಿದ್ದ ಈ ಬೆಟ್ಟ ಹತ್ತಲು ಸುಮಾರು ಒಂದು ಘಂಟೆ ಕಾಲ ಬೇಕಾಯಿತು.ಬೆಟ್ಟ ಹತ್ತಿಯಾದ ಮೇಲೆ ಇರುವ ದೇವಾಲಯದ ಪಕ್ಕ ಒಂದೆಡೆ ಕುಳಿತು ವಿಶ್ರಮಿಸಿದೆವು.  ಅದುವರೆಗೆ ಸುಮ್ಮನಿದ್ದ ವರುಣ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಮಳೆ ಸುರಿಸಿದ. ದೇವಾಲಯದ ಒಳಗೆ ಸೇರಿದೆವು. ದರ್ಶನ, ಪೂಜೆ, ಪ್ರಸಾದ ವಿನಿಯೋಗವಾಗುವಷ್ಟರಲ್ಲಿ ಮಳೆಯ ಅಬ್ಬರ ಕಡಿಮೆಯಾಗಿತ್ತು. ಅಲ್ಲಿನ ಅರ್ಚಕರು ಸಂಜೆ ನಾಲ್ಕು ಘಂಟೆಯ ನಂತರ ಬೆಟ್ಟದಲ್ಲಿ ಯಾರೂ ಇರಕೂಡದು, ಆನೆಗಳು ಬರುತ್ತವೆ ಎಂದು ಎಚ್ಚರಿಸಿದರು.

ಹಾಗಾಗಿ ರೈನ್ ಕೋಟ್ ಹಾಕಿಕೊಂಡು ಬೆಟ್ಟ ಇಳಿಯಲಾರಂಭಿಸಿದೆವು.  ಮಳೆ ಬಂದ ಕಾರಣ ಶೂ ಗಳಿಗೆ ಕೆಸರು ಮಣ್ಣು ಮೆತ್ತಿಕೊಂಡು ಜಾರಿ ಬೀಳುವಂತಾಗುತ್ತಿತ್ತು. ಬೆಟ್ಟ ಇಳಿದು, ಕೊಳ್ಳೇಗಾಲ ಮಾರ್ಗವಾಗಿ ಮೈಸೂರಿಗೆ ಹಿಂತಿರುಗಿವಷ್ಠರಲ್ಲಿ ಸಂಡೇ ಇಸ್ ಒವರ್!

Monday, August 26, 2013

'ನವಿಲಾಡಿ' ಎಂದರೇನು? .

ಮೈಸೂರಿನಿಂದ ೮೦ ಕಿ.ಮೀ ದೂರದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನವಿದೆ. ಇದು ಸಂರಕ್ಷಿತ ಹುಲಿಧಾಮವೂ ಹೌದು. ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ವನ್ಯಜಗತ್ತಿನ ಬಗ್ಗೆ ಅರಿವು  ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಆಸಕ್ತರು ಭಾಗವಹಿಸಬಹುದು. ಒಂದು ದಿನದ ಈ ಕಾರ್ಯಕ್ರಮದಲ್ಲಿ ಹುಲಿಯ ಬಗ್ಗೆ  ಉಪನ್ಯಾಸ, ಜೀಪಿನಲ್ಲಿ ಕಾಡೊಳಗೆ ಸುತ್ತು ಹಾಕಿ ಪ್ರಾಣಿಗಳ ವೀಕ್ಷಣೆ, ಪರಿಣಿತರ ಮಾರ್ಗದರ್ಶನದೊಂದಿಗೆ ಕಾಡೊಳಗೆ  ನಡಿಗೆ ಹಾಗೂ ವನ್ಯಜೀವಿಗಳ ಬಗ್ಗೆ ಸಾಕ್ಶ್ಯಚಿತ್ರ ವೀಕ್ಷಣೆಗೆ ಅವಕಾಶವಿರುತ್ತದೆ. ಮುಂಚಿತವಾಗಿ ಕಾಯ್ದಿರಿಸಿದರೆ  ಊಟ-ವಸತಿ ವ್ಯವಸ್ಥೆಯನ್ನೂ ಒದಗಿಸುತ್ತಾರೆ.

ಹೀಗೆ, ಮೊನ್ನೆ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಿಣಿತರ ಜತೆಗೆ ನಡೆಯುತ್ತಿರುವಾಗ ಅವರು ಪರಿಚಯಿಸಿದ 'ನವಿಲಾಡಿ' ಎಂಬ ವಿಶಿಷ್ಟ ಹಾಗೂ ಸೊಗಸಾದ ಹೆಸರು ಹೊತ್ತಿರುವ ಮರ ಇದು. ಈ ಮರದ ಸಸ್ಯಶಾಸ್ತ್ರೀಯ ಹೆಸರು  'ವಿಟೆಕ್ಸ್ ಅಲ್ಟಿಸ್ಸಿಮ'. ಮೂರು ಎಲೆಗಳು ಸೇರಿ ನವಿಲಿನ ಪಾದವನ್ನು ಹೋಲುವ ಸಂಯುಕ್ತ ಎಲೆ ಇರುವುದರಿಂದ ಈ ಪ್ರಭೇದದ ಮರಕ್ಕೆ 'ನವಿಲಾಡಿ' ಎಂಬ ಸೊಗಸಾದ ಕನ್ನಡದ ಹೆಸರಿಟ್ಟಿದ್ದಾರೆ!



                                                  








                                               


ಸುಮಾರು ಮಧ್ಯಮ ಗಾತ್ರಕ್ಕೆ ೨೫-೩೦ ಮೀ ಎತ್ತರಕ್ಕೆ ಬೆಳೆಯುವ  ಈ ಮರವು ಔಷಧೀಯ ಗುಣಗಳನ್ನು ಹೊಂದಿದೆ.   ಬಲಿತ ಮರವು ಪೀಠೋಪಕರಣಗಳ ತಯಾರಿಗೂ  ಬಳಕೆಯಾಗುತ್ತದೆ.  

Friday, August 16, 2013

ಬಂಡೆಯಾ ಕೆಳಗಿನ ಮನೆಗಳು ...


ಇತ್ತೀಚೆಗೆ  ಕೊಳ್ಳೇಗಾಲ   ಸಮೀಪದ  ಸಿದ್ಧೇಶ್ವರ ಬೆಟ್ಟಕ್ಕೆ  ಹೋಗಿದ್ದಾಗ  ಕಾಣಸಿಕ್ಕಿದ  ಬಂಡೆಯ  ಮನೆಗಳಿವು.
ಈ ಮನೆಗಳಲ್ಲಿ ಜನವಸತಿಯಿಲ್ಲ .  




                                                                       




Sunday, June 30, 2013

ಕುಂತಿಬೆಟ್ಟವೂ ' ಮದರ್ಸ್ ಡೇ' ಯೂ ..

ಅಮ್ಮಂದಿರಿಗೆ ಶುಭಾಶಯ ಹೇಳಲು ಅಮೇರಿಕಾದಲ್ಲಿ  ೧೯೦೮ರಲ್ಲಿ ಆರಂಭವಾದ 'ಮದರ್ಸ್ ಡೇ' ಎಂಬ ಪರಿಕಲ್ಪನೆ ಈಗ ವಿಶ್ವವ್ಯಾಪಿಯಾಗಿದೆ. ಆದರೆ, ಈ ಪರಿಕಲ್ಪನೆ ಮಹಾಭಾರತದ ಕಾಲದಲ್ಲೂ ಇತ್ತೆ? ಯಾಕೆಂದರೆ, ದಂತಕಥೆಯ ಪ್ರಕಾರ ಪಾಂಡವರು ತಮ್ಮ ಅಜ್ನಾತವಾಸದ ಕೆಲವು ದಿನಗಳನ್ನು  ಪಾಂಡವಪುರದಲ್ಲಿ ಕಳೆದಿದ್ದರಂತೆ. ತಮ್ಮ ತಾಯಿಯ ಮೇಲಿನ ಪ್ರೀತಿಯಿಂದ ಈ ಬೆಟ್ಟಕ್ಕೆ 'ಕುಂತಿಬೆಟ್ಟ' ವೆಂದು ಹೆಸರಿಟ್ಟರಂತೆ. ಹಾಗಾದರೆ ಮಹಾಭಾರತ ಕಾಲದಲ್ಲಿಯೇ 'ಮದರ್ಸ್ ಡೇ' ಆರಂಭಿಸಿದ ಹೆಗ್ಗಳಿಕೆ, ಪಾಂಡವರಿಗೆ ಸಲ್ಲಬೇಕಲ್ಲವೆ? 

ದಂತಕಥೆಯ ಪ್ರಕಾರ ಇದೇ ಊರಲ್ಲಿ, ಭೀಮನು ಬಕಾಸುರನನ್ನು ಸಂಹರಿಸಿದ್ದನಂತೆ. ಬ್ರಿಟಿಷರ ಎದುರು ಹೋರಾಡುತ್ತಿದ್ದ ಟಿಪ್ಪು ಸುಲ್ತಾನ್ ನಿಗೆ  ಸಹಾಯ ಮಾಡುವ ಉದ್ದೇಶದಿಂದ ಫ್ರೆಂಚ್ ಸೈನಿಕರು ಇಲ್ಲಿ ಬೀಡು ಬಿಟ್ಟಿದ್ದ ಕಾರಣ ಬ್ರಿಟಿಷರು ಕುಂತಿಬೆಟ್ಟವನ್ನು 'ಫ್ರೆಂಚ್   ರಾಕ್ಸ್' ಎಂದು ಕರೆದರು.     

ಕುಂತಿಬೆಟ್ಟಕ್ಕೆ ಹೋಗಲೆಂದು ಮೈಸೂರಿನಿಂದ ಸುಮಾರು ೨೫ ಮಂದಿ  ಬೆಳಗ್ಗೆ ಬಸ್ ನಲ್ಲಿ ಹೊರಟು ಪಾಂಡವಪುರ ತಲಪಿದೆವು. ಬಸ್ ನಿಲ್ದಾಣದಿಂದ ೪ ಕಿ.ಮಿ. ದೂರದಲ್ಲಿರುವ ಕುಂತಿಬೆಟ್ಟದ ಪಾದದ ವರೆಗೆ ಕಾಲುದಾರಿಯಲ್ಲಿ ನಡೆದೆವು. ಬೆಟ್ಟದ ಪಾದದಲ್ಲಿ ಸ್ಥಳೀಯ ಶಾಲಾ ಕ್ರೀಡಾಂಗಣ ಇದೆ.ಅಲ್ಲಿ ಬೆಳಗಿನ ಉಪಾಹಾರವಾಗಿ  ಉಪ್ಪಿಟ್ಟು-ಮೈಸೂರು ಪಾಕ್ , ಟೀ ಸೇವಿಸಿದೆವು. ಪರಸ್ಪರ ಪರಿಚಯ ಕಾರ್ಯಕ್ರಮದ ನಂತರ ಸುಮಾರು ೧೦೦ ಮೆಟ್ಟಿಲುಗಳನ್ನೇರಿದೆವು. 

ಅಲ್ಲಿ ಒಂದು ಪುಟ್ಟ ಗುಡಿಯಿದೆ, ಕೊಳವಿದೆ, ಬಂಡೆಯಲ್ಲಿ ಕೆತ್ತಿದ  ಗಣೇಶನ ಮೂರ್ತಿಯಿದೆ. ಆಮೇಲೆ ಸ್ವಲ್ಪ ಕಾಲುದಾರಿಯಲ್ಲಿ, ಹಸಿರಿನ ನಡುವೆ ನಡೆದೆವು. ಮುಂದೆ ಹೋದಂತೆ ಹಲವಾರು ಸಣ್ಣ-ದೊಡ್ಡ-ಬೃಹತ್ ಬಂಡೆಗಳದ್ದೇ ಸಾಮ್ರಾಜ್ಯ. ಎಲ್ಲರೂ ನಿಧಾನವಾಗಿ ಬೆಟ್ಟ ಹತ್ತಿದೆವು,ಕೆಲವು ಕಡೆ ಕಾಲು ಜಾರಿ ಬೀಳುವಂತಾಗುತ್ತಿತ್ತು. ಕೆಲವರು ಸಹಾಯ ಹಸ್ತವನ್ನಿತ್ತರು. ಸುಮಾರು ೧೧.೩೦ ಘಂಟೆಗೆ ಬೆಟ್ಟದ ತುದಿ ತಲಪಿದೆವು. ಇಲ್ಲಿಂದ ಕಾಣುವ ಪ್ರಾಕೃತಿಕ ದೃಶ್ಯ ಮನೋಹರ. ಬೀಸುವ  ತಂಗಾಳಿ ಆಯಾಸ ಪರಿಹರಿಸಿತ್ತು. ಬೆಟ್ಟದ ತುದಿಯಲ್ಲಿ ಒಂದು ಕಲ್ಲಿನ ಕಂಭವಿದೆ. ತಂಡದ ಕೆಲವು ಉತ್ಸಾಹಿಗಳು ಕಂಭವನ್ನೇರಿದರು. 






ಸ್ವಲ್ಪ ಹೊತ್ತು ಅಲ್ಲಿ ವಿರಮಿಸಿ ಬೆಟ್ಟ ಇಳಿಯತೊಡಗಿದೆವು . ಬೆಟ್ಟ ಹತ್ತುವುದಕ್ಕಿಂತ, ಇಳಿಯುವುದು ಸವಾಲಾಗಿತ್ತು. ಕಾರ್ಯಕ್ರಮದ ಆಯೋಜಕರ ನೇತೃತ್ವದಲ್ಲಿ 'ರಾಕ್ ಕ್ಲೈಂಬಿಂಗ್'  ನಡೆಯಿತು. ಅಲ್ಲಲ್ಲಿ ಎದುರಾದ ಸಣ್ಣ-ಪುಟ್ಟ ಬಂಡೆಗಳನ್ನು ನಿರಾಯಾಸವಾಗಿ ಹತ್ತಿ-ಇಳಿದೆವು. ಆದರೆ ಒಂದು ಕಡೆ ಸುಮಾರು ೮ ಅಡಿ ಆಳಕ್ಕೆ ನಾವು ಇಳಿಯಬೇಕಿತ್ತು. ಕೆಲವು ಜಾಣರು  ಹಗ್ಗದ ಸಹಾಯವಿಲ್ಲದೆಯೇ ಇಳಿದರು. ಇನ್ನು ಕೆಲವರು ಹಗ್ಗದ ಸಹಾಯದಿಂದ, ಆಯೋಜಕರ ಪ್ರೋತ್ಸಾಹದಿಂದ 'ಟಾಸ್ಕ್' ಪೂರೈಸಿದರು. ತಂಡದಲ್ಲಿದ್ದ ಕೆಲವು ಮಕ್ಕಳು ಈ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. 






















ಇನ್ನು ಮುಂದೆ ನಡೆದಾಗ ಎದುರಾದದ್ದು ದೊಡ್ಡದಾದ ಸ್ವಾಭಾವಿಕ ಜಾರುಬಂಡೆ. ಬಹಳಷ್ಟು ಜನ ವಯೋಬೇಧ  ಮರೆತು ಜಾರುಬಂಡಯಲ್ಲಿ ಜಾರಿದರು.  ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು. 






ಸರಳವಾಗಿ ಒಂದು ದಿನದ ಪ್ರಕೃತಿಯ ಒಡನಾಟದಲ್ಲಿ ಕಳೆಯಲು ಕುಂತಿಬೆಟ್ಟ ಉತ್ತಮ ತಾಣ. ಅಲ್ಲಿ ಊಟ -ತಿಂಡಿ-ನೀರು  ಒದಗಿಸುವ ಹೋಟೆಲ್ ಇಲ್ಲದಿರುವುದರಿಂದ ನಮ್ಮದೇ  ಏರ್ಪಾಡು  ಮಾಡಿಕೊಳ್ಳಬೇಕು ಅಥವಾ ಹತ್ತಿರದ ಪಾಂಡವಪುರಕ್ಕೆ ಹೋಗಬೇಕು. ಊಟ ಮುಗಿಸಿ, ಅಂದಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದೆವು. 

Saturday, June 22, 2013

ಶೋಲಿಂಗೂರ್


ಮೇ ೨೫ ರಂದು, ರಾತ್ರಿ ೮ ಗಂಟೆಗೆ   ವೈ.ಎಚ್.ಎ.ಐ ಗಂಗೋತ್ರಿ ಘಟಕದ ೨೩ ಮಂದಿ ಮೈಸೂರಿನ ರೈಲ್ವೇ ಸ್ಟೇಷನ್ ನಲ್ಲಿ ಸೇರಿದ್ದೆವು. ನೆರೆಯ ತಮಿಳುನಾಡಿನ ಅರಕ್ಕೋಣಂ  ಸಮೀಪದಲ್ಲಿರುವ ಶೋಲಿಂಗೂರ್ ಹಾಗೂ ತಿರುತ್ತನಿಯ ಬೆಟ್ಟಗಳಿಗೆ ಚಾರಣ ಮಾಡುವುದು ನಮ್ಮ ಗುರಿಯಾಗಿತ್ತು.

ಮರುದಿನ ಮಂಜಾನೆ, ಅರಕ್ಕೋಣಂ ತಲಪಿದೆವು. ಅಲ್ಲಿನ ರೈಲ್ವೇ ಸ್ಟೆಷನ್ ನಿಂದ ಒಂದು ವ್ಯಾನ್ ನಲ್ಲಿ ಪ್ರಯಾಣಿಸಿ, ಸ್ವಲ್ಪ ದೂರದಲ್ಲಿದ್ದ ಕಲ್ಯಾಣಮಂಟಪವೊಂದರಲ್ಲಿ ವಿಶ್ರಾಂತಿ ಪಡೆದೆವು. ಅಲ್ಲಿ ಸ್ನಾನ ಮುಗಿಸಿ,ಪಕ್ಕದ ಹೋಟೆಲ್ ಒಂದರಲ್ಲಿ ಬೆಳಗಿನ ಉಪಾಹಾರ ಸೇವಿಸಿ ಎದುರುಗಡೆ  ಕಾಣಿಸುತ್ತಿದ್ದ  ಶೋಲಿಂಗೂರ್ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆವು. ದಂತಕಥೆಯ  ಪ್ರಕಾರ, ಚೋಳ ರಾಜನಿಗೆ ಇಲ್ಲಿ  ಶಿವಲಿಂಗ ದೊರಕಿತಂತೆ. ಇದು ಮುಂದೆ ಆಡುಭಾಷೆಯಲ್ಲಿ 'ಶೋಲಿಂಗೂರ್' ಎಂದು ಕರೆಯಲ್ಪಟ್ಟಿತು. ೧೭೮೧ ರಲ್ಲಿ ಬ್ರಿಟಿಷ್ ಮತ್ತು ಹೈದರ್ ಆಲಿ ನಡುವೆ ಇಲ್ಲಿ ನಡೆದ ಯುದ್ಧ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

ಸ್ಥಳ ಪುರಾಣದ ಪ್ರಕಾರ, ವಿಶ್ವಾಮಿತ್ರರು ಈ ಸ್ಥಳದಲ್ಲಿ ವಿಷ್ಣುವನ್ನು ನೆನೆದು  ಅರ್ಧ  ಗಂಟೆಗಳ (ಕಟಿಕೈ) ಕಾಲ  ತಪಸ್ಸು ಮಾಡಿ ಬ್ರಹ್ಮರ್ಷಿ ಪದವಿ ಗಳಿಸಿದರಂತೆ. ಹಾಗಾಗಿ ಈ ಸ್ಥಳಕ್ಕೆ ಘಟಿಕಾಚಲ ( ಕಟಿಕಾಚಲಂ)ಎಂಬ ಹೆಸರೂ ಇದೆ.ಇಲ್ಲಿ ಕೇವಲ  ಅರ್ಧ ಗಂಟೆ ಕಾಲ ಕಳೆದರೆ ಜನನ-ಮರ್‍ಅಣದ ವರ್ತುಲದಿಂದ ಹೊರಬಂದು ಮೋಕ್ಷ ಲಭಿಸಿತ್ತದೆಯೆಂಬ  ನಂಬಿಕೆ. ಮಾನಸಿಕ ವಿಕಲತೆ ಉಳ್ಳವರಿಗೂ ಈ ಕ್ಷೇತ್ರದಲ್ಲಿ  ಗುಣಮುಖವಾಗುತ್ತದೆಯೆಂಬ ನಂಬಿಕೆಯೂ ಇದೆ. ರಾಜನೊಬ್ಬ ಬೇಟೆಯಾಡುತ್ತಿರುವಾಗ ಗಾಯಗೊಂಡ ಜಿಂಕೆಯು ದೈವಿಕ ಪ್ರಕಾಶ ಹೊಮ್ಮಿಸುವುದನ್ನು ಕಂಡನಂತೆ. ಇದು ಆತನು ಅಹಿಂಸಾ ಪಥವನ್ನು ಅನುಸರಿಸುವಂತೆ ಮಾರ್ಗದರ್ಶನ ಮಾಡಿತಂತೆ. ಸಾಕ್ಷಾತ್ ಆಂಜನೇಯನೇ ಜಿಂಕೆಯ ರೂಪದಲ್ಲಿ ಬಂದಿದ್ದನಂತೆ.

ಇನ್ನೊಂದು ದಂತಕಥೆಯ ಪ್ರಕಾರ, ಶ್ರೀರಾಮನು  ತನ್ನ ಅವತಾರ ಸಮಾಪ್ತಿ ಮಾಡಲೆಂದು ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ಆಂಜನೇಯನೂ ಅನುಸರಿಸಿದ್ದನಂತೆ. ಆದರೆ ಇಲ್ಲಿಗೆ ಬಂದ ಶ್ರೀರಾಮನಿಗೆ, ತಪಸ್ಸನ್ನು ಮಾಡುತ್ತಿರುವ ಸಪ್ತರ್ಷಿಗಳಿಗೆ ರಾಕ್ಷಸರು ಉಪಟಳ ಕೊಡುತ್ತಿರುವುದು  ಕಾಣಿಸಿತು. ಆತನ ಆದೇಶದಂತೆ ಆಂಜನೇಯನು ರಾಕ್ಷಸರನ್ನು ಸಂಹರಿಸಿದನು.   ಶ್ರೀರಾಮನು, ಸಪ್ತರ್ಷಿಗಳಿಗೆ ನರಸಿಂಹಾವತಾರದಲ್ಲಿ ದರ್ಶನ ಕೊಟ್ಟನು. ಪಕ್ಕದ ಬೆಟ್ಟದಲ್ಲಿ, ಆಂಜನೇಯನು ಶಂಖ-ಚಕ್ರ ಧಾರಿಯಾಗಿ ನೆಲೆ ನಿಂತನು.



ಸುಮಾರು ೧೩೦೦ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೊದಾಗ ಮುಖ್ಯ ದೇವರಾದ ಯೋಗನರಸಿಂಹನ ದರ್ಶನವಾಗುತ್ತದೆ. ಭಕ್ತರಿಗೆ ಮಳೆ-ಬಿಸಿಲಿನಿಂದಾಗಿ ತೊಂದರೆಯಾಗದಂತೆ ಮೆಟ್ಟಿಲುಗಳ ಮೇಲೆ ಮಾಡು ನಿರ್ಮಿಸಿದ್ದಾರೆ. ಮೈಸೂರಿನಿಂದ ಹೊರಡುವ ಮುನ್ನವೆ ಆಯೋಜಕರು  'ಮೆಟ್ಟಿಲುಗೊಂದರಂತೆ ಕೋತಿಗಳಿವೆ, ನೀರಿನ ಬಾಟಲ್ ಬಿಟ್ಟು ಬೇರೇನೂ ಒಯ್ಯಬೇಡಿ' ಎಂದು ನಮ್ಮನ್ನು ಎಚ್ಚರಿಸಿದ್ದರು. ಇದರ  ಪ್ರತ್ಯಕ್ಷ ಅನುಭವ ನಮಗಾಯಿತು. ಇದ್ದಕ್ಕಿಂದಂತೆ ಯಾರೋ ಭಯದಿಂದ ಕಿರುಚಿದರು, ಯಾಕೆಂದರೆ ಅವರ ಮುಡಿಯಲ್ಲಿದ್ದ  ಹೂವನ್ನು ಕೋತಿಯೊಂದು ಎಳೆದು ತಿನ್ನುತ್ತಿತ್ತು... ಭಕ್ತರೊಬ್ಬರು ದೇವರಿಗೆ ಅರ್ಪಿಸಲೆಂದು ತಂದಿದ್ದ ಹೂವು-ಹಣ್ಣು ದಾರಿ ಮಧ್ಯದಲ್ಲಿಯೇ ಆಂಜನೇಯ ಸ್ವಾಹಾ ಅಯಿತು...ಯಾರೋ ಕೈ ಜಗ್ಗಿದಂತಾಗಿ ಹಿಂದೆ ನೋಡುವಷ್ಟರಲ್ಲಿ ನೀರಿನ ಬಾಟಲಿಯೂ ಕಪಿ ಪಾಲಾಯಿತು.... ಯಾರೋ ತಂದಿದ್ದ ತುಳಸಿ ಹಾರವೂ ವಾನರ ಪಾಲಾಯಿತು ....ನೀರಿನ ಬಾಟಲಿ ಮುಚ್ಚಳವನ್ನು ತೆರೆದ ಜಾಣಕೋತಿಗೆ ಅದೇಕೋ ನೀರು  ಕುಡಿಯಲು ಇನ್ನೂ ಅಭ್ಯಾಸವಿದ್ದಂತಿರಲಿಲ್ಲ..... ಹೀಗೆಲ್ಲಾ ನಮಗೆ  ಪುಕ್ಕಟೆ ಭಯ ಮಿಶ್ರಿತ ಮನರಂಜನೆ ಲಭಿಸಿತು. 






                                                                                    

.











ವಾನರಸೈನ್ಯವನ್ನು ನಿಯಂತ್ರಿಸಲು ಬೆಟ್ಟದ ಪಾದದಲ್ಲಿ ಕೋಲು ಮಾರುವವರೂ ಇದ್ದರು. ಕೆಲವು ಭಕ್ತರು ಪೂಜೆಗಾಗಿ  ಹೂವು -ಹಣ್ಣು ತಂದು, ಅವನ್ನು ಕೋತಿಯಿಂದ ರಕ್ಷಿಸಲೆಂದು ಅನಿವಾರ್ಯವಾಗಿ ಕೋಲು ಹಿಡಿದುಕೊಂಡೇ ದೇವರ ದರ್ಶನವನ್ನೂ ಮಾಡುತ್ತಿದ್ದುದು ತಮಾಷೆಯಾಗಿ ಕಾಣಿಸುತ್ತಿತ್ತು.

ಸಾರ್ವಜನಿಕ ಸಾರಿಗೆಯ ಮೂಲಕ ನೆರೆ ರಾಜ್ಯ ಪ್ರವೇಶಿಸಿ, ಒಂದೇ ಹಗಲಿನಲ್ಲಿ  ಎರಡು ಬೆಟ್ಟಗಳನ್ನು ಹತ್ತಿ-ಇಳಿದು,ಒಟ್ಟಾರೆಯಾಗಿ ೫ ದೇವಸ್ಥಾನಗಳಿಗೆ ಭೇಟಿ ಕೊಟ್ಟ ಸಂಪನ್ನ ಕಾರ್ಯಕ್ರಮ ಇದು. 

Sunday, May 19, 2013

ಕುಮಾರ ಪರ್ವತಕ್ಕೆ ಚಾರಣ


ಎಪ್ರಿಲ್ ೧೩ ಮತ್ತು ೧೪ ರಂದು, ಮೈಸೂರಿನ ಯೂಥ್ ಹಾಸ್ಟೆಲ್ ಸಂಘಟನೆಯ  ಘಟಕದ ವತಿಯಿಂದ ಎರಡು ದಿನದ ಚಾರಣ ಕಾರ್ಯಕ್ರಮನ್ನು ಅಯೋಜಿಸಿದ್ದರು. ಮೊದಲನೆಯ ದಿನ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ  ಮಲ್ಲಳ್ಳಿ ಜಲಪಾತವನ್ನು ವೀಕ್ಷಿಸಿ, ಮರುದಿನ ಕುಮಾರ ಪರ್ವತಕ್ಕೆ ಚಾರಣ ಮಾಡುವ ಕಾರ್ಯಕ್ರಮವಿತ್ತು.      

ಎಪ್ರಿಲ್ ೧೩ರಂದು, ಸುಮಾರು ೫೫ ಜನರಿದ್ದ ನಮ್ಮ ತಂಡವು ಮೈಸೂರು ಬಿಟ್ಟಾಗ ಬೆಳಗ್ಗೆ ೭ ಗಂಟೆ ಆಗಿತ್ತು. ಇಷ್ಟು ಜನರಿದ್ದಾಗ ಬಸ್ಸಿನಲ್ಲಿ ಗಲಾಟೆ ಇರಲೇಬೇಕಲ್ಲವೇ? ಅಂತಾಕ್ಷರಿ ನಡೆಯಿತು. ಹೀಗೆ ಒಂದು ಘಂಟೆ ಪ್ರಯಾಣಿಸಿ ಹುಣಸೂರು ತಲಪಿದೆವು.

ಅಲ್ಲಿ ನಮ್ಮ ಬೆಳಗಿನ ತಿಂಡಿ ತಿಂದು, ಮಡಿಕೇರಿ ಜಿಲ್ಲೆಯ ಸೊಮವಾರಪೇಟೆ ಕಡೆಗೆ ತೆರಳಿದೆವು. ಸಾಮಾನ್ಯವಾಗಿ, ಕೊಡಗು ಜಿಲ್ಲೆಯ ಕಾಫಿ ತೋಟದ ಮಧ್ಯೆ  ತಂಪಾದ ಹವೆಯಲ್ಲಿ, ಕಾಫಿ ಹೂವಿನ ಸುವಾಸನೆ-ಸೊಬಗು ನೊಡುತ್ತ ಪ್ರಯಾಣಿಸುವುದು ಬಹಳ ಹಿತಕಾರಿಯಾಗಿರುತ್ತದೆ. ಆದರೆ ಈ ಬಾರಿ ಎಪ್ರಿಲ್ ನಲ್ಲಿ ಇಲ್ಲಿಯೂ ಸೆಕೆ ಇತ್ತು.

ಮಧ್ಯಾಹ್ನದ ಊಟವನ್ನು ಬುತ್ತಿಯಲ್ಲಿ ತುಂಬಿಸಿಕೊಂಡೆವು. ನಮ್ಮ ಬಸ್ ಇದ್ದ ರಸ್ತೆಯಿಂದ ಜಲಪಾತಕ್ಕೆ ಹೊಗಲು ೩ ಕಿ.ಮೀ. ನಡೆದು , ಸುಮಾರು ೩೦೦ ಮೆಟ್ಟಿಲು ಇಳಿಯಬೇಕು. ಮಳೆಗಾಲದಲ್ಲಿ ಇಲ್ಲಿ ಜಲಪಾತ ಭೋರ್ಗರೆಯುವುದಕ್ಕೆ ಕುರುಹಾಗಿ, ಅಲ್ಲಿನ ಕಲ್ಲು ಬಂಡೆಗಳಲ್ಲಿ  ನೀರಿನ ಚಲನೆಯ ಗುರುತು ಕಾಣಿಸಿತು. ಮಳೆಗಾಲದಲ್ಲಿ ಅಲ್ಲಿ ಆಕಸ್ಮಿಕ ಅಪಾಯಗಳು ಅಗುವುದರಿಂದ ನೀರಿಗೆ ಇಳಿಯಲು ಅವಕಾಶವಿಲ್ಲ ಎಂದು ಕೇಳಿಪಟ್ಟೆವು. ನಾವು ಹೋಗಿದ್ದಾಗ ಬಹಳ ಕಡಿಮೆ ನೀರಿತ್ತು. ಕೆಲವರು ನೀರಿಗಿಳಿದು ಸಂಭ್ರಮಿಸಿದರು. ನಾವು ಕೆಲವರು ಅತ್ತಿ ಮರದ ಕೆಳಗೆ, ಬಂಡೆಯೊಂದರ ಮೇಲೆ ಕುಳಿತು ವಿಶ್ರಮಿಸಿದೆವು.

ಅಲ್ಲಿಂದ ವಾಪಸ್ಸಾಗಿ ,ಬಸ್ ಮೂಲಕ ಸಮೀಪದ ಶಾಂತ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದೆವು. ಅಂದು ರಾತ್ರಿ ನಮಗೆ ಅಲ್ಲಿ ವಾಸ್ತವ್ಯ. ಹೆಸರಿಗೆ ತಕ್ಕಂತೆ ಶಾಂತವಾದ ಪರಿಸರ. ಈ ದೇವಸ್ಥಾನದಲ್ಲಿ. ಮುಂಚಿತವಾಗಿ ತಿಳಿಸಿದರೆ ಚಾರಣಿಗರಿಗೆ ಅನುಕೂಲವಾಗುವಂತೆ ಊಟ-ವಾಸ್ತವ್ಯಕ್ಕೆ ಸೌಕರ್ಯ ಮಾಡಿಕೊಡುತ್ತರೆ. ಬಚ್ಚಲು ಮನೆ, ಟಾಯ್ಲೆಟ್ ಸೌಲಭ್ಯವಿದೆ. ಸದಾ ಹರಿದು ಹೋಗುವ ಒರತೆ ನೀರಿಗೆ ಪೈಪ್ ಅಳವಡಿಸಿದ್ದಾರೆ. ವಿಶೇಷವೇನೆಂದರೆ ದೇವಾಲಯದ ಆವರಣದಲ್ಲಿ, ೮೫೦ ವರುಷಗಳಷ್ಟು ಹಳೆಯದಾದ ಬೃಹತ್ ಸಂಪಿಗೆ ಮರವೊಂದಿದೆ!  

ದೇವಸ್ಥಾನದಿಂದ ಸ್ವಲ್ಪ ಮೇಲೆ ಹೋದಾರೆ ದೂರದಲ್ಲಿ ಕುಮಾರ ಪರ್ವತ ಶ್ರೇಣಿ ಹಾಗೂ ಪರ್ವತ ಮತ್ತು ಮೋಡಗಳ  ಕಣ್ಣುಮುಚ್ಚಾಲೆ ಆಟ ತುಂಬಾ ಚೆನ್ನಾಗಿ ಕಾಣಿಸುತ್ತದೆ.
















ಸಂಜೆ, ದೊಡ್ಡ ಸಂಪಿಗೆ ಮರದ ಕೆಳಗೆ ಎಲ್ಲರೂ ವೃತ್ತಾಕಾರವಾಗಿ ಕುಳಿತೆವು. ಬೆಂಕಿ ಹಾಕದೆಯೇ  ಕ್ಯಾಂಪ್ ಫಯರ್ ಉದ್ಘಾಟಿಸಲಾಯಿತು. ಪರಸ್ಪರ ಕುಶಲೋಪರಿ ಮಾತು, ಪ್ರಥಮ ಬಾರಿಗೆ ವೈ.ಎಹ್.ಎ.ಐ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಅಭಿಪ್ರಾಯಗಳು, ಪ್ರತಿಭಾ ಪ್ರದರ್ಶನ ಇತ್ಯಾದಿ ಜರುಗಿದುವು.  ರಾತ್ರಿ ಊಟಕ್ಕೆ ಅನ್ನ, ತಿಳಿಸಾರು, ಸಾಂಬಾರು, ಹೆಸರು ಬೇಳೆ ಪಾಯಸ,ಮಜ್ಜಿಗೆ, ಉಪ್ಪಿನಕಾಯಿ, ಬಾಳ್ಕ ಮೆಣಸು ಇದ್ದವು. ಚೆನ್ನಾಗಿ ಉಂಡು, ನಾಳೆ ಬೆಳಗ್ಗೆ ಬೇಗನೆ ಏಳಬೇಕು ಎಂಬ ಅಲೋಚನೆಯಿಂದ ಬೇಗನೆ ವಿಶ್ರಮಿಸಿದೆವು. ಹಗಲು ಸೆಕೆಯಿದ್ದರೂ, ರಾತ್ರಿಯಾಗುತ್ತಿದ್ದಂತೆ ತಂಪಾಯಿತು.

ಮರುದಿನ ಬೆಳಗ್ಗೆ ಬೇಗನೇ ಎದ್ದು ಹೊರಡಲು ಅಣಿಯಾಗುವಷ್ಟರಲ್ಲಿ ೬ ಘಂಟೆ ಆಗಿತ್ತು. ಪರ್ವತ ಶ್ರೇಣಿಯಲ್ಲಿ ಸೂರ್ಯೋದಯ ನೋಡುತ್ತಾ  ಬಿಸಿ ಉಪ್ಪಿಟ್ಟು, ಶಾಲ್ಯಾನ್ನ, ಟಿ-ಕಾಫಿ ಸೇವನೆ ಮಾಡಿದೆವು. ಮಧ್ಯಾಹ್ನದ ಊಟಕ್ಕೆ ಬುತ್ತಿ ತುಂಬಿಸಿಕೊಂಡೆವು. ನಮ್ಮ ಮುಂದಿನ ಗುರಿ ದೂರದಲ್ಲಿ ಕಾಣಿಸುವ ಕುಮಾರ ಪರ್ವತ ಆಗಿತ್ತು.

ಆಯೋಜಕರಾದ ಗೋಪಕ್ಕ ಕಾಡಿನಲ್ಲಿ ಚಾರಣ ಮಾಡುವಾಗಿ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನೂ,  ಯಾರೂ ತಂಡವನ್ನು ಬಿಟ್ಟು ಹೋಗಿ ದಾರಿ ತಪ್ಪಬಾರದು, ದುಸ್ಸಾಹಸ ಮಾಡಬಾರದು ಇತ್ಯಾದಿ ವಿಚಾರಗಳನ್ನು ಒತ್ತಿ ಹೇಳಿದರು. ಎಲ್ಲರೂ ಶಾಂತ ಮಲ್ಲಿಕಾರ್ಜುನ ದೇವಸ್ಥಾನದಿಂದ ಹೊರಟು ೨ ಕಿ.ಮಿ. ನಡೆದು ಬೀದಳ್ಳಿ ಅರಣ್ಯ ಇಲಾಖೆಯ ಶಾಖೆಗೆ ತಲಪಿದೆವು. ಕುಮಾರ ಪರ್ವತವನ್ನು ಈ ಭಾಗದಿಂದ ಪುಷ್ಪಗಿರಿ ಎಂಬ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ಅರಣ್ಯ ಪ್ರವೇಶಿಸಲು ೨೦೦ ರೂ. ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕು. ಅಲ್ಲದೇ ಕಾಡಿನಲ್ಲಿ ಏನಾದರೂ ಅಪಾಯವಾದರೆ ನಾವೇ ಹೊಣೆಗಾರರು ಎಂಬ ಬರಹವುಳ್ಳ ಪತ್ರಕ್ಕೆ ಸಹಿ ಹಾಕಬೇಕು. ಚಾರಣಿಗರಿಗಾಗಿ ಕೆಲವು ಸೂಚನೆಗಳಿವೆ. ಸಂಜೆ ೬ ಘಂಟೆಯ ಒಳಗೆ ಹಿಂತಿರುಗಿ ಬರಬೇಕು, ಕಾಡಿನಲ್ಲಿ ಬೆಂಕಿ ಹಾಕಬಾರದು, ನಿಷೇಧಿತ  ವಸ್ತುಗಳನ್ನು ಒಯ್ಯವಂತಿಲ್ಲ....ಇತ್ಯಾದಿ. ಇಲ್ಲಿ ಕುಡಿಯಲು ಸಿಹಿನೀರು ಸಿಗುತ್ತದೆ, ಬೇಕಿದ್ದಲ್ಲಿ ತುಂಬಿಸಿಕೊಳ್ಳಬಹುದು.

ಬೀದಳ್ಳಿಯಿಂದ ಕುಮಾರ ಪರ್ವತದ ತುದಿಗೆ ೮ ಕಿ. ಮೀ. ದೂರ. ಅದು ಸಮುದ್ರ ಮಟ್ಟದಿಂದ ಸುಮಾರು ೫೭೩೦ ಅಡಿ ಎತ್ತರದಲ್ಲಿದೆ.  ೮ ಘಂಟೆಗೆ ಅರಣ್ಯಕ್ಕೆ ಇಳಿಯುತ್ತಿದ್ದಂತೆ ಒಂದು ತೊರೆ ಹಾಗೂ ಅದಕ್ಕೆ ಅಡ್ಡಲಾಗಿ ಕಟ್ಟಿದ ಹಳೆಯ  ಮುರಿದ ತೂಗುಸೇತುವೆ ಎದುರಾಯಿತು. ಮುಂದೆ ದಾರಿಯುದ್ದಕ್ಕೂ ದೈತ್ಯಾಕಾರದ ವಿವಿಧ ಪ್ರಭೇದದ ಮರಗಳು. ಯಾವುದೋ ಹಕ್ಕಿಗಳ ಇನಿದನಿ ಕೇಳಿಸಿತು. ತಂಡದ ಕೆಲವರು ಅದನ್ನು ರೆಕಾರ್ಡ್ ಮಾಡಿದರು. ಇಲ್ಲಿ ದಾರಿಯುದ್ದಕ್ಕೂ ಕಲ್ಲು-ಪೊಟರೆಗಳು. ಹಾಗಾಗಿ ಪ್ರತಿ ಹೆಜ್ಜೆಯನ್ನೂ ಗಮನಿಸಿಯೇ ಕಾಲಿಡಬೇಕು. ಇಲ್ಲವಾದರೆ ಪಾದ ಉಳುಕು ಗ್ಯಾರಂಟಿ. ಅರಣ್ಯ ಇಲಾಖೆಯು ಮರಗಳಿಗೆ ಅಲ್ಲಲ್ಲಿ ಹೆಸರಿನ ಫಲಕ ಹಾಗೂ ದಾರಿ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಹಾಗಾಗಿ ಕಾಡಿನಲ್ಲಿ  ದಾರಿ ತಪ್ಪುವ ಸಾಧ್ಯತೆ ಕಡಿಮೆ. ಧಾರಾಳವಾಗಿ ಕುಡಿಯುವ ನೀರನ್ನು ಒಯ್ಯಬೇಕು, ಯಾಕೆಂದರೆ ದಾರಿಯಲ್ಲಿ ನೀರು ಸಿಗುವ ತಾಣಗಳಿಲ್ಲ.


                                                              



                                                                         


ಹೀಗಿಯೇ ನಡೆಯುತ್ತಿದ್ದಗ ಒಂದೆಡೆ ಸುಬ್ರಮಣ್ಯ-ಗಿರಿಗದ್ದೆಯ ಕಡೆಗೆ ಹೋಗುವ ಪುಟ್ಟ ದಾರಿಸೂಚನಾ ಫಲಕ ಕಾಣಿಸಿತು. ಇನ್ನೂ ಸ್ವಲ್ಪ ಮುಂದೆ ಹೋದಾಗ ನಮ್ಮ ಎಡಭಾಗಕ್ಕೆ ಒಂದು 'ವ್ಯೂ ಪಾಯಿಂಟ್' ಸಿಗುತ್ತದೆ. ಇಲ್ಲಿಂದ ದೂರದ ಪ್ರಕೃತಿ ದೃಶ್ಯ ತುಂಬಾ ರಮಣೀಯ. ಅಕಸ್ಮಾತ್ ಕಾಲು ಜಾರಿದರೆ, ಕೆಳಗಡೆ ಪ್ರಪಾತ!. ಬಲಭಾಗದಲ್ಲಿ ಮುಂದುವರಿದೆವು. ಕೆಲವು ಕಡೆ ಎಲೆಗಳ ಮೇಲೆ ಮಳೆ ಬಿದ್ದ ಕುರುಹಾಗಿ ನೀರು ಕಾಣಿಸಿತು. ಅದ್ಯಾವುದೋ ಮಾಯೆಯಲ್ಲಿ ನನ್ನ ಶೂ ಒಳಗೂ ಒಂದು ಜಿಗಣೆ ಸೇರಿಕೊಂಡಿತ್ತು. ಮತ್ತೂ ಮುಂದೆ  ಕಡಿದಾದ ಬಂಡೆ ಮತ್ತು  ಸ್ವಲ್ಪ ಕಾಲುದಾರಿ ೩ ಬಾರಿ ಪುನರಾವರ್ತನೆಯಾದುವು. ಎಲ್ಲರೂ ಕಷ್ಟಪಟ್ಟು ಜಾಗರೂಕತೆಯಿಂದ ಹತ್ತಿದೆವು. ಕೆಲವು ಹಿರಿಯ ಮಹಿಳೆಯರಿಗೆ ಕಿರಿಯ ಚಾರಣಿಗರು ಸಹಾಯ ಹಸ್ತವನ್ನಿತ್ತು ದಾಟಿಸಿದರು. ಇದಾದ ಮೇಲೆ ತುಸು ದೂರದಲ್ಲಿಯೇ ಕಾಣುವ ಪರ್ವತದ ತುದಿಗೆ ಬಂದಾಗ ಒಂದು ಘಂಟೆ ಆಗಿತ್ತು. ನಮ್ಮಿಂದ ಮೊದಲು ಅಲ್ಲಿಗೆ ತಲಪಿದ್ದ ನಮ್ಮ ತಂಡದವರು ಆಗಲೇ ಊಟ ಮುಗಿಸಿದ್ದರು.

ಪರ್ವತದ ತುದಿಯಲ್ಲಿ ಕಲ್ಲುಗಳನ್ನು ಜೋಡಿಸಿ  ಕೋಟೆ ಕಟ್ಟಿದಂತೆ ಇರುವ ಪುಟ್ಟ ಶಿವನ ಗುಡಿಯ ರಚನೆಯಿದೆ. ಒಂದು ಕಂಚಿನ ಘಂಟೆಯೂ ಕಾಣಿಸಿತು. ಇಲ್ಲಿನ ನಿಸರ್ಗ ಸಿರಿ ಅದ್ಬುತ. ಒಂದೆಡೆ ಬೆಟ್ಟಗಳು ಮತ್ತು ಪ್ರಪಾತ. ನಮ್ಮ ಮಾತು ಬೆಟ್ಟಕ್ಕೆ ಬಡಿದು ಪ್ರತಿಧ್ವನಿಯಾಗುತ್ತಿತ್ತು. ಸಾಕಷ್ಟು ಗಲಾಟೆಯೆಬ್ಬಿಸಿ  ಪ್ರತಿಧ್ವನಿಸಿದೆವು. ಊಟ ಮಾಡಿದೆವು. ಪರ್ವತ ಹತ್ತಿ ಬಂದ ಆಯಾಸದ ಜತೆಗೆ ಹೊಟ್ಟೆಯೂ ತುಂಬಿ, ತಂಗಾಳಿ ಬೀಸಿ...ಕಣ್ಮುಚ್ಚಿದ್ದರೆ ಆರಾಮ ನಿದ್ರೆ ಬರುತ್ತಿತ್ತು. ಆದರೆ ಮೈಸೂರಿಗೆ ಹಿಂತಿರುಗಬೇಕಲ್ಲ.....೨ ಘಂಟೆಗೆ ಎಲ್ಲರೂ ಕೆಳಗಿಳಿಯಬೇಕು ಎಂಬ ಹುಕುಂ  ಬಂತು.



                                                                 










                                                                           


ಮನಸ್ಸಿಲ್ಲದ ಮನಸ್ಸಿನಿಂದ ಕೆಳಗಿಳಿಯತೊಡಗಿದೆವು. ಬಂಡೆ ಇಳಿಯುವುದು ಸ್ವಲ್ಪ ಕಷ್ಟವಾಯಿತು. ಎಲ್ಲರೂ ಜಾಗರೂಕತೆಯಿಂದ ಇಳಿದೆವು. ದಾರಿ ಸವೆಸುತ್ತಾ ಬೀದಳ್ಳಿ ಮೂಲಕವಾಗಿ ಶಾಂತ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಲಪುವಾಗ ಸಂಜೆ ೬.೩೦ ಆಗಿತ್ತು. ಈಗ ನಿಜವಾಗಿಯೂ ಎಲ್ಲರಿಗೂ ಸುಸ್ತಾಗಿತ್ತು. ಅಲ್ಲಿ ನಮಗೆ ಸಿಕ್ಕಿದ ಕಲ್ಲಂಗಡಿ ಹಣ್ಣಿನ ಜ್ಯೂಸ್ ಅಮೃತ ಸಮಾನ ಎನಿಸಿತು. ರಾತ್ರಿಯ ಊಟವನ್ನು ಅಲ್ಲಿಯೇ ಸೇವಿಸಿ ಬಸ್ ನಲ್ಲಿ ನಿದ್ರೆ ಮಾಡೋಣ ಎಂಬ ಉದ್ದೇಶದಿಂದ ಊಟ ಮಾಡಿ ದೇವಸ್ಥಾನದ ಅರ್ಚಕರಿಗೆ ಧನ್ಯವಾದ ಅರ್ಪಿಸಿ ಮೈಸೂರಿಗೆ  ಹೊರಟಾಗ ಸಂಜೆ ೭.೩೦ ಘಂಟೆ ಆಗಿತ್ತು. ಮೈಸೂರಿಗೆ  ರಾತ್ರಿ ೧೦ ಘಂಟೆಗೆ ತಲಪಿದಾಗ ಎರಡು ದಿನದ ಈ ಚಾರಣ ಕಾರ್ಯಕ್ರಮ ಮುಕ್ತಾಯವಾಯಿತು.


ಅಂತರ್ಜಾಲದಲ್ಲಿ ಕುಮಾರ ಪರ್ವತದ ಚಾರಣದ ಬಗ್ಗೆ ಹುಡುಕಿದರೆ ಹಲವಾರು ಮಾಹಿತಿ ಲಭ್ಯವಾಗುತ್ತದೆ. ಇದು ಕರ್ಣಾಟಕದಲ್ಲಿ ಅತಿ ಕಷ್ಟ ಎಂದು ಗುರುತಿಸಲ್ಪಟ್ಟ ಚಾರಣಗಳಲ್ಲಿ ಒಂದು. ಪ್ರತಿ ಬಾರಿಯ ಚಾರಣ ಕಾರ್ಯದಲ್ಲಿ ಭಾಗವಹಿಸುವ ಮೊದಲು, ಆಯೊಜಕರಿಗೆ ಫೊನಾಯಿಸಿ, ಅದು ಕಷ್ಟದ ಚಾರಣವೇ, ನನ್ನಿಂದ ಸಾಧ್ಯವೇ ಎಂದು ಕೇಳಿ, ಅವರು ಶಿಫಾರಸ್ ಮಾಡಿದರೆ ಮಾತ್ರ ನನ್ನ ಹೆಸರು ನೋಂದಾಯಿಸುವ ಪದ್ಧತಿ ನನ್ನದು. ಈ ಬಾರಿಯೂ ಗೋಪಕ್ಕ ಅವರ ಸಲಹೆ ಪಡೆದಿದ್ದೆ. "ಕಷ್ಟ ಇದೆ, ಆದರೆ ನಿಮಗೆ ಆಗುತ್ತೆ ಬಿಡಿ, ಯೋಚನೆಯಿಲ್ಲದೆ ಬನ್ನಿ" ಎಂದಿದ್ದರು. ಆದರೆ ಜಿಗಣೆ ಹಾಗೂ ಬಂಡೆಗಳ ವಿಚಾರ ಹೇಳಿರಲಿಲ್ಲ. ಈ ಮಾಹಿತಿ ಮೊದಲೇ ಗೊತ್ತಿದ್ದರೆ, ಬಹುಶ: ಈ ಚಾರಣಕ್ಕೆ ನಾನು ಹೆಸರು ನೋಂದಾಯಿಸುತ್ತಿರಲಿಲ್ಲ. ಈಗ ಹೋಗಿ ಬಂದ ಮೇಲೆ ತಂಡದ ಎಲ್ಲರಿಗೂ  'ಜೈ ಹೋ'!

Saturday, April 6, 2013

ಶಿಶಿಲೇಶ್ವರನ ಮತ್ಸ್ಯಧಾಮ....


ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದ ಸಮೀಪ ಶಿಶಿಲ ಎಂಬ ಪುಟ್ಟ ಊರಿನಲ್ಲಿ ಶಿಶಿಲೇಶ್ವರ ಸ್ವಾಮಿಯ ದೇವಾಲಯವಿದೆ.  ಇಲ್ಲಿ ಉದ್ಭವಲಿಂಗವಾದ  ಶಿವನನ್ನು  ಪೂಜಿಸುತ್ತಾರೆ. ಸುಮಾರು ೭೦೦ ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವು ಕೇರಳ ಶೈಲಿ ಹಾಗೂ ಜೈನ ಬಸದಿಯ ಮಿಶ್ರ ಛಾಯೆಯನ್ನು ಹೊಂದಿದೆ. ತುಳುನಾಡಿನ  ಸಂಸ್ಕೃತಿಯ  ಪ್ರತೀಕವಾಗಿ ನಾಗಾರಾಧನೆಗೂ ಆದ್ಯತೆಯಿದ್ದು, ದೇವಸ್ಥಾನದ ಎದುರು ನಾಗಬನವೂ ಇದೆ.


















ಹಚ್ಚ ಹಸಿರಿನ ನಡುವೆ, ಕಪಿಲಾ ನದಿ ತೀರದಲ್ಲಿ ಕಂಗೊಳಿಸುವ ಶಿಶಿಲೇಶ್ವರ  ದೇವಸ್ಥಾನವನ್ನು ತಲಪಲು ನದಿಯನ್ನು ದಾಟಬೇಕು, ಅದಕ್ಕಾಗಿ ಒಂದು ತೂಗುಸೇತುವೆ ಇದೆ. ಇಲ್ಲಿನ ಕಪಿಲಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ಮಹಶಿರ್ ತಳಿಯ ಮೀನುಗಳು ವಾಸಿಸುತ್ತಿವೆ. ಸುಮಾರು ೧ ಅಡಿ ಉದ್ದವಿರುವ ಈ ಮೀನುಗಳು ಇಲ್ಲಿನ ಮುಖ್ಯ ಆಕರ್ಷಣೆ. ಆಸಕ್ತರು ಹರಕೆಯ ರೂಪದಲ್ಲಿ ಮೀನುಗಳಿಗೆ ಆಹಾರ ಒದಗಿಸಲು ಅವಕಾಶವಿದೆ. ನಾವು ಅಲ್ಲಿಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಒಂದು ಮೂಟೆ ಪುರಿಯನ್ನು ಮೀನುಗಳಿಗೆ ಎರಚುತ್ತಿದ್ದರು. ಪುರಿಯನ್ನು  ನೀರಿಗೆ ಎರಚಿದ ತಕ್ಷಣ ಪುಟಿದೇಳುವ  ಮೀನುಗಳು ಕ್ಷಣಾರ್ಧದಲ್ಲಿ ಆಹಾರವನ್ನು ಧ್ವಂಸಗೊಳಿಸುತ್ತಿದ್ದುವು. ನಮ್ಮ ತಂಡದ ಸದಸ್ಯರೆಲ್ಲರೂ  ಮೀನುಗಳಿಗೆ ಪುರಿ ಎರಚಿ ಸಂಭ್ರಮಿಸಿದರು.











ಸಾಮಾನ್ಯವಾಗಿ ಹುಲಿಧಾಮ, ಕರಡಿಧಾಮ, ಸಿಂಹಧಾಮ, ನವಿಲುಧಾಮ ...ಇತ್ಯಾದಿಗಳನ್ನು ಕಂಡಿದ್ದೇವೆ.  ಆದರೆ ಎಲ್ಲದರೂ ಮತ್ಸ್ಯಧಾಮವಿದೆಯೇ? ಬಹುಶ: ಇಲ್ಲ, ಇದ್ದರೂ ವಿರಳ. ಆದರೆ ಶಿಶಿಲದ ಕಪಿಲಾ ನದಿಯಲ್ಲಿ, ಮತ್ಸ್ಯಧಾಮವಿದೆ ಹಾಗೂ ಇದಕ್ಕೆ ಶಿಶಿಲೇಶ್ವರನೇ  ಆಡಳಿತಾಧಿಕಾರಿ! ಭಕ್ತಾಭಿಮಾನಿಗಳ ಕಾಳಜಿಯಿಂದಾಗಿ ದೇವಸ್ಥಾನದಿಂದ  ೨ ಕಿ.ಮಿ. ಉದ್ದಕ್ಕೂ ಕಪಿಲಾ ನದಿಯಲ್ಲಿ ಮೀನುಗಾರಿಕೆಗೆ  ನಿಷೇಧವಿದೆ. ಹಾಗಾಗಿ ಈ ಮತ್ಸ್ಯ ಸಂಕುಲವು ಪ್ರಸಾದ-ನೈವೇದ್ಯ ಸೇವಿಸುತ್ತಾ ಹಾಯಾಗಿ ಬದುಕಿದೆ. ೧೯೯೬ ರಲ್ಲಿ, ಕಿಡಿಗೇಡಿಗಳ ಕೃತ್ಯದಿಂದ ಸಹಸ್ರಾರು ಮೀನುಗಳು ಏಕಕಾಲದಲ್ಲಿ ಸತ್ತು ಹೋದವಂತೆ. ಈ ಕಹಿನೆನಪಿಗಾಗಿ ಶಿಶಿಲದಲ್ಲಿ ಒಂದು ಮತ್ಸ್ಯ ಸ್ಮಾರಕವನ್ನು ಕಟ್ಟಲಾಗಿದೆ.








Tuesday, April 2, 2013

ಜಮಾಲಾಬಾದ್ ನ ಕಮಾಲ್



ಜಮಾಲಾಬಾದ್, ನರಸಿಂಹಗಡ ಹಾಗೂ ಗಡಾಯಿಕಲ್ಲು   ಎಂಬ  ವಿವಿಧ ಹೆಸರಿನಿಂದ ಕರೆಯಲ್ಪಡುವ ಅಕರ್ಷಕ ಕೋಟೆಯು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ  ೬ ಕಿ.ಮೀ. ದೂರದಲ್ಲಿದೆ.  ಸಮುದ್ರ ಮಟ್ಟದಿಂದ ೧೭೦೦ ಅಡಿ ಎತ್ತರದಲ್ಲಿರುವ ಈ ಕೋಟೆಯು, ಬೃಹದಾಕಾರದ ಗ್ರಾನೈಟ್  ಕಲ್ಲಿನ ತುದಿಯಲ್ಲಿದೆ. ಹಿಂದೆ ಇಲ್ಲಿ ಶಿಥಿಲಾವಸ್ಥೆಯಲ್ಲಿದ್ದ  ಹಳೆಯ ಕೋಟೆ ಇತ್ತಂತೆ. ೧೭೯೪ ರಲ್ಲಿ, ಟಿಪ್ಪು ಸುಲ್ತಾನನು ಇದನ್ನು  ನವೀಕರಿಸಿ ತನ್ನ ತಾಯಿಯಾದ ಜಮಾಲಬಿಯ ನೆನಪಿಗಾಗಿ 'ಜಮಾಲಾಬಾದ್' ಎಂಬ  ಹೆಸರಿಟ್ಟಂತೆ.















ಜಮಾಲಾಬಾದ್ ಕೋಟೆಯನ್ನೇರಲು ೧೮೭೬  ಮೆಟ್ಟಿಲುಗಳನ್ನೇರಬೇಕು.  ಆರಂಭದಲ್ಲಿ ಸುಲಭವಾಗಿ ಹತ್ತಬಹುದಾದರೂ ಕೊನೆಗೆ ತೀರಾ ಕಡಿದಾದ ಮೆಟ್ಟಿಲುಗಳಿವೆ. ಅಲ್ಲಿ ಹಸಿರು ಮರಗಳ ನೆರ್‍ಅಳು  ಕಡಿಮೆ. ಹಾಗಾಗಿ  ಬಿಸಿಲಿನ ಝಳವೂ  ನಮ್ಮ ಶ್ರಮ ಹೆಚ್ಚಿಸುತ್ತದೆ.

















ದಾರಿಯಲ್ಲಿ ಒಂದು ಕಡೆ ಮುರಿದು ಬಿದ್ದ ಫಿರಂಗಿ ಈಗಲೂ ಇದೆ.ಕೋಟೆಯ ಮೇಲೆ ಬಹುಶ:  ಮದ್ದುಗುಂಡುಗಳನ್ನು ಇಡುತ್ತಿದ್ದ ಕೋಣೆ ಇದೆ. ಒಂದು ಕೊಳವಿದೆ. ಆದರೆ ಅದರ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಕೋಟೆಯನ್ನು ಹತ್ತಲು ಶ್ರಮ ಹಾಗೂ ೩-೪ ತಾಸು ಸಮಯ ಬೇಕು. ಆದರು, ಕೋಟೆಯ   ಮೇಲಿನಿಂದ ಕಾಣಿಸುವ ಪ್ರಕೃತಿ ಸೌಂದರ್ಯ ಈ ಶ್ರಮವನ್ನು ಸಾರ್ಥಕಗೊಳಿಸುತ್ತದೆ.

ಬಿಸಿಲಿನ ಝಳವು ಜೋರಾಗಿ ಇದ್ದುದರಿಂದ, ನಾವು ದಾರಿಯುದ್ದಕ್ಕೂ ಕಿತ್ತಳೆ, ಸೌತೆಕಾಯಿ ತಿನ್ನುತ್ತಾ ನಿಧಾನವಾಗಿ ಚಾರಣ ಮಾಡಿದೆವು. ಬೆಳಗ್ಗೆ ಸುಮಾರು ೯ ಗಂಟೆಗೆ ಹತ್ತಲಾರಂಭಿಸಿದ್ದ್ದೆವು.  ಎಲ್ಲರೂ ಕೋಟೆಯನ್ನೇರಿ ಕೆಳಗಿಳಿಯುವಷ್ಟರಲ್ಲಿ ಮಧ್ಯಾಹ್ನ ೩ ಗಂಟೆ ಆಗಿತ್ತು .



ಜಮಾಲಾಬಾದ್ ಕೋಟೆ ಪ್ರವೇಶಿಸಲು  ಅರಣ್ಯ ಇಲಾಖೆಯ ಅನುಮತಿ ಬೇಕು. ಅಲ್ಲಿ ಟಿಕೆಟ್ ಕೌಂಟರ್ ಇದೆ. ಕೋಟೆಯ ಕೆಳಭಾಗದಲ್ಲಿ ಒಂದು ಸಣ್ಣ ಅಂಗಡಿ ಇದ್ದು, ಅದರಲ್ಲಿ ನೀರು, ಜ್ಯೂಸ್  ಇತ್ಯಾದಿ ಸಿಗುತ್ತದೆ. ಆದರೆ ಊಟ ಸಿಗುವುದಿಲ್ಲ. ಹಾಗಾಗಿ, ನಮಗೆ ಊಟ ಬೇಕಿದ್ದರೆ ನಾವೇ ಒಯ್ಯಬೇಕು ಅಥವಾ ಬೆಳ್ತಂಗಡಿ -ಉಜಿರೆಗೆ ಹೋಗಬೇಕು.