Total Pageviews

Sunday, May 31, 2015

ನಮ್ಮ ಕೈ ಬೆರಳುಗಳ ಹೆಸರೇನು?

ನಮ್ಮ ಕೈ ಬೆರಳುಗಳ ಹೆಸರೇನು? ಅಂಗುಷ್ಟ, ತರ್ಜಿನಿ, ಮಧ್ಯಮ,ಅನಾಮಿಕಾ ಮತ್ತು ಕನಿಷ್ಟ.
ಜಗತ್ತಿಗೇ ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ತಿಳಿಸಿಕೊಟ್ಟ ಖ್ಯಾತಿ ಭಾರತೀಯರದು. ಆದರೆ ಯಾಕೋ ನಮ್ಮಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ಅಸಡ್ಡೆ. ಇದಕ್ಕೆ ನಾನೇ ಉತ್ತಮ ಉದಾಹರಣೆ. ಮೈಸೂರಿಗೆ ಹಲವಾರು ವಿದೇಶೀಯರು ಯೋಗಾಭ್ಯಾಸದ ತರಬೇತಿಗೆಂದು ಸಾಕಷ್ಟು ಖರ್ಚು ಮಾಡಿ ಬರುತ್ತಾರೆ. ಯೋಗ-ಪ್ರಾಣಾಯಾಮ-ಧ್ಯಾನ-ಮುದ್ರೆ ಇತ್ಯಾದಿ ವಿದ್ಯೆ ಕಲಿತು ಮರಳುತ್ತಾರೆ. ಆದರೆ ಸ್ಥಳೀಯರಾದ ನಾವು, ಯಾರಾದರೂ ಉಚಿತ ತರಬೇತಿ ಕಾರ್ಯಕ್ರಮ ಏರ್ಪಡಿಸಿದ್ದಾಗಲೂ ಕೂಡ "ಸಮಯದ ಅಭಾವ...ಮಕ್ಕಳ ಶಾಲಾಸಮಯಕ್ಕೆ ತೊಂದರೆ...ಆಫೀಸಿನ ಕೆಲಸ" ಇತ್ಯಾದಿ ನಾನಾ ಕಾರಣಗಳಿಂದ ಯೋಗಾಭ್ಯಾಸ ಮಾಡಲು ಮನಸ್ಸು ಮಾಡುವುದಿಲ್ಲ!
ಎಲ್ಲಿಯವರೆಗೆ ನಮ್ಮ ಶರೀರದ Nuts and Bolts ಗಳು ಸುಸ್ಥಿತಿಯಲ್ಲಿರುತ್ತವೆಯೇ ಅಲ್ಲಿಯ ವರೆಗೆ ಈ ರೀತಿಯ ನೆಪಗಳು ಧಾರಾಳವಾಗಿ ಸಿಗುತ್ತವೆ. ಆದರೆ, ನಲವತ್ತು ದಾಟಿದ ಮೇಲೆ, ಚಾಳೀಸ್ ಕನ್ನಡಕ ಮೂಗಿನ ಮೇಲೆ ಕಂಗೊಳಿಸುವಾಗ, ಮಂಡಿಯ ಮೂಳೆಗಳು ಅಸಹಕಾರ ಚಳುವಳಿ ಹೂಡಲಾರಂಭಿಸಿದಾಗ ಯೋಗಾಭ್ಯಾಸದ ಕಡೆಗೆ ಅನಿವಾರ್ಯವಾಗಿ ಗಮನ ಹರಿಸುತ್ತೇವೆ. ಹಾಗಾಗಿ ಈಗ ನಾನು ಭಾಗವಹಿಸುತ್ತಿರುವ ಯೋಗ ಮತ್ತು ಪ್ರಾಣಾಯಾಮ ತರಗತಿಗಳಲ್ಲಿ ನಿವೃತ್ತಿ ಆದವರು ಮತ್ತು ಮಧ್ಯ ವಯಸ್ಸಿನವರೇ ಜಾಸ್ತಿ. ಅಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ!
ಈವತ್ತು ನಮ್ಮ ತರಬೇತುದಾರರಾದ ಯೋಗ ಶಿಕ್ಷಕರು ಕೇಳಿದ ಒಂದು ಸರಳ ಪ್ರಶ್ನೆ ಹೀಗಿತ್ತು. " ನಮ್ಮ ಕೈ ಬೆರಳುಗಳ ಹೆಸರೇನು? " ಇದ್ಯಾವ ಮಹಾಪ್ರಶ್ನೆ ಎಂದು ನಾವು "ಹೆಬ್ಬೆರಳು, ತೋರುಬೆರಳು, ಮಧ್ಯಬೆರಳು, ಉಂಗುರಬೆರಳು, ಕಿರುಬೆರಳು" ಎಂದು ಕೋರಸ್ ನಲ್ಲಿ ಉತ್ತರಿಸಿದೆವು.
ನಮ್ಮ ಯೋಗ ಶಿಕ್ಷಕರು ಇದನ್ನೊಪ್ಪದೆ, "ನಾವು ಯಾರನ್ನೋ ಉದ್ದೇಶಿಸಿ, ಹಸ್ತವನ್ನೇ ತೋರಿಸಿದಾಗ, ಎಲ್ಲಾ ಬೆರಳುಗಳು 'ತೋರು ಬೆರಳು'ಗಳಾಗುವುದಿಲ್ಲವೇ ? ಹತ್ತೂ ಬೆರಳುಗಳಿಗೆ ಉಂಗುರವನ್ನು ಹಾಕುವವರು ಇಲ್ಲವೆ?" ಎಂದಾಗ ಪೆಚ್ಚಾದೆವು. ಅಂತೂ ಈ ಪ್ರಶ್ನೆಗೆ ಸರಿಯಾದ ಉತ್ತರ "ಅಂಗುಷ್ಟ, ತರ್ಜಿನಿ, ಮಧ್ಯಮ,ಅನಾಮಿಕಾ ಮತ್ತು ಕನಿಷ್ಟ' ಬೆರಳುಗಳು.

ಅಬ್ಬಾ ಸಬ್ಬಕ್ಕಿಯ ಮಹಿಮೆ!

ಹೆಚ್ಚಾಗಿ ಪಾಯಸ ತಯಾರಿಕೆಯಲ್ಲಿ ಬಳಕೆಯಾಗುವ ಬಿಳಿ ಬಣ್ಣದ ಮುತ್ತುಗಳಂತಿರುವ ಸಾಗು ಅಥವಾ Sago  ಎಲ್ಲರಿಗೂ ಪರಿಚಿತ. ಇದನ್ನು ಸಬ್ಬಕ್ಕಿ, ಸೀಮೆ ಅಕ್ಕಿ, ಸಾಗಕ್ಕಿ, ಸಾಬುದಾನಿ, ಸಾಬಕ್ಕಿ, ಜವ್ವರಿಶಿ ಇತ್ಯಾದಿ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಬಿಳಿಬಣ್ಣದ ಕಾಳಿನಂತೆ ಇದ್ದರೂ ಬೆಂದ ಮೇಲೆ ಪಾರದರ್ಶಕವಾದ ಗೋಳಗಳಂತೆ ಕಾಣುವುದು ಸಬ್ಬಕ್ಕಿಯ ವಿಶೇಷತೆ.
ಸಬ್ಬಕ್ಕಿಯು ಸುಲಭವಾಗಿ ಜೀರ್ಣವಾಗುವ ಪಿಷ್ಟವನ್ನೊಳಗೊಂಡಿದೆ. ಹಾಗಾಗಿ ಇದನ್ನು ಅಶಕ್ತರಿಗೆ ಗಂಜಿಯ ರೂಪದಲ್ಲಿ ಆಹಾರವಾಗಿ  ಕೊಡುತ್ತಾರೆ. ಶಿಶು ಆಹಾರವಾಗಿಯೂ ಬಳಸುತ್ತಾರೆ. ಇನ್ನು  ರುಚಿ ಹೆಚ್ಚಿಸಿ ವಡೆ, ದೋಸೆ, ಉಪ್ಪಿಟ್ಟು ಮಾಡಿಯೂ ತಿನ್ನಬಹುದು. ಕೆಲವೆಡೆ ವ್ರತ-ಉಪವಾಸದ  ಆಹಾರವಾಗಿಯೂ ಸಬ್ಬಕ್ಕಿಯನ್ನು ಬಳಸುವ ಪದ್ಧತಿಯಿದೆ. ಪಾಯಸ, ಉಪ್ಪಿಟ್ಟು ಇತ್ಯಾದಿಗಳಿಗೆ  ಸಬ್ಬಕ್ಕಿಯನ್ನು ಉಪಯೋಗಿಸುವ ಮೊದಲು 4 ಗಂಟೆಗಳ ನೀರಿನಲ್ಲಿ ನೆನೆಸಿದರೆ ಉತ್ತಮ. ಹದವಾಗಿ ಬೇಯುತ್ತದೆ ಮತ್ತು ಬೇಗನೆ ತಳ ಹಿಡಿದು  ಸೀದು ಹೋಗುವುದನ್ನು ತಪ್ಪಿಸಬಹುದು.
Sabbakki
ಭಾರತದಲ್ಲಿ ಮರಗೆಣಸಿನ ಹಿಟ್ಟಿನಿಂದ ಸಬ್ಬಕ್ಕಿಯನ್ನು ತಯಾರಿಸುತ್ತಾರೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕೆಲವೆಡೆ ಮರಗೆಣಸಿನ ಬೆಳೆ ಕಂಡುಬರುತ್ತದೆಯಾದರೂ ಸಬ್ಬಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಹಿರಿಮೆ ತಮಿಳುನಾಡಿಗೆ ಸಲ್ಲುತ್ತದೆ.
Tapiocaಬಲಿತ ಮರಗೆಣಸನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ಬೇರ್ಪಡಿಸುತ್ತಾರೆ. ಶುಚಿಗೊಳಿಸಿದ ಮರಗೆಣಸಿನ ಹೋಳುಗಳನ್ನು ನೀರು ಹಾಕಿ  ರುಬ್ಬಿ ಅಥವಾ ಕ್ರಷ್ ಮಾಡಿ ಹಾಲನ್ನು ತೆಗೆಯುತ್ತಾರೆ. ಈ ಹಾಲನ್ನು ಕಡಾಯಿಯಲ್ಲಿ 4 ತಾಸು ಇರಿಸಿದಾದ ಪಿಷ್ಟದ ಅಂಶವು ಪಾತ್ರೆಯ ತಳದಲ್ಲಿ ಸಂಗ್ರಹವಾಗಿ ನೀರು ಮೇಲೆ ನಿಂತಿರುತ್ತದೆ. ನೀರನ್ನು ಬೇರ್ಪಡಿಸಿ, ಶೋಧಿಸಿದಾಗ ಮರಗೆಣಸಿನ ಹಿಟ್ಟು ಸಿಗುತ್ತದೆ. ಇದನ್ನು ತಕ್ಕುದಾದ ಸಬ್ಬಕ್ಕಿ ತಯಾರಿಕೆಯ ಯಂತ್ರದ ಮೂಲಕ ಹಾಯಿಸಿ ಕಾಳುಗಳನ್ನಾಗಿ ಮಾಡಿ ಒಣಗಿಸಿದಾಗ ‘ಸಬ್ಬಕ್ಕಿ’ ಸಿದ್ಧವಾಗುತ್ತದೆ.
ಕೆಲವು ಪೌರ್ವಾತ್ಯ ದೇಶಗಳಲ್ಲಿ, ತಾಳೆಯ ವರ್ಗಕ್ಕೆ ಸೆರಿದ Metroxylon Sagu ಎಂಬ ಮರದ ಕಾಂಡವನ್ನು ಸೀಳಿ ಅದರಿಂದ ಪಿಷ್ಟವನ್ನು ಸಂಗ್ರಹಿಸಿ, ಶುದ್ಧೀಕರಿಸಿ, ಸಬ್ಬಕ್ಕಿಯನ್ನು ತಯಾರಿಸುತ್ತಾರೆ. ಇದಕ್ಕೆ Palm Sago ಅಂತ  ಹೆಸರು.
ಸಬ್ಬಕ್ಕಿಯ ಮುಖ್ಯ ಉಪಯೋಗ ಆಹಾರ ಪದಾರ್ಥವಾಗಿ. ಏಷ್ಯಾದ ಕೆಲವು ದೇಶಗಳಲ್ಲಿ ಅಕ್ಕಿಗೆ ಪರ್ಯಾಯವಾಗಿ ಸಬ್ಬಕ್ಕಿಯನ್ನು ದೈನಂದಿನ ಅಡುಗೆಯಲ್ಲಿ ಬಳಸುವವರೂ ಇದ್ದಾರೆ. ಆದರೆ, ಅದೇಕೊ, ನಮ್ಮಲ್ಲಿ ಸಬ್ಬಕ್ಕಿಯ ಪಾಯಸ ಮಾತ್ರ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಇತರ ಅಡುಗೆಗಳು ಅಷ್ಟಾಗಿ ಬಳಕೆಯಲ್ಲಿ ಇಲ್ಲ.

(ಮಾಹಿತಿ, ಚಿತ್ರ : ಅಂತರ್ಜಾಲ)

– ಹೇಮಮಾಲಾ.ಬಿ

Monday, May 4, 2015

ನೆಗ್ಗಿದ ತಟ್ಟೆ..ರಂಗಾಯಣ..ಚಿಣ್ಣರ ಮೇಳ

ಶಾಲಾ ಮಕ್ಕಳಿಗೆ ಬೇಸಗೆ ರಜೆ ಸಿಕ್ಕಿದೆ.  ಪಕ್ಕದ ಖಾಲಿ ಸೈಟಿ ನಲ್ಲಿ ಬಡಾವಣೆಯ ಮಕ್ಕಳ ಸಡಗರದ ಆಟ ನೋಡುತ್ತಿರುವಾಗ 'ರಂಗಾಯಣದ ಚಿಣ್ಣರ ಮೇಳ' ನೆನಪಾಗುತ್ತಿದೆ.  ಮೈಸೂರಿನವರಿಗೆ 'ರಂಗಾಯಣ' ಚಿರಪರಿಚಿತ. ಬೇಸಗೆಯಲ್ಲಿ  ಇವರು ಹಮ್ಮಿಕೊಳ್ಳುವ  ಬೇಸಗೆ ಶಿಬಿರವಾದ 'ಚಿಣ್ಣರ ಮೇಳ' ಬಹಳ ಸೊಗಸಾಗಿರುತ್ತದೆ. ನಮ್ಮ ಮಗ 8-10 ವರ್ಷದ ಬಾಲಕನಾಗಿದ್ದಾಗ ಅವನನ್ನು   'ಚಿಣ್ಣರ ಮೇಳ'ಕ್ಕೆ ದಾಖಲಿಸಿದ್ದೆವು. ಈ ಬೇಸಗೆ ಶಿಬಿರ ಎಷ್ಟು ಪ್ರಖ್ಯಾತ ಎಂದರೆ  ಅವರು ಅಪ್ಲಿಕೇಶನ್ ಫಾರ್ಮ್ ಕೊಡುತ್ತಾರೆಂದು ನಿಗದಿಪಡಿಸಿದ ದಿನದಂದು ಬೆಳಗ್ಗೆ 10 ಗಂಟೆಯೊಳಗೇ ಸುಮಾರು 400  ಅಪ್ಲಿಕೇಶನ್ ಫಾರ್ಮ್ ವಿತರಣೆಯಾಗಿ ಆಮೇಲೆ ಬಂದವರಿಗೆ ಅವಕಾಶವಿಲ್ಲದಾಗುತ್ತದೆ!

ಚಿಣ್ಣರ ಮೇಳದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸುವುದರ ಜತೆಗೆ, ದೇಸೀ ಆಟಗಳನ್ನು, ಪರಿಸರವನ್ನು ಪರಿಚಯಿಸುತ್ತಾರೆ.  'ಮಕ್ಕಳನ್ನು ಮುಕ್ತವಾಗಿ ಪ್ರಕೃತಿಯಲ್ಲಿ ಬೆಳೆಯಲು ಬಿಡಿ' ಎಂದು ಪ್ರಥಮ ದಿನ ಪಾಲಕರ ಭೇಟಿಯಲ್ಲಿಯೇ  ತಿಳಿಸಿದ್ದರು. ನನಗೆ ಈಗ ನೆನಪಿರುವಂತೆ,  2005/2006 ನೇ ಇಸವಿಯಲ್ಲಿ  ನಮ್ಮ ಮಗ ಭಾಗವಹಿಸಿದ್ದ,  ಸುಮಾರು ಒಂದು ತಿಂಗಳ  ಅವಧಿಯ ಚಿಣ್ಣರ ಮೇಳದಲ್ಲಿ,  ಈ ಕೆಳಗಿನ ಕಾರ್ಯಕ್ರಮಗಳಿದ್ದುವು: 
  • ಖ್ಯಾತ ಚಲನಚಿತ್ರ ಕಲಾವಿದರಾದ  ದಿ.ಅಶ್ವಥ್  ಅವರು ಕೊಳಲೂದುವ ಮೂಲಕ ಉದ್ಘಾಟನೆ . ಆವರು ಕೊಳಲು ಊದುತ್ತಿದ್ದಂತೆ, ವೇದಿಕೆಯ ಇಕ್ಕೆಲದಿಂದ, ಪೀ-ಪೀ ಎಂದು ತೋಚಿದಂತೆ ಕೊಳಲೂದುತ್ತಾ ಬಂದ ನೂರಾರು  ಪುಟಾಣಿಗಳ ದಂಡು.
  • ದೇಸಿ ಆಟಗಳಾದ ಕಬಡ್ಡಿ, ಲಗೋರಿಗಳ ಪರಿಚಯ. ಅಲ್ಲಿ ಕಲಿತು ಬಂದ ಲಗೋರಿ ಆಟವನ್ನು ನಮ್ಮ  ಬೀದಿಯ ಮಕ್ಕಳು,  'ಕಮೆಂಟ್ರಿ' ಸಮೇತವಾಗಿ ಬಹಳ ದಿನಗಳ ನಂತರವೂ ಆಡುತ್ತಿದ್ದರು.
  • ಕುಕ್ಕರಹಳ್ಳಿ ಕೆರೆಯ ಏರಿ ಮೇಲೆ ವಾಕಿಂಗ್ ಮತ್ತು ಪಕ್ಷಿವೀಕ್ಷಣೆ. ಇದರಿಂದ ಪ್ರಭಾವಿತನಾದ ನಮ್ಮ ಮಗ , ಕೆಲವು ದಿನ ನಮ್ಮ ಬಡಾವಣೆಯಲ್ಲಿಯೇ ಗೆಳೆಯರನ್ನು ಸೇರಿಸಿಕೊಂಡು, ಪುಟ್ಟ ನೋಟ್ಸ್ ಬುಕ್ ಹಿಡಿದುಕೊಂಡು ಕಾಗೆ, ಗುಬ್ಬಚ್ಚಿ, ಪಾರಿವಾಳಗಳ ಲೆಕ್ಕ ಬರೆದ.  
  • ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತುವುದು ಜತೆಗೆ ಸಸ್ಯಸಿರಿಯ ಪರಿಚಯ.
  • ಬೊಂಬೆ ರಥ : ಎಲ್ಲಿ ಹೋದರಪ್ಪ ಇವರೆಲ್ಲಾ ಎಂದು ನೋಡುವಷ್ಟರಲ್ಲಿ   ಮಕ್ಕಳೆಲ್ಲಾ ಸೇರಿ ಒಂದು ಸಣ್ಣ ರಥವನ್ನು ಹಗ್ಗದ ಮೂಲಕ ಎಳೆದುಕೊಂಡು  ಬಂದರು. ಮಕ್ಕಳೇ ತಯಾರಿಸಿದ ವಿವಿಧ ಬೊಂಬೆಗಳನ್ನು,  ಆ ರಥಕ್ಕೆ ಕಟ್ಟಿ ಸಿಂಗರಿಸಿದ್ದರು. 
  • ಮಕ್ಕಳಿಗೆ ತರಬೇತಿ ನೀಡಿ  'ಟಿಪ್ಪು ಸುಲ್ತಾನ್' ನಾಟಕ ಆಡಿಸಿದ್ದರು. ಹಾಗಾಗಿ ನಮ್ಮ  ಮನೆಯಲ್ಲಿ, ಮಗನ 'ಮೀರ್ ಸಾಧಿಕ್' ಪಾತ್ರದ ತಾಲೀಮ್ ನಡೆಯುತ್ತಾ ಇತ್ತು!
  • ರಂಗಿನ ಓಕುಳಿ :  ಒಂದು ದಿನ  ಚಿಣ್ಣರ ಮೇಳದಲ್ಲಿ ಮಕ್ಕಳು  ಪರಸ್ಪರ ಬಣ್ಣದ ನೀರಿನ  ಓಕುಳಿ ಎರಚಿಕೊಂಡು ಸಂಭ್ರಮ ಪಡಲು ವ್ಯವಸ್ಥೆ ಕಲ್ಪಿಸಿದ್ದರು. 
ಸಾಂಸ್ಕೃತಿಕ ಮೇಳ: ಕೆಲವು ಮಕ್ಕಳಿಗೆ  ಮನೆಯಿಂದ ಒಂದು ತಟ್ಟೆ ಮತ್ತು ಚಮಚ  ಇನ್ನು ಕೆಲವರಿಗೆ ಲೋಟ-ಚಮಚ   ತರಲು ಹೇಳಿದ್ದರು. ಕೆಲವರಿಗೆ ಹಾಡು ಕಲಿಸಿದ್ದರು. ಒಟ್ಟಾರೆಯಾಗಿ ಎಲ್ಲಾ ಮಕ್ಕಳನ್ನೂ ಒಂದಲ್ಲ ಒಂದು ರೀತಿ ತೊಡಗಿಸಿದ್ದರು, ತನಗೆ  ಅವಕಾಶ ಸಿಗಲಿಲ್ಲ ಎಂದು ಯಾವ ಮಗುವೂ ಬೇಜಾರು ಮಾಡಿಕೊಂಡಿಲ್ಲ.  ಹೀಗೆ ಹಾಡುವ ಮೇಳಕ್ಕೆ ತಟ್ಟೆ, ಲೋಟ, ಚಮಚ, ಕುಟ್ಟಣಗಳ ಹಿಮ್ಮೇಳ.  ನಮ್ಮ ಮಗ ತಟ್ಟೆಯನ್ನು ಚಮಚದಿಂದ ಎಷ್ಟು ಜೋರಾಗಿ ಕುಟ್ಟುತ್ತಿದ್ದ ಎಂಬುದಕ್ಕೆ ಸಾಕ್ಷಿಯಾಗಿ, ಅವನು ಬಳಸಿ ನೆಗ್ಗಿದ ತಟ್ಟೆಯನ್ನು ಈಗಲೂ ಇಟ್ಟುಕೊಂಡಿದ್ದೇವೆ. 

ಚಿಣ್ಣರ ಸಂತೆ : ಎಲ್ಲಾ ಮಕ್ಕಳು ತಮ್ಮ ಮನೆಯಿಂದ ಏನಾದರೂ ಸಾಮಾಗ್ರಿ ತಂದು 'ಸಂತೆಯಲ್ಲಿ ಅಂಗಡಿ ' ಇಡಬೇಕೆಂದು ಹೇಳಿದ್ದರು . ಆಗಿನ ದೂರದರ್ಶನದ ಜಾಹೀರಾತಿನಲ್ಲಿ " ಐ ಲವ್ ಯೂ ರಸ್ನಾ.." ಅಂತ ಪುಟಾಣಿಯೊಬ್ಬಳು ಉಲಿಯುತ್ತಿದ್ದಳು. ಸರಿ, ನಮ್ಮ ಮಗ, ತಾನು 'ರಸ್ನಾ' ಮಾರುತ್ತೇನೆಂದ. ಸಂತೆಯ  ದಿನ ಎರಡು ದೊಡ್ಡ ಬಾಟಲುಗಳಲ್ಲಿ ರಸ್ನಾ ಮಾಡಿ  ತುಂಬಿಸಿ ಆಯಿತು. ಒಂದು ಬೆಡ್ ಶೀಟ್ ಮತ್ತು ಕೆಲವು  ಕಾಗದದ ಕಪ್ ಗಳನ್ನು ತೆಗೆದುಕೊಂಡು  ರಂಗಾಯಣಕ್ಕೆಹೋಗಿದ್ದ. ಆ ದಿನ  ಸಂಜೆ ಪಾಲಕರಿಗೂ ಬರಲು ಅವಕಾಶವಿತ್ತು. ಸಂಜೆ 'ರಂಗಾಯಣ'ದ ಆವರಣದಲ್ಲಿ ನಾವು ಹೋಗುತ್ತಿದ್ದಂತೆ, ಮಕ್ಕಳ ಸಂತೆಯಲ್ಲಿ ವ್ಯಾಪಾರ, ಚೌಕಾಸಿ ತಾರಕಕ್ಕೇರಿತ್ತು. ಬಂದಿದ್ದ ಪಾಲಕರೇ ಗ್ರಾಹಕರು.  

ಕೆಲವು ಮಕ್ಕಳು ಚಾಪೆ ಹಾಸಿ ಕುಳಿತು ತಾವು ತಂದಿದ್ದ ಕಲ್ಲಂಗಡಿ ಹಣ್ಣು, ಜ್ಯೂಸ್, ಮಜ್ಜಿಗೆ, ಚಾಕಲೇಟ್ ಇತ್ಯಾದಿ ಮಾರುತ್ತಿದ್ದರೆ, ಇನ್ನು ಕೆಲವರು ತಲೆ ಮೇಲೆ ಬುಟ್ಟಿಯಲ್ಲಿ ಹೊತ್ತು ಸಂತೆಯಲ್ಲಿ ಓಡಾಡುತ್ತಾ ಮಾರುತ್ತಿದ್ದರು!  ಪಾಲಕರು/ಗ್ರಾಹಕರು ಬೇಕೆಂದೇ ಚೌಕಾಸಿ ಮಾಡುತ್ತಿದ್ದರೆ, ಪುಟಾಣಿಗಳು ನಿಷ್ಣಾತ ವ್ಯಾಪಾರಿಗಳಂತೆ ತಿರುಗೇಟು ಕೊಡುತ್ತಾ ವ್ಯವಹಾರ ಮಾಡಿ  ಸಂಪಾದಿಸುತ್ತಿದ್ದರು!    ರಂಗಾಯಣದ ಕಲಾವಿದರು  ಮೈಗೆಲ್ಲಾ ಬಣ್ಣ ಬಳಿದು  ಅಂಗಡಿ 'ಮಾಲೀಕರ' ಮುಂದೆ ಸಾಕಷ್ಟು ತಕರಾರು ಮಾಡುತ್ತಿದ್ದರು!  ಕೋಲೆಬಸವನೂ ಬಂದಿದ್ದ. ಒಬ್ಬರು ಕತ್ತಿನವರೆಗೂ ಮರಳಿನ ರಾಶಿಯಲ್ಲಿ ಹುದುಗಿ ಆಕರ್ಷಿಸುತ್ತಿದ್ದರು, ಬಲೂನ್ ವ್ಯಾಪಾರವಿತ್ತು. ಅಂತೂ ರಂಗಾಯಣದ ಆವರಣದಲ್ಲಿ 'ಅಪ್ಪಟ ಸಂತೆ' ಸೃಷ್ಟಿಯಾಗಿತ್ತು.

ತಮ್ಮ ಪಾಲಕರನ್ನು ಕಂಡ ತತ್ಕ್ಷಣ  ಮಕ್ಕಳು ಅದುವರೆಗೆ ನಡೆಸುತ್ತಿದ್ದ ಅಂಗಡಿಯನ್ನು ಅಲ್ಲಿಗೇ ಬಿಟ್ಟು,  ಬೇರೆ ಅಂಗಡಿಗೆ ವ್ಯಾಪಾರಕ್ಕೆ ಹೊರಡಲು ಅನುವಾದರು. ನಮ್ಮ ಮಗ ರಸ್ನಾ ಮಾರುತ್ತಿದ್ದನು ಅದುವರೆಗೆ 12 ರೂ ಗಳಿಸಿದ್ದನ್ನು  ಹೆಮ್ಮೆಯಿಂದ ತೋರಿಸಿದ.   ನನ್ನನ್ನು ಕಂಡೊಡನೆ, ಜಿಗ್ಗನೆ ಎದ್ದು, ಸ್ವಲ್ಪ ದುಡ್ಡು ಪಡಕೊಂಡು 'ಪರ್ಚೇಸ್ ಮಾಡ್ಬೇಕು'  ಅಂದು  ಛಂಗನೆ ಓಡಿದ.  ಏನಪ್ಪಾ ಮಾಡಲಿ ಅನ್ನುತ್ತಾ ಕೊನೆಗೆ ನಾನು ಅವನ ಜಾಗದಲ್ಲಿ  ಕುಳಿತುಕೊಂಡೆ. ನೋಡನೋಡುತ್ತಿರುವಷ್ಟರಲ್ಲಿ, ಎಲ್ಲಾ ಅಂಗಡಿಗಳಲ್ಲಿ ಮಾಲೀಕರು ನಾಪತ್ತೆ.  ಅವರ ಜಾಗದಲ್ಲಿ ಅಪ್ಪಂದಿರು/ಅಮ್ಮಂದಿರು/ಅಜ್ಜಿಯಂದಿರು ಸಂತೆಯಲ್ಲಿ  ನಗುತ್ತಾ  ಕುಳಿತಿದ್ದರು.  'ಪರ್ಚೇಸ್ ಮಾಡಲೆಂದು'  ಕೆಲವರು ಚುರುಮುರಿ ತಿನ್ನಲು ಹೋದರೆ ಇನ್ನು ಕೆಲವರು ಐಸ್ ಕ್ಯಾಂಡಿ ಗಾಡಿಯ ಮುಂದೆ ಇದ್ದರು. ಕೊನೆಗೆ ನಾವು  ಅಕ್ಕ-ಪಕ್ಕದ ಅಂಗಡಿಯಲ್ಲಿದ್ದ ಪಾಲಕರು  ಪರಸ್ಪರ ಪರಿಚಯ ಮಾಡಿಕೊಂಡು  ಸಂತೆಗೆಂದು  ಕಳುಹಿಸಿದ್ದ ತಿಂಡಿ/ಪಾನೀಯವನ್ನು ಹಂಚಿ ಮುಗಿಸಿ ಅಂಗಡಿ ಕ್ಲೋಸ್ ಮಾಡಿದೆವು!  


ಒಟ್ಟಾರೆಯಾಗಿ, ಚಿಣ್ಣರಮೇಳದಲ್ಲಿ ಭಾಗವಹಿಸಿ ನಮ್ಮ ಮಗನಿಗೂ ನಮಗೂ ಬಹಳ ಸಂತಸವಾಯಿತು. ಆ ದಿನಗಳಲ್ಲಿ   ಡಿಜಿಟಲ್ ಕ್ಯಾಮೆರಾ/ ಸ್ಮಾರ್ಟ್ ಫೋನ್  ಈಗಿನಷ್ಟು ವ್ಯಾಪಕವಾಗಿ ಲಭ್ಯವಿದ್ದಿದ್ದರೆ , ಎಷ್ಟೊಂದು ಫೊಟೊ ತೆಗೆದಿಡಬಹುದಾಗಿತ್ತು ಅನಿಸುತ್ತದೆ. ಕಾಲ ಮಿಂಚಿ ಹೋಗಿದೆ!  ಹಾಗಾಗಿ ಈಗ ಚಿಣ್ಣರ ಮೇಳದ  'ನೆಗ್ಗಿದ ತಟ್ಟೆ'ಯಲ್ಲಿಯೇ ಆ ಚಿತ್ರಗಳನ್ನು ನಾವು ಕಾಣಬೇಕು.

'ಮೇಲಾರಕ್ಕೆ ಕೊರವದು'-ತರಕಾರಿ ಹೆಚ್ಚುವ ಕಾರ್ಯಕ್ರಮ

ಎಪ್ರಿಲ್-ಮೇ ಆರಂಭವಾಯಿತೆಂದರೆ ಶುಭಕಾರ್ಯಕ್ರಮಗಳ ಸೀಸನ್ ಆರಂಭವಾಗುತ್ತದೆ.  ನಾನು ಹೇಳುತ್ತಿರುವುದು ನನ್ನ ಅನುಭವದ ವ್ಯಾಪ್ತಿಯಲ್ಲಿ ಬಂದ,  ಸಾಂಪ್ರದಾಯಿಕವಾಗಿ ಮನೆಯಲ್ಲಿಯೇ   ನಡೆಯುವ ಸಮಾರಂಭಗಳು ಮತ್ತು ಅವಕ್ಕೆ ಪೂರ್ವತಯಾರಿಯ ಅಂಗವಾದ  'ಮೇಲಾರಕ್ಕೆ ಕೊರವದು ಅಂದರೆ ತರಕಾರಿ ಹೆಚ್ಚುವ ಕಾರ್ಯಕ್ರಮದ' ಬಗ್ಗೆ.


'ಮೇಲಾರಕ್ಕೆ ಕೊರವದು ' ಕಾರ್ಯಕ್ರಮಕ್ಕೆ ವಿಶಿಷ್ಟ ಸೊಗಸಿದೆ.  ಸಮಾರಂಭದ ಹಿಂದಿನ ದಿನ ರಾತ್ರಿ ಗಣಪತಿ ಪೂಜೆ ಮಾಡಿ ಶುಭಾರಂಭವಾಗುತ್ತದೆ. ರಾತ್ರಿಯ ಸಿಹಿಯೂಟದ ನಂತರ ಮನೆಯ ಸದಸ್ಯರು ಮತ್ತು ಅಕ್ಕಪಕ್ಕದ ಮನೆಯವರು ಒಟ್ಟು ಸೇರಿ, ಮನೆ ಮುಂದೆ ಹಾಕಿರುವ ಚಪ್ಪರದ ಆಡಿಯಲ್ಲಿ, ಅಡುಗೆ ಭಟ್ಟರ ಮೇಲ್ವಿಚಾರಣೆಯಲ್ಲಿ, ಮರುದಿನದ ಅಡುಗೆಗೆ ಬೇಕಾಗುವ ತರಕಾರಿಗಳನ್ನು ಹೆಚ್ಚಲು ಆರಂಭಿಸುತ್ತಾರೆ. ಈ ಕಾರ್ಯಕ್ರಮಕ್ಕೆ ನಮ್ಮ ಸಮುದಾಯದ  ಆಡುಭಾಷೆಯಲ್ಲಿ 'ಮೇಲಾರಕ್ಕೆ ಕೊರವದು' ಅನ್ನುತ್ತಾರೆ. ಮೇಲಾರ ಎಂದರೆ ಮಜ್ಜಿಗೆಹುಳಿ, ಕೊರವದು ಎಂದರೆ ಹೆಚ್ಚುವುದು. ಅಸಲಿಗೆ ಮಜ್ಜಿಗೆಹುಳಿಗೆ ಬೇಕಾಗುವ ತರಕಾರಿಗಳಿಗಿಂತ ಇತರ ಅಡುಗೆಗಳಿಗೆ ಹೆಚ್ಚು ತರಕಾರಿ ಬೇಕಾಗುವುದಾದರೂ 'ಮೇಲಾರಕ್ಕೆ ಕೊರವದು' ಎಂಬ ಮಾತು ಯಾಕೆ ಬಳಕೆಗೆ ಬಂತೋ ಗೊತ್ತಿಲ್ಲ. 

ರಾತ್ರಿ ಊಟವಾದ ಮೇಲೆ ಶುರುವಾಗುವ ಈ ತರಕಾರಿ ಹೆಚ್ಚುವ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಮನೆಯವರು ಮತ್ತು ಬಂದಿದ್ದ ನೆಂಟರು ಉತ್ಸಾಹದಿಂದ ಭಾಗವಹಿಸುತ್ತಾರೆ. ತರಕಾರಿ ಹೆಚ್ಚುವವರ ಮಾತಿನ ಲಹರಿ ಬಲು ವಿಸ್ತಾರವಾದದ್ದು.  ಅಲ್ಲಿ ಚರ್ಚಿತವಾಗದ ವಿಷಯಗಳೇ ಇಲ್ಲ.  ಪ್ರಸ್ತುತ ಅಧಿಕಾರದಲ್ಲಿರುವ/ಇಲ್ಲದಿರುವ  ರಾಜಕಾರಣಿಗಳು, ಚಲಾವಣೆಯಲ್ಲಿ ಇರುವ/ಇಲ್ಲದಿರುವ ಸಿನೆಮಾ ನಟಿಯರು  ಇಲ್ಲಿ ವಿಮರ್ಶೆಗೆ ಗುರಿಯಾಗುತ್ತಾರೆ. ಊರಿನ ಭಜನಾ ಮಂಡಳಿಯಿಂದ ತೊಡಗಿದ ಮಾತು  ಅಮೇರಿಕಾದ ಶ್ವೇತಭವನಕ್ಕೆ ತಲಪಿ ಒಬಾಮಾ, ಮಿಶಲ್ ವಿಷಯ ಬರುತ್ತದೆ. ಇನ್ನು ನಮ್ಮ ದೇಶದವರೇ ಅದ್ದ ಅಜ್ಜ-ಮಗಳು-ಮೊಮ್ಮಗ-ಮರಿಮೊಮ್ಮಗರನ್ನು (ನೆಹರೂ ಕುಟುಂಬ) ನೆನಪಿಸದಿದ್ದರಾಗುತ್ತದೆಯೇ ?  ಆಡಳಿತ ಪಕ್ಷಕ್ಕೂ ವಿರೋಧ ಪಕ್ಷಕ್ಕೂ ಸಮಾನ ಮನ್ನಣೆಯ ಪೀಠಿಕೆ/ಗೌರವ  ಸಿಗುವುದು 'ಮೇಲಾರಕ್ಕೆ ಕೊರೆವಗ' ಮಾತ್ರ ಎಂದು ನಮ್ಮ ಅಂಬೋಣ!

ಮಕ್ಕಳು-ಮೊಮ್ಮಕ್ಕಳು, ಉದ್ಯೋಗದ ವಿಚಾರಣೆ ಇದ್ದೇ ಇರುತ್ತದೆ. ಪಕ್ಕದ ತೋಡಿಗೆ ಅಡಿಕೆ ಮರದ ಸಂಕ ಹಾಕುವ ಕೆಲಸದಿಂದ ಹಿಡಿದು  ಇಸ್ರೋದ ಉಪಗ್ರಹ  ಉಡಾವಣೆಯ  ವರೆಗೆ ಸಂವಾದವಿರುತ್ತದೆ . ಇನ್ನು ಆಡಿಕೆ  ಧಾರಣೆಯ ಏರಿಳಿತ, ಕಾರ್ಮಿಕರ ಅಲಭ್ಯತೆ, ಹೊಸದಾಗಿ ಖರೀದಿಸಿದ ಕೃಷಿ ಉಪಕರಣದ ಪಾಸಿಟಿವ್ ಮತ್ತು ನೆಗಟಿವ್ ಅಂಶಗಳು, ಯಾವುದೋ  ಅಪರಾಧದ ಸುದ್ದಿಯ  ಪೋಸ್ಟ್ ಮಾರ್ಟಂ ವರದಿ, ಹವಾಮಾನ ಮುನ್ಸೂಚನೆ..... ಹೀಗೆ ಮಾತು ಮತ್ತು ತರಕಾರಿ ಹೆಚ್ಚುವ ಕೆಲಸ ಸಾಂಘಿಕವಾಗಿ ನಡೆಯುತ್ತಿರುವಾಗ  ಯಾರಾದರೂ ಒಬ್ಬರು "ಒಂದು ಸ್ಟ್ರಾಂಗ್   ಚಾ ಬರ್ಲಿ ನೋಡೋಣಾ " ಎಂದು ಅವಾಜ್ ಹಾಕುತ್ತಾರೆ. ಈ ಬೇಡಿಕೆಯನ್ನು ಮೊದಲೇ ತಿಳಿದಿರುತ್ತಿದ್ದ ಮನೆಯೊಡತಿ,  ದೊಡ್ಡ ತಪ್ಪಲೆ ಚಹಾವನ್ನು ಮತ್ತು ಕೆಲವು ಸ್ಟೀಲ್ ಲೋಟಗಳನ್ನು ತಂದಿಟ್ಟು ತಾನೂ ಮಾತಿಗೆ ಜತೆಯಾಗುತ್ತಾಳೆ. ಕೆಲವರು 3-4 ಲೋಟ ಚಾ ಕುಡಿದರೆ, ಇನ್ನು ಕೆಲವರು ಒಂದು  ಲೋಟ ಸಾಕು ಎನ್ನುತ್ತಾರೆ.  ಇನ್ನು ಕೆಲವು ನಾಜೂಕಿನವರು, ರಾತ್ರಿ ಚಾ ಕುಡುದರೆ ನಿದ್ರೆ ಬರುವುದಿಲ್ಲ ಎನ್ನುವರು. ಒಂದಿಬ್ಬರು ಬಾಯಲ್ಲಿ 'ಎಲೆ-ಅಡಿಕೆ' ಜಗಿಯುತ್ತಿರುವುದರಿಂದ ಬೇಡ ಎನ್ನುವರು. 



ಚಂದ್ರಣ್ಣ ರಾಜಕೀಯ ಮಾತನಾಡಲು ಆರಂಭಿಸಿದರೆ, ಕೇಶವಣ್ಣ ಅಡಕೆ ಧಾರಣೆ ಬಗ್ಗೆ ಚರ್ಚೆ ಮಂಡಿಸುತ್ತಾರೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಐಟಿ ಉದ್ಯೋಗಿ ವರ್ಕ್ ಲೋಡ್, ಸ್ಟ್ರೆಸ್, ಟ್ರಾಫಿಕ್ ಜಾಮ್ , ಫಾರಿನ್ ಟ್ರಾವೆಲ್  ಅಂತ  ತನ್ನ ಕೆಲಸದ ಕಷ್ಟ-ಸುಖ ಹೇಳಿಕೊಂಡರೆ, ಆಚೆಮನೆಯ ಉಪಾಧ್ಯಾಯರು "ಇನ್ನು ಮುಂದೆ ಮೇಷ್ಟ್ರು ಕೆಲಸ ಮಾಡಲೆ ಎಡಿಯಪ್ಪ..ಶಾಲೆ ಕೆಲಸಂದ ಹೆಚ್ಚು ಬೇರೆ ಕೆಲಸವೇ ಜಾಸ್ತಿ ಆತು. ಜಾನುವಾರು ಗಣತಿಯನ್ನೂ ಎಂಗ ಮಾಡೆಕ್ಕು   ..ಎಂಗೊ ಮಕ್ಕೊಗೆ ಪಾಠ ಮಾಡೆಕ್ಕೋ, ಅವರ ಮನೆಲಿ ದನ, ನಾಯಿ ಎಷ್ಟಿದ್ದು ಹೇಳಿ ಲೆಕ್ಕ ಹಾಕೆಕ್ಕಾ.." ಎಂದು  ಉದಾಹರಣೆ ಸಮೇತ ವಿಮರ್ಶಿಸುವರು.  

ಆಗಾಗ ಅಡುಗೆ ಭಟ್ಟರು " .. ಕ್ಯಾಬೇಜ್ ಇಷ್ಟು ಸಾಕು....ಬೀನ್ಸ್  ಇನ್ನೂ ಇರಲಿ...." ಎಂಬ ಸಲಹೆ ಕೊಡುವರು.  

ಜಲಜಕ್ಕ ಮೊನ್ನೆ ತಾನೇ  ಕೊಂಡ ಹೊಸ ಸೀರೆಯನ್ನುಟ್ಟರೆ ದಪ್ಪ ಕಾಣಿಸುತ್ತೇನೆಂದರೆ, ಉಪ್ಪಿನಕಾಯಿಗೆ ಈ ಬಾರಿ ಮಾವಿನಮಿಡಿ  ಇನ್ನೂ ಕೊಯಿದಾಗಿಲ್ಲ ಎಂದು ಸರೋಜತ್ತೆ ಹೇಳುತ್ತಾರೆ. ಒಬ್ಬರ ಮನೆಯ ಹಲಸಿನಮರದಲ್ಲಿ ಈಗಲೇ ಹಲಸಿನ ಕಾಯಿ ಹಣ್ಣಾಗಿ ಅದನ್ನು ಪಾಯಸ ಮಾಡಿ ತಿಂದಾಗಿದ್ದರೆ, ಇನ್ನೊಬ್ಬರ ಮನೆಯ ಹಲಸಿನ ಮರದಲ್ಲಿ ಇನ್ನೂ ಎಳೆಗುಜ್ಜೆ ಬಿಟ್ಟಿರುತ್ತದೆ. ಸಾವಿತ್ರಿಯ ದೊಡ್ಡ ಮಗಳಿಗೆ ಗಂಡು ಮಗುವಾಗಿ ಆಕೆ ಅಮೇರಿಕಾಕ್ಕೆ ಬಾಣಂತನಕ್ಕೆ ಹೋಗಿದ್ದ ಕಾರಣ ಈವತ್ತು ಬಂದಿಲ್ಲ. ಗೀತಕ್ಕನಿಗೆ ತೋಟದಲ್ಲಿ  ಮೆಟ್ಟಲಿಳಿಯುವಾಗ ಕಾಲು ಉಳುಕಿತ್ತಂತೆ. ಹೀಗೆ  ಇಲ್ಲಿ ಸರ್ವರಿಗೂ ವಾಕ್ ಸ್ವಾತಂತ್ರ್ಯ! ಎಲ್ಲಿವರೆಗೆ ಕೊನೆಯ ತರಕಾರಿ ಹೆಚ್ಚಲಿದೆಯೋ ಅಲ್ಲಿವರೆಗೆ ಮಾತು ಮುಂದುವರಿಯುತ್ತದೆ. ಮಾತಿನ ಲಹರಿ  ಅಷ್ಟದಿಕ್ಕುಗಳಲ್ಲಿಯೂ ಹರಿಯುತ್ತದೆ, ಖಂಡಾಂತರಗಳನ್ನು ಕ್ಷಣಾರ್ಧದಲ್ಲಿ ಕ್ರಮಿಸಿ ಬರುತ್ತದೆ. ಆದರೆ, ಕೈಗಳು ಚಾಕು ಹಿಡಿದು ನಿಗದಿತವಾದ ತರಕಾರಿಗಳನ್ನು ಅಚ್ಚುಕಟ್ಟಾಗಿ ಹೆಚ್ಚುತ್ತಿರುತ್ತವೆ.

 ಈ ಸಂದರ್ಭದಲ್ಲಿ, ಮನೆ ಮಟ್ಟಿಗೆ ಗಾಯಕ/ಗಾಯಕಿ ಹೆಸರಾಂತರು ಯಾರಾದರೂ ಅಲ್ಲಿದ್ದರೆ ಅವರನ್ನು ಒಂದೆರಡು ಹಾಡು ಹೇಳಲು ವಿನಂತಿಸಲಾಗುತ್ತದೆ. ಅವರು ಚಿಕ್ಕ ಮಕ್ಕಳಾದರೆ ಅವಕಾಶಕ್ಕೆ ಕಾಯುತ್ತಿದ್ದವರಂತೆ ಪುಂಖಾನುಪುಂಖವಾಗಿ ಹಾಡುತ್ತಾರೆ. ಇನ್ನು ಹದಿವಯಸ್ಸಿನವರಾದರೆ, 'ಇನ್ನೂ ಸ್ವಲ್ಪ ಒತ್ತಾಯಿಸಲಿ' ಎಂಬಂತೆ ನಾಚಿಕೆ ವ್ಯಕ್ತಪಡಿಸುವಾಗ, ಅವರ ಅಮ್ಮನೋ, ಅತ್ತೆಯೋ ಅವಳಿಗೆ ಇತ್ತೀಚೆಗೆ  ಹಾಡುಗಾರಿಕೆಗೆ ಸಿಕ್ಕಿದ ಬಹುಮಾನದ ಬಗ್ಗೆ ಪ್ರಸ್ತಾಪಿಸಿ,  ಅತ್ಮವಿಶ್ವಾಸ ಹೆಚ್ಚಿಸುತ್ತಾರೆ. ಕೊನೆಗೂ ಆಕೆ ಒಂದೆರಡು ಕೀರ್ತನೆಗಳನ್ನು ಹಾಡಿ ಸಭೆಗೆ ಸಂಗೀತದ ರಂಗು ತುಂಬುತ್ತಾಳೆ.  ಇಷ್ಟಾದ ಮೇಲೆ  ಸ್ಥಳೀಯ ಪ್ರಸಿದ್ಧ ಕಲೆಯಾದ ಯಕ್ಷಗಾನದ ಭಾಗವತಿಕೆಯ ಶೈಲಿಯಲ್ಲಿ ಒಂದೆರಡು ಸಾಲುಗಳನ್ನು  ಕೇಳಬೇಡವೇ?  ಸರಿ, ತರಕಾರಿ ಹೆಚ್ಚುತ್ತಿದ್ದ ಶಂಭಣ್ಣ  " ಬಂದಳು ಬಂದಳು...ಭಾನುಮತಿ....." ಎಂದು ಎಂದು ಯಕ್ಷಗಾನ ಶೈಲಿಯಲ್ಲಿ ಹಾಡಿ ಸಭೆಗೆ ಇನ್ನಷ್ಟು ಮೆರುಗು ಕೊಡುತ್ತಾರೆ. 

ಹೀಗೆ ಉತ್ತಮ ಮಾತುಗಾರಿಕೆ, ಹಾಸ್ಯ ಮೇಳೈಸಿದ, ಬಾಂಧವ್ಯ ಬೆಸೆವ  'ಮೇಲಾರಕ್ಕೆ ಕೊರವ' ಕಾರ್ಯಕ್ರಮ ಮುಗಿಯುವಾಗ ರಾತ್ರಿ 11-12  ಗಂಟೆ ಆಗುತ್ತದೆ. ಹೆಚ್ಚಿದ ತರಕಾರಿಗಳನ್ನು ಮುಚ್ಚಿಟ್ಟು, ಅಕ್ಕಪಕ್ಕದ ಮನೆಯವರು "ನಾಳೆ ಕಾಂಬ" ಎಂದು  ತಮ್ಮ ಮನೆಗೆ ಹೊರಟರೆ, ನೆಂಟರು, ಮನೆಯವರು ಸಣ್ಣ ನಿದ್ದೆ ತೆಗೆಯುತ್ತಾರೆ. ಮರುದಿನ ಬೇಗನೇ ಎದ್ದು ಸಮಾರಂಭದ ಸಿದ್ಧತೆಗೆ ಅಣಿಯಾಗುತ್ತಾರೆ. 

ಈಗ ಹೆಚ್ಚಿನ ಸಮಾರಂಭಗಳು ಹಾಲ್ ಗಳಲ್ಲಿ ಜರಗುತ್ತವೆ. ಹಿಂದಿನ ದಿನವೇ ಬಂದು ಮನೆಮಂದಿಯೊಡನೆ ಮಾತನಾಡುತ್ತಾ, ಕೆಲಸ-ಜವಾಬ್ದಾರಿಗಳಿಗೂ  ಹೆಗಲು ಕೊಡಲು ಯಾರಿಗೂ ಸಮಯ, ವ್ಯವಧಾನವಿಲ್ಲ. ಕೆಲಸ-ಜವಾಬ್ದಾರಿಗಳನ್ನು ಏಜಂಟ್ ಗಳಿಗೆ ವಹಿಸಿ, ಅವರ ಸೇವೆಗೆ ದುಡ್ಡು ಕೊಟ್ಟರಾಯಿತು. ಹೆಚ್ಚಿನವರ ಬಳಿಯೂ ಸ್ವಂತ ಕಾರು/ಬೈಕು ಗಳಿರುತ್ತವೆ. ಜುಮ್ಮೆಂದು ಬಂದು ಒಮ್ಮೆ ಮುಖ ತೋರಿಸಿ, ಬಫೆಯಲ್ಲಿ ಉಂಡು , ಕೈತೊಳೆದ ತತ್ಕ್ಷಣವೇ ಹೊರಡುವುದು  ಸಾಮಾನ್ಯ ಆಗಿಬಿಟ್ಟಿದೆ. 

ನನಗಂತೂ ಮರುದಿನದ ಅದ್ದೂರಿ   ಸಮಾರಂಭಕ್ಕಿಂತ, ಹಿಂದಿನ ದಿನದ ಈ ಕಾರ್ಯಕ್ರಮವೇ ಹೆಚ್ಚು ಆಪ್ತವೆನಿಸುತ್ತದೆ .  'ಮೇಲಾರಕ್ಕೆ ಕೊರವದು' ಕಾರ್ಯಕ್ರಮ ಈಗಲೂ ಪ್ರಚಲಿತವಿದೆ ಎಂಬುದು ಖುಷಿಯ ಸಂಗತಿ. 

ದೆವ್ವಗಳ ಅಸ್ತಿತ್ವ…ಈ ಕಾರ್ಯಕ್ರಮ ಬೇಕೆ?

ಚಾನೆಲ್ ಒಂದರಲ್ಲಿ ‘ದೆವ್ವಗಳ ಅಸ್ತಿತ್ವ’ವನ್ನು ಸಾಬೀತುಪಡಿಸುವಂತೆ ನಿರ್ಮಿಸಲಾದ ಕಾರ್ಯಕ್ರಮವೊಂದು ಬಿತ್ತರಗೊಳ್ಳುತಿತ್ತು. ದೆವ್ವಗಳ ಉಪಟಳಕ್ಕೆ ಸಾಕ್ಷಿಯಾಗಿ, ಆಟವಾಡುತ್ತಿದ್ದ ಪುಟ್ಟ ಮಕ್ಕಳ ಹಿಂದೆ ಧೂಳಿನ ಆಕೃತಿ ಬರುವುದು, ನಾಲ್ಕು ಮಕ್ಕಳು ಪರಸ್ಪರ ಕೈಹಿಡಿದುಕೊಂಡು ಆಡುತ್ತಿರುವಾಗ ಒಬ್ಬಳು ಮಾತ್ರ ಭಿನ್ನವಾಗಿ ವರ್ತಿಸುವುದು, ಬೈಕ್ ಸವಾರನ ಹಿಂದೆ ಆತನ ಅರಿವಿಗೇ ಬಾರದಂತೆ ಬಿಳಿ ಆಕೃತಿಯೊಂದು ಕೂತಿರುವುದು, ಬಾಲಕಿಯೊಬ್ಬಳು ನಿದ್ದೆಯಲ್ಲಿ ಎದ್ದು ನಿಂತು ನಡುಗುತ್ತಾ ಇರುವುದು, ಬಿಳಿ ಬಟ್ಟೆ ಧರಿಸಿದ ಮನುಷ್ಯಾಕಾರವೊಂದು ನಡುರಾತ್ರಿಯಲ್ಲಿ ಜೀಪು ಡ್ರೈವ್ ಮಾಡುವವನನ್ನು ಹಿಂಬಾಲಿಸುವುದು, ಆಫೀಸಿನಲ್ಲಿ ಮಧ್ಯರಾತ್ರಿ ಖಾಲಿಕುರ್ಚಿಗಳು ಅತ್ತಿತ್ತ ಓಡಾಡುವುದು, ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಯಾರೋ ಅಡ್ಡಬಂದ ಹಾಗೆ ಅನಿಸಿ, ಕಾರು ನಿಲ್ಲಿಸಿದಾಗ ಆತ/ಆಕೆ ಅದೃಶ್ಯವಾಗುವುದು …..ಇತ್ಯಾದಿ.
ಕಾರ್ಯಕ್ರಮದ ಪ್ರಕಾರ ಇವೆಲ್ಲಾ ನಿಜ ಘಟನೆಗಳು, ಸಿ.ಸಿ.ಟಿ.ವಿ ಯಲ್ಲಿ ಸೆರೆಯಾದುವುಗಳು. ಇವುಗಳನ್ನೆಲ್ಲಾ ನಾನು ನಂಬಲಾರೆ. ಯಾಕೆಂದರೆ, ಈಗಿನ ತಾಂತ್ರಿಕತೆಯನ್ನು ಬಳಸಿ ನಮಗೆ ಬೇಕಾದ ಆಕಾರದ ದೆವ್ವಗಳನ್ನು ಸೃಷ್ಟಿಸುವುದು ಸುಲಭ.
ghostದೆವ್ವಗಳಿಗೆ ಕ್ಷಣಮಾತ್ರದಲ್ಲಿ ಬೇಕಾದ ಕಡೆ ಪ್ರತ್ಯಕ್ಷವಾಗುವ ‘ತಾಕತ್ತು ಇರುವುದಾದರೆ’ ಅವುಗಳಿಗೆ ತಮಗೆ ಬೇಕಾದ ಕಡೆ ರೊಯ್ಯನೆ ಬಂದಿಳಿದು Gracious Presence ಕೊಡಬಹುದಲ್ಲವೇ? ಅದರ ಬದಲು ಸಾಮಾನ್ಯ ಮನುಷ್ಯ ಚಾಲನೆ ಮಾಡುವ ಕಾರು, ಬೈಕ್, ಜೀಪು ಹತ್ತಿ…..ಸದ್ದಿಲ್ಲದೆ ಹಿಂದೆ ಕುಳಿತು…..ರಸ್ತೆ ನಿಯಮ ಪಾಲಿಸಿ… ಸಿಗ್ನಲ್ ನಲ್ಲಿ ಕಾದು….ಪುಕ್ಕಟೆ ಪ್ರಯಾಣಿಸುವ ಅನಿವಾರ್ಯತೆ ಅವಕ್ಕಿದೆಯೆ?
ಸಾಮಾನ್ಯವಾಗಿ ಏರು-ತಗ್ಗು ಇರುವ ಅಥವಾ ದುರ್ಗಮ ಬೆಟ್ಟಪ್ರದೇಶಗಳ ಸುತ್ತು-ಬಳಸಿನ ದಾರಿಯ ಪ್ರಯಾಣಕ್ಕೆ ಜೀಪನ್ನು ಬಳಸುತ್ತಾರೆ. ಇಂಥಹ ಕಡೆ ರಸ್ತೆಯೇ ಪ್ರಯಾಣಕ್ಕೆ ಯೋಗ್ಯವಾಗಿರುವುದಿಲ್ಲ. ಹಾಗಿರುವಾಗ, ಸಿ.ಸಿ.ಟಿ.ವಿ ಅಳವಡಿಕೆ ಇದ್ದು, ಅದು ದೆವ್ವದ ಫೋಟೊ ಕ್ಲಿಕ್ಕಿಸಿದೆ ಎಂದರೆ ನಂಬಲರ್ಹವೇ? ಅಷ್ಟಕ್ಕೂ ಶಕ್ತಿಯುತವಾದ ದೆವ್ವ, ಬಡಪಾಯಿಯಂತೆ ಯಾಕೆ ಹಿಂಬಾಲಿಸಬೇಕು? ಜೀಪಿನೊಳಗೆ ನುಗ್ಗಿ, ಡ್ರೈವರ್ ನನ್ನು ತಳ್ಳಿ, ತಾನೇ ಓಡಿಸಬಹುದಲ್ಲ?
ಮಕ್ಕಳು ತಮಗೆ ಸರಿ ಎನಿಸಿದ ರೀತಿ ಆಟವಾಡುವುದು, ಕನಸಿನಲ್ಲಿ ಬೆದರುವುದು, ನಿದ್ದೆಯಲ್ಲಿ ಎದ್ದು ಕೂರುವುದು, ಕೆಲವೊಮ್ಮೆ ನಿದ್ದೆಯಲ್ಲಿ ಮಾತನಾಡುವುದು, ಹಿರಿಯರ ಗಮನ ಸೆಳೆಯಲೆಂದೇ ವಿಚಿತ್ರವಾಗಿ ವರ್ತಿಸುವುದು…ಇವೆಲ್ಲಾ ಮಾಮೂಲಿ ಸಂಗತಿಗಳೆ.ಇದಕ್ಕೂ ದೆವ್ವವನ್ನು ‘ಟ್ಯಾಗ್’ ಮಾಡಬೇಕೆ?
ದೆವ್ವದ ಅಸ್ತಿತ್ವದ ಬಗ್ಗೆ ನಂಬಿಕೆ ಅವರವರ ಅನುಭವ, ಅಭಿಪ್ರಾಯಕ್ಕೆ ಬಿಟ್ಟಿದ್ದು. ಆದರೆ ಎಲ್ಲಾ ಜನರ ಮನೋಭಾವ ಮತ್ತು ಜೀವನದ ಬೇಡಿಕೆಗಳು ಒಂದೇ ರೀತಿ ಇರುವುದಿಲ್ಲ. ಉದಾಹರಣೆಗೆ, ದೆವ್ವದ ಬಗ್ಗೆ ಭೀತಿಯಿರುವ ಒಬ್ಬಾತನಿಗೆ ಇಂತಹ ಕಾರ್ಯಕ್ರಮವನ್ನು ನೋಡಿದರೆ, ಕಾರ್ಖಾನೆಗೆ ರಾತ್ರಿ ಪಾಳಿಯ ಕೆಲಸಕ್ಕೆ ಹೋಗುವಾಗ ತನ್ನ ಬೈಕ್ ನ ಹಿಂದಿನ ಸೀಟ್ ನಲ್ಲಿ ‘ದೆವ್ವ ಕೂತಿದ್ದರೆ’ ಎಂದು ಭಯವಾಗಬಹುದು. ಕತ್ತಲಲ್ಲಿ ಮನೆಯ ಹೊರಗೆ ಕಾಲಿಡಲು ಭಯ ಪಡುವ ಮಕ್ಕಳಿಗೆ ಇನ್ನಷ್ಟು ಭಯವಾಗಬಹುದು.
ಒಂದು ವೇಳೆ ಇವೆಲ್ಲಾ ನಿಜವಾಗಿ ನಡೆದ ಘಟನೆಗಳು ಅಂತ ಒಪ್ಪಿಕೊಂಡರೂ, ಅದನ್ನು ತಿಳಿದುಕೊಂಡು ಯಾರಿಗೆ ಏನು ಪ್ರಯೋಜನವಿದೆ?
ನನ್ನ ಸ್ಕೂಟರ್ ನಲ್ಲೋ, ಕಾರಿನಲ್ಲೋ ಹಿಂದಿನ ಸೀಟ್ ನಲ್ಲಿ ಅಕಸ್ಮಾತ್ ದೆವ್ವ ಬಂದು ಕುಳಿತರೆ, “ ಅಯ್ಯಾ, ನನಗೆ ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತುವ ಆಸೆ- ಆದರೆ ಸಾಕಷ್ಟು ದುಡ್ಡಿಲ್ಲ, ರಜೆಯಿಲ್ಲ……ಎವರೆಸ್ಟ್ ಮೇಲೇರುವ ಆಸೆ-ಆದರೆ ಇದಕ್ಕೆ ತಕ್ಕ ಆರೋಗ್ಯವಿಲ್ಲ, ನಿನ್ನ ಅತಿಮಾನುಷ ಶಕ್ತಿಯನ್ನು ಬಳಸಿ, ಈ ಎರಡು ಆಸೆಗಳನ್ನು ನೆರವೇರಿಸಿ ಪುಣ್ಯ ಕಟ್ಟಿಕೋ…. “ ಎನ್ನುತ್ತೇನೆ!!!!.

Tuesday, March 24, 2015

ಮೊಳುದುದ್ದ ಹೂವು…..ಮಾರುದ್ದದ ವಿಶ್ವಾಸ..

ದಿನಾ ಕೆಲಸಕ್ಕೆ ಹೋಗುವಾಗ ರಸ್ತೆಯ  ಟ್ರಾಫಿಕ್  ಸಿಗ್ನಲ್ ಒಂದರಲ್ಲಿ ಕಾಯಬೇಕಾಗುತ್ತದೆ. ಅಲ್ಲೊಬ್ಬ  ಮಲ್ಲಿಗೆ ಹೂವು ಮಾರುವವನು  ನಿಂತ ವಾಹನಗಳ ಹತ್ತಿರ ಬಂದು ‘ಹೂವು ಬೇಕೆ’ ಎನ್ನುವನು. ಕೆಲವರು ಬೇಡ ಅನ್ನುವುದು, ಕೆಲವರು ಹೂ ಕೊಳ್ಳುವುದು ನಡೆಯುತ್ತಿರುತ್ತದೆ. ಅರಳುವ ಮೊಗ್ಗುಗಳನ್ನು ಪೋಣಿಸಿರುವ ಮಾಲೆಗಳನ್ನು ಮಾರುತ್ತಿರುವ ಇವರ ಭವಿಷ್ಯ ಅರಳುವುದು ಯಾವಾಗಲೋ ಎನಿಸುತ್ತದೆ. ಅಷ್ಟರಲ್ಲಿ ಹಸಿರು ಸಿಗ್ನಲ್ ಬಂದು ನಿಂತ ಗಾಡಿಗಳೆಲ್ಲಾ ಹೋಗಿ ಇನ್ನಷ್ಟು ಕೆಲವು ಬಂದು ಸೇರುತ್ತವೆ. 
ಕೆಲವು ದಿನಗಳ ಹಿಂದೆ, ಸಿಗ್ನಲ್ ಬಳಿ ನಿಂತಿದ್ದಾಗ ಮಲ್ಲಿಗೆಹೂ ಮಾರುವಾತ ‘ಹೂ ಬೇಕೆ’ ಎಂದು ಕೇಳುತ್ತಾ ಬಂದ. ‘ಬೇಡ’ ಎಂದಿದ್ದಾಯಿತು. ಯಾಕೆಂದರೆ, ನಾನು ಹೂ ಮುಡಿಯುವುದು ಸಮಾರಂಭಗಳಿಗೆ ಹೋಗುವುದಿದ್ದರೆ ಮಾತ್ರ. ಇನ್ನು ಮನೆಯ ದೇವರ ಫೊಟೋಗಳಿಗೆ , ಎಮ್ಮ ಮನೆಯಂಗಳದ ಹೂಗಳೇ ಸಾಕಷ್ಟಿವೆ. ಮೇಲಾಗಿ,  ದೇವರ ಮನೆಗೆ ನಮ್ಮೆಜಮಾನ್ರು ಉಸ್ತುವಾರಿ ಸಚಿವರು. ಹಾಗಾಗಿ ನಾನು ಮಲ್ಲಿಗೆ ಹೂ ಕೊಳ್ಳುವ ಸಂದರ್ಭ ಅಪರೂಪ. ಈತ ಕೇಳಿದ್ದಾಗ ಮಾತ್ರ ಕೆಲವೊಮ್ಮೆ  ಹೂವನ್ನು ಖರೀದಿಸುತ್ತಿದ್ದೆ.
ಕಳೆದ ತಿಂಗಳು ಅದೊಂದು ದಿನ,  ಅದೇ ಸಿಗ್ನಲ್ ನಲ್ಲಿ, ನಾನು ಕಾರು ನಿಲ್ಲಿಸಿದ್ದೆ.  ಇನ್ನೇನು ಹಸಿರು ಸಿಗ್ನಲ್ ಬರಬೇಕು, ಅಷ್ಟರಲ್ಲಿ  ಆತ ಅದೆಲ್ಲಿದ್ದನೋ  ಒಂದು ಮೊಳದಷ್ಟು ಹೂವನ್ನು ನನಗೆ ಕೊಟ್ಟ. ನಾನು ಗಡಿಬಿಡಿಯಲ್ಲಿ   10  ರೂ ಚಿಲ್ಲರೆ ಇಲ್ಲ ಎನ್ನುತ್ತಾ, 100  ರೂ ಕೊಡಲು ಹೊರಟೆ.  ಅದು  ಹೇಗೋ ಕೈತಪ್ಪಿ ರಸ್ತೆಗೆ ಬಿತ್ತು.  ಹಸಿರು ಸಿಗ್ನಲ್ ಬಂದೇ ಬಿಟ್ಟಿತು, ಹಿಂದಿನ ವಾಹನಗಳ ಹಾರ್ನ್ ಶುರುವಾಗಿ   ಆ ಚಾಲಕರ ಕೋಪಕ್ಕೆ ತುತ್ತಾಗುವ  ನಾನು ಹೊರಡಲೇ ಬೇಕಲ್ಲಾ ಎಂದು ಕಾರು ಚಲಾಯಿಸುತ್ತಿದ್ದಂತೆ, ಹೂ ಮಾರುವಾತ ಓಡೋಡಿ ಬಂದು ರಸ್ತೆಗೆ ಬಿದ್ದಿದ್ದ ನೂರರ ನೋಟನ್ನು ಕಾರಿನ ಒಳಕ್ಕೆ ಹಾಕಿ ‘ದುಡ್ಡು ನಾಳೆ ಕೊಡಿ’ಎಂಬಂತೆ ಕೈಸನ್ನೆ ಮಾಡಿದ. ಅಂತೂ ಆವತ್ತು ನಾನು ದುಡ್ಡು ಕೊಡದೇ ಹೂ ಪಡೆದಂತಾಯಿತು.
ಸಿಗ್ನಲ್ ನಲ್ಲಿ ವಾಹನಗಳ ದೊಂಬಿಯಲ್ಲಿ, ಕೈತಪ್ಪಿ ಹೋದ ಆ ನೂರರ ನೋಟು ಯಾವುದಾದರೂ  ವಾಹನದ ಚಕ್ರಕ್ಕೆ ಸಿಕ್ಕಿ ಕೊಳೆಯಾಗುವ ಅಥವಾ ಹರಿಯುವ  ಸಾಧ್ಯತೆ ಇತ್ತು.  ಯಾರಾದರೂ ಹೆಕ್ಕಿದ್ದರೂ ನಾನು ಗಮನಿಸಲು ಸಾಧ್ಯವಿಲ್ಲವಾಗಿತ್ತು. ಆತ ತಾನೇ ಇಟ್ಟುಕೊಂಡಿದ್ದರೂ ನನಗೇನೂ ಗೊತ್ತಾಗುತ್ತಿರಲಿಲ್ಲ.  ಒಟ್ಟಿನಲ್ಲಿ ಆತನ ಪ್ರಾಮಾಣಿಕತೆ ಮೆಚ್ಚಿಗೆಯಾಯಿತು.
ನಾಳೆ ಆತನಿಗೆ ಮರೆಯದೆ  ಹಣ  ಕೊಡಬೇಕು ಎಂದು ಬೆಳಗ್ಗೆ ಹೊರಡುವಾಗ ದುಡ್ಡನ್ನು ಪಕ್ಕದ ಸೀಟ್ ನಲ್ಲಿ ಕಾಣಿಸುವಂತೆ ಎತ್ತಿಟ್ಟಿದ್ದೆ. ಸಿಗ್ನಲ್ ನಲ್ಲಿ ಕಾರಿನ  ಪಕ್ಕ ಬಂದ ಅವನಿಗೆ 5  ರೂ. ಜಾಸ್ತಿ ಸೇರಿಸಿ ಕೊಟ್ಟೆ. ನೋಡಿದ ತಕ್ಷಣ ಆತ “5 ರೂ. ಜಾಸ್ತಿ ಇದೆ… ನಂಗೆ ಫ್ರೀ ಏನೂ ಬೇಡಾ…..ವ್ಯಾಪಾರ ಮಾಡಿ….  ವಿಶ್ವಾಸವಿದ್ದರೆ ಥ್ಯಾಂಕ್ಸ್  ಅಂತೀನೀ… ”  ಅಂದ. ಸರಿ, ಆತನ ಸ್ವಾಭಿಮಾನಕ್ಕೆ ನಾನೇಕೆ ಭಂಗ ತರಲಿ ಎಂದು ‘ಹಾಗಿದ್ದರೆ ಈ ಗಣಪತಿ ಮೂರ್ತಿಗೆ ಮುಡಿಸುವಷ್ಟು ಸಣ್ಣ  ಮಾಲೆ ಕೊಡಿ’ ಎಂದೆ. ಆತ ಹೂಮಾಲೆಯನ್ನು ಕತ್ತರಿಸಿ ಕೊಟ್ಟ.  ಅದು ನಿನ್ನೆ 10. ರೂ ಗೆ ಕೊಟ್ಟಷ್ಟೇ ಉದ್ದವಿತ್ತು.

Jasmine
ಇದೇನ್ರಿ, ನಿನ್ನೆ ಕೊಟ್ಟಷ್ಟೇ ಇದೆಯಲ್ಲ….5 ರೂ.ಗೆ  ಸಣ್ಣ ತುಂಡು ಸಾಕಿತ್ತು ‘ ಅಂದೆ.  ‘ಈವತ್ತು ಮಲ್ಲಿಗೆಗೆ ಕಡಿಮೆ ರೇಟ್  ಇದೆ’ ಅಂದ. ಹಾಗಿದ್ದರೆ, ಇನ್ನೊಂದು 10  ರೂ. ಗೆ ಕೊಡಿ ಅಂದೆ. ಇನ್ನೊಂದು ಮೊಳ ಹೂ ಕೊಂಡಿದ್ದಾಯಿತು.   ನಗುಮುಖದಿಂದ “ಥ್ಯಾಂಕ್ಸ್ ಮೇಡಂ”  ಅಂದ. ಮನೆ ತಲಪಿದ ಮೇಲೆ ಕುತೂಹಲಕ್ಕೆಂದು ಹೋಲಿಸಿ ನೋಡಿದಾಗ  ಎರಡೂ ಮಲ್ಲಿಗೆ ಮಾಲೆಗಳು  ಒಂದೇ ಅಳತೆಯವಾಗಿದ್ದುವು !!  ಮೊಳುದುದ್ದ ಹೂವು ಅದಾದರೂ ಮಾರುದ್ದದ ವಿಶ್ವಾಸ ಅದರಲ್ಲಿತ್ತು.
ಈ ಘಟನೆಯ ನಂತರ ನಾನು ಒಂದು ಅಭ್ಯಾಸ ರೂಢಿಸಿಕೊಂಡಿದ್ದೇನೆ. ಅದೇನೆಂದರೆ, ಸಿಗ್ನಲ್ ನಲ್ಲಿ ವ್ಯಾಪಾರಕ್ಕೆ ಕೆಲವೇ ಸೆಕೆಂಡ್ಸ್ ಸಮಯ ಸಿಗುವುದರಿಂದ, ಮೊದಲಾಗಿಯೇ 10 ರೂ. ಅನ್ನು ಪಕ್ಕದ ಸೀಟ್ ನಲ್ಲಿ ಸುಲಭವಾಗಿ ಸಿಗುವಂತೆ  ಎತ್ತಿಟ್ಟು, ಹೊರಡುವುದು.  ಆತ ಕಾರಿನ ಬಳಿ ಬಂದರೆ , ನನಗೆ ಹೂ ಬೇಕಾಗಿದ್ದರೂ-ಬೇಡದಿದ್ದರೂ, ತಪ್ಪದೆ ಹೂ ಕೊಳ್ಳುವುದು.

 ವೃತ್ತಿ ಯಾವುದೇ  ಇರಲಿ, ಅದರ ಬಗ್ಗೆ ಗೌರವ ಮತ್ತು ಪ್ರಾಮಾಣಿಕತೆ , ಪರಸ್ಪರ ವಿಶ್ವಾಸವನ್ನು ಗಳಿಸಿಕೊಡುತ್ತದೆ.   


ಚಂದಿರನೇತಕೆ ಓಡುವನಮ್ಮ…ಪುಷ್ಪಾ ನಾಗತಿಹಳ್ಳಿ

ಈ ವಾರಾಂತ್ಯದಂದು, ಶ್ರೀಮತಿ ಪುಷ್ಪಾ ನಾಗತಿಹಳ್ಳಿಯವರು ಬರೆದ ಚಂದಿರನೇತಕೆ ಓಡುವನಮ್ಮ ಎಂಬ ಬಾಲ್ಯಕಾಲದ ಕಥನವನ್ನು ಓದಲೆಂದು ಕೈಗೆತ್ತಿಕೊಂಡಿದ್ದೆ. ಈಗ ಒಂದು ಬಾರಿ ಓದಿ ಮುಗಿಸಿದೆ. ಈ ಪುಸ್ತಕವು  ಓದಿಸಿಕೊಂಡು ಹೋಯಿತು  ಎನ್ನುವ ಬದಲು ನಾನೂ ಪುಸ್ತಕದೊಂದಿಗೆ ‘ಓಡಿಕೊಂಡು ಹೋದೆ’ ಎಂದರೆ ಹೆಚ್ಚು ಸೂಕ್ತ ಎನಿಸುತ್ತದೆ.
ನಾಗತಿಹಳ್ಳಿಯ ಹಳೆಮನೆ, ಹೊಸಮನೆ, ತೊಟ್ಟಿಮನೆ, ದಬಾನು ಗುಡಿ, ಮಾರಮ್ಮನ ಗುಡಿ, ತುಳಸಮ್ಮ ಗುಡಿ ಸುತ್ತಿ, ತೋಟ-ಹೊಲ-ಶಾಲೆಗೆ ಹೋಗಿ, ಹಳ್ಳಿ-ಕೇರಿ ಸುತ್ತಿ, ಟೆಂಟ್ ಸಿನೆಮಾ ನೋಡಿ, ತಮ್ಮಂದಿರ ಬಗ್ಗೆ ಆಕ್ಕರೆ ತೋರಿಸಿ, ಚಾಡಿ ಹೇಳಿ, ಬಾಲ್ಯದ ತುಂಟಾಟಗಳಲ್ಲಿ ಭಾಗಿಯಾಗಿ, ಕೂಡು ಕುಟುಂಬದ ಸಿಹಿ-ಕಹಿಗಳನ್ನುಂಡು…ಬಡತನದಲ್ಲೂ ಸಂತೋಷದಿಂದಿದ್ದ ಪುಷ್ಪಾ ಅವರ ಬಾಲ್ಯ ಕಾಲದ ನಿರೂಪಣೆ ಬಹಳ ಸೊಗಸಾಗಿದೆ.
ಅವರನ್ನೂ ಸೇರಿಸಿ  ಒಟ್ಟು ಆರು ಜನ ಸಹೋದರ-ಸಹೋದರಿಯರಿದ್ದರೂ ಅವರಲ್ಲಿ ಹೆಚ್ಚು ನಿಕಟವರ್ತಿಯಾಗಿದ್ದ ತಮ್ಮ ‘ಚಂದ್ರು’ (ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರು) . ಪುಸ್ತಕದುದ್ದಕ್ಕೂ ಈ ತಮ್ಮನ ಬಾಲ್ಯಲೀಲೆಗಳು ರಾರಾಜಿಸಿವೆ.  ಮುಂದಿನ ವೈವಾಹಿಕ ಜೀವನ, ಆಮೇಲೆ ಎದುರಾದ ಸಿಹಿ-ಕಹಿ ಘಟನೆಗಳು, ಪ್ರತಿ ಹಂತದಲ್ಲೂ ತನಗೆ ಬೆಂಬಲ ನೀಡಿದ/ನೀಡುತ್ತಿರುವ ತಮ್ಮನೊಂದಿಗೆ ಒಡನಾಟ.. ಹೀಗೆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ.  ತನ್ನ  ಜೀವನ ಪಯಣದಲ್ಲಿ ಒದಗಿಬಂದ ಆಸ್ಟ್ರೇಲಿಯಾ ಮತ್ತು ಲಂಡನ್ ಪ್ರಯಾಣಗಳು ಮತ್ತು ಅಲ್ಲಿನ ವಿಶೇಷತೆಗಳ ಬಗ್ಗೆಯೂ ಲೇಖಕಿ ಸೊಗಸಾದ ವಿವರಣೆ ಕೊಟ್ಟಿದ್ದಾರೆ.
Chandiranetake Oduvanamma- Pushpa Nagatihalli
ಅತ್ಯಂತ ಸರಳವಾಗಿ ಮತ್ತು ಬಹಳ ಆಪ್ತವಾಗಿರುವ ಶೈಲಿಯಲ್ಲಿ ಬರೆದ ಈ ಬಾಲ್ಯಕಥನವನ್ನು  ಓದುವಾಗ ಇಲ್ಲಿ ಬರುವ ಕೆಲವು ಪಾತ್ರಗಳು ‘ನಮಗೂ ಚಿರಪರಿಚಿತ…ಆದರೆ ನಮ್ಮೂರಲ್ಲಿ ಅವರ ಹೆಸರು ಮಾತ್ರಬೇರೆಯಾಗಿತ್ತು‘ ಎನಿಸುತ್ತವೆ!  ಪುಷ್ಪಾ ಅವರು ಬರೆದಂತೆ ‘ಕಾಲದೊಳಗೆ ಬದುಕೂ, ಬದುಕಿನೊಳಗೆ ಕಾಲವೂ ನುಸುಳುತ್ತಾ‘ ಸಾಗುವುದು ಎಷ್ಟು ನಿಜ! (ಪುಟ 86)
ಕನಸುಗಳಿಗೆ ಅದೆಷ್ಟು ಶಕ್ತಿ ಇದೆ! ಬಾಲ್ಯದಲ್ಲಿ ಕಂಡ ಕನಸುಗಳನ್ನೆಲ್ಲಾ ನನಸು ಮಾಡಿದ ಖ್ಯಾತಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರದು. ಜತೆಗೆ  ತಮ್ಮೂರಿನ ಬೇರನ್ನು ಮರೆಯದೆ ಅದನ್ನು ವಿವಿಧ ರೂಪದಲ್ಲಿ ಪೋಷಿಸುತ್ತಿದ್ದಾರೆ. ಸಹಜವಾಗಿಯೇ ಅಕ್ಕರೆಯ ಅಕ್ಕನಿಗೆ  “ಕುಟ್ನುದಯ್ಯನ ಹಿಂದೆ ಸುತ್ತುತ್ತಾ  ‘ನನಗೊಂದು ಪುಸ್ತಕ ಕೊಡಯ್ಯಾ’ ಎಂದು ಹಲುಬುತ್ತಿದ್ದ್ದ ಹುಡುಗ ಇಂದು ಅವನೇ ಕಟ್ಟಿಸಿದ ಲೈಬ್ರೆರಿಯ ಕೋಣೆಯಲ್ಲಿದ್ದ ಸಾವಿರಾರು ಪುಸ್ತಕಗಳ ಮಧ್ಯದಲ್ಲಿ  ಕುಳಿತು ಸಾಹಿತ್ಯ, ಕಥೆ , ನಾಟಕ, ಪ್ರವಾಸಗಳ ಬಗ್ಗೆ ಮಾತನಾಡುವಾಗ ಹೆಮ್ಮೆಯಾಗುತ್ತದೆ. (ಪುಟ 134)
ಪುಷ್ಪಾ ನಾಗತಿಹಳ್ಳಿ ಅವರು ತಮ್ಮ ಕುಟುಂಬದ  ಕೆಲವು ಚಿತ್ರಗಳನ್ನು  ಹಾಗೂ  ಮನೆಯ ಇತರ  ಸದಸ್ಯರ ಬಗ್ಗೆಯೂ ಸ್ವಲ್ಪ ವಿವರಣೆ ಕೊಟ್ಟಿದ್ದರೆ ಓದುಗರಿಗೆ  ಇನ್ನೂ ಸ್ಪಷ್ಟಚಿತ್ರಣ ಸಿಗುತಿತ್ತು ಎಂದು ನನ್ನ ಭಾವನೆ.  ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಮೂಡಿಬರಲಿ ಎಂದು ನಮ್ಮ ಆಶಯ.

ಎಲ್ಲಿ ಹೋದಿರಿ ತಳ್ಳು ಗಾಡಿಗಳೆ.. ?

ಎರಡು ದಶಕಗಳ ಹಿಂದೆ,  ಮೈಸೂರಿಗೆ ಬಂದ ಹೊಸದರಲ್ಲಿ ವಾಸವಿದ್ದ ಗೋಕುಲಂ ಬಡಾವಣೆಯಲ್ಲಿ ವಾಸವಾಗಿದ್ದೆವು. ಅದುವರೆಗೆ ದೂರದೂರದಲ್ಲಿ ಅಡಿಕೆ ತೋಟಗಳ ಮಧ್ಯೆ ಇರುತ್ತಿದ್ದ ಹೆಂಚಿನ ಒಂಟಿ ಮನೆಗಳನ್ನು ಮಾತ್ರ ನೋಡಿ ಗೊತ್ತಿದ್ದ ನನಗೆ ಬಡಾವಣೆ ಬದುಕು ಹೊಸ ಅನುಭವಗಳನ್ನು ಮೊಗೆಮೊಗೆದು ಕೊಟ್ಟಿತ್ತು.
ಶಾಂತವಾಗಿದ್ದು ಲವಲವಿಕೆಯಿಂದಿದ್ದ ಬಡಾವಣೆಯಲ್ಲಿ ಸಹೃದಯ  ನೆರೆಹೊರೆಯವರೂ ಇದ್ದು ಆರಾಮವಾಗಿದ್ದೆವು. ಬೆಳಗಾಗುತ್ತಿದ್ದಂತೆ ಹಿಂದಿನ ಮನೆ ಬೀದಿಯಲ್ಲಿ ಸೈಕಲ್ ಟ್ರಿಣ್ ಗುಟ್ಟಿದರೆ ಹಾಲಿನವನು ಬಂದ ಎಂದು ಅರ್ಥ. ಪಾತ್ರೆ ರೆಡಿ ಮಾಡಿಕೊಳ್ಳುವಷ್ಟರಲ್ಲಿ ಮನೆ ಮುಂದೆ ಆತ ಬರುತ್ತಿದ್ದ. ಇನ್ನು ಸ್ವಲ್ಪ ಹೊತ್ತಿನಲ್ಲಿ ‘ಮೊಲ್ಲೆ …ಮರ್ಲೇ…ಜಾಜಿ ಹೂವೇ…‘ ಎಂದು ಕೂಗುತ್ತಾ ತನ್ನ ತಲೆಯಲ್ಲಿ ಬಿದಿರಿನ ದೊಡ್ಡ ತಟ್ಟೆಯನ್ನು ಇರಿಸಿಕೊಂಡು ಹೂ ಮಾರುವ ಅಜ್ಜಿಯ ಸರದಿ. ಸೈಕಲ್ ನಲ್ಲಿ ಬರುವ ಪೇಪರ್ ಹಾಕುವ ಹುಡುಗನು  ಪೇಪರ್ ಅನ್ನು ಸುರುಟಿ ಕೊಳವೆಯಂತೆ ಮಾಡಿ, ಕೆಳಗಡೆಯಿಂದಲೇ ನಮ್ಮ ಬಾಲ್ಕನಿಗೆ ಎಸೆಯುತ್ತಿದ್ದ.
Green veg soppu cartಇನ್ನೂ7 ಗಂಟೆ ಆಗುವಷ್ಟರಲ್ಲಿ ‘ ದಂಟೀನ್ ಸೊಪ್ಪ್….ಪಾಲಾಕ್ ಸೊಪ್ಪ್…ಮೆಂತ್ಯ ಸೊಪ್ಪ್ … ” ಎಂದು ರಾಗವಾಗಿ ಹಾಡುತ್ತ ತರಕಾರಿ ಗಾಡಿಯನ್ನು ತಳ್ಳುತ್ತಾ ಬರುವ ಹೆಂಗಸೊಬ್ಬರು. ಹಿಂದಿನ ಬೀದಿಯಲ್ಲಿ ಅವರ ದನಿ ಕೇಳಿಸಿದೊಡನೆ, ನಮ್ಮ ಎರಡು ವರ್ಷದ ಮಗ ಅದನ್ನು ಅನುಕರಿಸಿ ತಾನೂ ‘ಸೊಪ್ಪಿನ  ಹಾಡು’ ಹಾಡುತ್ತಿದ್ದ. ಇದಾದ ಮೇಲೆ ‘ಹಳೆ ಪಾತ್ರೇ….ಹಳೇ ಪೇಪರ್….’ ಎನ್ನುವ ವ್ಯಾಪಾರಿ, ರಂಗೋಲಿ ಪುಡಿ ಮಾರುವವಳು,, ಆಯಾ ಸೀಸನ್ ನಲ್ಲಿ ಕರಬೂಜ, ಸೀಬೆ ಹಣ್ಣು, ಮಾವಿನಹಣ್ಣು, ಕಡಲೇಕಾಯಿ ಮಾರುವವರು  …. ಇವರೂ ತಮ್ಮ ತಳ್ಳು ಗಾಡಿಗಳ ಸಮೇತ  ಪ್ರತ್ಯಕ್ಷವಾಗುತ್ತಿದ್ದರು.  ..
ಆಮೇಲೆ ಬರುವ ತರಕಾರಿಯಣ್ಣ (ಅವರ  ಹೆಸರು ನೆನಪಿಲ್ಲ) ವಿವಿಧ  ತರಕಾರಿಗಳನ್ನು ಹೇರಿದ ತಳ್ಳುಗಾಡಿಯನ್ನು  ರಸ್ತೆಯ ಇಳಿಜಾರಿನಲ್ಲಿ ಜಾರದಂತೆ, ಚಕ್ರಕ್ಕೆ ಕಲ್ಲು ಕೊಟ್ಟು ನಿಲ್ಲಿಸಿ  ‘ ಬದನೇಕಾಯ್ . ..ಬೆಂಡೇಕಾಯ್  ..  ಹೀರೇಕಾಯ್ .. ಅವರೇಕಾಯ್… ಸೌತೆಕಾಯ್…”  ಎನ್ನುವಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಚಿಕ್ಕ ಬುಟ್ಟಿಯನ್ನೋ, ಚೀಲವನ್ನೋ  ಕುಕ್ಕರ್ ಪಾತ್ರೆಯನ್ನೋ ಹಿಡಿದು ಗಾಡಿಯ ಸುತ್ತ ಮುತ್ತ ಜಮಾಯಿಸುತ್ತಿದ್ದರು.
“ಏನಣ್ಣ ನಿನ್ನೆ ಬಂದಿಲ್ಲ… ಮೊನ್ನೆ ಕೊಟ್ಟಿದ್ದ ಅವರೇಕಾಯಿ ಬರೀ ಹುಳ…ಮೂಲಂಗಿ ಚೆನ್ನಾಗಿದೆ…ಸೌತೆಕಾಯಿ ಕಹಿ ಇತ್ತಪ್ಪಾ…ಮಗಳ ಸೀಮಂತ ಆಯ್ತಾ… “ಇತ್ಯಾದಿ ಪ್ರಶಂಸೆ, ನಿಂದನೆ, ಕುಶಲೋಪರಿಗಳ ಜತೆಗೆ ವ್ಯಾಪಾರ ನಡೆಯುತ್ತಿತ್ತು. ಬಾಲ್ಕನಿ  ಮೇಲೆ ಬಟ್ಟೆ ಹರವುತ್ತಿದ್ದ ನನ್ನನ್ನು ನೋಡಿ ‘ಆಂಟಿ ತರಕಾರಿ ಬೇಡ್ವಾ… ಕಾಫಿ ಆಯ್ತಾ….ಪಾಪು ಉಷಾರಾ…..’ಎಂದು ಮಾತಿಗೆಳೆಯುತಿದ್ದ. ನನಗಿಂತ ವಯಸ್ಸಿನಲ್ಲಿ ಬಹಳಷ್ಟು ದೊಡ್ಡವರಾದರಾದ ಆತನಿಗೆ ನಾನು ಹೇಗೆ ‘ಆಂಟಿ’ ಆಗಬಲ್ಲೆ ಅನಿಸುತಿತ್ತು.
VEgetable vendorಈತನಿಗೆ ಊರ ಸಮಾಚಾರ ಎಲ್ಲಾ ಬೇಕು. ಯೋಗಕ್ಷೇಮ ವಿಚಾರಿಸುತ್ತಾ, ನಗುತ್ತಾ ತರಕಾರಿ ವ್ಯಾಪಾರ ನಡೆಯುತಿತ್ತು. “ಬೀನ್ಸ್ ತುಂಬಾ  ಬೆಲೆ……ಟೊಮಾಟೊ ಚೆನ್ನಾಗಿಲ್ಲ… ”  ಅಂತ ಯಾರಾದರೂ ಅಕ್ಷೇಪಿಸಿದರೆ  ಇದು ನಾಟಿ ಬೀನ್ಸ್ ಚೆನಾಗಿರುತ್ತೆ ಅಕ್ಕಾ… ಇದು ನಮ್ ತ್ವಾಟದ್ದೇಯಾ ….ನಾ  ಊಟಿ ಬೀನ್ಸ್ ತರಲ್ಲಾ ಬೇರೆಯವರ ತರಾ…… ಹುಳಿ ಟೊಮಾಟೊ ಬೇರೆ ಇದೆ, ಇದು ಜಾಮೂನ್ ಟೊಮೆಟೊ ..ನಿಮಗ್ಯಾವುದು ಬೇಕು ….ಈರೆಂಗೆರೆ ಬದನೆಕಾಯ್ ನೋಡಿ..ಭಾತ್ ಮಾಡಿದ್ರೆ ಏನು ಚೆನ್ನಾಗಿರ್ತೆ ಅಂತೀರಾ… “ ಎಂದು  ಮಾರುತ್ತರಿಸುತ್ತಿದ್ದ. ತಮಾಷೆ ಏನೆಂದರೆ , ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ವ್ಯಾಪಾರಕ್ಕೆ  ವಿಪರೀತ ಚೌಕಾಶಿ ಮಾಡಿ ನಾಲ್ಕಾಣೆ ಉಳಿಸಿದ ಅಜ್ಜಿಯೊಬ್ಬರು, ಒಳಗಿನಿಂದ ಲೋಟದಲ್ಲಿ ಕಾಫಿ ತಂದು ತರಕಾರಿಯಣ್ಣನಿಗೆ ಕೊಟ್ಟು ‘ಕಾಫಿ ಕುಡಿಯಪ್ಪ…ಬಿಸಿ ಆರೋಗುತ್ತೆ’  ಅಂದು ಧಾರಾಳತನ ಪ್ರದರ್ಶಿಸುತ್ತಾರೆ!
‘ಗಡ್ಡೆ ಕೋಸು ಇದ್ಯಾ’ ಎಂದು ವಿಚಾರಿಸುತ್ತಾರೆ ಇನ್ನೊಬ್ಬರು. ‘ನಿನ್ನೆ ಇತ್ತು ಅಕ್ಕ…….ಈವತ್ತಿಲ್ಲ, ನಾಳೆ ತರ್ತೇನೆ……ಈ ನಡುವೆ ನೀವು ತರಕಾರಿಗೆ ಬರೋದೇ ಇಲ್ಲ್ಲಾ……ಬೀಟ್ ರೂಟ್ ತೊಗೊತೀರಾ…..ಈವತ್ತೇ ಕಿತ್ತಿದ್ದು……ತ್ವಾಟದಿಂದ್ಲೇ ಬಂದೆ……ಹೂಕೋಸು ಹಾಕಿವ್ನಿ…….ಮುಂದಿನ್ವಾರ ತರ್ತೀನಿ..” ಇತ್ಯಾದಿ ಮಾತು ಸಾಗುತ್ತದೆ. ಗಡ್ಡೆ ಕೋಸು  ಕೇಳಿದವರು, ಬೀಟ್ ರೂಟ್ ಕೊಂಡು ವಾಪಸ್ಸಾಗುತ್ತಾರೆ. ಅವರು ತಂದಿರೋ ದುಡ್ಡು  ಸ್ವಲ್ಪ  ಕಡಿಮೆಯಿರುತ್ತದೆ. ‘ಅಯ್ಯೊ ನಾಳೆ ಕೊಡುವಿರಂತೆ……’ ಎಂದು ಇವನೇ ಸಮಜಾಯಿಶಿ ಹೇಳುತ್ತಾನೆ.
ನಮ್ಮ ಮಗ ಚಿಕ್ಕವನಿದ್ದಾಗ ಅವನಿಗೆ ಬೇಯಿಸಿದ ನೇಂದ್ರಬಾಳೆ ಹಣ್ಣನ್ನು ಹೆಚ್ಚಿ ಕೊಟ್ಟರೆ ಇಷ್ಟಪಟ್ಟು ತಿನ್ನುತಿದ್ದ. ಮೈಸೂರಿನಲ್ಲಿ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ ಕೇರಳದ ‘ನೇಂದ್ರ ಬಾಳೆ’ ಹಣ್ಣು ಸಿಗುತ್ತಿರಲಿಲ್ಲವಾದುದರಿಂದ  ಬೀದಿಯಲ್ಲಿ  ಬಾಳೆ ಹಣ್ಣು ಮಾರುತ್ತಿದ್ದ ಅಜ್ಜ ಒಬ್ಬರನ್ನು ಪರಿಚಯಿಸಿಕೊಂಡು ನಮಗೆ ವಾರಕ್ಕೆ ಒಂದು ಚಿಪ್ಪು ‘ನೇಂದ್ರ ಬಾಳೆ’ ಹಣ್ಣು ತಂದುಕೊಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದೆವು. ಆ ಅಜ್ಜ ತಪ್ಪದೇ ಹಣ್ಣು ತರುತಿದ್ದರು. ಇವನೂ ತನಗೆ ಅ ತಾತ ಬಹಳ ಪರಿಚಯದವರೇನೋ ಎಂಬಂತೆ ಅವರ ಬಳಿ  ನಗುನಗುತ್ತಾ  ತೊದಲು ಮಾತನಾಡುತ್ತಿದ್ದ. ಅಷ್ಟರಲ್ಲಿ ನಾನು ಚಹಾ ಕೊಡುತ್ತಿದ್ದೆ. ಅದನ್ನು ಕುಡಿದು  ‘ಟೀ ಚನ್ನಾಗೈತೆ…ಮೊಗಾ..’ ಎಂದು ಹೇಳಿ ಅಜ್ಜ ಹೊರಡುತ್ತಿದ್ದರು.
veg cart
ಮೈಸೂರಿನ ಕೆಲವು ಬಡಾವಣೆಗಳಲ್ಲಿ ಈ ರೀತಿಯ ವ್ಯಾಪಾರ-ಸಂಸ್ಕೃತಿ ಈಗಲೂ ಇದೆ. ಆದರೆ ಮಾಲ್ ಗಳಲ್ಲಿ, ಗ್ರಾಹಕರಾದ ನಾವೇ ‘ಗಾಡಿ’ಯನ್ನು ತಳ್ಳುತ್ತಾ ನಮಗೆ ಬೇಕಾದುದನ್ನು ಗಾಡಿಗೆ ಹಾಕಿಕೊಳ್ಳುತ್ತೇವೆ.  ಗೃಹಿಣಿಯರ ಶ್ರಮ ಕಡಿಮೆ ಮಾಡಲು ಕತ್ತರಿಸಿದ ಬೀನ್ಸ್, ಸುಲಿದ ಬೆಳ್ಳುಳ್ಳಿ, ಹೆಚ್ಚಿದ ಕ್ಯಾಬೇಜ್ …ಕೂಡಾ ಸಿಗುತ್ತವೆ. ಬೇಕಿದ್ದನ್ನು ಕೊಂಡು ಮಾತಿಲ್ಲದೆ ನಿಗದಿತ ದುಡ್ಡನ್ನು  ಕಾರ್ಡ್ ಸ್ವೈಪ್ ಮಾಡಿ ಅಥವಾ ಕ್ಯಾಷ್ ಕೊಟ್ಟು  ಬಂದರೆ ಕೌಂಟರ್ ನಲ್ಲಿ ಕುಳಿತವನು/ಳು ನಿರ್ಭಾವುಕತೆಯಿಂದ ಥ್ಯಾಂಕ್ಸ್ ಅನ್ನುತ್ತಾರೆ. ಅಲ್ಲಿಗೆ ಮುಗಿಯಿತು ಶಾಪಿಂಗ್.
ಹೊಸ ಪದ್ಧತಿಗಳಿಗೆ ಕೆಲವು ಅನುಕೂಲತೆಗಳು ಇವೆ.   ಆದರೂ ಮನುಷ್ಯ ಮನುಷ್ಯನೇ, ಯಂತ್ರ ಯಂತ್ರವೇ ಅಲ್ಲವೇ? ಎಲ್ಲಿ ಹೋದುವು ತಳ್ಳು ಗಾಡಿಗಳು , ಅವುಗಳ ಒಡೆಯರು, ಅವರ ಮಾತುಗಳು ಮತ್ತು ಗಾರ್ಡನ್ ಫ್ರೆಷ್ ತರಕಾರಿಗಳು ??

Tuesday, January 27, 2015

ಸಾಹಿತ್ಯ-ಸಂಭ್ರಮ-ಸಂಗೀತಗಳ ಸಂಗಮ


ಇತ್ತೀಚೆಗೆ ನನಗೆ ಅಂಟಿಕೊಂಡ ಗೀಳು ಕನ್ನಡದಲ್ಲಿ ತೋಚಿದಂತೆ ಗೀಚುವುದು. ಇದರ ಅಭಿವ್ಯಕ್ತಿಗೆ ವೇದಿಕೆಯಾಗಿ 'ಸುರಹೊನ್ನೆ' ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದ್ದಾಯಿತು. ಸಮಾನಾಸಕ್ತರೂ,  ಫೇಸ್ ಬುಕ್ ಗೆಳೆಯ/ಗೆಳತಿಯರೂ  ಈ ಹವ್ಯಾಸಕ್ಕೆ ತಾವೂ  ಕೈಜೋಡಿಸಿ, ನೀರೆರೆದು ಪೋಷಿಸಿದರು ಎಂದು ಹೇಳಿಕೊಳ್ಳಲು ಸಡಗರವಾಗುತ್ತಿದೆ. ಇದರ ಮುಂದುವರಿದ ಭಾಗವೋ ಎಂಬಂತೆ, ಹುಬ್ಬಳ್ಳಿಯಲ್ಲಿರುವ ಶ್ರೀ ರಂಗಣ್ಣ  ನಾಡಗೀರ ಅವರು, "ನೀವು ಧಾರವಾಡದಲ್ಲಿ  2015 ಜನವರಿ 16-18 ರ ವರೆಗೆ ಜರಗಲಿರುವ ಸಾಹಿತ್ಯ-ಸಂಭ್ರಮಕ್ಕೆ ಬನ್ನಿ, ಕಾರ್ಯಕ್ರಮಗಳು ಬಹಳ ಸೊಗಸಾಗಿರುತ್ತವೆ" ಎಂದಾಗ,  ಶ್ರುತಿಶರ್ಮಾ ಮತ್ತು ನಾನು ಖುಷಿಯಿಂದ ಹೊರಟೆವು.  ಮೈಸೂರಿನವರಾದ ಶ್ರೀ ಕೆ.ನಂಜುಂಡಸ್ವಾಮಿ ಮತ್ತು ಬೆಂಗಳೂರಿನ ಶ್ರೀ ಎಚ್.ಎಮ್.ಚಂದ್ರಶೇಖರಯ್ಯನವರನ್ನು ಅಲ್ಲಿ ಪರಿಚಯವಾಗಿ ನಾವೆಲ್ಲರೂ ಒಂದು ತಂಡವಾಗಿ ಇದ್ದೆವು. 


ಜನವರಿ 15 ರಂದು ಮೈಸೂರಿನಿಂದ ಹೊರಟ ನಾವು ಮರುದಿನ ಧಾರವಾಡ ತಲಪಿ, ಅಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣ ಸೇರಿ, ನೋಂದಣಿ ಪ್ರಕ್ರಿಯೆ ಮುಗಿಸಿದೆವು.  ಕಾರ್ಯಕ್ರಮಗಳ ವೇಳಾಪಟ್ಟಿ, ಊಟ-ತಿಂಡಿಯ ಕೂಪನ್ ಗಳು ಮತ್ತು ಕೆಲವು ಪುಸ್ತಕಗಳನ್ನೊಳಗೊಂಡ ಕಿಟ್ ಒಂದನ್ನು ಎಲ್ಲಾ ಪ್ರತಿನಿಧಿಗಳಿಗೂ ಕೊಟ್ಟಿದ್ದರು.  ಅಲ್ಲಿದ್ದ ಮೂರು ದಿನಗಳಲ್ಲೂ ನಮಗೆ ಸಭಾಭವನದಲ್ಲಿ ಸಾಹಿತ್ಯ, ಸಂಗೀತ, ಸಂಭ್ರಮಗಳ ರಸದೌತಣವಾದರೆ, ಊಟದ ಹಾಲ್ ನಲ್ಲಿ ಉತ್ತರ ಕರ್ನಾಟಕ ಶೈಲಿಯ ರಸಗವಳ ಲಭಿಸಿತ್ತು. ಧಾರವಾಡದ  ಜೋಳದ ರೊಟ್ಟಿ, ಬದನೆಕಾಯಿಯ ಎಣ್ಣೆಗಾಯಿ,  ಗೋಧಿಯ  ಹುಗ್ಗಿ, ಮಾದಲಿ, ..... ಇತ್ಯಾದಿಗಳೊಡನೆ   ಬಿಸಿಬೇಳೆ ಬಾತ್, ಮೊಸರನ್ನಗಳೂ ಇದ್ದ ಊಟ ಬಹಳ ಚೆನ್ನಾಗಿತ್ತು.   ಕಾರ್ಯಕ್ರಮಗಳಲ್ಲಿ ವೈವಿಧ್ಯತೆ ಇದ್ದು, ನಮಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ.  ಗೌಜು ಗದ್ದಲಗಳಿಲ್ಲದೆ ಪ್ರಶಾಂತವಾಗಿದ್ದ ಮತ್ತು ಸುಂದರವಾಗಿದ್ದ  ಯೂನಿವರ್ಸಿಟಿಯ ಆವರಣದಲ್ಲಿ, ಹಿತವಾದ ಹವಾಮಾನದಲ್ಲಿ ಸುಮ್ಮನೆ ನಡೆದಾಡುವುದು  ಕೂಡಾ ಬಹಳ ಸಂತೋಷ ಕೊಟ್ಟಿತು.



16 ಜನವರಿ 2015 ರಂದು ಸಚಿವೆ ಶ್ರೀಮತಿ ಉಮಾಶ್ರೀ ಅವರಿಂದ ಉದ್ಘಾಟನೆಗೊಂಡ ಸಾಹಿತ್ಯ-ಸಂಭ್ರಮವು  " ಈಗ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ" ಎಂದು ಪತ್ತೆ ಮಾಡುವ ಜಾಡಿನಲ್ಲಿ ಸಾಗಿತು. ಪ್ರತಿ ಗೋಷ್ಠಿಯಲ್ಲೂ ಸಂಪನ್ಮೂಲ ವ್ಯಕ್ತಿಗಳೊಡನೆ ಒಬ್ಬರು ನಿರ್ದೇಶಕರಿದ್ದರು. ಇಲ್ಲಿ ಏಕಮುಖವಾದ ಉದ್ದುದ್ದ ಭಾಷಣಗಳಿರಲಿಲ್ಲ. ಬದಲಾಗಿ ಅರ್ಥಪೂರ್ಣ ಸಂವಾದಗಳಿದ್ದುವು. ಸಭಿಕರಿಗೂ ಸಮಯದ ಪರಿಮಿತಿಯೊಳಗೆ ಪ್ರಶ್ನೆಗಳನ್ನು ಕೇಳುವ ಅವಕಾಶವಿತ್ತು. ಗೋಷ್ಠಿಯ ವಿಷಯಾಂತರವಾಗದಂತೆ  ನಿಗಾ ಇಟ್ಟಿದ್ದರು ಹಾಗೂ ಸಮಯಪಾಲನೆಯನ್ನು ಕಾಯ್ದುಕೊಂಡಿದ್ದರು.  ಇಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರಸ್ತುತ ವಿದ್ಯಮಾನಗಳನ್ನು ಚರ್ಚಿಸಲಾಯಿತು.  ಮುಂದಿನ ಭಾಗದಲ್ಲಿ  ಲಲಿತ ಪ್ರಬಂಧಗಳ ಓದು ಸುಲಲಿತವಾಗಿ ರಸಮಯವಾಗಿತ್ತು. ಮಲೆಮಹದೇಶ್ವರ, ಮಂಟೇಸ್ವಾಮಿ ಮತ್ತು ಬಿಳಿಗಿರಿರಂಗ ದೇವರ ಬಗ್ಗೆ ಜಾನಪದ ಶೈಲಿಯಲ್ಲಿ ರಚಿತವಾದ ಕಂಸಾಳೆ ಪದಗಳನ್ನು ಮೈಸೂರಿನ ಗುರುರಾಜ್ ಮತ್ತು ತಂಡ ಬಹಳ ಸೊಗಸಾಗಿ ಪ್ರಸ್ತುತ ಪಡಿಸಿದರು. ಕನ್ನಡದಲ್ಲಿ ಅನುವಾದಗಳ ಸಮಸ್ಯೆಗಳು, ಇತಿಹಾಸಕಾರರೊಂದಿಗೆ ಇತಿಹಾಸಕಾರ....ಹೀಗೆ ಗೋಷ್ಠಿಗಳು ಸಾಗಿದುವು. ಸಂಜೆ ಪಂ.ಎಂ. ವೆಂಕಟೇಶಕುಮಾರ ಅವರ ಶಾಸ್ತ್ರೀಯ ಸಂಗೀತವು  ಕೇಳುಗರನ್ನು ತನ್ಮಯಗೊಳಿಸಿತು.  



ಎರಡನೆಯ ದಿನವಾದ 17  ಜನವರಿಯಂದು, 'ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣಪತ್ರಿಕೆಗಳ ಪಾತ್ರ'ದ ಬಗ್ಗೆ ಬೆಳಕು ಚೆಲ್ಲಲಾಯಿತು. ಗೋಷ್ಠಿ ಮುಂದುವರಿದು 'ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ' ಎಂದು ಚರ್ಚಿಸಲಾಯಿತು.   ಲೇ.ಜ.ಎಸ್.ಸಿ.ದೇಶಪಾಂಡೆ ಅವರು ಬರೆದ ' ರಾಷ್ಟ್ರೀಯ ಸುರಕ್ಷೆಯ ಜಗ್ಗಾಟ' ಮತ್ತು  ಶ್ರೀ ಕೆದಂಬಾಡಿ ಜತ್ತಪ್ಪ ರೈ ಅವರ ' ಬೇಟೆಯ ಉರುಳು' ಪುಸ್ತಕಗಳ ಬಿಡುಗಡೆಯಾಯಿತು.  ಕನ್ನಡದ ದಿಗ್ಗಜರಾದ ಪು.ತಿ.ನರಸಿಂಹಾಚಾರ್ ಮತ್ತು ವಿ.ಕೃ.ಗೋಕಾಕ್ ಅವರ ಕವಿತೆಗಳನ್ನು ಓದಲಾಯಿತು. ಊಟದ ವಿರಾಮದ ನಂತರ  ಕನ್ನಡ ಮಾಧ್ಯಮ ಮುಂದೇನು? ಎಂದು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದುಹೋಗುತ್ತಿರುವ ಕನ್ನಡದ ಬಗ್ಗೆ ಚರ್ಚಿಸಿದರು.  ಆಮೇಲೆ, ಮಹಾಭಾರತ ಪರಂಪರೆಯ ಓದಿಗೆ ವಿದ್ವಾಂಸರು ದನಿಯಾದರು. ವೈದೇಹಿ ಕಥಾ ಪ್ರಸ್ತುತಿ, ನಾಟಕಕಾರರೊಂದಿಗೆ ನಾಟಕಕಾರ ಇತ್ಯಾದಿ ವಿಷಯಗಳ  ಗೋಷ್ಠಿಯಿಂದ ಸಂಪನ್ನಗೊಂಡ ಎರಡನೆಯ ದಿನವು  ಆನಂದಕಂದರ ಕಾವ್ಯಗಾಯನದಿಂದ ಮುಕ್ತಾಯಗೊಂಡಿತು.

18 ಜನವರಿ ಯಂದು,  ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದ ಸ್ಥಾನ, ಕನ್ನಡ ಪುಸ್ತಕಗಳ ಓದುಗರ ಒಲವುಗಳು ಮಾತು ಈಗಿನ ಮಾಹಿತಿ ತಂತ್ರ ಜ್ಞಾನದಿಂದ ಆಗಿರುವ ಒಳಿತು-ಕೆಡುಕುಗಳ ಬಗ್ಗೆಯೂ ವಿಚಾರ ವಿನಿಮಯವಾಯಿತು.  ಶ್ರೀ ಟಿ.ಪಿ. ಅಶೋಕ ಅವರ 'ಕಥನ ಕಾರಣ' ಮತ್ತು  ಶ್ರೀ ಸಿ.ಎನ್. ರಾಮಚಂದ್ರನ್ ಅವರ ' ಸೈದ್ಧಾಂತಿಕ ಹಾಗೂ ಅನ್ವಯಿಕ ನೆಲೆಗಳು' ಪುಸ್ತಕಗಳು ಬಿಡುಗಡೆಗೊಂಡುವು. 'ಸಾಹಿತಿಗಳೊಂದಿಗೆ ನಾವು - ಪ್ರಸಂಗಗಳು'  ಕಾರ್ಯಕ್ರಮದಲ್ಲಿ ಕೆಲವು ಖ್ಯಾತ ಸಾಹಿತಿಗಳೊಡನೆ ತಮಗಾದ ಅನುಭವಗಳನ್ನು ರಸವತ್ತಾಗಿ ಚಿತ್ರಿಸಿ ಸಭೆಯಲ್ಲಿ ನಗೆಗಡಲು ಸೃಷ್ಟಿಸಿದರು.  ಊಟದ ವಿರಾಮದ ನಂತರ 'ರಂಗಪ್ರದರ್ಶನ'ವನ್ನು ನೋಡಿ, 'ಭಾಷೆ ಮತ್ತು ಅಭಿನಯದ' ಒಳಹೊಕ್ಕು ಈ ಮೌಲ್ಯಯುತವಾದ ಸಾಹಿತ್ಯ-ಸಂಭ್ರಮಕ್ಕೆ ತೆರೆ ಬಿದ್ದಿತು. ಕೊನೆಯದಾಗಿ ಶ್ರೀ ಪ್ರಕಾಶ್ ರೈ ಅವರ 'ಒಗ್ಗರಣೆ' ಚಲನಚಿತ್ರ ಪ್ರದರ್ಶನವಿತ್ತು.

ಅಲ್ಲಿದ್ದ ಪುಸ್ತಕ ಮಳಿಗೆಗಳಲ್ಲಿ  ರಿಯಾಯಿತಿ ದರದಲ್ಲಿ  ಹಳೆಯ-ಹೊಸ , ಹಿರಿಯ-ಕಿರಿಯ ಬರಹಗಾರರ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದ್ದುವು. ಇದೇ ಸ್ಥಳದಲ್ಲಿ ದೊಡ್ಡದಾದ ಟಿ.ವಿ ಪರದೆಯನ್ನು ಅಳವಡಿಸಿದ್ದರು. ಸಭಾಂಗಣದಲ್ಲಿ ಸ್ಥಳಾವಕಾಶ ಸಿಗದಿದ್ದವರಿಗೆ ಇಲ್ಲಿ ಕುಳಿತು ಕಾರ್ಯಕ್ರಮಗಳನ್ನು ನೋಡುವ ವ್ಯವಸ್ಥೆ ಇದಾಗಿತ್ತು.



ಒಟ್ಟಿನಲ್ಲಿ ನಮಗೆ ಇದೊಂದು ಸಾಹಿತ್ಯ, ಸಂಗೀತ ಮತ್ತು ಸಂಭ್ರಮಗಳ ಸಂಗಮ. ಇದಕ್ಕೆ ಮೂಲ ಕಾರಣ  ಫೇಸ್ ಬುಕ್ ಗೆಳೆಯರಾದ ಹುಬ್ಬಳ್ಳಿಯ  ಶ್ರೀ ರಂಗಣ್ಣ ನಾಡಗೀರ ಅವರು. ಅವರ ಸಂದೇಶವು ನಮ್ಮನ್ನು ಮೈಸೂರಿನಿಂದ ಹೊರಡಿಸಿ ಧಾರವಾಡ ತಲಪಿಸಿತು. ಸಾಹಿತ್ಯ-ಸಂಭ್ರಮದಲ್ಲಿ ನಾವಿಬ್ಬರು  ಭಾಗವಹಿಸಲು ಬೇಕಾದ ವ್ಯವಸ್ಥೆ ಮಾಡುವುದರ ಜೊತೆಗೆ, ತಮ್ಮ ಸಮಯವನ್ನು ಹೊಂದಿಸಿಕೊಂಡು, ನಮಗೆ  ಸಾಧನಕೇರಿಯಲ್ಲಿರುವ  ದ.ರಾ.ಬೇಂದ್ರೆಯವರ  ನಿವಾಸ, ಮಲಪ್ರಭಾ ಅಣೆಕಟ್ಟು, ಸವದತ್ತಿಯಲ್ಲಿರುವ ಎಲ್ಲಮ್ಮ ದೇವಾಲಯ, ಮರುಘಾ ಮಠ ಮತ್ತು ಸಿದ್ಧಾರೂಢ ಮಠಗಳನ್ನೂ ತೋರಿಸಿ, ತಮ್ಮ ನಿವಾಸಕ್ಕೂ ಕರೆದೊಯ್ದಿದ್ದರು. ಹಿತೈಷಿಯಾದ ಅವರನ್ನೂ, ಅವರ  ಮನೆಯವರೆಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ.

ದ.ರಾ.ಬೇಂದ್ರೆಯವರ ನಿವಾಸ 'ಶ್ರೀಮಾತಾ'

ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ 'ಶ್ರೀಮಾತಾ'ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು.



ಮಲಪ್ರಭಾ ಅಣೆಕಟ್ಟು

ಇದು ನವಿಲುತೀರ್ಥ ಅಣೆಕಟ್ಟು. ಮಲಪ್ರಭಾ ನದಿಗೆ ಕಟ್ಟಲಾದ ಈ ಅಣೆಕಟ್ಟು ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ಮುನವಳ್ಳಿಯ ಮಧ್ಯೆ ಇದೆ. ಈ ಅಣೆಕಟ್ಟಿನಿಂದಾಗಿ 'ರೇಣುಕಾಸಾಗರ' ಎಂಬ ಜಲಾಶಯ ನಿರ್ಮಾಣವಾಗಿದ್ದು, ಇದು ಸುಮಾರು 2000 ಚದರ ಕಿ.ಮೀ ಯಷ್ಟು ಕೃಷಿಭೂಮಿಗೆ ನೀರಾವರಿ ಒದಗಿಸುತ್ತದೆ.
ನಿನ್ನೆ ನವಿಲುತೀರ್ಥ ಅಣೆಕಟ್ಟಿಗೆ ನಮ್ಮನ್ನು ಕರೆದುಕೊಂಡು ಹೋಗಿದ್ದ ಶ್ರೀ ರಂಗಣ್ಣ ನಾಡಗೀರ ಅವರು ಈ ಅಣೆಕಟ್ಟಿನ ನಿರ್ಮಾಣದ ಆರಂಭದ ಹಂತದಲ್ಲಿ ಅಲ್ಲಿ ಸೇವೆಯಲ್ಲಿದ್ದರು.(ಚಿತ್ರದಲ್ಲಿ ಬಲದಿಂದ ಎರಡನೆಯವರು). ಧಾರವಾಡದ ಸಾಹಿತ್ಯ-ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ನಮ್ಮನ್ನು ಬಹಳ ಅತ್ಮೀಯತೆಯಿಂದ ತಮ್ಮೂರಿಗೆ ಸ್ವಾಗತಿಸಿ, ಕಾಳಜಿಯಿಂದ ಆದರಿಸುವ ಅವರಿಗೆ ಅನಂತ ನಮನಗಳು.
 — with Ranganna Nadgir and Shruthi Sharma.
Like ·  · 

Sunday, January 4, 2015

ಚಂದ್ರಮಾನ – ನಾಗತಿಹಳ್ಳಿ ಚಂದ್ರಶೇಖರ



ನವೆಂಬರ್ ತಿಂಗಳಲ್ಲಿ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ನುಡಿಸಿರಿ’ ಕಾರ್ಯಕ್ರಮದ ಅಂಗವಾಗಿ, ಕಾಲೇಜಿನ ಕಟ್ಟಡವೊಂದರ ನಾಲ್ಕೂ ಮಹಡಿಗಳಲ್ಲಿ ವಿವಿಧ ಮಳಿಗೆಗಳಿದ್ದುವು.


ನಿರ್ಧಿಷ್ಟ ಉದ್ದೇಶ-ಗುರಿ ಇಲ್ಲದೆ, ಯಾವುದನ್ನು ಕೊಳ್ಳಬೇಕೆಂಬ ಇರಾದೆಯೂ ಇಲ್ಲದೆ, ಎಲ್ಲಾ ಮಳಿಗೆಗಳಿಗೂ ಎಡತಾಕುತ್ತಾ ಬಂದಾಗ  ಒಂದು ಕಡೆ “ನಾಗತಿಹಳ್ಳಿ ಚಂದ್ರಶೇಖರ” ಅವರ ಪುಸ್ತಕಗಳ ಪ್ರದರ್ಶನ ಎಂಬ ಗುರುತು ಕಾಣಿಸಿತು.ಒಳ ಹೊಕ್ಕಾಗ ಅಲ್ಲಿ ಖುದ್ದಾಗಿ  ಶ್ರೀ ನಾಗತಿಹಳ್ಳಿ ಚಂದ್ರಶೇಖರವರೇ ಇದ್ದರು! ಆಸಕ್ತರಲ್ಲಿ   ಕುಶಲೋಪರಿ ಮಾತನಾಡುವುದರ ಜತೆಗೆ ಪುಸ್ತಕಕ್ಕೆ  ಹಸ್ತಾಕ್ಷರವನ್ನೂ ಹಾಕುತ್ತಿದ್ದರು.  
Chandramaana Nagatihalliಕೆಲವು ವರ್ಷಗಳ ಹಿಂದೆ ನನಗೆ ಉದ್ಯೋಗ ನಿಮಿತ್ತ, ಪರದೇಶಗಳಿಗೆ ಹೋಗಬೇಕಾದ ಸಂದರ್ಭಗಳು ಬಂದಿದ್ದುವು. ಯಾವುದೇ ಪರದೇಶಗಳಿಗೆ ಹೊರಡುವ ಮೊದಲು ಆ ದೇಶಗಳ ರೀತಿ-ರಿವಾಜು, ಶಿಷ್ಟಾಚಾರಗಳ ಬಗ್ಗೆ ಸ್ವಲ್ಪವಾದರೂ ಮುಂಚಿತವಾಗಿ ತಿಳಿದಿದ್ದರೆ ಅನುಕೂಲ ಮತ್ತು ನಾವು ಅಲ್ಲಿ ಬೆಪ್ಪುತಕ್ಕಡಿಯಂತಾಗುವ ಸನ್ನಿವೇಶಗಳನ್ನು ತಡೆಯಬಹುದು. ಈ ಉದ್ದೇಶದಿಂದ ಮೈಸೂರಿನ ಪುಸ್ತಕ ಮಳಿಗೆಗಳಲ್ಲಿ ಪ್ರವಾಸ ಕಥನಗಳಿಗಾಗಿ ಹುಡುಕಿದಾಗ  ನಾಗತಿಹಳ್ಳಿಯವರ ಪ್ರವಾಸ ಕಥನವಾದ ‘ಅಯನ’  ಲಭಿಸಿತ್ತು, ಅದನ್ನು ಕೊಂಡು ಓದಿದ್ದೆ. ಅವರ ಹಾಸ್ಯಭರಿತ ಶೈಲಿಯ ನಿರೂಪಣೆ ಬಹಳ ಇಷ್ಟವಾಯಿತು. ಆಮೇಲೆ, ಅವರ ಅಮೇರಿಕಾ! ಅಮೇರಿಕಾ!’ ಮತ್ತು ‘ನನ್ನ ಗ್ರಹಿಕೆಯ ನೇಪಾಳ′ ಪುಸ್ತಕಗಳನ್ನೂ ಓದಿದ್ದೇನೆ.  ಒಟ್ಟಾರೆಯಾಗಿ ನನಗೆ ಪ್ರವಾಸಕಥನಗಳ ಬಗ್ಗೆ ಆಸಕ್ತಿ ಬರಲು ಈ ಓದು ಪ್ರೇರೇಪಿಸಿತು ಅನಿಸುತ್ತದೆ.
ವಿಭಿನ್ನ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆಗೈದ ಇವರ ಬದುಕು-ಬರಹ-ಆಸಕ್ತಿ-ಸಾಧನೆಗಳ ಕುರಿತ ವಿಮರ್ಶಾ ಬರಹಗಳ ಸಂಕಲನವಾದ  ‘ಚಂದ್ರಮಾನ’ ಪುಸ್ತಕವು ತನ್ನ  ವಿಶಿಷ್ಟವಾದ, ಕಿತ್ತು ಹೋದ ಛಾಯಾಚಿತ್ರದ ಚೌಕಟ್ಟಿನ ಮುಖಪುಟದಿಂದಲೇ ಆಕರ್ಷಿಸಿತು. ಅದನ್ನು ಕೊಂಡು, ನಾಗತಿಹಳ್ಳಿಯವರ ಹಸ್ತಾಕ್ಷರವನ್ನೂ ಪಡೆದು ಬಂದಿದ್ದಾಯಿತು. ತೀರಾ ಸರಳವಾಗಿ, ಅತ್ಮೀಯವಾಗಿ ಮಾತನಾಡಿಸಿದರು.
ಈ ಪುಸ್ತಕದಲ್ಲಿ ನಾಗತಿಹಳ್ಳಿಯವರನ್ನು ಹತ್ತಿರದಿಂದ ಬಲ್ಲ ಹಲವಾರು ಹಿತೈಷಿಗಳು  ಅವರ ವ್ಯಕ್ತಿತ್ವ-ಸಾಧನೆಗಳನ್ನು ಪರಿಚಯಿಸಿದ್ದಾರೆ. ಅವುಗಳಲ್ಲಿ ಕೆಲವು ವಾಕ್ಯಗಳು ಬಹಳ ಆಪ್ತವೆನಿಸಿದುದುವು. ಉದಾ:
  • ಒಟ್ಟಾರೆಯಾಗಿ ಹೇಳಬೇಕಾದರೆ ನಾಗತಿಹಳ್ಳಿಯವರಿಗೆ ಬೇರುಗಳೂ ಬೇಕು, ರೆಕ್ಕೆಗಳೂ ಬೇಕು” ಪುಟ 78  -ಡಾ.ಸಿ.ಎನ್. ರಾಮಚಂದ್ರನ್ 
  • “ಚಂದ್ರು ಬಡತನವನ್ನು ಬಹಳ ಸೃಷ್ಟಿಶೀಲ ಗುಣವೆಂದು ಭಾವಿಸಿಕೊಂಡವರು. ಹಣ ಬಂದಾಗ ತಾನು ಬಡವನಾಗಿದ್ದೆ ಎಂದುಬನ್ನು ಮರೆತಿಲ್ಲ. ಬಡವನಾದಾಗ ತಾನು ಶ್ರೀಮಂತನಾಗುತ್ತೀನಿ ಅನ್ನುವ ಕನಸು ಬಿಟ್ಟಿಲ್ಲ″  ಪುಟ 82 –  ಪ್ರೊ.ಎಂ.ಕೃಷ್ಣೇಗೌಡ 
  • ಬಹಳ ಜನ ಅವರನ್ನು ಮೇಷ್ಟ್ರು ಎಂದು ಕರೆಯುತ್ತಾರೆ. ನನಗೆ ಅವರೇ ವಿಶ್ವವಿದ್ಯಾಲಯ”  ಪುಟ 85 – ಶ್ರೀ ವಿಶ್ವೇಶ್ವರ ಭಟ್.  

Hema- Nagatihalli - Copy
ನನಗೆ ಅನಿಸಿದುದೇನೆಂದರೆ ಸಾಮಾನ್ಯರೂ ಅಸಾಮಾನ್ಯ ಕೆಲಸವನ್ನು  ಮಾಡಲು ಸಾಧ್ಯ ಎಂದು ತಮ್ಮ ಕೃತಿ ಮತ್ತು ಕೆಲಸಗಳ ಮೂಲಕ ನಾಗತಿಹಳ್ಳಿ ಚಂದ್ರಶೇಖರ ಅವರು ನಿರೂಪಿಸಿದ್ದಾರೆ. ಅವರಿಂದ ಕಾರ್ಯವೈಖರಿಯಿಂದ ನಾವು  ಕಲಿತುಕೊಳ್ಳಬೇಕಾದ ವಿಚಾರಗಳು ಸಾಕಷ್ಟಿವೆ.

– ಹೇಮಮಾಲಾ.ಬಿ

ರೈಲುಹಳಿಗಳ ಮೇಲೆ ಲಾರಿಗಳು….RORO.!

ಡಿಸೆಂಬರ್ 13, 2014  ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ  ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ   ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ  ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು  ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ  ಹಿನ್ನೆಲೆ  ಎಂದು ತಿಳಿಯಲು ಅಂತರ್ಜಾಲದ ಮೊರೆ ಹೊಕ್ಕೆ.  
ವಿಕಿಪಿಡಿಯಾದ ಪ್ರಕಾರ ಇದು  ಕೊಂಕಣ ರೈಲ್ವೇ ವಿಭಾಗವು ಕಲ್ಪಿಸಿರುವ ವಿಶಿಷ್ಟ ಸಾರಿಗೆ ವ್ಯವಸ್ಥೆ   ರೊರೊ ( RORO: Roll On Roll Off) 

konkan-roll-on-roll-off
ಈ  ವ್ಯವಸ್ಥೆಯಲ್ಲಿ, ಸರಕು ತುಂಬಿದ ಲಾರಿಗಳನ್ನು ರೈಲ್ವೇ  ವ್ಯಾಗನ್ ಗಳ ಮೇಲೇರಿಸಿ, ನಿಗದಿತ ಸ್ಥಳಕ್ಕೆ ಒಯ್ಯಲಾಗುತ್ತದೆ. ಕೊಂಕಣ ರೈಲ್ವೇಮಾರ್ಗಕ್ಕೆ ಸಮಾನಾಂತರವಾಗಿ  ರಾಷ್ಟ್ರೀಯ ಹೆದ್ದಾ ರಿ 17 ಕೂಡ ಸಾಗುತ್ತದೆ.   ಪಶ್ಛಿಮ ಘಟ್ಟಗಳ ಮಧ್ಯೆ ಹಾದುಹೋಗುವ ಈ ರಸ್ತೆಯು ಸದಾ ವಾಹನಗಳಿಂದ ಕೂಡಿರುತ್ತವೆ. ಕೆಲವೆಡೆ ಕಿರಿದಾದ ಮಾರ್ಗ, ಹವಾಮಾನ ವೈಪರೀತ್ಯಗಳು ಮತ್ತು ದೂರದ ಪ್ರಯಾಣದಿಂದಾಗಿ ಲಾರಿ ಚಾಲಕರಿಗೆ ಉಂಟಾಗುವ ದೇಹಾಲಸ್ಯ- ಎಲ್ಲವೂ ಸೇರಿ ರಸ್ತೆ ಅಫಘಾತಗಳು ಆಗುವ ಸಾಧ್ಯತ ಹೆಚ್ಚಿರುತ್ತವೆ.
ಆದರೆ, ಕೊಂಕಣ ರೈಲ್ವೇಯು ಸೃಷ್ಟಿಸಿದ ರೋರೋ ವ್ಯವಸ್ಥೆಯಿಂದಾಗಿ ಈ ಮಾರ್ಗದಲ್ಲಿ ಲಾರಿಗಳನ್ನು ರೈಲ್ವೇವ್ಯಾಗನ್ ನಲ್ಲಿ  ನಿಗದಿತ ದರ ಕೊಟ್ಟು ಸಾಗಿಸಬಹುದು. ಇದರಿಂದಾಗಿ  ಲಾರಿಯವರಿಗೆ ಹಣ ಮತ್ತು ಇಂಧನದ ಉಳಿಕೆ ಆಗುತ್ತದೆ. ಲಾರಿ ಚಾಲಕರಿಗೆ ಮೈಯೆಲ್ಲಾ ಕಣ್ಣಾಗಿ ನಿದ್ದೆಗೆಟ್ಟು ರಸ್ತೆಯಲ್ಲಿ ಲಾರಿ ಓಡಿಸಬೇಕಾದ ಶ್ರಮವಿಲ್ಲ. ರಸ್ತೆಯಲ್ಲಿ ಲಾರಿಗಳ ಸಂಖ್ಯೆ ಕಡಿಮೆಯಾದಾಗ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ರಸ್ತೆಯ ಸ್ವಾಸ್ತ್ಯವೂ ಚೆನ್ನಗಿರುತ್ತದೆ. ಒಟ್ಟಿನ ಮೇಲೆ ಲಾರಿ ಮಾಲಿಕರಿಗೆ, ಚಾಲಕರಿಗೆ ಅನುಕೂಲ ಮತ್ತು ಕೊಂಕಣ ರೈಲ್ವೇಗೂ ಆದಾಯ ತರುವ  ವ್ಯವಸ್ಥೆ ಈ ರೋರೋ. 
(ಚಿತ್ರ ಮತ್ತು ಮಾಹಿತಿ :ಅಂತರ್ಜಾಲ)

– ಹೇಮಮಾಲಾ.ಬಿ,ಮೈಸೂರು

“ತ್ರಾಣ ಇದ್ದರೆ ಯಾಣ ಹತ್ತು”

“ತ್ರಾಣ ಇದ್ದರೆ ಯಾಣ ಹತ್ತು” ಎಂಬ ಮಾತು ಕೇಳಿದ್ದೆ. ಡಿಸೆಂಬರ್ 2014 ರ ಮೊದಲ ನನಗೂ ತ್ರಾಣ ಪರೀಕ್ಷೆ ಎದುರಾಯಿತು. ಅಬ್ಬಬ್ಬಾ ಎನ್ನುತ್ತಾ ನಾನೂ ಜಸ್ಟ್ ಪಾಸಾಗಿದ್ದೇನೆ!

Yana- 13122014
                                                                 
WEstern Ghats trek 08-13 Dec 2014

ಡಿಸೆಂಬರ್ 09 ರಿಂದ 13, 2014 ರ ವರೆಗೆ, ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ದಿನಕ್ಕೆ ಸುಮಾರು 16 ಕಿ.ಮೀ ಗಳಷ್ಟು ದೂರವನ್ನು ಕ್ರಮಿಸುತ್ತಾ, ಹಂತಹಂತವಾಗಿ ಚಾರಣ ಮಾಡಿ, ಕೊನೆಯ ಗಮ್ಯ ಸ್ಥಾನವಾಗಿದ್ದ ‘ಯಾಣ’ (Yana) ತಲಪಿದ್ದೆವು.
 ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಮೈಸೂರಿನ ಯೈ.ಎಚ್.ಎ.ಐ ಬಳಗಕ್ಕೂ, ನನಗೆ ಬಹಳ ಸಹಕಾರ ನೀಡಿದ ಸಹಚಾರಣಿಗರಿಗೂ ಧನ್ಯವಾದಗಳು.