Total Pageviews

Sunday, June 30, 2013

ಕುಂತಿಬೆಟ್ಟವೂ ' ಮದರ್ಸ್ ಡೇ' ಯೂ ..

ಅಮ್ಮಂದಿರಿಗೆ ಶುಭಾಶಯ ಹೇಳಲು ಅಮೇರಿಕಾದಲ್ಲಿ  ೧೯೦೮ರಲ್ಲಿ ಆರಂಭವಾದ 'ಮದರ್ಸ್ ಡೇ' ಎಂಬ ಪರಿಕಲ್ಪನೆ ಈಗ ವಿಶ್ವವ್ಯಾಪಿಯಾಗಿದೆ. ಆದರೆ, ಈ ಪರಿಕಲ್ಪನೆ ಮಹಾಭಾರತದ ಕಾಲದಲ್ಲೂ ಇತ್ತೆ? ಯಾಕೆಂದರೆ, ದಂತಕಥೆಯ ಪ್ರಕಾರ ಪಾಂಡವರು ತಮ್ಮ ಅಜ್ನಾತವಾಸದ ಕೆಲವು ದಿನಗಳನ್ನು  ಪಾಂಡವಪುರದಲ್ಲಿ ಕಳೆದಿದ್ದರಂತೆ. ತಮ್ಮ ತಾಯಿಯ ಮೇಲಿನ ಪ್ರೀತಿಯಿಂದ ಈ ಬೆಟ್ಟಕ್ಕೆ 'ಕುಂತಿಬೆಟ್ಟ' ವೆಂದು ಹೆಸರಿಟ್ಟರಂತೆ. ಹಾಗಾದರೆ ಮಹಾಭಾರತ ಕಾಲದಲ್ಲಿಯೇ 'ಮದರ್ಸ್ ಡೇ' ಆರಂಭಿಸಿದ ಹೆಗ್ಗಳಿಕೆ, ಪಾಂಡವರಿಗೆ ಸಲ್ಲಬೇಕಲ್ಲವೆ? 

ದಂತಕಥೆಯ ಪ್ರಕಾರ ಇದೇ ಊರಲ್ಲಿ, ಭೀಮನು ಬಕಾಸುರನನ್ನು ಸಂಹರಿಸಿದ್ದನಂತೆ. ಬ್ರಿಟಿಷರ ಎದುರು ಹೋರಾಡುತ್ತಿದ್ದ ಟಿಪ್ಪು ಸುಲ್ತಾನ್ ನಿಗೆ  ಸಹಾಯ ಮಾಡುವ ಉದ್ದೇಶದಿಂದ ಫ್ರೆಂಚ್ ಸೈನಿಕರು ಇಲ್ಲಿ ಬೀಡು ಬಿಟ್ಟಿದ್ದ ಕಾರಣ ಬ್ರಿಟಿಷರು ಕುಂತಿಬೆಟ್ಟವನ್ನು 'ಫ್ರೆಂಚ್   ರಾಕ್ಸ್' ಎಂದು ಕರೆದರು.     

ಕುಂತಿಬೆಟ್ಟಕ್ಕೆ ಹೋಗಲೆಂದು ಮೈಸೂರಿನಿಂದ ಸುಮಾರು ೨೫ ಮಂದಿ  ಬೆಳಗ್ಗೆ ಬಸ್ ನಲ್ಲಿ ಹೊರಟು ಪಾಂಡವಪುರ ತಲಪಿದೆವು. ಬಸ್ ನಿಲ್ದಾಣದಿಂದ ೪ ಕಿ.ಮಿ. ದೂರದಲ್ಲಿರುವ ಕುಂತಿಬೆಟ್ಟದ ಪಾದದ ವರೆಗೆ ಕಾಲುದಾರಿಯಲ್ಲಿ ನಡೆದೆವು. ಬೆಟ್ಟದ ಪಾದದಲ್ಲಿ ಸ್ಥಳೀಯ ಶಾಲಾ ಕ್ರೀಡಾಂಗಣ ಇದೆ.ಅಲ್ಲಿ ಬೆಳಗಿನ ಉಪಾಹಾರವಾಗಿ  ಉಪ್ಪಿಟ್ಟು-ಮೈಸೂರು ಪಾಕ್ , ಟೀ ಸೇವಿಸಿದೆವು. ಪರಸ್ಪರ ಪರಿಚಯ ಕಾರ್ಯಕ್ರಮದ ನಂತರ ಸುಮಾರು ೧೦೦ ಮೆಟ್ಟಿಲುಗಳನ್ನೇರಿದೆವು. 

ಅಲ್ಲಿ ಒಂದು ಪುಟ್ಟ ಗುಡಿಯಿದೆ, ಕೊಳವಿದೆ, ಬಂಡೆಯಲ್ಲಿ ಕೆತ್ತಿದ  ಗಣೇಶನ ಮೂರ್ತಿಯಿದೆ. ಆಮೇಲೆ ಸ್ವಲ್ಪ ಕಾಲುದಾರಿಯಲ್ಲಿ, ಹಸಿರಿನ ನಡುವೆ ನಡೆದೆವು. ಮುಂದೆ ಹೋದಂತೆ ಹಲವಾರು ಸಣ್ಣ-ದೊಡ್ಡ-ಬೃಹತ್ ಬಂಡೆಗಳದ್ದೇ ಸಾಮ್ರಾಜ್ಯ. ಎಲ್ಲರೂ ನಿಧಾನವಾಗಿ ಬೆಟ್ಟ ಹತ್ತಿದೆವು,ಕೆಲವು ಕಡೆ ಕಾಲು ಜಾರಿ ಬೀಳುವಂತಾಗುತ್ತಿತ್ತು. ಕೆಲವರು ಸಹಾಯ ಹಸ್ತವನ್ನಿತ್ತರು. ಸುಮಾರು ೧೧.೩೦ ಘಂಟೆಗೆ ಬೆಟ್ಟದ ತುದಿ ತಲಪಿದೆವು. ಇಲ್ಲಿಂದ ಕಾಣುವ ಪ್ರಾಕೃತಿಕ ದೃಶ್ಯ ಮನೋಹರ. ಬೀಸುವ  ತಂಗಾಳಿ ಆಯಾಸ ಪರಿಹರಿಸಿತ್ತು. ಬೆಟ್ಟದ ತುದಿಯಲ್ಲಿ ಒಂದು ಕಲ್ಲಿನ ಕಂಭವಿದೆ. ತಂಡದ ಕೆಲವು ಉತ್ಸಾಹಿಗಳು ಕಂಭವನ್ನೇರಿದರು. 






ಸ್ವಲ್ಪ ಹೊತ್ತು ಅಲ್ಲಿ ವಿರಮಿಸಿ ಬೆಟ್ಟ ಇಳಿಯತೊಡಗಿದೆವು . ಬೆಟ್ಟ ಹತ್ತುವುದಕ್ಕಿಂತ, ಇಳಿಯುವುದು ಸವಾಲಾಗಿತ್ತು. ಕಾರ್ಯಕ್ರಮದ ಆಯೋಜಕರ ನೇತೃತ್ವದಲ್ಲಿ 'ರಾಕ್ ಕ್ಲೈಂಬಿಂಗ್'  ನಡೆಯಿತು. ಅಲ್ಲಲ್ಲಿ ಎದುರಾದ ಸಣ್ಣ-ಪುಟ್ಟ ಬಂಡೆಗಳನ್ನು ನಿರಾಯಾಸವಾಗಿ ಹತ್ತಿ-ಇಳಿದೆವು. ಆದರೆ ಒಂದು ಕಡೆ ಸುಮಾರು ೮ ಅಡಿ ಆಳಕ್ಕೆ ನಾವು ಇಳಿಯಬೇಕಿತ್ತು. ಕೆಲವು ಜಾಣರು  ಹಗ್ಗದ ಸಹಾಯವಿಲ್ಲದೆಯೇ ಇಳಿದರು. ಇನ್ನು ಕೆಲವರು ಹಗ್ಗದ ಸಹಾಯದಿಂದ, ಆಯೋಜಕರ ಪ್ರೋತ್ಸಾಹದಿಂದ 'ಟಾಸ್ಕ್' ಪೂರೈಸಿದರು. ತಂಡದಲ್ಲಿದ್ದ ಕೆಲವು ಮಕ್ಕಳು ಈ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. 






















ಇನ್ನು ಮುಂದೆ ನಡೆದಾಗ ಎದುರಾದದ್ದು ದೊಡ್ಡದಾದ ಸ್ವಾಭಾವಿಕ ಜಾರುಬಂಡೆ. ಬಹಳಷ್ಟು ಜನ ವಯೋಬೇಧ  ಮರೆತು ಜಾರುಬಂಡಯಲ್ಲಿ ಜಾರಿದರು.  ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು. 






ಸರಳವಾಗಿ ಒಂದು ದಿನದ ಪ್ರಕೃತಿಯ ಒಡನಾಟದಲ್ಲಿ ಕಳೆಯಲು ಕುಂತಿಬೆಟ್ಟ ಉತ್ತಮ ತಾಣ. ಅಲ್ಲಿ ಊಟ -ತಿಂಡಿ-ನೀರು  ಒದಗಿಸುವ ಹೋಟೆಲ್ ಇಲ್ಲದಿರುವುದರಿಂದ ನಮ್ಮದೇ  ಏರ್ಪಾಡು  ಮಾಡಿಕೊಳ್ಳಬೇಕು ಅಥವಾ ಹತ್ತಿರದ ಪಾಂಡವಪುರಕ್ಕೆ ಹೋಗಬೇಕು. ಊಟ ಮುಗಿಸಿ, ಅಂದಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದೆವು. 

Saturday, June 22, 2013

ಶೋಲಿಂಗೂರ್


ಮೇ ೨೫ ರಂದು, ರಾತ್ರಿ ೮ ಗಂಟೆಗೆ   ವೈ.ಎಚ್.ಎ.ಐ ಗಂಗೋತ್ರಿ ಘಟಕದ ೨೩ ಮಂದಿ ಮೈಸೂರಿನ ರೈಲ್ವೇ ಸ್ಟೇಷನ್ ನಲ್ಲಿ ಸೇರಿದ್ದೆವು. ನೆರೆಯ ತಮಿಳುನಾಡಿನ ಅರಕ್ಕೋಣಂ  ಸಮೀಪದಲ್ಲಿರುವ ಶೋಲಿಂಗೂರ್ ಹಾಗೂ ತಿರುತ್ತನಿಯ ಬೆಟ್ಟಗಳಿಗೆ ಚಾರಣ ಮಾಡುವುದು ನಮ್ಮ ಗುರಿಯಾಗಿತ್ತು.

ಮರುದಿನ ಮಂಜಾನೆ, ಅರಕ್ಕೋಣಂ ತಲಪಿದೆವು. ಅಲ್ಲಿನ ರೈಲ್ವೇ ಸ್ಟೆಷನ್ ನಿಂದ ಒಂದು ವ್ಯಾನ್ ನಲ್ಲಿ ಪ್ರಯಾಣಿಸಿ, ಸ್ವಲ್ಪ ದೂರದಲ್ಲಿದ್ದ ಕಲ್ಯಾಣಮಂಟಪವೊಂದರಲ್ಲಿ ವಿಶ್ರಾಂತಿ ಪಡೆದೆವು. ಅಲ್ಲಿ ಸ್ನಾನ ಮುಗಿಸಿ,ಪಕ್ಕದ ಹೋಟೆಲ್ ಒಂದರಲ್ಲಿ ಬೆಳಗಿನ ಉಪಾಹಾರ ಸೇವಿಸಿ ಎದುರುಗಡೆ  ಕಾಣಿಸುತ್ತಿದ್ದ  ಶೋಲಿಂಗೂರ್ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆವು. ದಂತಕಥೆಯ  ಪ್ರಕಾರ, ಚೋಳ ರಾಜನಿಗೆ ಇಲ್ಲಿ  ಶಿವಲಿಂಗ ದೊರಕಿತಂತೆ. ಇದು ಮುಂದೆ ಆಡುಭಾಷೆಯಲ್ಲಿ 'ಶೋಲಿಂಗೂರ್' ಎಂದು ಕರೆಯಲ್ಪಟ್ಟಿತು. ೧೭೮೧ ರಲ್ಲಿ ಬ್ರಿಟಿಷ್ ಮತ್ತು ಹೈದರ್ ಆಲಿ ನಡುವೆ ಇಲ್ಲಿ ನಡೆದ ಯುದ್ಧ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

ಸ್ಥಳ ಪುರಾಣದ ಪ್ರಕಾರ, ವಿಶ್ವಾಮಿತ್ರರು ಈ ಸ್ಥಳದಲ್ಲಿ ವಿಷ್ಣುವನ್ನು ನೆನೆದು  ಅರ್ಧ  ಗಂಟೆಗಳ (ಕಟಿಕೈ) ಕಾಲ  ತಪಸ್ಸು ಮಾಡಿ ಬ್ರಹ್ಮರ್ಷಿ ಪದವಿ ಗಳಿಸಿದರಂತೆ. ಹಾಗಾಗಿ ಈ ಸ್ಥಳಕ್ಕೆ ಘಟಿಕಾಚಲ ( ಕಟಿಕಾಚಲಂ)ಎಂಬ ಹೆಸರೂ ಇದೆ.ಇಲ್ಲಿ ಕೇವಲ  ಅರ್ಧ ಗಂಟೆ ಕಾಲ ಕಳೆದರೆ ಜನನ-ಮರ್‍ಅಣದ ವರ್ತುಲದಿಂದ ಹೊರಬಂದು ಮೋಕ್ಷ ಲಭಿಸಿತ್ತದೆಯೆಂಬ  ನಂಬಿಕೆ. ಮಾನಸಿಕ ವಿಕಲತೆ ಉಳ್ಳವರಿಗೂ ಈ ಕ್ಷೇತ್ರದಲ್ಲಿ  ಗುಣಮುಖವಾಗುತ್ತದೆಯೆಂಬ ನಂಬಿಕೆಯೂ ಇದೆ. ರಾಜನೊಬ್ಬ ಬೇಟೆಯಾಡುತ್ತಿರುವಾಗ ಗಾಯಗೊಂಡ ಜಿಂಕೆಯು ದೈವಿಕ ಪ್ರಕಾಶ ಹೊಮ್ಮಿಸುವುದನ್ನು ಕಂಡನಂತೆ. ಇದು ಆತನು ಅಹಿಂಸಾ ಪಥವನ್ನು ಅನುಸರಿಸುವಂತೆ ಮಾರ್ಗದರ್ಶನ ಮಾಡಿತಂತೆ. ಸಾಕ್ಷಾತ್ ಆಂಜನೇಯನೇ ಜಿಂಕೆಯ ರೂಪದಲ್ಲಿ ಬಂದಿದ್ದನಂತೆ.

ಇನ್ನೊಂದು ದಂತಕಥೆಯ ಪ್ರಕಾರ, ಶ್ರೀರಾಮನು  ತನ್ನ ಅವತಾರ ಸಮಾಪ್ತಿ ಮಾಡಲೆಂದು ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ಆಂಜನೇಯನೂ ಅನುಸರಿಸಿದ್ದನಂತೆ. ಆದರೆ ಇಲ್ಲಿಗೆ ಬಂದ ಶ್ರೀರಾಮನಿಗೆ, ತಪಸ್ಸನ್ನು ಮಾಡುತ್ತಿರುವ ಸಪ್ತರ್ಷಿಗಳಿಗೆ ರಾಕ್ಷಸರು ಉಪಟಳ ಕೊಡುತ್ತಿರುವುದು  ಕಾಣಿಸಿತು. ಆತನ ಆದೇಶದಂತೆ ಆಂಜನೇಯನು ರಾಕ್ಷಸರನ್ನು ಸಂಹರಿಸಿದನು.   ಶ್ರೀರಾಮನು, ಸಪ್ತರ್ಷಿಗಳಿಗೆ ನರಸಿಂಹಾವತಾರದಲ್ಲಿ ದರ್ಶನ ಕೊಟ್ಟನು. ಪಕ್ಕದ ಬೆಟ್ಟದಲ್ಲಿ, ಆಂಜನೇಯನು ಶಂಖ-ಚಕ್ರ ಧಾರಿಯಾಗಿ ನೆಲೆ ನಿಂತನು.



ಸುಮಾರು ೧೩೦೦ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೊದಾಗ ಮುಖ್ಯ ದೇವರಾದ ಯೋಗನರಸಿಂಹನ ದರ್ಶನವಾಗುತ್ತದೆ. ಭಕ್ತರಿಗೆ ಮಳೆ-ಬಿಸಿಲಿನಿಂದಾಗಿ ತೊಂದರೆಯಾಗದಂತೆ ಮೆಟ್ಟಿಲುಗಳ ಮೇಲೆ ಮಾಡು ನಿರ್ಮಿಸಿದ್ದಾರೆ. ಮೈಸೂರಿನಿಂದ ಹೊರಡುವ ಮುನ್ನವೆ ಆಯೋಜಕರು  'ಮೆಟ್ಟಿಲುಗೊಂದರಂತೆ ಕೋತಿಗಳಿವೆ, ನೀರಿನ ಬಾಟಲ್ ಬಿಟ್ಟು ಬೇರೇನೂ ಒಯ್ಯಬೇಡಿ' ಎಂದು ನಮ್ಮನ್ನು ಎಚ್ಚರಿಸಿದ್ದರು. ಇದರ  ಪ್ರತ್ಯಕ್ಷ ಅನುಭವ ನಮಗಾಯಿತು. ಇದ್ದಕ್ಕಿಂದಂತೆ ಯಾರೋ ಭಯದಿಂದ ಕಿರುಚಿದರು, ಯಾಕೆಂದರೆ ಅವರ ಮುಡಿಯಲ್ಲಿದ್ದ  ಹೂವನ್ನು ಕೋತಿಯೊಂದು ಎಳೆದು ತಿನ್ನುತ್ತಿತ್ತು... ಭಕ್ತರೊಬ್ಬರು ದೇವರಿಗೆ ಅರ್ಪಿಸಲೆಂದು ತಂದಿದ್ದ ಹೂವು-ಹಣ್ಣು ದಾರಿ ಮಧ್ಯದಲ್ಲಿಯೇ ಆಂಜನೇಯ ಸ್ವಾಹಾ ಅಯಿತು...ಯಾರೋ ಕೈ ಜಗ್ಗಿದಂತಾಗಿ ಹಿಂದೆ ನೋಡುವಷ್ಟರಲ್ಲಿ ನೀರಿನ ಬಾಟಲಿಯೂ ಕಪಿ ಪಾಲಾಯಿತು.... ಯಾರೋ ತಂದಿದ್ದ ತುಳಸಿ ಹಾರವೂ ವಾನರ ಪಾಲಾಯಿತು ....ನೀರಿನ ಬಾಟಲಿ ಮುಚ್ಚಳವನ್ನು ತೆರೆದ ಜಾಣಕೋತಿಗೆ ಅದೇಕೋ ನೀರು  ಕುಡಿಯಲು ಇನ್ನೂ ಅಭ್ಯಾಸವಿದ್ದಂತಿರಲಿಲ್ಲ..... ಹೀಗೆಲ್ಲಾ ನಮಗೆ  ಪುಕ್ಕಟೆ ಭಯ ಮಿಶ್ರಿತ ಮನರಂಜನೆ ಲಭಿಸಿತು. 






                                                                                    

.











ವಾನರಸೈನ್ಯವನ್ನು ನಿಯಂತ್ರಿಸಲು ಬೆಟ್ಟದ ಪಾದದಲ್ಲಿ ಕೋಲು ಮಾರುವವರೂ ಇದ್ದರು. ಕೆಲವು ಭಕ್ತರು ಪೂಜೆಗಾಗಿ  ಹೂವು -ಹಣ್ಣು ತಂದು, ಅವನ್ನು ಕೋತಿಯಿಂದ ರಕ್ಷಿಸಲೆಂದು ಅನಿವಾರ್ಯವಾಗಿ ಕೋಲು ಹಿಡಿದುಕೊಂಡೇ ದೇವರ ದರ್ಶನವನ್ನೂ ಮಾಡುತ್ತಿದ್ದುದು ತಮಾಷೆಯಾಗಿ ಕಾಣಿಸುತ್ತಿತ್ತು.

ಸಾರ್ವಜನಿಕ ಸಾರಿಗೆಯ ಮೂಲಕ ನೆರೆ ರಾಜ್ಯ ಪ್ರವೇಶಿಸಿ, ಒಂದೇ ಹಗಲಿನಲ್ಲಿ  ಎರಡು ಬೆಟ್ಟಗಳನ್ನು ಹತ್ತಿ-ಇಳಿದು,ಒಟ್ಟಾರೆಯಾಗಿ ೫ ದೇವಸ್ಥಾನಗಳಿಗೆ ಭೇಟಿ ಕೊಟ್ಟ ಸಂಪನ್ನ ಕಾರ್ಯಕ್ರಮ ಇದು.