Total Pageviews

Sunday, May 20, 2012

ಅನಿವಾರ್ಯದ ನಿತ್ಯ ಚಾರಣ..


ಚಾರಣಪ್ರಿಯರಿಗೆ  ಬೆಟ್ಟ  ಹತ್ತುವುದು   ಒಂದು  ಚಟ ಅಥವಾ ವಾರಾಂತ್ಯದ  ವಿಶ್ರಾಂತಿಯ ಇನ್ನೊಂದು ರೂಪ. ಜತೆಗೆ ಸ್ನೇಹಿತರೊಡನೆ ಬೆರೆಯುವ ಸದವಕಾಶ,  ಹಳೆಯ ಚಾರಣದ ನೆನಪನ್ನು ಮೆಲುಕು ಹಾಕುತ್ತ,  ಮುಂದಿನ ಹೊಸ ಚಾರಣದ ಬಗ್ಗೆ ಸಮಾಲೋಚನೆ ಮಾಡುತ್ತಾ, ಕಟ್ಟಿ ತಂದ ಬುತ್ತಿಯನ್ನು ಹಂಚಿ ತಿಂದು,  ಪರಸ್ಪರ ಕುಶಾಲ-ಹರಟೆ-ಲೇವಡಿ ಮಾತುಕತೆ  ಮಾಡುತ್ತಾ - ಒಟ್ಟಾರೆಯಾಗಿ ಸಂತೋಷವಾಗಿ ದಿನವನ್ನು ಕಳೆಯುವ ಪರಿ.  



ಈ ಶ್ರಮಿಕ ಕಾರ್ಮಿಕನಿಗೆ ನಿತ್ಯ ಚಾರಣ  ಅನಿವಾರ್ಯ. ಯಾಕೆಂದರೆ  ಬೆಟ್ಟ ಹತ್ತಲು ಅನುವು ಮಾಡುವ ಮೆಟ್ಟಿಲು ಕಡಿಯುವುದೇ ಈತನ ಕಾಯಕ. ಕೊರೆಯುವ ಚಳಿಯನ್ನು ಲೆಕ್ಕಿಸದೆ,  ಆಗಿಂದಾಗ್ಗೆ ಸುರಿಯುತ್ತಿರುವ  ಹಿಮಯನ್ನು ಹಾರೆಯಿಂದ ಹೆರೆದು ಮೆಟ್ಟಿಲುಗಳನ್ನು ಶುಭ್ರಗೊಳಿಸುವ ಈತನ ಕೆಲಸ ನಿಜಕ್ಕೂ ತ್ರಾಸದಾಯಕ. ಹೊಟ್ಟೆಪಾಡು...... 

 ಇದನ್ನು  ಕ್ಲಿಕ್ಕಿಸಿದ್ದು  ನಾಲಿಯ  'ಗುಲಾಬಾ ಸ್ನೋ ಪಾಯಿಂಟ್ ' ನಲ್ಲಿ. 

Wednesday, May 16, 2012

'ಶಿರಸ್' ತಿರುಗಿಸುವ ಚರಸ್ ..ಕ್ಲಿಕ್

'ಕುಲು'  ವಿನಿಂದ ಸ್ವಲ್ಪ ದೂರದ ಕಸೋಲ್  ಎಂಬಲ್ಲಿಗೆ  ಹೋಗಿದ್ದೆವು. 


ನಮ್ಮ ಕಾರಿನ ಡ್ರೈವರ್ ನ ಇದ್ದಕ್ಕಿದ್ದಂತೆ ಪುಟಾಣಿ ಗಿಡವೊಂದನ್ನು ತೋರಿಸುತ್ತ  ' ಎ ಚರಸ್ ಹೇ, ದುನಿಯಾ ಮೇ ಸಬ್ ಸೆ   ಅಚ್ಚ್ಚಾ ಚರಸ್ ಕಸೋಲ್ ಮೇ ಮಿಲತಾ ಹೇ', ಬಹುತ್ ಅಂಗ್ರೇಜಿ  ಲೋಗ್  ಚರಸ್ ಪೀನೆ ಕೆ ಲಿಯೇ ಕಸೋಲ್ ಆತೆ ಹೇ'  ಅಂದ.  ಮಾದಕ  ವಸ್ತುಗಳಲ್ಲಿ ಒಂದಾದ  'ಹಶೀಶ್'ನ್ನು ತಯಾರಿಸಲು ಬೇಕಾದ ಕಚ್ಚಾವಸ್ತುವನ್ನು ' ಚರಸ್' ಗಿಡದಿಂದ ಪಡೆಯುತ್ತಾರಂತೆ.   

ಶಿರಸ್ ಗೆ ನಶೆ  ಹಿಡಿಸುವ  ಚರಸ್ ..ಕ್ಲಿಕ್ 

Sunday, May 13, 2012

ಮೂಡಲ ಮನೆಯಾ ಮುತ್ತಿನ ನೀರಿನ ಎರಕವಾ .. .......



ಸೂರ್ಯೋದಯದ   ಈ ದೃಶ್ಯಗಳನ್ನು  ಕ್ಲಿಕ್ಕಿಸಿದ್ದು  ನೇಪಾಳದ  'ನಾಗರ ಕೋಟ' ಎಂಬಲ್ಲಿ.  ಇಲ್ಲಿಂದ  ಎವೆರೆಸ್ಟ್ ಶಿಖರವು ೩೦ ಕಿ.ಮೇ ದೂರದಲ್ಲಿದೆ.  ಕ್ಯಾಮರ ಕಣ್ಣಿಗೆ ಅಸ್ಪಷ್ಟವಾಗಿ  ಕಾಣಿಸುತ್ತದೆ.



 

Friday, May 11, 2012

ಹಿಮಾಚಲ ಪ್ರದೇಶದ ಶ್ರಮಿಕ ಮಹಿಳೆಯರು ...ಕ್ಲಿಕ್

ಹಿಮಾಚಲ ಪ್ರದೇಶದಲ್ಲಿರುವ ಮನಾಲಿಯ ಪಕ್ಕದ ಒಂದು ಪುಟ್ಟ ಊರು 'ನೆಗರ್'  .ಅಲ್ಲಿನ ಪರ್ವತ ಮಾರ್ಗದ   ಕಾಲುದಾರಿಯಲ್ಲಿ  ನಿಧಾನವಾಗಿ   ಬೆಟ್ಟ ಸುತ್ತಿದ್ದೆವು. ಪರ್ವತದಲ್ಲಿ ಹುಲ್ಲುಹಾಸಿನ ನಡುವೆ ಸೇಬಿನ ಮರಗಳು. 

ತೋಟದಲ್ಲಿ ದಿನದ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಹೊರೆ ಹೊತ್ತ  ಶ್ರಮಿಕ   'ಪಹಾಡಿ  ಔರತ್''  ಹೀಗಿದ್ದರು ..... 






Thursday, May 3, 2012

ಗುಲಾಬ್ ಮೆ ಉಡ್ತಾ ಜಾಯೇ ಹಮಾರಾ ಲಾಲ್ ದುಪಟ್ಟಾ..


ಹಿಮಾಚಲ  ಪ್ರದೇಶದಲ್ಲಿ ಪ್ರವಾಸಿಗರಿಗೆ ಹಿಮವೇ ಮುಖ್ಯ ಆಕರ್ಷಣೆ. ಮನಾಲಿಯ ’ರೋತಾಂಗ್ ಪಾಸ್’ ಒಂದು  ಪ್ರಸಿದ್ಧ ’ಸ್ನೊ ಪಾಯಿಂಟ್’. ಹಿಮಾಛ್ಛಾದಿತ ಪರ್ವತಗಳ ಮಧ್ಯೆ ಪ್ರಯಾಣ ಸೊಗಸಾಗಿತ್ತು. ವಿಪರೀತ ಹಿಮ ಬಿದ್ದು ರಸ್ತೆ ಲಭ್ಯವಿಲ್ಲವೆಂದು ನಮಗೆ ’ರೋತಾಂಗ್ ಪಾಸ್’ ತಲಪಲಾಗಲಿಲ್ಲ. ದಾರಿ ಮಧ್ಯದ ’ಗುಲಾಬ್’ ಎಂಬ ಇನ್ನೊಂದು ’ಸ್ನೊ ಪಾಯಿಂಟ್’ನಲ್ಲಿ ಇಳಿದೆವು.  ಅಲ್ಲಿ, ಹಿಮದಲ್ಲಿ ವಿವಿಧ ಆಟಗಳನ್ನು ಆಡಬಹುದು. ಉದಾ :ಸ್ಕೀಯಿಂಗ್, ಹಿಮದಲ್ಲಿ ಬೊಂಬೆ ಮಾಡುವುದು ಇತ್ಯಾದಿ. 



ಚಳಿಯನ್ನು ಎದುರಿಸಲೆಂದು, ಸಾಕಷ್ಟು ಉಣ್ಣೆಯ  ಬಟ್ಟೆ ಧರಿಸಿದ್ದೆವು. ಕೆಲವರು ಉಣ್ಣೆಯ ಶಾಲನ್ನೂ ಹೊದ್ದಿದ್ದರು. ಇಷ್ಟೆಲ್ಲಾ ಇದ್ದರೂ ಹಿಮದಲ್ಲಿ ಆಟವಾಡಲು ತಕ್ಕುದಾದ ’ವಿಂಡ್ ಚೀಟರ್’ ಕೋಟ್ ಮತ್ತು  ಗಮ್ ಬೂಟ್  ಬೇಕಾಗುತ್ತವೆ. ಇವು, ಅಲ್ಲಿ ೨೫೦ ರೂ. ಗಳಿಗೆ   ಬಾಡಿಗೆಗೆ ಸಿಗುತ್ತವೆ.


ಕೆಲವು ಮನಾಲಿಯ ಮಹಿಳೆಯರು, ಪ್ರವಾಸಿಗಳಿಗೆ ತಮ್ಮ ನೆಲದ ಸಾಂಪ್ರದಾಯಿಕ ಉಡುಗೆ ’ಪಟ್ಟೂ’ ವನ್ನು ತೊಡಿಸಿ ಹಣ ಗಳಿಸುತ್ತಿದ್ದರು.

ಒಂದು ಪ್ರತಿ ಬಟ್ಟೆಗೆ ೧೦೦ ರೂ ಬಾಡಿಗೆ ಕೊಟ್ಟರೆ, ಸ್ವಲ್ಪ ಸಮಯ ಅವನ್ನು ತೊಟ್ಟು, ಹಿಮದಲ್ಲಿ ನಡೆದಾಡಿ, ಫೊಟೊ ಕ್ಲಿಕ್ಕಿಸಿ ಸಂಭ್ರಮಿಸಬಹುದು.

ಕೆಂಪು ಬಣ್ಣ ಅವರಿಗೆ ಶುಭಕಾರಕ ಬಣ್ಣವಂತೆ. ನಾವೂ ಪಟ್ಟೂ ತೊಟ್ಟು ಮನಾಲಿಯ ಪಹಾಡಿ ಜನರಾದೆವು.


ಗುಲಾಬ್ ಕಾ ಹವಾ ಮೆ ಉಡ್ತಾ ಜಾಯೇ ಹಮಾರಾ ಲಾಲ್ ದುಪಟ್ಟಾ......





ಆ ಚಳಿಯಲ್ಲಿ, ಒಬ್ಬಾತ ತಯಾರಿಸಿ ಕೊಡುತ್ತಿದ್ದ ಬಿಸಿ ಚಹಾವಂತೂ  ಅದ್ಭುತ ಪೇಯವೆನಿಸಿತು. ಮಸಾಲಾ  ಚಾಯ್ ಕುಡಿದು ಹಿಮದ ಬೆಟ್ಟದಿಂದ ಕೆಳಗಿಳಿದೆವು.






Wednesday, May 2, 2012

ಹಿಡಿಂಬಾ ಮಂದಿರ.... ಎಷ್ಟೊಂದು ಸುಂದರ..


ಎಪ್ರಿಲ್ ನಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ  ಸ್ಥಳಗಳನ್ನು ನೋಡಿ ಬಂದೆವು. ’ಮನಾಲಿ’ಯಲ್ಲಿರುವ ಹಿಡಿಂಬಾ ದೇವಾಲಯ ಅವುಗಳಲ್ಲಿ ಒಂದು.

ಮನಾಲಿ ಪಟ್ಟಣದಿಂದ ಕಾರಿನಲ್ಲಿ ಪ್ರಯಾಣ ತುಂಬಾ ಮುದ ಕೊಟ್ಟಿತು. ಬೆಟ್ಟಗಳ ನಡುವೆ, ಹಸಿರಿನ ವನಸಿರಿಯ ಮಧ್ಯೆ ಹಾದು ಹೋಗುವ ಅಂಕು-ಡೊಂಕಾದ ರಸ್ತೆ. ಇಲ್ಲಿ ದೇವದಾರು, ಓಕ್, ಪೈನ್ ಇತ್ಯಾದಿ  ಮರಗಳು ಸೊಂಪಾಗಿ ಬೆಳೆದಿದ್ದು, ಸುಮಾರಾಗಿ ’ಊಟಿಯ’ ಪರಿಸರವನ್ನು ಹೋಲುತ್ತದೆ. ನಮ್ಮ ಸುತ್ತಲೂ ಕಡಿದಾದ ಬೆಟ್ಟಗಳು, ಅಲ್ಲಲ್ಲಿ ಕಾಣಿಸುವ ಸೇಬಿನ ತೋಟಗಳು, ನೂರಾರು ಸಣ್ಣ ಪುಟ್ಟ ಝರಿಗಳು..ದಾರಿಯುದ್ದಕ್ಕೂ ಜತೆಯಾಗುವ ’ಬಿಯಾಸ್’ ನದಿ ಅಥವಾ ಇನ್ಯಾವುದೋ ಉಪನದಿಯ ಜುಳು-ಜುಳು ನಾದ. ಇಲ್ಲಿನ ನದಿಯಗಳಲ್ಲಿ ಬೆಳಗಿನ ಸಮಯ ನೀರಿನ ಹರಿವು ಸ್ವಲ್ಪ ಕಡಿಮೆ ಇರುತ್ತದೆ. ಸಂಜೆ ಆಗುತ್ತಿದ್ದಂತೆ  ನೀರಿನ ರಭಸ ಹೆಚ್ಚುತ್ತದೆ. ಹಿಮಾಲಯ ಪರ್ವತ ಶ್ರೇಣಿಯಿಂದ ಹಿಮ ಕರಗಿ ನದಿಗೆ ಸೇರುವುದೇ ಇದಕ್ಕೆ ಕಾರಣ.

ಸ್ವಲ್ಪ ಪ್ರಯಾಣದ ನಂತರ  ಹಿಡಿಂಬಾ ಮಂದಿರ ತಲಪಿದೆವು.

ತಮಾಷೆಗೆಂದೋ, ಕುಚೋದ್ಯಕ್ಕೆಂದೋ-  ಸ್ಥೂಲಕಾಯದ ಸ್ತ್ರೀಯರನ್ನು ’ಹಿಡಿಂಬೆ’ ಗೆ ಹೋಲಿಸಿ ಲೇವಡಿ ಮಾಡುವವರಿದ್ದಾರೆ. ಹಾಗಾಗಿ, ರಾಕ್ಷಸಿ ಹಿಡಿಂಬೆಯ  ದೇವಾಲಯ ಅವಳ ಉಪಮೆಗೆ ತಕ್ಕಂತೆ ಬಲು ದೊಡ್ಡದಿರಬಹುದೆಂದು ಊಹಿಸಿದ್ದೆ. ನನ್ನ  ನಿರೀಕ್ಷೆ ತಪ್ಪಾಯಿತು. 





ಹಿಡಿಂಬಾ ದೇವಾಲಯವು ಚಿಕ್ಕದಾದರೂ ಚೊಕ್ಕವಾಗಿತ್ತು. ಮರದ ಕುಸುರಿ ಕೆಲಸವನ್ನೊಳಗೊಂಡ ಪುಟ್ಟದಾದ ಬಾಗಿಲು, ಸುಮಾರು ೫ ಅಡಿ ಎತ್ತರ, ೩ ಅಡಿ ಅಗಲವಿದ್ದಿರಬಹುದು. ಅದಕ್ಕಿಂತ ಉದ್ದದವರು ತಲೆ/ಬೆನ್ನು ಬಾಗಿಸಿದರೆ ಮಾತ್ರ ಮಂದಿರದ ಒಳಗೆ ಹೋಗಲು ಸಾಧ್ಯ. ದೇವಾಲಯದ ಒಳಗೆ ಒಂದು ಪುಟ್ಟ ಗುಹೆ ಇದೆ.  ಹಿಡಿಂಬೆ ಇಲ್ಲಿ ಕುಳಿತು ತಪಸ್ಸನ್ನು ಆಚರಿಸಿದಳು ಎಂಬ ನಂಬಿಕೆ. ಖಂಡಿತವಾಗಿಯೂ, ಹಿಡಿಂಬೆ ಧಡೂತಿಕಾಯದವಳಾಗಿದ್ದರೆ, ಅವಳಿಗೆ ಅಲ್ಲಿ ತಪಸ್ಸಿಗೆ ಕೂರಲು ಅಸಾಧ್ಯ! ನಾವು ಹಿಡಿಂಬೆಗೆ ಇಷ್ಟು ಅವಮಾನ ಮಾಡುವುದು ಸರಿಯೇ ಅನಿಸಿತು.

ಅನತಿ ದೂರದಲ್ಲಿ  ಘಟೋತ್ಕಚನ ಗುಡಿಯಿದೆ.

















ಅಲ್ಲಿ ಅಲಂಕೃತ ಯಾಕ್ ಪ್ರಾಣಿಗಳಿದ್ದುವು. ಅವುಗಳ ಮೇಲೆ ಪ್ರವಾಸಿಗಳನ್ನು ಸವಾರಿ ಮಾಡಿಸಿ ಹಣ ಸಂಪಾದಿಸುವವರು  ಕೆಲವರು. ಹಾಗೆಯೇ ೩೦ ರೂ. ಕೊಟ್ಟರೆ ಮುದ್ದಾದ ಮೊಲಗಳನ್ನು ಎತ್ತಿಕೊಂಡು  ಫೋಟೊ ತೆಗೆಯಬಹುದಾಗಿತ್ತು.

ಕೊರೆಯುವ ಚಳಿ, ಆಗೊಮ್ಮೆ ಈಗೊಮ್ಮೆ ಹಾದು ಹೊಗುವ ಮೋಡಗಳು, ಶಿಸ್ತಿನ ಸಿಪಾಯಿಗಳಂತೆ ಬೆಳೆದು  ನಿಂತ ದೇವದಾರು ವೃಕ್ಷಗಳ ಮಧ್ಯೆ, ಅನನ್ಯವಾದ ಶಾಂತ ಪರಿಸರ. ನಗರದ ದೇವಾಲಯಗಳಂತೆ ಕಿಕ್ಕಿರಿದ ಜನ ಸಂದಣಿಯಿಲ್ಲ,ಮೊರೆಯುವ ಮೈಕಾಸುರನಿಲ್ಲ, ಚಪ್ಪಲಿ ಕಳೆದು ಹೋದೀತೆಂಬ ಚಿಂತೆಯೂ ಇಲ್ಲ, ಭಿಕ್ಷುಕರ ಕಾಟವೂ ಇಲ್ಲ... ಇಲ್ಲಿರುವುದು ಕೇವಲ ಶಾಂತತೆ.

ಇಂತಹ ನಿಸರ್ಗದ ಮಡಿಲಲ್ಲಿ ತನ್ನದಾದ ಒಂದು ಪುಟ್ಟ ಮಂದಿರವನ್ನು ಹೊಂದಿರುವ ಹಿಡಿಂಬೆ ನಿಜವಾಗಲೂ ಅದೃಷ್ಟವಂತೆ!