Total Pageviews

Wednesday, September 19, 2012

ಅಕ್ಕ- ತಂಗಿಯರ ಕೊಳ


ದಕ್ಷಿಣದ ಬದರಿ ಎಂದು ಕರಯಲ್ಪಡುವ ಮೇಲುಕೋಟೆಯಲ್ಲಿ ಆಸಕ್ತರಿಗೆ ಕುತೂಹಲ ಮೂಡಿಸುವ ವಿಶೇಷಗಳು ಸಾಕಷ್ಟಿವೆ. ಮೈಸೂರಿನಿಂದ ಹೊರಟು ಶ್ರೀರಂಗಪಟ್ಟಣ ದಾಟಿ ಪಾಂಡವಪುರ ದಾರಿಯಾಗಿ ಸುಮಾರು ೫೫ ಕಿ.ಮೀ ಪ್ರಯಾಣಿಸಿದರೆ  ಮೇಲುಕೋಟೆ ತಲಪಬಹುದು. ಕುಟುಂಬ ಸಮೇತವಾಗಿ ಒಂದು ದಿನದ ಪ್ರವಾಸಕ್ಕೆ ತಕ್ಕುದಾದ ಜಾಗ ಇದು. 

ಯೋಗ ನರಸಿಂಹ ದೇವಾಲಯ



ಮೇಲುಕೋಟೆಯ ಬೆಟ್ಟದ ಮೇಲೆ , ಯೋಗನರಸಿಂಹನ ದೇವಾಲಯವಿದೆ. ಇದನ್ನು ತಲಪಲು ಸುಮಾರು ೩೫೦ ಮೆಟ್ಟಲುಗಳನ್ನು ಹತ್ತಬೇಕು. ಇಲ್ಲಿನ ಯೋಗನರಸಿಂಹನನ್ನು  ಪ್ರಹ್ಲಾದನೇ ಸ್ಥಾಪಿಸಿದನೆಂಬ ಪ್ರತೀತಿ.








ಪುಷ್ಕರಿಣಿ



ಬೆಟ್ಟದ ಮೇಲೆ ನಿಂತರೆ ಕೆಳಗಿನ ದೃಶ್ಯ ಸುಮನೋಹರ. ಒಂದು ಕಡೆಯಲ್ಲಿ ವಿಶಾಲವಾದ ಪುಷ್ಕರಿಣಿ ಅಥವಾ ಕಲ್ಯಾಣಿ. ಇದಕ್ಕೆ ನಾಲ್ಕೂ ಕಡೆಯಿಂದ ಮೆಟ್ಟಿಲುಗಳಿವೆ. ಸುತ್ತಲೂ ಕಲ್ಲಿನ ಮಂಟಪವೂ ಇದೆ. ಇಲ್ಲಿ ಆಗಾಗ್ಗೆ ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತದೆ.









ನಾನೇನು ಕಡಿಮೆ ಎಂಬಂತೆ ದೂರದಲ್ಲಿ ಕಾಣಿಸುವ, ನೈಸರ್ಗಿಕವಾಗಿ ರಚನೆಗೊಂಡ ವಿಶಾಲವಾದ 'ತೊಣ್ಣೂರು ಕೆರೆ'. ಇವಲ್ಲದೆ, ಹೆಸರು ಗೊತ್ತಿಲ್ಲದ ಇನ್ನೂ ಕೆಲವು ಚಿಕ್ಕ-ಪುಟ್ಟ ಕೊಳಗಳು.  


 

ಮೇಲುಕೋಟೆಯ ಮುಖ್ಯರಸ್ತೆಯಲ್ಲಿರುವ ಪುರಾತನ  ಚೆಲುವನಾರಾಯಣ ಸ್ವಾಮಿಯ ದೇವಾಲಯ ಸೊಗಸಾಗಿದೆ. 
ಸ್ಠಳಪುರಾಣದ ಪ್ರಕಾರ,ಬಹಳ ಹಿಂದೆ  ಈ ಊರಿಗೆ  ಯಾದವಾದ್ರಿ ಎಂಬ ಹೆಸರಿತ್ತು. ಇಲ್ಲಿ ನೆಲೆಸಿದ್ದ ಚೆಲುವನಾರಾಯಣ ಸ್ವಾಮಿಯನ್ನು ತ್ರೇತಾಯುಗದಲ್ಲಿ ರಾಮನೂ, ದ್ವಾಪರದ ಕೃಷ್ಣ ಮತ್ತು ಬಲರಾಮರೂ ಪೂಜಿಸಿದ್ದರಂತೆ. ಕಲಿಯುಗದಲ್ಲಿ, ೧೨ ನೆಯ ಶತಮಾನದಲ್ಲಿ ಇಲ್ಲಿಗೆ ತಂಜಾವೂರಿನಿಂದ ಬಂದು ನೆಲೆಸಿದ ರಾಮಾನುಜಾಚಾರ್ಯರು ತಮ್ಮ ಕನಸಿನ ಪ್ರೇರಣೆಯಂತೆ, ಕಳೆದು ಹೋಗಿದ್ದ ಚೆಲುವನಾರಾಯಣನ ವಿಗ್ರಹವನ್ನು ಹುಡುಕಿ, ಪುನ: ಸ್ಥಾಪಿಸಿದರಂತೆ. ಅಂದಿನಿಂದ ಈ ಸ್ಥಳವು. ವೈಷ್ಣವರ  ಮೆಚ್ಚಿನ ಆರಾಧನಾ ಸ್ಠಳವಾಗಿದೆ. 


ದೇವಸ್ಥಾನದ  ಪಕ್ಕದಲ್ಲಿ, ಸ್ವಲ್ಪ ದೂರ ನಡೆದರೆ ' ಅಕ್ಕ- ತಂಗಿಯರ' ಕೊಳ ಸಿಗುತ್ತದೆ. ಇಬ್ಭಾಗವಾದಂತೆ ಇರುವ ಸುಂದರವಾದ ಅವಳಿ ಕೊಳಗಳಿವು. ಮಧ್ಯ ಸುತ್ತಲೂ ಮೆಟ್ಟಿಲುಗಳಿವೆ.   ನೀರು ಸ್ವಚ್ಛವಾಗಿತ್ತು. ಅಕ್ಕನ ಕೊಳ ಸ್ವಲ್ಪ ಚಿಕ್ಕದು, ತಂಗಿಯ ಕೊಳ ದೊಡ್ಡದು. ಇದ್ದಕ್ಕಿದ್ದಂತೆ, ಮಹಿಳೆಯೊಬ್ಬರು "ಅಲ್ಲಿ ನೀರಿಗೆ ಕಾಲು ಹಾಕ್ಬರ್ದು..ದಂಡ ಹಾಕ್ತೀನಿ..' ಎಂದು ಯಾರಿಗೋ ಗದರುವುದು ಕೇಳಿತು. ಆ ಅಜ್ಜಿಯನ್ನು ಮಾತನಾಡಿಸಿದಾಗ ಅವರು ಹೇಳಿದ ಕಥೆ ಹೀಗಿತ್ತು.  "೧೦೦೦ ವರ್ಷಗಳ ಹಿಂದೆ ಇಲ್ಲಿ ಚೆಲುವರಸ ಎಂಬ ಚೋಳ ರಾಜನಿದ್ದ. ಅವನಿಗೆ ಇಬ್ಬರು ಪತ್ನಿಯರು, ಅವರು ಅಕ್ಕ-ತಂಗಿಯರು ಕೂಡ. ಒಂದು ದಿನ ರಾಜ ಇಬ್ಬರೂ ಪತ್ನಿಯರಿಗೂ ಒಂದಷ್ಟು ದುಡ್ಡು ಕೊಟ್ಟು ಲೋಕ ಮೆಚ್ಚುವ ಕೆಲಸ ಮಾಡಿಸಿರಿ ಅಂದನಂತೆ. ಅಕ್ಕ ತಂಗಿಯರಿಬ್ಬರೂ ಕೊಳ ಕಟ್ಟಿಸಲು ಮುಂದಾದರು. ಜಕ್ಕಣಾಚಾರಿಯನ್ನು ಕರೆಸಿದರು. ಅಕ್ಕ ಕೆಲಸಗಾರರನ್ನು ಚೆನ್ನಾಗಿ ನೊಡಿಕೊಳ್ಳಲಿಲ್ಲ, ದೇವರ ನೇಮವನ್ನೂ ಸರಿಯಾಗಿ ಮಾಡಲಿಲ್ಲ. ಹಾಗಾಗಿ ಸ್ವಾಮಿಗೆ ಕೋಪ ಬಂತು. ಅಕ್ಕ ಕಟ್ಟಿಸಿದ ಕೊಳದ ನೀರು ಕಪ್ಪಾಗಿತ್ತು.

ಆದರೆ ತಂಗಿ, ಶ್ರದ್ಧಾ-ಭಕ್ತಿಯಿಂದ ಸ್ವಾಮಿಯನ್ನು ಪೂಜಿಸಿ ಕೊಳ ಕಟ್ಟಿಸಿದಳು, ಕೆಲಸಗಾರರನ್ನು ಚೆನ್ನಾಗಿ ನೋಡಿಕೊಂಡಳು.ಕೋಳದ ನೀರು ಎಳನೀರಿನಂಗಿತ್ತು. ಆ ಕೊಳದ ನೀರನ್ನು ತೀರ್ಥ, ಪೂಜೆಗೆ ಬಳಸುತ್ತಾರೆ. ಆಮೇಲೆ ಅಕ್ಕನಿಗೆ ಪಶ್ಚಾತ್ತಾಪವಾಗಿ ಸ್ವಾಮಿಯನ್ನು ಬೇಡಿಕೊಂಡಾಗ ಆತನು, ಅಕ್ಕನ ಕೊಳದ ನೀರನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಬಟ್ಟೆಬರೆಗಳನ್ನು ತೊಳೆಯಲು ಉಪಯೋಗಿಸಿವಂತೆಯೂ ಆ ಮೂಲಕ ಆಕೆಯ ಪಾಪ ಪರಿಹಾರವಾಗುತ್ತದೆಯೆಂದೂ ಅನುಗ್ರಹಿಸಿದನಂತೆ. ಹೀಗೆ ಅಕ್ಕನ ಕೆರೆಯ ನೀರು ಬಟ್ಟೆಬರೆ ತೊಳೆಯಲು ಉಪಯೋಗವಾಗುತ್ತದೆ."


ಎರಡು ಕೊಳಗಳ ನೀರು ಸುಮಾರಾಗಿ ಒಂದೇ ತರಹ ಕಾಣಿಸಿತು. ಸೂಕ್ಷ್ಮವಾಗಿ ಗಮನಿಸಿದರೆ ತಂಗಿಯ ಕೊಳದ ನೀರು ಹೆಚ್ಚು ಪಾರದರ್ಶಕವಾಗಿ ಕಾಣುತ್ತಿತ್ತು. ಅಕ್ಕನ ಕೊಳದನೀರು ಸ್ವಲ್ಪ ಹಸಿರಿನ ಛಾಯೆ ಹೊಂದಿತ್ತು.  ಪ್ರಸ್ತುತ   ಯಾವುದೇ ಕೋಟೆಗಳು ಇರದ ಇಲ್ಲಿಗೆ ಮೇಲುಕೋಟೆ ಎಂಬ ಹೆಸರು ಯಾಕೆ ಬಂತೋ ಗೊತ್ತಿಲ್ಲ. 'ಮೇಲುಕೊಳ' ಎಂದಿದ್ದರೆ ಅನ್ವರ್ಥನಾಮವಾಗುತ್ತಿತ್ತು.



ಅಕ್ಕನ ಕೊಳ

ತಂಗಿಯ ಕೊಳ  


ಅಜ್ಜಿಯ ಕಥೆ ಚೆನ್ನಾಗಿತ್ತು. ಈಗಿನ ಕಾಲದಲ್ಲಿ ಸ್ಥಳಪುರಾಣ ಗೊತ್ತಿರುವವರು ಕಡಿಮೆ, ಗೊತ್ತಿದ್ದರೂ ಅನುಕ್ರಮವಾಗಿ ಕಥೆ ಹೇಳಲು ಯಾರಿಗೂ ವ್ಯವಧಾನವಿಲ್ಲ. ಮೇಲಾಗಿ ಆ ಎರಡೂ ಕೊಳಗಳು ಶುಭ್ರವಾಗಿದ್ದವು. ಸಾಮಾನ್ಯವಾಗಿ ದೇವಸ್ಥಾನಗಳ ಪರಿಸರದಲ್ಲಿ ಭಕ್ತಿಗೆ ಸಾಕ್ಷಿಯಾಗಿ ಅಲ್ಲಲ್ಲಿ ಬಿದ್ದಿರುವ ತೆಂಗಿನ ಚಿಪ್ಪು, ಹೂವಿನ ಹಾರ, ಕರ್ಪೂರ-ಅಗರಬತ್ತಿಯ ಪಳೆಯುಳಿಕೆಗಳು ಕಾಣಲಿಲ್ಲ. ಇದು ಅಜ್ಜಿಯ ಪ್ರಭಾವವೇ ಇರಬೇಕು. ನಮಗೆ ಕಥೆ ಹೇಳುತ್ತ ನಡುನಡುವೆ ಇತರರನ್ನೂ ಗಮನಿಸುತ್ತಾ-ಗದರಿಸುತ್ತಾ ಇದ್ದ ಅಜ್ಜಿಯ ವೈಖರಿ ನನಗಂತೂ ತುಂಬಾ ಹಿಡಿಸಿತು. ಆಕೆ ಬೇಡವೆಂದರೂ ಸ್ವಲ್ಪ ಭಕ್ಷೀಸು ಕೊಟ್ಟು ಥಾಂಕ್ಸ್ ಹೇಳಿ ಹೊರಟೆವು. 

ಮೇಲುಕೋಟೆಯಲ್ಲಿ ಶತಮಾನಗಳಷ್ಟು ಹಳೆಯದಾದ ಸಂಸ್ಕೃತ ಸಂಶೋಧನಾ ಕೇಂದ್ರವಿದೆ. ಅಪೂರ್ಣಗೊಂಡ ರಾಜಗೋಪುರವಿದೆ. ದಂತ ಕಥೆಯ ಪ್ರಕಾರ ೩೦ ಅಡಿ ಎತ್ತರದ ಈ ರಾಜಗೋಪುರವನ್ನು ಒಂದೆ ರಾತ್ರಿಯಲ್ಲಿ ನಿರ್ಮಿಸುವೆನೆಂದು ಜಕ್ಕಣಾಚಾರಿ ಸವಾಲು ಸ್ವೀಕರಿಸಿದ್ದನಂತೆ. ಅವನು ಕಾರ್ಯನಿರತನಾಗಿದ್ದಾಗ ಕೆಲವರು ಅಸೂಯೆಯಿಂದ ಮಧ್ಯರಾತ್ರಿ ಆಗುತ್ತಿದ್ದಂತೆ, ಬೆಳಗಾಯಿತು, ಅವಧಿ ಮುಗಿಯಿತು ಎಂದು ಘೋಷಿಸಿದರಂತೆ. ಅವರ ಕುತಂತ್ರದಿಂದ ಅವಮಾನಿತನಾದ ಜಕ್ಕಣಾಚಾರಿ ಕೆಲಸವನ್ನು ಅರ್ಧಕ್ಕೇ ಕೈಬಿಟ್ಟನಂತೆ.

ಮೇಲುಕೋಟೆಯಿಂದ ಸುಮಾರು ೧.೫ ಕಿ.ಮೀ. ಹೋದರೆ 'ಧನುಷ್ಕೋಟಿ' ಎಂಬ ಪುಟ್ಟ ಬೆಟ್ಟ ಸಿಗುತ್ತದೆ. ಇಲ್ಲಿ ಶ್ರೀರಾಮಚಂದ್ರ-ಸೀತೆ-ಲಕ್ಷ್ಮಣ ವನವಾಸದ ಸಂಧರ್ಭದಲ್ಲಿ ತಂಗಿದ್ದರಂತೆ. ಸೀತೆಯ  ಬಾಯಾರಿಕೆ ತಣಿಸಲು ರಾಮ ಬಂಡೆಯೊಂದಕ್ಕೆ ಬಾಣ ಹೊಡೆದು ಗಂಗೆಯನ್ನು ತರಿಸಿನಂತೆ. ಕಲ್ಲಿನ ಮಧ್ಯದಲ್ಲಿರುವ ಈ ಚಿಕ್ಕ ನೀರಿನ ಒರತೆಯು ಎಂದೂ ಬತ್ತುವುದಿಲ್ಲವಂತೆ. ಬಂಡೆಗಳ ಮಧ್ಯದಲ್ಲಿ ಒಂದು ಸೀತಾಫಲ ಮರ ಬೆಳೆದು ನಿಂತಿದೆ. ಮಕ್ಕಳಿಲ್ಲದ ದಂಪತಿಗಳು ಇದಕ್ಕೆ ಪೂಜಿಸಿದರೆ ಮಕ್ಕಳಾಗುತ್ತಾರೆಂದೂ, ಹರಕೆಯಾಗಿ ಬಳೆಗಳನ್ನು ಮರಕ್ಕೆ ಕಟ್ಟುತ್ತಾರೆಂದೂ ತಿಳಿಯಿತು.  



ಮೇಲುಕೋಟೆಯ ಧನುಷ್ಕೋಟಿ



 ಪೌರಾಣಿಕ ಕಥೆಗಳು, ಸ್ಥಳೀಯ ಉಪಕಥೆಗಳು ಚರಿತ್ರೆಯಲ್ಲಿ ಹಾಸುಹೊಕ್ಕಾಗಿ  ಹರಿದು ಬರುವ ರೀತಿ ಅನನ್ಯ. 



 

Monday, September 3, 2012

ಮಾಲೇಕಲ್ ಬೆಟ್ಟದ ಮ್ಯಾಲೆ..


ಜುಲೈ ೧೫ ರಂದು, ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ಅರಸೀಕೆರೆಯಲ್ಲಿರುವ 'ಮಾಲೇಕಲ್ ಬೆಟ್ಟಕ್ಕೆ' ಚಾರಣ ಕಾರ್ಯಕ್ರಮವವಿತ್ತು .  ಮಾಲೇಕಲ್ ಬೆಟ್ಟವು   ಮೈಸೂರಿನಿಂದ ೧೧೫ ಕಿ.ಮೀ. ದೂರದಲ್ಲಿದೆ. ಸುಮಾರು ೨೦ ಜನರಿದ್ದ ನಮ್ಮ ತಂಡವು ಬೆಳಗ್ಗೆ ೬ ಗಂಟೆಗೆ ಮೈಸೂರಿನಿಂದ ಒಂದು ಮಿನಿಬಸ್ ನಲ್ಲಿ ಹೊರಟು ಕೆ.ಆರ್ ಪೇಟೆ ಮಾರ್ಗವಾಗಿ ಅರಸೀಕೆರೆ ತಲಪಿತು. ಮಾರ್ಗ ಮಧ್ಯದಲ್ಲಿ ಕೆ.ಆರ್.ಪೇಟೆಯಲ್ಲಿ ಬೆಳಗಿನ ಉಪಾಹಾರ ಮುಗಿಸಿ ಅರಸೀಕೆರೆಯ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿಯುದ್ದಕ್ಕೂ ಆಲೂಗಡ್ಡೆ ಬೆಳೆದ ಹೊಲಗಳು ಬಿಳಿ ಹೂ ಬಿಟ್ಟು ಕಂಗೊಳಿಸುತ್ತಿದ್ದುವು. ಇದುವರೆಗೆ ಆಲೂಗಡ್ಡೆಯ ಬಗೆಬಗೆಯ ಊಟ ಸವಿದಿದ್ದ ನನಗೆ, ಆಲೂ ಹೊಲದ ನೋಟವೂ ಎಷ್ಟೊಂದು ಚೆನ್ನ ಅನಿಸಿತು.

ಸುಮಾರು ಹತ್ತು ಗಂಟೆಗೆ ಮಾಲೇಕಲ್ ಬೆಟ್ಟದ ಬುಡ ತಲಿಪಿದೆವು. ಅಲ್ಲಿ ನಮ್ಮನ್ನು ಅರಸೀಕೆರೆಯ ಮಿತ್ರರು ಸ್ವಾಗತಿಸಿದರು.  ಪರಸ್ಪರ ಪರಿಚಯದ ನಂತರ ಬೆಟ್ಟ ಹತ್ತಲು ಆರಂಭಿಸಿದೆವು.    

ಮಾಲೇಕಲ್ ಬೆಟ್ಟದ ಮೇಲೆ ಲಕ್ಷ್ಮೀ ವೆಂಹಟರಮಣ ಸ್ವಾಮಿಯ ದೇಗುಲವಿದೆ.ಬೆಟ್ಟದ ಮೇಲೆ ಹಾಗೂ ಕೆಳಗೆ ಇರುವ ಈ ದೇವಾಲಯಗಳು ತಿರುಮಲೆ-ತಿರುಪತಿಯನ್ನು ಹೋಲುವುದರಿಂದ ಇಲ್ಲಿಗೆ ಚಿಕ್ಕ-ತಿರುಪತಿ ಎಂಬ ಹೆಸರೂ ಇದೆ. ಈ ದೇವಾಲಯವನ್ನು ತಲಪಲು ಸುಮಾರು ೧೩೦೦ ಮೆಟ್ಟಲುಗಳನ್ನು ಹತ್ತಬೇಕು. ಅಲ್ಲಲ್ಲಿ ಬಂಡೆಗಳ ಮೇಲೆ ಹುಟ್ಟಿ ಬೆಳೆದು ಸೃಷ್ಟಿಯ ಸೋಜಿಗ ಮೆರೆದ ಗಿಡಗಳು ಲೆಕ್ಕವಿಲ್ಲದಷ್ಟು.

ಸ್ಥಳ ಪುರಾಣದ ಪ್ರಕಾರ, ಅಂದಿನ ಪಾಳೆಯಗಾರರೊಬ್ಬರಿಗೆ ವೆಂಕಟರಮಣ ಸ್ವಾಮಿಯು ಕನಸಿನಲ್ಲಿ ಕಾಣಿಸಿಕೊಂಡು, ಮೂಲ ತಿರುಪತಿಯು ದೂರವಿದ್ದು ನಿನಗೆ ಬರಲಾಗದ ಕಾರಣ ನಾನೇ ನಿನ್ನ ಬಳಿಗೆ ಬಂದಿದ್ದೇನೆ, ಬೆಟ್ಟದ ಮೇಲೆ ತುಳಸೀಹಾರ ಇರುವಲ್ಲಿ ಗುಡಿ ಕಟ್ಟು ಎಂದು ಆದೇಶಿಸಿದನಂತೆ.   ಹೀಗೆ ತುಳಸಿಮಾಲೆಯಿಂದಾಗಿ ಮಾಲೇಕಲ್ ಎಂಬ ಹೆಸರು ಬಂತು. ದೇವಾಲಯವನ್ನು  ಸುಮಾರು ೮೦೦ ವರುಷಗಳ ಹಿಂದೆ ಕಟ್ಟಲಾಯಿತಂತೆ. ಬೆಟ್ಟದ ಕೆಳಗೆ ಇರುವ ದೇವಸ್ಥಾನದಲ್ಲಿ, ವರುಷಕ್ಕೆ ಒಂದು ಬಾರಿ ರಥೋತ್ಸವವನ್ನು ಭಕ್ತಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸೌತಕಾಯಿ, ಕಿತ್ತಳೆ ಹಣ್ಣುಗಳನ್ನು ತಿನ್ನುತ್ತಾ, ಆಗಾಗ್ಗೆ  ಹಿಂತಿರುಗಿ ನೋಡಿ ದೂರದಲ್ಲಿ ಕಾಣಿಸುವ ಅರಸಿಯ ಕೆರೆಯನ್ನು ಕಣ್ತುಂಬಿಸುತ್ತಾ, ನಿಧಾನವೇ ಪ್ರಧಾನ ಎಂಬಂತೆ ಮೆಟ್ಟಿಲುಗಳನ್ನು ಹತ್ತಿದವರು ಕೆಲವರು. ಉತ್ಸಾಹದಿಂದ ಬೇಗನೆ ಬೆಟ್ಟದ ತುದಿ ತಲಪಿ, ಸಾಹಸಕ್ಕೆ ಇನ್ನೇನಾದರೂ ಅವಕಾಶವಿದೆಯೇ ಎಂದು ಹುಡುಕಿದವರು ಇನ್ನೂ ಕೆಲವರು. ಬೆಟ್ಟದ ಮೇಲೆ ಒಂದು ಬಂಡೆಗೆ ಒಂದೇ ಮೊಳೆ ಮೇಲೆ ಆಧರಿಸಿ ನಿಂತಂತೆ ಭಾಸವಾಗುತ್ತಿದ್ದ ಕಬ್ಬಿಣದ ಏಣಿಯೊಂದಿದೆ. ಧೈರ್ಯಯುಳ್ಳವರು ಅದನ್ನು ಏರಿ ತಮ್ಮ ಸರ್ಕಸ್ ಪ್ರಾವೀಣ್ಯತೆ ಮೆರೆದರು.









ಎಲ್ಲರೂ ಬೆಟ್ಟವೇರಿದ ಮೇಲೆ ಪೂಜೆಮಾಡಿ ಪ್ರಸಾದ ಸ್ವೀಕರಿಸಿದೆವು. ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ  ಶ್ರೀ ವೈದ್ಯನಾಥನ್ ಹಾಗೂ ಶ್ರೀಮತಿ ಗೋಪಮ್ಮನವರು ಸಾಂದರ್ಭಿಕ, ಜಾನಪದ  ಹಾಡುಗಳನ್ನು ಹಾಡಿ ರಂಜಿಸಿದರು. ಆಮೇಲೆ ಬೆಟ್ಟ  ಇಳಿದು, ಲಕ್ಶ್ಮೀವೆಂಕಟರಮಣ ಸ್ವಾಮಿಯ ದರ್ಶನ  ಮಾಡಿದೆವು. ಅರಸೀಕೆರೆಯ ಮಿತ್ರರು ಭೋಜನದ ವ್ಯವಸ್ಥೆಯನ್ನು ಹೊತ್ತಿದ್ದರು. ಬೆಟ್ಟ ಹತ್ತಿ- ಇಳಿದ ಆಯಾಸದ, ಮಧ್ಯಾಹ್ನ ೩ ಗಂಟೆಯೂ ಆಗಿತ್ತು. ಬಾಳೆ ಎಲೆಯಲ್ಲಿ ಕೋಸಂಬರಿ, ಪಲ್ಯ, ಪೊಂಗಲ್, ಪುಳಿಯೋಗರೆ, ಅನ್ನ, ಹುಳಿ,ತಿಳಿಸಾರು, ಬಜ್ಜಿ ಮೇಳೈಸಿದ ರುಚಿಕಟ್ಟಾದ ಊಟ, ಮೇಲಾಗಿ ಅರಸೀಕೆರೆಯ ಮಿತ್ರರ ಆದರದ ಅತಿಥಿ ಸತ್ಕಾರ. ಇನ್ನು ಕೇಳಬೇಕೆ! ಎಲ್ಲರೂ 'ಮಾಯಾ ಬಜಾರ್ 'ನ ಘಟೋತ್ಕಚನಂತೆ ಉಂಡೆವು!


ಆಲ್ಲಿಂದ ಹೊರಟು ಬರುವಾಗ ದಾರಿಯಲ್ಲಿ ಸಿಗುವ ಪುರಾತನ ಚಂದ್ರಮೌಳೇಶ್ವರ ದೇವಸ್ಥಾನಕ್ಕೂ ಭೇಟಿ ಕೊಟ್ಟೆವು. ಪ್ರಸ್ತುತ ಪ್ರಾಚ್ಯ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನ ಚೊಕ್ಕವಾಗಿದೆ. ಹೊಯ್ಸಳರ ಹಾಗೂ ಚೋಳರ ಕಾಲದ ವಾಸ್ತುಶಿಲ್ಪ ಇಲ್ಲಿ ಮೆರೆದಿವೆ. ಕಲ್ಲಿನ ನೃತ್ಯಮಂಟಪ ಈಗಲೂ ಸೊಗಸಾಗಿದೆ. ದೇವಾಲಯದ ಗೋಡೆಯಲ್ಲಿ ಕೆತ್ತಿರುವ ಪುಟ್ಟ-ಪುಟ್ಟ ಮೂರ್ತಿಗಳಲ್ಲಿ ಕೆಲವು ವಿರೂಪಗೊಂಡಿವೆ. ಆವರಣದಲ್ಲಿರುವ ಬಿಲ್ವ, ಬನ್ನಿ, ಅರಳಿ ಮರಗಳ ಕಟ್ಟೆಗಳು ವಿಶಿಷ್ಟ ಶೋಭೆ ನೀಡಿವೆ.


                                                                       
       
ಮುಂದೆ ಮೈಸೂರಿಗೆ ಬರುವಾಗ ಬಹುಶ: ಬೇರೆ ದಾರಿಯಿರಬೇಕು, ಕತ್ತಲೂ ಆಗುತಿತ್ತು, ದಾರಿಯುದ್ದಕ್ಕೂ ಅಲ್ಲಲ್ಲಿ ರಸ್ತೆತಡೆಗಳು ಸಿಗುತ್ತಿದ್ದವು. ಬಸ್ ನಲ್ಲಿ   ಮುಂದೆ ಕುಳಿತಿದ್ದ ವೈದ್ಯನಾಥನ್ ಪ್ರತೀ ರಸ್ತೆತಡೆ ಎದುರಾಗುವಾಗಲೂ  'ಹಂಪಾಸುರ' ಎಂದು ಎಲ್ಲರನ್ನು ಎಚ್ಚರಿಸುತ್ತಿದ್ದರು. ಹಂಪಾಸುರನನ್ನು ನೆನೆಯುತ್ತಾ ಮೈಸೂರು ತಲಪಿದ ನಮೆಗೆಲ್ಲರಿಗೂ ಭಾನುವಾರವನ್ನು ಸಂಪನ್ನಗೊಳಿಸಿದ ಅನುಭವ.