Total Pageviews

Wednesday, October 13, 2010

ವೈಪರ್ ದ್ವೀಪ....ಮಾರ್ಗದರ್ಶಕ ಸಂಜಯ್

ಅಂಡಮಾನ್ ನ ಪೋರ್ಟ್  ಬ್ಲೈರ್ ನಿಂದ  ಕೇವಲ  ೨ ಕಿ.ಮೀ. ದೂರದಲ್ಲಿದೆ, ಬಹಳ ಸುಂದರವಾದ   'ವೈಪೆರ್ ದ್ವೀಪ'. ಪೊರ್ಟ್ ಬ್ಲೈರ್ ನ' 'ಫಿಯೊನಿಕ್ಸ್ ' ಹಾರ್ಬರ್ ನಿಂದ  ಪುಟ್ಟ ಹಡಗುಗಳ  ಮೂಲಕ ಸಮುದ್ರದಲ್ಲಿ ೧೫ ನಿಮಿಷ ಪ್ರಯಾಣ ಮಾಡಿದರೆ ವೈಪರ್  ದ್ವೀಪ ಸಿಗುತ್ತದೆ.

ಬ್ರಿಟಿಷರ ಕಾಲದಲ್ಲಿ, ಸೆಲ್ಲುಲಾರ್ ಜೈಲ್ ನ್ನು ಕಟ್ಟಿಸುವ ಮೊದಲು, ಅಪಾಯಕಾರಿ ಕೈದಿಗಳನ್ನು ಇಲ್ಲಿ ಇರಿಸಲಾಗುತಿತ್ತು. ಸೆಲ್ಲುಲರ್ ಜೈಲ್  ನ್ನು ಕಟ್ಟಿಸಿದ ನಂತರ ಈ ದ್ವೀಪದಲ್ಲಿ  ಮಹಿಳಾ ಕೈದಿಗಳನ್ನು ಇರಿಸಲಾಗಿತ್ತು.   'ವೈಪೆರ್' ಎಂಬ ಹೆಸರಿನ ಬ್ರಿಟಿಶ್ ನೌಕೆಯು  ಈ ದ್ವೀಪದ ಹತ್ತಿರದಲ್ಲಿ ಅಪಘಾತಕ್ಕೆ ಒಳಗಾಗಿತ್ತಂತೆ, ಹಾಗಾಗಿ, ಈ ದ್ವೀಪವನ್ನು ಅದೇ ಹೆಸರಿನಿಂದ  ಕರೆಯಲಾಯಿತು. ಈ ದ್ವೀಪದಲ್ಲಿ, 'ವೈಪೆರ್' ಎಂಬ ವಿಷಪೂರಿತ ಹಾವುಗಳು  ಇರುವುದರಿಂದಲೂ ಹೆಸರಿಗೆ ಅನ್ವರ್ಥವಾಗಿದೆಯೆಂದು ಕೆಲವರ ಅಭಿಪ್ರಾಯವಿದೆ.

ಈ ದ್ವೀಪದಲ್ಲಿ, ಹಳೆ ಜೈಲ್ ನ ಅವಶೇಷಗಳು, ಕೋರ್ಟ್ ರೂಮ್ ಹಾಗು ದಿಬ್ಬದ ತುದಿಯಲ್ಲಿ 'ರೆಡ್ ಗಲ್ಲೊಸ್' ಎನ್ದು ಕರೆಯಲ್ಪಡುವ 'ಫಾಸಿ ರೂಮ್' ಇದೆ. ಗಲ್ಲಿಗೆ ಹಾಕುವ ಈ ಕೆಂಬಣ್ಣದ  ಮರದ ತೊಲೆಯನ್ನು, ಅಂಡಮಾನ್ ನಲ್ಲಿ ಮಾತ್ರ ದೊರೆಯುವ 'ಪಡೊಕು' ಮರದಿಂದ  ತಯಾರಿಸಿದ್ದಾರೆ . ಈ ಮರ ೨-೩ ಸಾವಿರ ವರ್ಷಗಳಾದರೂ, ಕೆಡುವುದಿಲ್ಲವಂತೆ.

ಪಡೊಕು ಮರಗಳನ್ನು ಕಡಿದು ಸಂಸ್ಕರಿಸಿ  ಸಾಗಿಸಲೆಂದೇ, ಬ್ರಿಟಿಶರು,  'ಚತ್ತಮ್  ದ್ವೀಪದಲ್ಲಿ' ೧೫೦ ವರ್ಷಗಳ ಹಿಂದೆ  ಸ್ಥಾಪಿಸಿದ, 'ಚತ್ತಂ  ಸೊ ಮಿಲ್ಲ್ಸ್' ಎಂಬ  ಕಾರ್ಖಾನೆ  ಇಂದಿಗೂ ಸುಸ್ಥಿತಿಯಲ್ಲಿದ್ದು,  ಕಾರ್ಯ ನಿರತವಾಗಿದೆ.  ಇದು ಏಷಿಯಾ ಖಂಡದಲ್ಲೇ ಅತಿ ದೊಡ್ಡದಾದ ಮರ ಸಿಗಿಯುವ  ಕಾರ್ಖಾನೆಯಂತೆ.

ವೈಪರ್ ದ್ವೀಪದಲ್ಲಿ 'ಶೇರ್ ಆಲಿ'ಯ ಹೆಸರು ಶಾಶ್ವತ. ಬ್ರಿಟಿಷರ ಹಿಂಸೆಯಿಂದ ರೋಸಿಹೋಗಿದ್ದ ಆತ,ಆಗಿನ ವೈಸ್ ರಾಯ್ ಆಗಿದ್ದ 'ಲಾರ್ಡ್ ಮಾಯೋ' , ಅಂಡಮಾನ್ ನ  ಹಾರಿಯಟ್ ಬೆಟ್ಟಕ್ಕೆ ಪ್ರಕೃತಿ ವೀಕ್ಷಣೆಗೆ ಬಂದಿದ್ದಾಗ  ಕೊಲೆಗೈದನಂತೆ. ಆತನನ್ನು   ವೈಪೆರ್ ದ್ವೀಪದಲ್ಲಿ  ಗಲ್ಲಿಗೇರಿಸಿದರು.  ಸುನಾಮಿಯ ಅರ್ಭಟಕ್ಕೆ, ಇಲ್ಲಿನ  ಕಟ್ಟಡಗಳು ಹಾನಿಗೊಂಡಿವೆ. ಆಳಿದುಳಿದ ಕಟ್ಟಡಗಳು ಇಲ್ಲಿ ನಡೆದ  ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿಯಾಗಿ ನಿಂತಿವೆ. 

ಮಾರ್ಗದರ್ಶಕ ಸಂಜಯ್ ಹೇಳುವ ಪ್ರಕಾರ, ಈ ದ್ವೀಪದಲ್ಲಿ  ಪ್ರೇಕ್ಷಣೀಯವಾದದ್ದು ಏನು ಇಲ್ಲ, ಆದರೆ, ಪ್ರತಿಯೊಬ್ಬ ಹಿಂದುಸ್ತಾನಿ ಪ್ರಜೆ ಗೌರವದಿಂದ ನಮನ ಸಲ್ಲಿಸಬೇಕಾದ  'ಫಾಸಿಗಂಬ' ವಿದೆ.  ಈ ದ್ವೀಪದಲ್ಲಿ, ಮೂರು ವಿಧದ ಶಿಕ್ಷೆ  ವಿಧಿಸಲಾಗುತಿತ್ತು. ಕೈದಿಗಳನ್ನು ಕತ್ತಲೆ ಕೊಣೆಯಲ್ಲಿ ದಿನಗಟ್ಟಲೆ ಕೂಡಿ ಹಾಕುವುದು, ಹಾವುಗಳು ಹರಿದಾಡುವ ಕಾಡಿನಲ್ಲಿ ಮರಕ್ಕೆ ಕಟ್ಟಿ ಹಾಕುವುದು, ಕೊನೆಯದಾಗಿ ಗಲ್ಲು...!

ತುಂಬಾ ಭಾವಪೂರ್ಣವಾಗಿ, ಹಿಂದಿ ಭಾಷೆಯಲ್ಲಿ  ನಿರರ್ಗಳವಾಗಿ ಮಾತನಾಡುವ ಸಂಜಯ್, ಸುಮಾರು  ೨೦-೨೫ ವಯಸ್ಸಿನ ಯುವಕ.

ಪ್ರವಾಸಿಯೊಬ್ಬರು 'ಇಲ್ಲಿ ಏನಿದೆ,  ಒಂದು ಮರದ ತೊಲೆ ನೋಡೋಕೆ ಅರ್ಧ ದಿನ ವೇಸ್ಟ್' ಎಂದರು.

ಅದನ್ನು ಕೇಳಿಸಿಕೊಂಡ ಸಂಜಯ್ ಖಾರವಾಗಿ ಪ್ರತಿಕ್ರಿಯಿಸಿದ "ಪ್ರೇಕ್ಷಣೀಯ ಜಾಗವನ್ನು ಬಯಸುವವರು ಈ ಶಹೀದ್ ಭೂಮಿಗೆ ಯಾಕೆ ಬರಬೇಕು?  ನಿಮ್ಮ ಊರಲ್ಲಿ ಸಾಕಷ್ಟು  ಗಿರಿಧಾಮ, ವಿಲಾಸಿ ತಾಣಗಳಿಲ್ಲವೆ?  ಇಂಥಹ ಪವಿತ್ರ ಭೂಮಿಗೆ ಬಂದು ಈ ಸ್ಥಳವನ್ನು, ಆ ಹುತಾತ್ಮರನ್ನು  ಅವಮಾನಿಸಬೇಕೆ ?  ಒಂದು  ಮಾತು ಹೇಳುತ್ತೇನೆ, ಈವತ್ತು ನಾನು-ನೀವು ಇಲ್ಲಿ ಸ್ವತಂತ್ರವಾಗಿ ಇರುವುದು ಆ ನೇಣುಗಂಬವೇರಿದ ಶಹೀದರಿಂದಾಗಿ, ನೀವು ಮಂದಿರ್, ಮಸೀದಿ , ಇಗರ್ಜಿ, ಗುರುದ್ವಾರಕ್ಕೆ ಹೋಗುತ್ತಿರಬಹುದು, ಆದರೆ, ಇದು ಅವಕ್ಕಿಂತಲು ಪವಿತ್ರ "ಎಂದ.

ಚಿಕ್ಕ ವಯಸ್ಸಿನ ಅವನ ದೇಶಪ್ರೇಮ ಹಾಗು ಸ್ಥಳ ಗೌರವವನ್ನು ಕಾಯುವ ಕಾಳಜಿ ಇಷ್ಟವಾಯಿತು. ಹಿಂತಿರುಗಿ ಬರುವಾಗ, ಅವನನ್ನು ಶ್ಲಾಘಿಸಿ ನಾನಾಗಿ ಮಾತಿಗೆಳೆದೆ. 'ಡೆಕ್ ನ ಮೇಲೆ ಚೆನ್ನಾಗಿ ಗಾಳಿ ಬರುತ್ತದೆ,ನಾನು ಅಲ್ಲಿಗೆ ಹೋಗುತ್ತೇನೆ, ಇದು ಸಣ್ಣ ಫೆರ್ರಿ ಆದ ಕಾರಣ ನಾಲ್ಕು ಜನ ಏಕಕಾಲದಲ್ಲಿ ಡೆಕ್ ಗೆ ಹೋಗಬಹುದಷ್ಟೇ, ಆಸಕ್ತಿಯಿದ್ದರೆ ಬನ್ನಿ' ಅಂದ. ಡೆಕ್ ನ ಮೇಲೆ ಹೋಗಿ, ಅವನ ಜತೆ ಹರಟಲು ಶುರು ಮಾಡಿದೆ.

ಆತ ಬಂಗಾಲಿ ಮೂಲದ ಯುವಕ. ಆತನ ಹಿರಿಯರು ಎರಡು ತಲೆಮಾರಿನಿಂದಲೇ  ಪೊರ್ಟ್ ಬ್ಲೈರ್ ನಲ್ಲಿ ನೆಲೆಸಿದ್ದಾರೆ. ಪಿ.ಯು.ಸಿ ವರೆಗೆ ಓದಿದ್ದಾನೆ. ಅಂಡಮಾನ್ ನ ಸದಾ ಮಳೆ-ಸೆಖೆ ವಾತಾವರಣ..... ಜೀವನಾವಶ್ಯಕ  ವಸ್ತುಗಳಿಗೆ ಚೆನ್ನೈ , ಕಲ್ಕತ್ತ ಅಥವ ವಿಶಾಖ ಪಟ್ಟಣದಿಂದ ಬರುವ ಸಾಮಾಗ್ರಿಗಳ ಮೇಲೆ ಅವಲಂಬನೆ ಅನಿವಾರ್ಯ......ಕಾಲೇಜು ವಿದ್ಯಾಭ್ಯಾಸಕ್ಕೆ ಮೈನ್ ಲಾಂಡ್ ಗೇ  ಹೋಗಬೇಕಾಗುತ್ತದೆ.....  ತರಕಾರಿಗಳಿಗೆ ತುಂಬ ಬೆಲೆ.... ಸಮುದ್ರ ಉತ್ಪನ್ನಗಳು ಅಗ್ಗ ....ಇತ್ತೀಚೆಗೆ ಪ್ರವಾಸೋದ್ಯಮ  ಬೆಳೆದಿದೆ .... ಸರಕಾರೀ ಉದ್ಯೋಗಸ್ಥರು  ಜಾಸ್ತಿ.......ಕಾರ್ಖಾನೆಗಳು ಇಲ್ಲ....ಜರವಾ ಜನಗಳು ....ಇತರ ವಲಸೆಗಾರರು...ನಿರ್ಜನವಾದ ವೈಪರ್  ದ್ವೀಪದಲ್ಲಿ  ಒಬ್ಬನೇ ಒಬ್ಬ ವ್ಯಕ್ತಿ ಸುಮಾರು ೫೦ ವರ್ಷ ವಾಸವಾಗಿದ್ದ, ಆತ ಬಹಳ ಧೈರ್ಯಶಾಲಿಯಾಗಿದ್ದ , ಇತ್ತೀಚಿಗೆ ಮರಣಿಸಿದ...
.....ಹೀಗೆಲ್ಲಾ  ಮಾತಿನ ಲಹರಿ ಹರಿಯಿತು.

'ಹಾಗಾದರೆ ಅಂಡಮಾನ್ ನಲ್ಲಿ ಜೀವನ ನಡೆಸುವುದು ಬಹಳ ಕಷ್ಟವಾಗಿರಬೇಕಲ್ಲವೆ?" ಅಂದೆ.

ಅದಕ್ಕೆ ಅವನ ಸ್ಪಷ್ಟ ಉತ್ತರ ಹೀಗಿತ್ತು " ಮುಝೆ ಯೆಹಿ ಅಚ್ಚ ಲಗತಾ ಹೆ. ಸಾಲ್ ಮೆ ಏಕ್ ಬಾರ್ ಮೆ ಕಲ್ಕತ್ತ ಜಾತಾ ಹೂಮ್. ಉಧರ್ ಮೇರೆ ಜೈಸೆ ಲೋಗೊಂಕೋ ಕಾಮ್ ನಹಿ ಹೆ, ಇಧರ್ ಮೆರೆ ಪಾಸ್ ಜ್ಯಾದಾ ಪೈಸಾ ನಹಿ ಹೆ, ವರನಾ ಖಾನಾ-ಮಖಾನ್ ಕೊ ಕಮ್  ನಹಿ ಹೆ,   ದೆಖಿಯೆ ಅಂಡಮಾನ್ ಮೆ, ಕೊಯಿ ಭಿಕಾರಿ ನಹಿ ಹೇ, ಮೈನ್ ಲಾಂಡ್ ಮೆ ಕಿಥನೆ ಲೊಗ್ ಹೆ ಭಿಕಾರಿ..ಕಾಮ್ ನಹಿ ಉನ್ ಲೋಗೊಂಕೋ"  

ಕೆಲವು ತರಬೇತಿ ಕಾರ್ಯಕ್ರಮಗಳಲ್ಲಿ ಪ್ರಸ್ತುತಪಡಿಸುವ ವಿಚಾರ ಹೀಗಿರುತ್ತದೆ "ನಿಮ್ಮ ಕೆಲಸದಲ್ಲಿ ಪ್ರಾವೀಣ್ಯತೆ ಸಾಧಿಸಲು ನೀವು ಮಾಡಬೇಕಾದ ಪ್ರಥಮ ಕೆಲಸವೇನೆಂದರೆ, ನಿಮ್ಮ ಕೆಲಸವನ್ನು ಪ್ರೀತಿಸಿ, ಗೌರವಿಸಿ, ಕೆಲಸದಲ್ಲಿ  ಅನಂದ  ಕಂಡುಕೊಳ್ಳಿ".

ಸಂಜಯ್ ಇದಕ್ಕೆ ಒಂದು ಉತ್ತಮ ನಿದರ್ಶನ ಎನಿಸಿತು.

1 comment: